ಕುಂಬಳೆ: ಬದಿಯಡ್ಕ ದಂತ ವೈದ್ಯ ಡಾ| ಕೃಷ್ಣಮೂರ್ತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರಾದರೂ ಆರೋಪಿಗಳಿಗೆ ರಾಜಕೀಯ ಬೆಂಬಲ ಇದ್ದು, ಪ್ರಕರಣವನ್ನೇ ಬದಲಾಯಿಸುವ ತಂತ್ರ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಶಂಕೆ ಸ್ಥಳೀಯರಲ್ಲಿ ಬಲವಾಗಿ ಮೂಡಿದೆ.
ಪ್ರಸಿದ್ಧ ಮನೆತನದ ವೈದ್ಯರು ಅಜಾತ ಶತ್ರುವಾಗಿದ್ದು ಅವರ ಸಾವು ಆತ್ಮಹತ್ಯೆಯಾಗಿರುವ ಸಾಧ್ಯತೆ ಇಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅನಿಸಿಕೆ. ಮಹಿಳೆಯನ್ನು ಮುಂದಿಟ್ಟುಕೊಂಡು ಲ್ಯಾಂಡ್ ಮಾಫಿಯಾ ತಂಡವು ವೈದ್ಯರನ್ನು ಬ್ಲ್ಯಾಕ್ವೆುàಲ್ ಮಾಡಿ ಬೆದರಿಸಿದ ಕಾರಣ ಭಯದಿಂದ ಆತ್ಮಹತ್ಯೆಗೆ ಶರಣಾದರೇ ಅಥವಾ ಬಾಡಿಗೆ ಹಂತಕರಿಂದ ಕೊಲೆ ಗೀಡಾಗಿರುವರೇ ಎಂಬ ಶಂಕೆ ಅವರದು.
ಇಂದು ಪ್ರತಿಭಟನೆ :
ನ. 18ರಂದು ಬೆಳಗ್ಗೆ 10 ಗಂಟೆಗೆ ವಿಶ್ವಹಿಂದೂ ಪರಿಷತ್, ಬಜರಂಗ ದಳ, ಮಾತೃ ಶಕ್ತಿ ಮತ್ತು ದುರ್ಗಾವಾಹಿನಿ ಪೈವಳಿಕೆ ಖಂಡ ಸಮಿತಿ ವತಿಯಿಂದ ಪೈವಳಿಕೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಸಂಘಪರಿವಾರದ ನಾಯಕರು ಭಾಗವಹಿಸಲಿದ್ದಾರೆ.
Related Articles
ಇಂದು ಮೌನ ಮೆರವಣಿಗೆ:
ಮಂಗಳೂರು: ಬದಿಯಡ್ಕದ ಹಿರಿಯ ದಂತವೈದ್ಯ ಡಾ| ಕೃಷ್ಣಮೂರ್ತಿ ಅವರ ಅನುಮಾನಾಸ್ಪದ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿ ಮಂಗಳೂರು ಹವ್ಯಕ ಸಭಾ, ದಕ್ಷಿಣ ಕನ್ನಡ-ಕಾಸರಗೋಡು ಹವ್ಯಕ ಮಹಾಸಭಾ ಮತ್ತು ಮಂಗಳೂರು ಹವ್ಯಕ ಮಂಡಲದ ವತಿಯಿಂದ ನ. 18ರಂದು ಸಂಜೆ 6 ಗಂಟೆಗೆ ನಗರದ ಸರ್ಕೀಟ್ ಹೌಸ್ ಮುಂಭಾಗ ಮೌನ ಮೆರವಣಿಗೆ ಮತ್ತು ಹಣತೆ ಬೆಳಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಹವ್ಯಕ ಸಭಾದ ಸುಮಾರು 250 ಮಂದಿ ಸದಸ್ಯರು ಭಾಗವಹಿಸಲಿದ್ದು, ಇದೊಂದು ಶಾಂತಿಯುತ ಮೆರವಣಿಗೆ. ಸಾವಿನ ರಹಸ್ಯದ ಹಿಂದೆ ಇರುವ ಹುನ್ನಾರವನ್ನು ಬಯಲಿಗೆ ತರಲು ಮತ್ತು ದುಷ್ಕರ್ಮಿಗಳಿಗೆ ಕಠಿನ ಶಿಕ್ಷೆ ವಿಧಿಸಲು ಹಕ್ಕೊತ್ತಾಯ ಮಂಡಿಸಲು ಮೆರವಣಿಗೆ ಆಯೋಜಿಸಲಾಗಿದೆ ಎಂದು ಹವ್ಯಕಸಭಾ ಮಂಗಳೂರು ಅಧ್ಯಕ್ಷ ಡಾ| ರಾಜೇಂದ್ರ ಪ್ರಸಾದ್, ಹವ್ಯಕ ಮಂಡಲದ ಅಧ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ದ.ಕ. ಹಾಗೂ ಕಾಸರಗೋಡು ಹವ್ಯಕ ಮಹಾಸಭಾ ಅಧ್ಯಕ್ಷ ನಿಡುಗಳ ಕೃಷ್ಣ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.