Advertisement

ಕೋವಿಡ್ 19 ನಿಧಿಗೆ ಹರಿದು ಬಂದ ದೇಣಿಗೆ

11:36 AM Mar 28, 2020 | Suhan S |

ಬೆಂಗಳೂರು: ಕೋವಿಡ್ 19 ನಿಯಂತ್ರಣಕ್ಕಾಗಿ ಕಾಂಗ್ರೆಸ್‌ ಶಾಸಕರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ನಾವು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರ ತರಹ ಬೀದಿಗಿಳಿದು ವಸೂಲಿ ಮಾಡುವುದಿಲ್ಲ. ಈ ರೀತಿ ಹಣ ಹಾಗೂ ದವಸ ಧಾನ್ಯ ಸಂಗ್ರಹಿಸಲು ನಮ್ಮ ಪಕ್ಷ ಪ್ರೋತ್ಸಾಹ ನೀಡುವುದಿಲ್ಲವೆಂದರು.

ಕೋವಿಡ್ 19  ನಿಯಂತ್ರಣ ವಿಚಾರವಾಗಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಇತರೆ ನಾಯಕರು ರಾಷ್ಟ್ರ ಮಟ್ಟದಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದಾರೆ. ರಾಜ್ಯದಲ್ಲಿ ನಾವೂ ಸರ್ಕಾರದ ಜತೆ ನಿಂತುಕೊಳ್ಳಲು ನಿರ್ಧರಿಸಿದ್ದೇವೆಂದರು. ಅನೇಕ ಕಾಂಗ್ರೆಸ್‌ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಕನಿಷ್ಠ ತಲಾ 1 ಲಕ್ಷ ದೇಣಿಗೆ ನೀಡಲು ನಿರ್ಧರಿಸಲಾಗಿದೆ. ಇನ್ನು ಜಿಲ್ಲೆ, ತಾಲೂಕು ಮಟ್ಟದ ನಾಯಕರು, ಕಾರ್ಯಕರ್ತರು ಸ್ವಯಂ ಇಚ್ಛೆಯಿಂದ ದೇಣಿಗೆ ನೀಡಬಹುದು. ಎಲ್ಲಾ ಶಾಸಕರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರ ಮೂಲಕ ತಮ್ಮ ದೇಣಿಗೆ ನೀಡಲಾಗುವುದು. ಸಂಗ್ರಹವಾದ ದೇಣಿಗೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ವಿಚಾರವಾಗಿ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್‌ ರಚಿಸಲಾಗಿದ್ದು, ಮೇಲ್ವಿಚಾರಣೆ ನಡೆಸಲಿದೆ ಎಂದರು.

ಬೆಂಗಳೂರಿನಲ್ಲಿ ಅಸಂಘಟಿತ ಕಾರ್ಮಿಕರು, ವಲಸಿಗರು ಒಂದು ಹೊತ್ತು ಊಟ ಸಿಗದೇ ಹಸಿವಿ  ನಿಂದ ಬಳಲುತ್ತಿದ್ದಾರೆ. ಪಿಜಿ ಕೇಂದ್ರ ಖಾಲಿಯಾಗಿವೆ. ಹೋಟೆಲ್‌ ಮುಚ್ಚಿದ್ದು, ಅವರಿಗೂ ಊಟ ಸಿಗುತ್ತಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್‌ ಉಪಯೋಗಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಮಸ್ಯೆ ತಡೆಯಲು ಹೇಗೆ ಕಾರ್ಯನಿರ್ವ  ಹಿಸಬೇಕು ಎಂಬ ಸ್ಪಷ್ಟ ಯೋಜನೆ ಸರ್ಕಾರದ ಬಳಿ ಇಲ್ಲ. ಅಧಿಕಾರಿಗಳ ಜತೆ ಚರ್ಚೆ ಮಾಡಿದಾಗ ಸರ್ಕಾರದಿಂದ ಇನ್ನು ಹಣ ತಲುಪಿಲ್ಲ. ಅಗತ್ಯ ವಸ್ತು ಲಭ್ಯವಾಗಿಲ್ಲ. ವೈದ್ಯರಿಗೆ ಸುರಕ್ಷಾ ಸೌಲಭ್ಯಗಳೂ ಇಲ್ಲ. ರಾಜ್ಯ ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದಿದ್ದರೆ ಅನಿವಾರ್ಯವಾಗಿ ರಾಜ್ಯಪಾಲರು ಅಥವಾ ಮುಖ್ಯಮಂತ್ರಿಗೆ ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಬೇಕಾಗುತ್ತದೆ ಎಂದರು. ಇನ್ನು ಕೇಂದ್ರ ಸರ್ಕಾರವೂ ಇಎಂಐ ಕಟ್ಟುವುದನ್ನು ಮುಂದೂಡ ಬೇಕು ಎಂದು ನಾವು ಕೇಳಿಕೊಂಡ ಮನವಿಗೆ ಸ್ಪಂದಿಸಿ ತೀರ್ಮಾನ ಪ್ರಕಟಿಸಿದೆ ಎಂದರು.

Advertisement

ರೈತರು ಬೆಳೆದ ಪದಾರ್ಥ ರೇಷ್ಮೆ, ತರಕಾರಿ ಯಾವುದೇ ಇರಲಿ, ಅವುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿ ಸರ್ಕಾರವೇ ಖರೀದಿಸಬೇಕು. ಅಲ್ಲದೇ, ಯಾವುದನ್ನು ಶೀತಲ ಸಂರಕ್ಷಣಾ ಘಟಕದಲ್ಲಿ ಇಡಬಹುದೋ ಅವುಗಳನ್ನು ಸಂರಕ್ಷಿಸಬೇಕು. ಇದುವರೆಗೂ ಆಗಿರುವ ನಷ್ಟ ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಪರಿಹಾರ ನೀಡಬೇಕೆಂದರು.

ಉಪನ್ಯಾಸಕರಿಂದ ತಿಂಗಳ ಸಂಬಳ ನಿಧಿಗೆ : ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ 19  ತಡೆಯುವ ನಿಟ್ಟಿನಲ್ಲಿ ರಾಜ್ಯದ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಕೋವಿಡ್‌-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಅಗತ್ಯ ಸ್ಪಂದನ ನೀಡಲು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ರಾಜ್ಯದ ವಿವಿ ಮತ್ತು ಪದವಿ ಕಾಲೇಜಿನ ಉಪನ್ಯಾಸಕರು ನಿರ್ಧರಿಸಿದ್ದಾರೆ. ಅಂದಾಜು 10 ಕೋಟಿ ರೂ. ಇದರಿಂದ ಸಂಗ್ರಹವಾಗಲಿದ್ದು, ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಮೂಲಕ ಇದನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ವಿವಿ ಹಾಗೂ ಕಾಲೇಜು ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಜಿ.ಭಾಸ್ಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next