Advertisement

13 ಮಂದಿಗೆ ಡಾಕ್ಟರೇಟ್ ಪ್ರದಾನ

06:30 AM Jan 30, 2019 | |

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಬುಧವಾರ ಜರುಗಲಿದ್ದು, ಈ ಬಾರಿ 13 ಮಂದಿ ಗೌರವ ಡಾಕ್ಟರೇಟ್, ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿ ಒಟ್ಟು 12,543 ಮಂದಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ದಾವಿವಿ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಹೇಳಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಪದವಿಯಲ್ಲಿ ಶೇ. 44.92 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ. 89.09ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆ ಸಾಲಿನಲ್ಲಿ ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಬಿಸಿಎ, ಬಿಎಸ್‌ಎ, ಬಿಎಸ್‌ಡಬ್ಲ್ಯು, ಬಿಎಫ್‌ಡಿ, ಬಿವಿಎ, ಬಿಇಡಿ ಹಾಗೂ ಬಿಪಿಇಡಿ ಸ್ನಾತಕ ಪದವಿಯಲ್ಲಿ 6,443 ಮಹಿಳಾ ಮತ್ತು 4,205 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 10,648 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.

ಅದೇ ರೀತಿ ಕಳೆದ ಸಾಲಿನಲ್ಲಿ ಎಂಎ, ಎಂಕಾಂ, ಎಂಎಸ್ಸಿ, ಎಂಬಿಎನಲ್ಲಿ 1,184 ಮಹಿಳೆಯರು ಮತ್ತು 711 ಪುರುಷರು ಸೇರಿ ಒಟ್ಟು 1895 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗಿದ್ದಾರೆ. ಸ್ನಾತಕ ಮತ್ತು ಸ್ನಾತಕೋತ್ತರ ಸೇರಿ 12,543 ವಿದ್ಯಾರ್ಥಿಗಳು ಪದವಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.

2017-18ನೇ ಸಾಲಿನಲ್ಲಿ 24 ಮಹಿಳಾ ವಿದ್ಯಾರ್ಥಿಗಳು ಹಾಗೂ 8 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 32 ವಿದ್ಯಾರ್ಥಿಗಳು ಒಟ್ಟು 62 ಸ್ವರ್ಣ ಪದಕಗಳನ್ನು ಹಂಚಿಕೊಂಡಿದ್ದಾರೆ. ಇವರಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ದಾವಣಗೆರೆ ನಗರದ ಕೆ.ಸಿ. ತೇಜಸ್ವಿನಿ ಅತಿ ಹೆಚ್ಚು ಅಂಕದ ಗಳಿಸಿ 6 ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ ಎಂದು ಹೇಳಿದರು. ಈ ಬಾರಿ ವಿವಿಯಿಂದ ಮೂವರಿಗೆ ಗೌರವ ಡಾಕ್ಟರೆಟ್ ನೀಡಲು ಹೆಸರನ್ನು ಕಳುಹಿಸಲಾಗಿತ್ತು. ಸಮಿತಿ ಅವರಲ್ಲಿ ಒಬ್ಬರಿಗೆ ಗೌರವ ಡಾಕ್ಟರೇಟ್ ನೀಡಲು ಶಿಫಾರಸು ಮಾಡಿದೆ. ದಾವಣಗೆರೆ ಹೆಸರಾಂತ ವೈದ್ಯ ಎಲಿ ಅವರಿಗೆ ಈ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ದಾವಿವಿಯಲ್ಲಿ 114 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆದಿದೆ. 17-7-2017ರ ಸರ್ಕಾರ ಸುತ್ತೋಲೆ ಪ್ರಕಾರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಕಳೆದ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ ಕೇವಲ 44.92ರಷ್ಟು ಫಲಿತಾಂಶಕ್ಕೆ ಪಡೆಯಲು ಕಾರಣವೇನೆಂಬುದನ್ನ ತಿಳಿದು, ಫಲಿತಾಂಶ ಸುಧಾರಣೆಗೆ ಕ್ರಮವಹಿಸಲು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಭೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Advertisement

