Advertisement

ಹುಚ್ಚು ಹೊಳೆ ಪ್ರವಾಹಕ್ಕೆ 30 ಹಳ್ಳಿಗೆ ಅಪಾಯ

09:50 AM Jul 22, 2020 | Suhan S |

ವಿಜಯಪುರ: ಉತ್ತರ ಕರ್ನಾಟಕದ ಮಟ್ಟಿಗೆ ಕಣ್ಣೀರ ಹೊಳೆ ಎನಿಸಿಕೊಂಡಿರುವ ಹಾಗೂ ವಿಶ್ವದಲ್ಲೇ ನಿರಂತರ ದಿಕ್ಕು ಬದಲಿಸುವ ಏಕೈಕ ನದಿ ಎನಿಸಿರುವ ಡೋಣಿ ನದಿ ಹಲವು ದಶಕಗಳಿಂದ ಪ್ರವಾಹದ ಅಪಾಯ ತಂದೊಡ್ಡುತ್ತಿದೆ.

Advertisement

ತನ್ನ ನಡೆಯಿಂದಲೇ ಡೋಣಿ ನದಿ ಹರಿದರೆ ಓಣೆಲ್ಲ ಕಾಳು ಎಂಬ ನಾಣ್ಣುಡಿ ಹೊಂದಿದ್ದ ಈ ನದಿ, ಆಧುನಿಕತೆಯ ಅಭಿವೃದ್ಧಿ ಹೆಸರಿನ ಯೋಜನೆಗಳಿಂದ ಇದೀಗ ಹುಚ್ಚು ಹೊಳೆ ಎಂದು ಹೊಸ ನಾಮದೊಂದಿಗೆ ಕಣ್ಣೀರ ಡೋಣಿ ಎಂದೇ ಅಪಕೀರ್ತಿ ಪಡೆದಿದೆ. ಇಂಥ ನದಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅಪಾಯ ತಂದೊಡ್ಡುವ ಎಚ್ಚರಿಕೆ ಕುರಿತು ತಜ್ಞರೊಬ್ಬರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. 2007 ಹಾಗೂ 2009ರಲ್ಲಿ ಪ್ರವಾಹ ಸೃಷ್ಟಿಸಿದ್ದ ಡೋಣಿ ನದಿ ತನ್ನ ತೀರದಲ್ಲಿದ್ದ ಹತ್ತಾರು ಹಳ್ಳಿಗಳ ಸ್ಥಳಾಂತರಕ್ಕೆ ಕಾರಣವಾಗಿತ್ತು. ಇದೀಗ ಭವಿಷ್ಯದಲ್ಲಿ ಡೋಣಿ ನದಿ ಹೆಚ್ಚಿನ ಅಪಾಯ ಸೃಷ್ಟಿಸುವ ಕುರಿತು ಕೆಬಿಜೆಎನ್ನೆಲ್‌ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ತಾಂತ್ರಿಕ ಸಹಾಯಕ ಡಾ| ಸುಧಿಧೀರ ಸಜ್ಜನ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಪ್ರವಾಹದ ತೀವ್ರತೆ ಹಾಗೂ ತುರ್ತು ರಕ್ಷಣಾ ಕಾರ್ಯಗಳ ಕುರಿತು ವರದಿಯಲ್ಲಿ ವಿವರಿಸಿದ್ದು, ಜುಲೈ 6ರಂದು ಈ ಕುರಿತು 41 ಪುಟಗಳ ವರದಿ ನೀಡಿದ್ದಾರೆ. ಜಿಲ್ಲಾಡಳಿತ ಸದರಿ ವರದಿಯನ್ನು ಸಂಬಂಧಿಸಿದ ಇಲಾಖೆ ಮೇಲಧಿ ಕಾರಿಗಳಿಗೆ ರವಾನಿಸಲು ಮುಂದಾಗಿದೆ.

