Advertisement

8 ವರ್ಷಗಳ ಬಳಿಕ ಅಭಿಮಾನಿಗಳ ಭೇಟಿ; ಎಲ್ಲಾ ದೇವರ ಇಚ್ಛೆ ಎಂದ ರಜನಿಕಾಂತ್

04:18 PM May 15, 2017 | udayavani editorial |

ಚೆನ್ನೈ : ‘ರಾಜಕೀಯಕ್ಕೆ ಬರುವ ಯಾವುದೇ ಆಸೆ ನನಗಿಲ್ಲ; ಒಂದೊಮ್ಮೆ ನಾನು ರಾಜಕೀಯಕ್ಕೆ ಬಂದೆನೆಂದೆರೆ ಹಣ ಮಾಡುವ ಮಂದಿಗೆ ಗೇಟ್‌ ಪಾಸ್‌ ಕೊಡಿಸುತ್ತೇನೆ; ಹಾಗೆಯೇ ನಾನು ರಾಜಕೀಯ ಪ್ರವೇಶಿಸದಿದ್ದರೆ ನೀವ್ಯಾರೂ ನಿರಾಶರಾಗಬಾರದು’ ಎಂದು ತಮಿಳು ನಾಡಿನ ಸೂಪರ್‌ ಸ್ಟಾರ್‌ ರಜನೀಕಾಂತ್‌ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ. 

Advertisement

“ನನಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ; ನಾನೊಬ್ಬ ಪ್ರಭಾವೀ ರಾಜಕಾರಣಿಯೂ ಅಲ್ಲ; ಸಮಾಜಸೇವಾ ಕಾರ್ಯಕರ್ತನೂ ಅಲ್ಲ ಎಂದು ಈ ಹಿಂದೆಯೂ ಎಷ್ಟೋ ಬಾರಿ ಹೇಳಿದ್ದೇನೆ; ಆದರೂ ನನ್ನನ್ನು ಹಲವು ಬಾರಿ ರಾಜಕೀಯ ಚರ್ಚೆಗೆ ಎಳೆದು ತರಲಾಗಿದೆ. ನನ್ನ ಜೀವ ದೇವರ ಕೈಯಲ್ಲಿದೆ. ಆತನಲ್ಲಿ ನನಗೆ ಏನು ಕಾದಿದೆಯೋ ನನಗೆ ಗೊತ್ತಿಲ್ಲ. ಹಾಗಿದ್ದರೂ ಆತ (ದೇವರು) ನನಗೆ ಒಪ್ಪಿಸಿಕೊಡುವ ಯಾವತ್ತೂ ಕೆಲಸಗಳನ್ನು ನಾನು ಶ್ರದ್ಧಾಪೂರ್ವಕ ನಿಭಾಯಿಸಿದ್ದೇನೆ; ನಿಭಾಯಿಸುತ್ತಿದ್ದೇನೆ. ಆದುದರಿಂದ ನಾನು ರಾಜಕೀಯ ರಂಗಕ್ಕೆ ಬಾರದೇ ಇರುವ ಬಗ್ಗೆ ನನ್ನಲ್ಲಿ ಯಾವುದೇ ನಿರಾಶೆ, ಪಶ್ಚಾತ್ತಾಪ ಇಲ್ಲ’ ಎಂದು ರಜನೀಕಾಂತ್‌ ತನ್ನ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದರು. 

“ನಿಮ್ಮನ್ನೆಲ್ಲ ನಾನು ಎರಡು ತಿಂಗಳ ಹಿಂದೆಯೇ ಭೇಟಿಯಾಗುವುದಿತ್ತು. ಆದರೆ ಇನ್ನೂಹೆಚ್ಚಿನ ಅಭಿಮಾನಿಗಳನ್ನು ಬರಮಾಡಿಕೊಳ್ಳಲು ನಾನದನ್ನು ಮುಂದಕ್ಕೆ ಹಾಕಬೇಕಾಯಿತು. ಅನಂತರ ನನಗೆ ಶ್ರೀಲಂಕೆಗೆ ಹೋಗುವುದಿತ್ತು. ಆ ಕಾರಣಕ್ಕಾಗಿ ಮತ್ತೆ ಅಭಿಮಾನಿಗಳ ಜತೆಗಿನ ಭೇಟಿಯನ್ನು ಮುಂದಕ್ಕೆ ಹಾಕಬೇಕಾಯಿತು’ ಎಂದ ರಜನೀಕಾಂತ್‌ ತಾನು ಅಪೇಕ್ಷೆ ಪಟ್ಟಂತೆ ಕಾಲಕಾಲಕ್ಕೆ ತನಗೆ ಅಭಿಮಾನಿಗಳನ್ನು ಭೇಟಿಯಾಗಲು ಅಸಾಧ್ಯವಾದುದಕ್ಕೆ ವಿಷಾದಿಸಿದರು. 

ಅಭಿಮಾನಿಗಳಿಗೆ ಹಿತವಚನ ನೀಡುತ್ತಾ ರಜನೀಕಾಂತ್‌, “ನೀವೆಲ್ಲ  ನಿಮ್ಮ ಮಕ್ಕಳು, ಮನೆ ಮಂದಿಯವರ ಪಾಲನೆ ಪೋಷಣೆಯನ್ನು ಚೆನ್ನಾಗಿ ಮಾಡಬೇಕು; ಕುಡಿತ, ಧೂಮಪಾನ ಬಿಡಬೇಕು. ಈ ವ್ಯಸನಗಳಿಂದ ಸಿರಿವಂತ ಉದ್ಯಮಿಗಳು ಕೂಡ ನಾಶವಾಗಿ ಹೋಗಿದ್ದಾರೆ. ಆದುದರಿಂದ ಈ ವ್ಯಸನಗಳಿಗೆ ತುತ್ತಾಗದೆ ಉತ್ತಮ ಬಾಳ್ವೆಯನ್ನು ನಡೆಸಿ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next