ವಿವಿ ಕುಲಸಚಿವ ಪ್ರೊ| ಪಿ.ಕಣ್ಣನ್‌ (ಆಡಳಿತ), ಪರೀಕಾಂಗ ಕುಲಸಚಿವ ಡಾ| ಬಸವರಾಜ್‌ ಬಣಕಾರ್‌, ಡಾ| ಬಿ.ಪಿ.ವೀರಭದ್ರಪ್ಪ, ಡಾ| ಗಾಯತ್ರಿ ದೇವರಾಜ್‌, ವಿವಿ ಹಣಕಾಸು ಅಧಿಕಾರಿ ಜೆ.ಕೆ.ರಾಜು, ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ದಾವಿವಿ ಆರನೇ ಘಟಿಕೋತ್ಸವ ಇಂದು

ಇವರಿಗೆ ಪಿಎಚ್‌ಡಿ
ಬಿ.ಎಸ್‌.ರಶ್ಮಿ (ಮೈಕ್ರೋಬಯಾಲಜಿ), ಸಿ.ಟಿ.ಸ್ವಾಮಿ (ಮೈಕ್ರೋಬಯಾಲಜಿ), ಕೆ.ಎಸ್‌. ಚೈತ್ರಾ(ಎಂಬಿಎ), ಟಿ.ಎಸ್‌.ಲಕ್ಷ್ಮೀನಾರಾಯಣ (ಬಯೋಕೆಮಿಸ್ಟ್ರಿ), ಐ.ಸಿ. ಸೋಮಶೇಖರ್‌ (ಎಂಬಿಎ), ಎಂ.ಎಸ್‌. ಮನು (ಬಯೋಕೆಮಿಸ್ಟ್ರಿ), ರಚನಾ (ಬಯೋಕೆಮಿಸ್ಟ್ರಿ), ವನಿತಾ ಶ್ರೀಕಾಂತ್‌ ಭಟ್ (ಫುಡ್‌ ಟೆಕ್ನಾಲಜಿ), ಜಿ.ಎಲ್‌. ಅರುಣ (ಮೈಕ್ರೋಬಯಾಲಜಿ), ಆರ್‌. ಯಶೋದಾ (ವಾಣಿಜ್ಯಶಾಸ್ತ್ರ) ಎಸ್‌.ಸುಚಿತ್ರಾ (ಅರ್ಥಶಾಸ್ತ್ರ), ಎನ್‌.ಎಂ. ಸುನೀತಾ (ಅರ್ಥಶಾಸ್ತ್ರ) ಹಾಗೂ ಆರ್‌. ಅಣ್ಣೇಶಿ (ಅರ್ಥಶಾಸ್ತ್ರ).

