Advertisement

ಮರಳಿ ಬರಬೇಡ, ಬಂದು ನೋಯಿಸಬೇಡ

07:25 PM Dec 09, 2019 | mahesh |

ಮನದ ನೋವನ್ನು ತಡೆಯಲಾಗದೇ ಅಮ್ಮನ ಬಳಿ ಧೈರ್ಯ ಮಾಡಿ ತಿಳಿಸಿಯೇ ಬಿಟ್ಟೆ. ಅವಳು ನನ್ನನ್ನು
ತಬ್ಬಿಕೊಂಡು ಅತ್ತಳು, ಒಂದು ಬಾರಿಯೂ ಗದರಲಿಲ್ಲ. ಆಗ ನನಗೆ ನಿನ್ನ ಹುಚ್ಚು ಪ್ರೀತಿಯನ್ನು ನಂಬಿಕೊಂಡು ನನ್ನವರಿಗೇ ಮೋಸ ಮಾಡಿ ಬಿಟ್ಟೆನೆಲ್ಲ ಅನ್ನಿಸಿತು…

Advertisement

ನಿನಗೊಂದು ಭಿನ್ನಹ. ಈ ಬದುಕಿಗೆ ಮರಳಿ ಬರಬೇಡ. ಬದುಕು ತುಂಬಾನೇ ಕಲಿಸಿಕೊಟ್ಟಿದೆ. ಒಂದು ಕ್ಷಣ ನನ್ನ ಮನದಾಳದ ಮಾತುಗಳನ್ನು ಗಮನವಿಟ್ಟು ಕೇಳಿಸಿಕೋ. ನೀನು ತೊರೆದು ಹೋದೆ ಎಂದು ಕಣ್ಣೀರು ಸುರಿಸುವವಳು ನಾನಲ್ಲ, ನೆನಪಿರಲಿ. ನೀನು ಮಾಡಿದ ತಪ್ಪಿಗೆ ದಂಡ ತೀರಿಸದೇ ಇರಲಾರೆಯಾ? ನಿನಗೂ ಈಗ ಅನಿಸಬಹುದು. ಮುಗ್ಧ ಮನಸ್ಸಿನ ಮುದ್ದು ಹುಡುಗಿ ಇಷ್ಟು ಕಠೊರವಾದಳಾ ಎಂದು. ಬದುಕು ನಿನ್ನಿಂದ ನಗುವುದನ್ನು ಎಷ್ಟು ರಸವತ್ತಾಗಿ ಕಲಿಸಿತೋ, ಅಷ್ಟೇ ಸೊಗಸಾಗಿ ಅಳುವುದನ್ನೂ ನಿರಂತರವಾಗಿ ಕಲಿಸುತ್ತಾ ಹೋಯಿತು.

ನನ್ನ ಬದುಕು ಎಷ್ಟು ಚೆನ್ನಾಗಿತ್ತು ಗೊತ್ತಾ? ಸದಾ ಜಗಳ ಮಾಡುವ ಇಬ್ಬರು ಅಣ್ಣಂದಿರು, ಮಗು ಥರ ನೋಡಿಕೊಳ್ಳುವ ಅಮ್ಮ, ಮುದ್ದು ಮನಸ್ಸಿನ ಅಪ್ಪ. ಒಂದು ಕಾಲದಲ್ಲಿಯೇ ಇಷ್ಟೇ ನನ್ನ ಪ್ರಪಂಚ. ಅಂಗೈಯಲ್ಲಿ ಅಪ್ಪ ಆಕಾಶ ತೋರಿಸುತ್ತಿದ್ದ. ಅಮ್ಮನ ಮಡಿಲಿನಲ್ಲಿ ಪ್ರಪಂಚವನ್ನು ಗೆದ್ದಂತೆ ಸಂಭ್ರಮಿಸುತ್ತಿದ್ದೆ. ಇನ್ನು ಇಬ್ಬರೂ ಅಣ್ಣಂದಿರ ಜೊತೆ ಜಗಳ ಆಡಿದರೂ, ಅವರ ಪ್ರೀತಿಗೆ ಬೆಲೆ ಕಟ್ಟಲಾಗುತ್ತಿರಲಿಲ್ಲ.

ಅದೇನಾಯಿತೋ ನಾ ಕಾಣೆ, ನೀನು ಈ ಬದುಕೆಂಬ ಪುಟದಲ್ಲಿ ಹೆಜ್ಜೆ ಇಟ್ಟೆ ನೋಡು. ಅಲ್ಲಿಗೆ, ನನ್ನದೇ ಪ್ರಪಂಚವಾಗಿದ್ದ ಎಲ್ಲರನ್ನೂ ದೂರ ಮಾಡಿಕೊಳ್ಳುತ್ತಾ ಬಂದೆ. ಅಪ್ಪನಿಗೆ ಮಗಳು ದೂರ ಹೋಗುತ್ತಿದ್ದಾಳೆ ಅನಿಸಿದ್ದಿರಬಹುದು. ನನ್ನ ಪಾಲಿಗೆ ಆಗ ನೀನೇ ಪ್ರಪಂಚ, ನೀನೇ ಬದುಕು. ನೀನು ಜೊತೆಗೆ ಇದ್ದರೆ ಯಾರನ್ನು ಬೇಕಾದರೂ ಎದುರಿಸಿ ನಡೆಯುವೆನು ಎಂಬ ಹುಚ್ಚು ಧೈರ್ಯ.

