Advertisement

Shimoga; ಬರ ಪರಿಹಾರ ಹಣ ತರುವ ತಾಕತ್ತು, ಧಮ್ ಬಿಜೆಪಿಯವರಿಗಿದೆಯೇ?: ಮಧು ಬಂಗಾರಪ್ಪ

12:06 PM Nov 27, 2023 | Team Udayavani |

ಶಿವಮೊಗ್ಗ: ಬಿಜೆಪಿಯವರು ಬರಗಾಲದ ಸಮಿಕ್ಷೆ ಮಾಡಿದ್ದಾರೆ. ಸಮಿಕ್ಷೆ ಮಾಡಿ ಯಾರಿಗೆ ಕೊಡುತ್ತಾರೆ. ಪರಿಹಾರ ಹಣ ತರುವ ತಾಕತ್ತು, ಧಮ್ ಇವರಿಗಿದೆಯಾ? ಆರು ತಿಂಗಳಾದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಪಂಚ ರಾಜ್ಯ ಚುನಾವಣೆಯಲ್ಲಿ ಎಡ್ರೆಸ್ ಇಲ್ಲದೆ ಹೋಗುತ್ತಾರೆ. ಬಿಜೆಪಿಯವರು ಎಂದೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ. ದುಡ್ಡಿನ ಮೂಲಕ ಅವ್ಯವಹಾರದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡಕೆ ಸುಲಿಯುವ ಯಂತ್ರಗಳಿಗೆ ಪ್ರತ್ಯೇಕ ಮೀಟರ್ ಅಳವಡಿಕೆ ವಿಚಾರವಾಗಿ ಸಣ್ಣ ರೈತರಿಗೆ ಉಚಿತ ವಿದ್ಯುತ್ ನೀಡುವಂತೆ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದೇನೆ. ಈ ಹಿಂದಿನ ಸರ್ಕಾರದವರೇ  ಮಾಡಿರುವುದು ಇದು. ಆರಗ ಜ್ಞಾನೇಂದ್ರ ಅವರು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಮನಸಿಗೆ ಬಂದ ಹಾಗೆ ಮಾತನಾಡುವುದು ಬಿಜೆಪಿ ಅವರ ರೋಗ. ಅಮಿತ್ ಶಾ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಹೇಳಿದ್ದ ಒಂದೇ ಒಂದು ಅಂಶವನ್ನಾದರೂ ಅನುಷ್ಠಾನ ಮಾಡಿದ್ದಾರಾ? ಪ್ರತಿಭಟನೆ ಅಮಿತ್ ಶಾ ವಿರುದ್ಧ ಮಾಡಿ. ಆರಗ ಜ್ಞಾನೇಂದ್ರ ಅವರೇ ನಿಮ್ಮ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಎಂದರು.

ದೈಹಿಕ ಶಿಕ್ಷಕರ ಕೂರತೆಯಿದೆ. ದೈಹಿಕ ಶಿಕ್ಷಕರ ಅವಶ್ಯಕತೆಯಿದೆ. ಮುಂದಿನ ಬಜೆಟ್ ವೇಳೆಗೆ ದೈಹಿಕ ಶಿಕ್ಷಕರ ನೇಮಕಾತಿ ನಡೆಯುತ್ತದೆ ಎಂದರು.

ಬರಗಾಲ ವಿಚಾರವಾಗಿ ಮುಖ್ಯಮಂತ್ರಿ ಸಮರ್ಪಕವಾಗಿ ನಿಭಾಯಿಸಲು ಕ್ರ‌ಮ ಕೈಗೊಂಡಿದ್ದಾರೆ. ಇವತ್ತು ಸಮಸ್ಯೆಯಿಲ್ಲ. ಡಿಸೆಂಬರ್ ನಂತರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆಯಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ನೀರು ಹಾಗೂ ಮೇವಿಗೆ ಕೂರತೆಯಿಲ್ಲ. ಸುಮಾರು ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಗಳು ಹೇಳಿದ್ದಾರೆ. 17 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ಕೇಳಿದ್ದೇವೆ. ಆದರೆ ಕೇಂದ್ರ ಸರ್ಕಾರಕ್ಕೆ ಸಮಸ್ಯೆ ಕೇಳುವ ಸೌಜನ್ಯವೂ ಇಲ್ಲ ಎಂದರು.

ಲೋಡ್ ಶೆಡ್ಡಿಂಗ್ ಇಲ್ಲ: ಬರ ನಿರ್ವಹಣೆಗೆ ಜಿಲ್ಲಾಧಿಕಾರಿ ಖಾತೆಗೆ ಹಣ ಹಾಕಲಾಗಿದೆ. ಏಳು ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿ ಸದ್ಯಕ್ಕೆ ವಿದ್ಯುತ್ ಸಮಸ್ಯೆಯಿಲ್ಲ. ಲೋಡ್ ಶೆಡ್ಡಿಂಗ್ ಎಲ್ಲೂ ಮಾಡಿಲ್ಲ. ಅನಾವಶ್ಯಕ ಲೋಡ ಶೆಡ್ಡಿಂಗ್ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್ ಇಲ್ಲದೆ ಮಕ್ಕಳಿಗೆ ಓದಲು ಸಮಸ್ಯೆಯಾದರೆ ನಾನು ಬಿಡುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

Advertisement

ಕರ್ನಾಟಕ ರಾಜ್ಯದ ಖಜಾನೆಯಲ್ಲಿ ದುಡ್ಡಿಲ್ಲ ಎಂದಿದ್ದರು. ಆದರೆ ಗೃಹಜ್ಯೋತಿ  ಐದು ಲಕ್ಷ 31 ಸಾವಿರ ಗೃಹ ಬಳಕೆದಾರರಿದ್ದಾರೆ. 53 ಕೋಟಿ ಹಣವನ್ನು ನಾವು ಗೃಹಜ್ಯೋತಿಗೆ ಶಿವಮೊಗ್ಗದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ಗೃಹ ಲಕ್ಷ್ಮಿಗೆ ಹಣ ಇಲ್ಲ ಅಂತೇನಿಲ್ಲ. ಕೆಲವರಿಗೆ ಟೆಕ್ನಿಕಲ್ ಸಮಸ್ಯೆಯಿಂದ ಹಣ ಹೋಗಿಲ್ಲ. 95% ಅರ್ಹತೆ ಇದ್ದವರಿಗೆ ಗೃಹ ಲಕ್ಷ್ಮೀ ನೀಡಿದ್ದೇವೆ ಎಂದರು.

ಮಾಗಡಿ ಕಾಂಗ್ರೆಸ್​ ಶಾಸಕ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಸೈನಿಕರನ್ನು ಯಾರು ರಾಜಕೀಯಕ್ಕೆ ಬಳಸಬಾರದು. ರೈತನ ಬಗ್ಗೆ, ಸೈನಿಕನ ಬಗ್ಗೆ ಯಾವತ್ತೂ ಹಗುರವಾಗಿ ಮಾತನಾಡಬಾರದು. ಇದು ತಪ್ಪಾಗುತ್ತದೆ. ನಾವು ಇಲ್ಲಿದ್ದೇವೆಂದರೆ ಸೈನಿಕರು ಮುಖ್ಯ. ಹಾಗಾಗಿ ಅವರ ಬಗ್ಗೆ ಅಧಿಕಾರದಲ್ಲಿ ಇರುವವರು ಹಗುರವಾಗಿ ನೋಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next