ಚಿನ್ನ ಪದಕ ಪುರಸ್ಕೃತರು
ವಾಣಿಜ್ಯ ಶಾಸ್ತ್ರ ವಿಭಾಗ ಕೆ.ಸಿ. ತೇಜಸ್ವಿನಿ (6) ಎನ್‌. ರೋಷನ್‌ (4) ಕೆ.ಎಲ್‌. ಜ್ಯೋತಿ (2) ಆರ್‌.ವಿ. ಗೀತಮ್ಮ (1) ಕೆ.ವಿ. ಅಭಿಷೇಕ್‌ (1) ಎಸ್‌.ಸಿ. ಶಶಿಧರ್‌ (1)ಕಲಾ ವಿಭಾಗ ನೇತ್ರಾವತಿ ಸಣ್ಣಗುಡ್ಡಪರ್‌ (3) ಎಸ್‌. ಹೇಮಾವತಿ (2) ಸಿ.ಎಂ. ಅಮೃತಾ (2) ಎಂ. ಹನುಮೇಶಿ (2) ಎಚ್. ಪ್ರಿಯಾಂಕ (1) ಸುಲ್ತಾನಾ ಬಾನು (1) ಶ್ರೀದೇವಿ ತಿರುಕಣ್ಣವರ್‌ (1) ಬಿ.ಆರ್‌. ಸುಮಾ (1) ಎಂ. ಮಂಜುನಾಥ್‌ (1) ಎಚ್.ಪಿ. ಪೂಜಾ (3) ಪಿ. ಅಶ್ವಿ‌ನಿ (1) ಆರ್‌. ನಜ್ಮಾ (1) ಸಿ. ಬಸವರಾಜ್‌ (1)ಶಿಕ್ಷಣ.. ಎಂ.ಜಿ. ಪ್ರಿಯಾಂಕ (2)ಬಿಪಿ.ಇಡಿ.. ಜಿ. ಪುನೀತ್‌ (1)ವಿಜ್ಞಾನ ವಿಭಾಗ.. ಎಸ್‌. ಜ್ಯೋತಿ (3) ಎಫ್‌. ರುಕ್ಸಾನಾ (3) ಆಯೇಷಾ ಖಾನಂ (2) ಡಿ.ವಿ. ಆಶಾ (2) ಎಂ. ಲಲಿತಾ (2) ಇ.ವಿ. ಪ್ರಿಯಾಂಕ (2) ಟಿ. ಅರ್ಪಿತಾ (2) ಕೆ. ವೀರೇಶ್‌ (2) ಕೆ. ಸೋನು (2) ಆನಂದ್‌ ಉಪಾಧ್ಯ (2) ಜಿ.ಎಚ್. ಸೌಮ್ಯ (1)

ಪ್ರೊ| ಶರ್ಮರಿಂದ ಘಟಿಕೋತ್ಸವ ಭಾಷಣ
ದಾವಿವಿ ಶಿವಗಂಗೋತ್ರಿ ಆವರಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ವಿವಿ ಆರನೇ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆ ನಿರ್ದೇಶಕ ಪ್ರೊ. ಶರ್ಮ ಮುಖ್ಯ ಅತಿಥಿಗಳಾಗಿ ಭಾಷಣ ಮಾಡಲಿದ್ದಾರೆ.

ದಾವಣಗೆರೆ ದೇವರಿಗೆ ಗೌರವ ಡಾಕ್ಟರೇಟ್
ದಾವಣಗೆರೆ:
ಈ ಬಾರಿಯ ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ನಗರದ ಹೆಸರಾಂತ ವೈದ್ಯ, ಬಡವರ ಬಂಧು ಡಾ| ಎಲಿ ಗೌರವ ಡಾಕ್ಟರೇಟ್‌ಗೆ ಭಾಜನರಾಗಲಿದ್ದಾರೆ.

ಕಳೆದ ಹಲವು ದಶಕಗಳಿಂದ ವೈದ್ಯ ವೃತ್ತಿಯ ಜತೆಗೆ ಬಡವರ ಸೇವೆಯಲ್ಲಿ ತೊಡಗಿಕೊಂಡಿರುವ ಡಾ| ಎಲಿ ಅವರು ಈ ಭಾಗದ ಜನರಿಗೆ ದಾವಣಗೆರೆ ದೇವರು!.