ವರದಿಯಲ್ಲೇನಿದೆ?: 194 ಕಿ.ಮೀ. ಹರಿಯುವ ಡೋಣಿ ನದಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಖೋಜನವಾಡ ಗ್ರಾಮದ ಬಳಿ ಹುಟ್ಟಿ, ಆ ರಾಜ್ಯದಲ್ಲಿ 15 ಕಿ.ಮೀ.. ಮಾತ್ರ ಹರಿಯುತ್ತದೆ. 179 ಕಿ.ಮೀ. ಉದ್ದವಾಗಿ ಬೆಳಗಾವಿ, ವಿಜಯಪುರ, ಅಖಂಡ ಕಲಬುರಗಿ ಜಿಲ್ಲೆ ಸೇರಿದಂತೆ ಕರ್ನಾಟಕದಲ್ಲಿ ಹರಿಯುತ್ತದೆ. ಇದರಲ್ಲಿ ವಿಜಯಪುರ ಜಿಲ್ಲೆಯಲ್ಲೇ ಶೇ. 80 ಅಂದರೆ 141 ಕಿ.ಮೀ. ಪ್ರದೇಶದಲ್ಲಿ ಹರಿಯುತ್ತದೆ. 3,217 ಚ.ಕ.ಮೀ. ಹರಿಯುವ ಸದರಿ ನದಿಗೆ ಸುಮಾರು ಅರ್ಧ ಶತಮಾನದ ಹಿಂದೆ ನದಿಗೆ ಹೆಚ್ಚಿನ ಸೇತುವೆಗಳೇ ಇರಲಿಲ್ಲ. ಹೀಗಾಗಿ ಶತ ಶತಮಾನ ಕಂಡ ನದಿ ತೀರ ಹಳ್ಳಿಗಳಿಗೆ ಡೋಣಿ ನದಿ ಜೀವ ನದಿಯಾಗಿತ್ತು. ಆದರೆ ಸಂಪರ್ಕ ಕ್ರಾಂತಿಯ ಹೆಸರಿನಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 20 ಸೇತುವೆಗಳನ್ನು ಕಟ್ಟಿದ್ದು, ಬಹುತೇಕ ಸೇತುವೆಗಳು ಕೆಳ ಹಂತದಲ್ಲೇ ಇವೆ. 15,000-70,000 ಸಾವಿರ ಕ್ಯೂಸೆಕ್‌ ಪ್ರಮಾಣದಲ್ಲಿ ಹರಿಯುವ ಈ ನದಿಗೆ ಮತ್ತೂಂದೆಡೆ ಸದರಿ ನದಿಯಲ್ಲಿ ಬಳ್ಳಾರಿ ಜಾಲಿ ಎಂದು ಕರೆಸಿಕೊಳ್ಳುವ ಆಫ್ರಿಕಾ ಖಂಡ ಮೂಲದ ಪ್ರೋಸೆಪೀಸ್‌ ಜೂಲಿಫ್ಲೆರಾ ಎಂಬ ಮುಳ್ಳು ಯಥೇತ್ಛವಾಗಿ ಬೆಳೆದು ನದಿಯ ಹರಿವು ಆಕ್ರಮಿಸಿದೆ. ಸೇತುವೆಗಳ ನಿರ್ಮಾಣ, ಇದರಿಂದ ಹೂಳು ತುಂಬಲು ಕಾರಣವಾಗಿದೆ.

