Advertisement

ವೈದ್ಯರ ಹೋರಾಟ: ಎಲ್ಲೆಡೆ ರೋಗಿಗಳ ಪರದಾಟ

11:46 AM Nov 17, 2017 | Team Udayavani |

ಬೆಳ್ತಂಗಡಿ: ರಾಜ್ಯ ಸರಕಾರ ತರಲುದ್ದೇಶಿಸಿದ ಮಸೂದೆಯ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆ ವೈದ್ಯರು ನಡೆಸುತ್ತಿರುವ ಮುಷ್ಕರ ಗುರುವಾರ ತೀವ್ರ ಸ್ವರೂಪ ಪಡೆದಿದೆ. ಇದೇ ಮೊದಲ ಬಾರಿಗೆ ಖಾಸಗಿ ಆಸ್ಪತ್ರೆಗಳ ಬಾಗಿಲು ಮುಚ್ಚಿದ್ದು ರೋಗಿಗಳು ಸರಕಾರಿ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಸಿಬಂದಿಗೆ ಒತ್ತಡ ಹೆಚ್ಚಾಗುತ್ತಿದೆ.

Advertisement

ರಾಜ್ಯ ಸರಕಾರ ಖಾಸಗಿ ವೈದ್ಯಕೀಯ ಕ್ಷೇತ್ರದ ಮೇಲೆ ತರಲು ಉದ್ದೇಶಿಸಿದ ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಕಳೆದ ಕೆಲವು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಇದಕ್ಕೆ ಬೆಳ್ತಂಗಡಿ ತಾಲೂಕು ವೈದ್ಯರ ಸಂಘ ಕೂಡ ಸ್ಪಂದಿಸಿದ್ದು ಕಳೆದ ವಾರ ಹೊರ ರೋಗಿಗಳಿಗೆ ಚಿಕಿತ್ಸೆ ಇಲ್ಲ ಎಂದು ಮುಷ್ಕರ ನಡೆಸಿದ್ದರು. ನ.13ರಂದು ಬೆಳಗಾವಿ ಚಲೋ ನಡೆಸಿದ್ದರು. ಬುಧವಾರ ರಾತ್ರಿ ತುರ್ತು ಸಭೆ ಸೇರಿ ಗುರುವಾರದಂದು ಸರಕಾರದ ಸ್ಪಂದನೆ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿ ಹೊರರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲು ನಿರ್ಣಯಿಸಿ ಅಂತೆಯೇ ಮಾಡಲಾಗಿದೆ.

ಬಾಗಿಲು ಬಂದ್‌
ಖಾಸಗಿ ಆಸ್ಪತ್ರೆಗಳ ಬಾಗಿಲು ಮುಚ್ಚಿದ ವಾತಾವರಣ ತಾಲೂಕಿನ ಎಲ್ಲೆಡೆ ಕಂಡು ಬಂದಿತು. ಅರಿವಿಲ್ಲದೆ ಬಂದ ರೋಗಿಗಳು ಸರಕಾರಿ ಆಸ್ಪತ್ರೆಯ ದಾರಿ ಹಿಡಿದರು. ಖಾಸಗಿ ವೈದ್ಯರೆಲ್ಲರೂ ರಜೆ ಹಾಕಿ ಆಸ್ಪತ್ರೆಗೆ ಗೈರಾಗಿದ್ದರು. ಆದ್ದರಿಂದ ಸದಾ ಜನಜಂಗುಳಿಯಿಂದ ತುಂಬಿ ತುಳುಕುವ ಖಾಸಗಿ ಆಸ್ಪತ್ರೆಗಳ ವಾತಾವರಣ ಖಾಲಿ ಖಾಲಿಯಾಗಿತ್ತು.

ಹೆಚ್ಚು ರೋಗಿಗಳು
ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಎಂದಿಗಿಂತ ಜಾಸ್ತಿಯೇ ಇತ್ತು. ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸಿಬಂದಿಗೂ ರಜೆಮನ್ನಾ ಮಾಡಿ ಕಡ್ಡಾಯ ಹಾಜರಾತಿಗೆ ಸರಕಾರ ಆದೇಶ ನೀಡಿದೆ. ಹಾಗಿದ್ದರೂ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಿಬಂದಿ ಕೊರತೆ ಕಾಡುತ್ತಿತ್ತು. ಏಕಾಏಕಿ ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ ಈ ಗೊಂದಲ ಕಂಡು ಬಂತು.