ಪಟಪಟ ಮಾತನಾಡುತ್ತಾ ತರಲೆ ಮಾಡುತ್ತಿದ್ದ ಮಗಳು ಮೌನವಾಗಿದ್ದಾಳೆ ಎಂದು ಅಮ್ಮ ಒಳಗೊಳಗೇ ಬಿಕ್ಕುತ್ತಿದ್ದಳು. ಅಣ್ಣಂದಿರು ಏನೇನೋ ಸರ್ಕಸ್‌ ಮಾಡಿ ನಗಿಸುವ ಪ್ರಯತ್ನ ಮಾಡುತ್ತಿದ್ದರು. ನೀನು ಒಂದು ದಿನ ಗೈರು ಹಾಜರಾದರೆ ಸಾಕು; ನನ್ನ ನಗು ಮೂಲೆ ಸೇರಿಕೊಳ್ಳುತ್ತಿತ್ತು. ಹೀಗೇ, ನನ್ನದೇ ಪ್ರಪಂಚವನ್ನು ನಾನೇ ದೂರ ಮಾಡಿಕೊಳ್ಳುತ್ತಿದ್ದೆ. ಒಂದು ಕಾಲಕ್ಕೆ ನಾನೇ ನಿನ್ನ ಪ್ರಪಂಚವೆಂದು ಬೀಗುತ್ತಿದ್ದ ನಿನ್ನ ಅಸಲಿ ಮುಖ ಆದಾಗಲೇ ಬೆಳಕಿಗೆ ಬಂದಿತ್ತು.

Advertisement

ಒಂದು ದಿನ ನನಗೆ ಗೊತ್ತಿಲ್ಲದೇನೇ ನಿನ್ನ ಪೋನ್‌ ನಂಬರ್‌ ಬದಲಾಯಿತು. ಎಷ್ಟು ಕಾಲ್‌ ಮಾಡಿದ್ದರೂ ಪೋನ್‌ ರೀಚ್‌ ಆಗುತ್ತಿರಲಿಲ್ಲ. ದಿನವಿಡೀ ಚಡಪಡಿಸಿದೆ. ದಿನ ದಿನ ಕಳೆದಂತೆ ಮೌನಿಯಾಗುತ್ತಾ ಹೋದೆ. ಯಾರಿಗೂ ಗೊತ್ತಿಲ್ಲದೇ ರಾತ್ರಿ ಇಡೀ ಕಣ್ಣೀರಿಟ್ಟೆ. ಮನದ ನೋವನ್ನು ತಡೆಯಲಾಗದೇ ಅಮ್ಮನ ಬಳಿ ಧೈರ್ಯ ಮಾಡಿ ತಿಳಿಸಿಯೇ ಬಿಟ್ಟೆ. ಅವಳು ನನ್ನ ತಬ್ಬಿಕೊಂಡು ಅತ್ತಳು, ಒಂದು ಬಾರಿಯೂ ಗದರಲಿಲ್ಲ.
ಆಗ ನನಗೆ ನಿನ್ನ ಹುಚ್ಚು ಪ್ರೀತಿಯನ್ನು ನಂಬಿಕೊಂಡು ನನ್ನವರಿಗೇ ಮೋಸ ಮಾಡಿ ಬಿಟ್ಟೆನೆಲ್ಲ ಅನ್ನಿಸಿತು.

ಇಂದೂ ನೀನು ಇಲ್ಲ ಎಂಬ ಕೊರಗು ನನಗಿಲ್ಲ. ನಿನಗಾಗಿ ಸುರಿಸಲು ಒಂದು ಹನಿ ಕಣ್ಣೀರೂ ಉಳಿದಿಲ್ಲ. ಬದಲಾಗಿ ಅಮ್ಮ, ಅಪ್ಪ, ಅಣ್ಣಂದಿರಿಗಾಗಿ ಪ್ರತಿದಿನ ನಗುತ್ತೇನೆ. ನೀನು ಮರಳಿ ಬಂದು ಸಮಜಾಯಿಷಿ ನೀಡಿದರೂ ಕೇಳುವಷ್ಟು ವ್ಯವಧಾನ ನನಗಿಲ್ಲ. ನೀನಿಲ್ಲದೆಯೇ ಇಲ್ಲಿ ಸುಖವಾಗಿದ್ದೇನೆ. ನನ್ನ ನಗುವಲ್ಲಿ ನನ್ನವರ ಪ್ರಪಂಚ ಅಡಗಿದೆ. ನೆನಪಿರಲಿ; ಈ ಪ್ರಪಂಚದಿಂದ ನಗುವನ್ನು ಲೂಟಿ ಮಾಡಲು ನಿನ್ನಿಂದ ಆಗದು. ಮರಳಿ ಬರಬೇಡ, ಬಂದು ನೋಯಿಸಬೇಡ.

ಸಾಯಿನಂದಾ ಚಿಟ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next