ಪರಮಶಿವಯ್ಯ ಸಮಿತಿಗೂ ವರದಿ: ಇಂಥ ಕಾರಣಗಳಿಂದ 2007 ಹಾಗೂ 2009ರಲ್ಲಿ ಉಂಟಾದ ಪ್ರವಾಹದಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಸುಮಾರು 11 ಹಳ್ಳಿಗಳನ್ನು ಸ್ಥಳಾಂತರ ಮಾಡಲಾಗಿದೆ. ಮತ್ತೂಂದೆಡೆ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಹೊನಗನಹಳ್ಳಿ ಬಳಿ ಹಾಗೂ ರಾ.ಹೆ.-50ಕ್ಕೆ ಹಿಟ್ನಳ್ಳಿ ಬಳಿ ಸುಮಾರು 1 ಕಿ.ಮೀ. ಹರಿಯುವ ನದಿಗೆ ಕಡಿಮೆ ಎತ್ತರದ ಹಾಗೂ ಸುಮಾರು 200 ಮೀ. ಮಾತ್ರ ದಶಕದ ಹಿಂದೆ ಸೇತುವೆ ನಿರ್ಮಿಸಲಾಗಿದೆ. ಇದಲ್ಲದೇ ತಾಳಿಕೋಟೆ ಬಳಿಯ ಹಡಗಿನಾಳನಲ್ಲಿ ಅರ್ಧ ಕಿ.ಮೀ. ವಿಸ್ತಾರದಲ್ಲಿ ಹರಿಯುವ ನದಿಗೆ 150 ಮೀ. ಮಾತ್ರ ಸೇತುವೆ ನಿರ್ಮಿಸಲಾಗಿದೆ. ಇದು ಭವಿಷ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದ ಅಪಾಯ ಸೃಷ್ಟಿಗೆ ಕಾರಣವಾಗಲಿದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಹೊಸದಾಗಿ ನಿರ್ಮಿಸಿರುವ ಸೇತುವೆಗಳಿಗೆ ಸಣ್ಣ ಪ್ರಮಾಣದಲ್ಲಿ ಕಿಂಡಿಗಳನ್ನು ಬಿಟ್ಟಿರುವುದು ನದಿಯ ನೈಜ ಹರಿವು ನಿಯಂತ್ರಿಸಿ ಒತ್ತಡ ಸೃಷ್ಟಿಸಿದೆ. ಇದರಿಂದ ಭವಿಷ್ಯದಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದರೂ ದೊಡ್ಡ ಮಟ್ಟದ ಪ್ರವಾಹ ಉಂಟಾಗಲಿದೆ. ಇಂಥ ಆತಂಕವನ್ನು ಡಾ| ಸುಧಿಧೀರ ಸಜ್ಜನ ಅವರು ನದಿ ಹೂಳು ತೆಗೆಯುವುದು ಸೇರಿದಂತೆ ಸಮಗ್ರ ಅಧ್ಯಯನಕ್ಕೆ ನೇಮಕಗೊಂಡಿದ್ದ ಡಾ| ಪರಮಶಿವಯ್ಯ ಸಮಿತಿ ಎದುರೂ ಹೊರ ಹಾಕಿದ್ದನ್ನು ತಮ್ಮ ವರದಿಯಲ್ಲಿ ಉಲ್ಲೇಖೀಸಿದ್ದಾರೆ.

Advertisement

ಮುನ್ನೆಚ್ಚರಿಕೆ ಅಗತ್ಯ: ತಕ್ಷಣ ಈ ಕುರಿತು ಜಿಲ್ಲಾಡಳಿತದ ಎಚ್ಚೆತ್ತುಕೊಳ್ಳದಿದ್ದಲ್ಲಿ ದಶಕದ ಹಿಂದೆ ಸೃಷ್ಟಿಸಿದ್ದ ಪ್ರವಾಹದಿಂದಾಗಿ ಮುಳುಗಡೆಯಾಗಿ ಸ್ಥಳಾಂತರಗೊಂಡಿರುವ ಹಳ್ಳಿಗಳು ಸೇರಿದಂತೆ 30 ಹಳ್ಳಿಗಳು ಮುಳುಗಡೆ ಆಗಲಿವೆ. ಅದರಲ್ಲಿ ಹೊನಗನಹಳ್ಳಿ ಹಾಗೂ ತಾಳಿಕೋಟೆ ಪಟ್ಟಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮುಳುಗಡೆ ಭೀತಿ ಇದೆ ಎಂದು ಡಾ| ಸುಧೀರ ಸಜ್ಜನ ಎಚ್ಚರಿಸಿದ್ದಾರೆ.

ಅಲ್ಲದೇ ತಕ್ಷಣವೇ ಡೋಣಿ ನದಿ ಪ್ರವಾಹ ಭೀತಿ ಇರುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಪರಿಸ್ಥಿತಿಯನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಅಪಾಯ ಸಂಭವಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುವ ಬದಲು, ಮುನ್ನೆಚ್ಚರಿಕೆ ಕೈಗೊಳ್ಳುವಂತೆ ತಾವು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

ಕೋವಿಡ್‌ ನಿಗ್ರಹದ ಒತ್ತಡದಲ್ಲಿರುವ ನಮಗೆ ಕೆಬಿಜೆಎನ್ನೆಲ್‌ ಅಧಿಕಾರಿ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ವರದಿ-ಪ್ರಸ್ತಾವನೆ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಒಂದೊಮ್ಮೆ ನಮ್ಮ ಅಧಿಕಾರಿಗಳಿಗೆ ವರದಿ ಸಲ್ಲಿಕೆಯಾಗಿದ್ದಲ್ಲಿ ತಕ್ಷಣವೇ ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಿಸಿದವರಿಗೆ ರವಾನಿಸಲಾಗುತ್ತದೆ.  –ವೈ.ಎಸ್‌. ಪಾಟೀಲಜಿಲ್ಲಾಧಿಕಾರಿ, ವಿಜಯಪುರ

 

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next