ಆ್ಯಂಬುಲೆನ್ಸ್‌ ಅಪಘಾತ
ಬೆಳಗ್ಗೆಯಿಂದಲೇ ಆ್ಯಂಬುಲೆನ್ಸ್‌ಗಳ ಓಡಾಟ ಹೆಚ್ಚಿತ್ತು. ಈ ಮಧ್ಯೆ ಭರಾಟೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಅಂಬುಲೆನ್ಸ್‌ ಒಂದು ಮದ್ದಡ್ಕ ಸಮೀಪ ಅಪಘಾತಕ್ಕೆ ಕೂಡ ಈಡಾಗಿದೆ.

Advertisement

ಇದ್ದೂ ಇಲ್ಲದಂತಾದ ಡಯಾಲಿಸಿಸ್‌ ಕೇಂದ್ರ
ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ 100 ಹಾಸಿಗೆಗಳ ವ್ಯವಸ್ಥೆ ಇದ್ದರೂ ಇಲ್ಲಿ ಶಸ್ತ್ರಚಿಕಿತ್ಸೆ, ಹೆರಿಗೆಗೆ ಮಂಗಳೂರಿಗೆ ಕಳುಹಿಸಲಾಗುತ್ತಿದೆ. ಸಾಮಾನ್ಯ ಹೆರಿಗೆಯನ್ನು ಇಲ್ಲಿ ಮಾಡಿಸಲಾಗುತ್ತಿದೆ ಎಂದು ರೋಗಿಗಳು ಆಪಾದಿಸಿದರು. ಇಲ್ಲಿ ಡಯಾಲಿಸಿಸ್‌ ರೋಗಿಗಳು ಜಾಸ್ತಿ ಇದ್ದಾರೆ. ಹೊಸತಾಗಿ ಡಯಾಲಿಸಿಸ್‌ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು ದಿನದಲ್ಲಿ ಇಬ್ಬರಿಗೆ ಮಾತ್ರ ಚಿಕಿತ್ಸೆ ನೀಡಬಹುದು. ಈಗಾಗಲೇ 28 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಬ್ಬರಿಗೆ 4 ಗಂಟೆಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ. ಹೆಚ್ಚುವರಿ ಉಪಕರಣ ಬೇಕಾಗುತ್ತದೆ. ಆದ್ದರಿಂದ ಈ ಕೇಂದ್ರ ಇದ್ದೂ ಇಲ್ಲದಂತಾಗಿದೆ.

ಸಭೆ ನಡೆಸಿ ಪ್ರತಿಭಟನೆ 
ನಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ರಾಜ್ಯ ಸಂಘದ ತೀರ್ಮಾನದಂತೆ ಬೆಳ್ತಂಗಡಿ ಸಂಘದವರು ಕೂಡ ಸಭೆ ನಡೆಸಿ ಪ್ರತಿಭಟನೆಗೆ ಇಳಿದಿದ್ದೇವೆ. ಗುರುವಾರ ತಾಲೂಕಿನ ಅನೇಕ ವೈದ್ಯರು ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ.
 – ಡಾ| ಗೋಪಾಲಕೃಷ್ಣ ಭಟ್‌, ಡಾ| ಎಂ.ಎಂ. ದಯಾಕರ್‌, ಡಾ| ಗೋವಿಂದ್‌ ಕಿಶೋರ್‌
   (ಖಾಸಗಿ ಆಸ್ಪತ್ರೆಗಳ ವೈದ್ಯರು)

ರೋಗಿಗಳ ಸಂಖ್ಯೆ ಹೆಚ್ಚಳ 
ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದಿಂದ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಿಬಂದಿಗೆ ಕಷ್ಟವಾಗಿ ಚಿಕಿತ್ಸೆ ವಿಳಂಬವಾಗುತ್ತಿದೆ.
 – ನಾಗರಾಜ್‌ ಲಾೖಲ

ಬೆಳಗ್ಗೆಯಿಂದಲೇ ಹಾಜರಾದ ರೋಗಿಗಳಿಗೆ ಎಡೆ‌ಬಿಡದೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಹಾಗೂ ಇತರ ತುರ್ತು ಚಿಕಿತ್ಸೆಗೆ ಇಲ್ಲಿ ಸಾಧ್ಯವಾಗುವ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.
ಡಾ| ಶಶಾಂಕ್‌ ಕುಂಬ್ಳೆ,
  ಎಲುಬು ಮೂಳೆ ಕೀಲು ತಜ್ಞರು (ಸರಕಾರಿ ಆಸ್ಪತ್ರೆ ವೈದ್ಯರು)

Advertisement

Udayavani is now on Telegram. Click here to join our channel and stay updated with the latest news.

Next