ಮುಂಬಯಿ: ದಿನಕಳೆದಂತೆ ʼದಿ ಕೇರಳ ಸ್ಟೋರಿʼ ಸಿನಿಮಾದ ಬಗೆಗಿನ ಚರ್ಚೆ ಹೆಚ್ಚಾಗುತ್ತಿದೆ. ಒಂದೆಡೆ ಸಿನಿಮಾದ ಬಗ್ಗೆ ಪಾಸಿಟಿವ್ ಮಾತುಗಳು ಕೇಳಿ ಬಂದರೆ, ಇನ್ನೊಂದೆಡೆ ಸಿನಿಮಾದ ಬಗ್ಗೆ ಮೊದಲೇ ಕೇಳಿ ಬಂದ ನೆಗೆಟಿವ್ ಟಾಕ್ಸ್ ಇನ್ನಷ್ಟು ಹೆಚ್ಚಾಗಿದೆ.
ಈ ಎರಡರ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಾಣುವತ್ತ ಮುಂದುವರೆಯುತ್ತಿದೆ. ʼದಿ ಕೇರಳ ಸ್ಟೋರಿʼ ಸಿನಿಮಾದಲ್ಲಿ ಕೆಲಸ ಮಾಡಿದ ವ್ಯಕ್ತಿಗೆ ಅಪರಿಚಿತ ನಂಬರ್ ನಿಂದ ಬೆದರಿಕೆ ಸಂದೇಶ ಬಂದಿದೆ ಎಂದು ನಿರ್ದೇಶಕ ಸುದೀಪ್ತೋ ಸೇನ್ ಹೇಳಿದ್ದಾರೆ.
“ನೀವು ಒಳ್ಳೆಯದನ್ನು ಮಾಡಲಿಲ್ಲ,ಮನೆಯಿಂದ ಒಂಟಿಯಾಗಿ ಹೊರಬರಬೇಡಿ.. ಎಂದು ವ್ಯಕ್ತಿಯೊಬ್ಬ ಅಪರಿಚಿತ ನಂಬರ್ ನಿಂದ ತಮ್ಮ ತಂಡದ ಸದಸ್ಯನಿಗೆ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರಿಗೆ ಸುದೀಪ್ತೋ ಸೇನ್ ಹೇಳಿದ್ದಾರೆ.
ಸದ್ಯ ಸಿನಿಮಾ ತಂಡದ ಸದಸ್ಯನಿಗೆ ಪೊಲೀಸರು ಭದ್ರತೆ ನೀಡಿದ್ದು, ಈ ಬಗ್ಗೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.
ಕೇರಳದ ಯುವತಿಯೊಬ್ಬಳು ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಂಡ ನಂತರ ಐಸಿಸ್ ಶಿಬಿರಗಳಿಗೆ ಕಳ್ಳಸಾಗಣೆಯಾಗುವ ಕಥೆಯನ್ನು ಚಿತ್ರ ಹೇಳುತ್ತದೆ. ಈ ರೀತಿ 32 ಸಾವಿರ ಹಿಂದೂ ಮಹಿಳೆಯರು ಮತಾಂತರಗೊಂಡು ಐಸಿಸ್ ಸೇರಿದ್ದಾರೆ ಎಂದು ಚಿತ್ರ ತಂಡ ತನ್ನ ಟೀಸರ್ ನಲ್ಲಿ ಹೇಳಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಇದು 32 ಸಾವಿರ ಬದಲಿಗೆ 3 ಮಹಿಳೆಯರು ಎಂದು ಚಿತ್ರತಂಡ ಬದಲು ಮಾಡಿತ್ತು.
ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ʼದಿ ಕೇರಳ ಸ್ಟೋರಿʼ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.