ಬರೀ ತಪಾಸಣೆ-ಸಲಹೆಗೆ 500ರಿಂದ 1,000 ರೂ. ಶುಲ್ಕ ಫಿಕ್ಸ್‌ ಮಾಡಿರುವ ಈಗಿನ ಕಾಲದ ವೈದ್ಯರ ಮಧ್ಯೆ ಡಾ| ಎಲಿ ಅವರಂಥವರು ಕಾಣ ಸಿಗುವುದು ಬಹಳ ವಿರಳ. ಡಾ| ಎಲಿ ಅವರ ತಪಾಸಣಾ ಶುಲ್ಕ ಕೇವಲ 5 ಇಲ್ಲವೆ 10 ರೂಪಾಯಿ. ಅದು ಇಂಥಹ ಕಮರ್ಷಿಯಲ್‌ ಕಾಲದಲ್ಲಿ ನಿಜಕ್ಕೂ ಆಶ್ಚರ್ಯ. ಆ ಕಡಿಮೆ ಶುಲ್ಕ ಕೊಡಲೇ ಬೇಕೆಂದೇನೂ ಇಲ್ಲ. ಅದು ಹೆಸರಿಗಷ್ಟೇ ಶುಲ್ಕ. ತಮ್ಮ ಬಳಿ ಆರೋಗ್ಯ ಸಮಸ್ಯೆಯಿಂದ ಬರುವ ಬಹುತೇಕ ಮಂದಿಗೆ ಉಚಿತ ತಪಾಸಣೆಯೊಂದಿಗೆ ಔಷಧವನ್ನೂ ನೀಡುವ ಡಾಕ್ಟರ್‌ ಇವರು. ಕೆಲವೊಮ್ಮೆ ತಮ್ಮ ಬಳಿ ಬರುವ ಬಡ ರೋಗಿಗಳಲ್ಲಿ ಬಸ್‌ ಚಾರ್ಜ್‌ಗೆ ಹಣ ಇಲ್ಲದಿದ್ದಲ್ಲಿ ತಮ್ಮ ಕಿಸೆಯಿಂದಲೇ ದುಡ್ಡು ಕೊಟ್ಟು ಕಳುಹಿಸುವ ಪರಿಪಾಠ ಅವರದ್ದು.

ಹಾಗಾಗಿಯೇ ದಾವಣಗೆರೆ ಅಲ್ಲದೆ ಸುತ್ತ ಮುತ್ತಲಿನ ಜಿಲ್ಲೆಗಳಲ್ಲೂ ಡಾ| ಎಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಲಕ್ಷಾಂತರ ಮಂದಿಗೆ ಚಿಕಿತ್ಸೆ ನೀಡಿರುವ ಅವರಿಗೆ ದುಡ್ಡು ಕೊಟ್ಟರೆ ಅದನ್ನು ನಯವಾಗಿ ನಿರಾಕರಿಸುತ್ತಾರೆ.

ಅತ್ಯಂತ ಮೃದು ಸ್ವಭಾವದ ಡಾ| ಎಲಿ ಈ ಹಿಂದೆ ಜೆಜೆಎಂ ಮೆಡಿಕಲ್‌ ಕಾಲೇಜಲ್ಲಿ ಬೋಧನಾ ವೃತ್ತಿಯಲ್ಲೂ ತೊಡಗಿದ್ದರು. ಅವರ ಶಿಷ್ಯರೊಬ್ಬರು ಹೇಳುವಂತೆ ಡಾ| ಎಲಿ ಎಂದೂ ಸಿಟ್ಟಾದವರಲ್ಲ. ಯಾರನ್ನೂ ಗದರಿದವರಲ್ಲ. ಇನ್ನು ದುಡ್ಡಿಗೋಸ್ಕರ ವೈದ್ಯ ವೃತ್ತಿಗೆ ಜೋತು ಬಿದ್ದವರಲ್ಲ. ಜನರೇ ಹೇಳುವಂತೆ ಅವರು ಮಾನವೀಯತೆಯ ಪ್ರತೀಕ. ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಅಂದರೆ ಪ್ರಾಣ ಉಳಿಸುವ ವೈದ್ಯ ದೇವರಿದ್ದಂತೆ ಎಂದರ್ಥ. ಅಂಥಹ ವೈದ್ಯಗೆ ಇಂದು ದಾವಣಗೆರೆ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ. ನಿಜಕ್ಕೂ ಆ ಗೌರವಕ್ಕೆ ಡಾ| ಎಲಿ ಅತ್ಯಂತ ಸೂಕ್ತ ಎಂಬುದರಲ್ಲಿ ಎರಡು ಮಾತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next