Advertisement

ಗುಂಪು ಸೇರಬೇಡಿ, ಆಗಾಗ್ಗೆ ಕೈ ತೊಳೆದುಕೊಳ್ಳಿ

09:51 PM Mar 13, 2020 | Lakshmi GovindaRaj |

ಮೈಸೂರು: ಸಾರ್ವಜನಿಕರಲ್ಲಿ ಕೊರೊನಾ ವೈರಸ್‌ ಗುಣಲಕ್ಷಣಗಳು ಕಂಡುಬಂದಲ್ಲಿ ಶೀಘ್ರವೇ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ಈ ವಿಷಯವನ್ನು ಮುಚ್ಚಿಡಬಾರದು ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 70 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

Advertisement

ಈ ಪೈಕಿ ಇದುವರೆಗೆ ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ. 37 ಮಂದಿ 28 ದಿನಗಳ ಅವಲೋಕನ ಮುಗಿಸಿದ್ದಾರೆ. 32 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿರಿಸಿ ಅವಲೋಕಿಸಲಾಗುತ್ತಿದೆ. ವಿದೇಶದಿಂದ ಬಂದ ಒಬ್ಬರನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಕೊರೊನಾ ಕುರಿತು ಅನಗತ್ಯವಾದ ಭಯವನ್ನು ಬಿಟ್ಟು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಸಹಾಯವಾಣಿ: ಒಟ್ಟಾರೆ ಚಿಕಿತ್ಸೆಗೆ ಒಳಪಡಿಸಿದ 70 ಮಂದಿಯ ಪೈಕಿ ಮೂವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಇಬ್ಬರ ವರದಿಯಲ್ಲಿ ನೆಗೆಟಿವ್‌ ಬಂದಿದೆ. ಮತ್ತೂಂದು ಮಾದರಿಯ ಫ‌ಲಿತಾಂಶ ಬರಬೇಕಿದೆ. ಈ ಸಂಬಂಧ ಅಗತ್ಯ ಮಾಹಿತಿ ತಿಳಿಯಲು ರಾಜ್ಯ ಮಟ್ಟದಲ್ಲಿ 104 ಸಹಾಯವಾಣಿ ಮತ್ತು ಜಿಲ್ಲಾ ಮಟ್ಟದಲ್ಲಿ 1077 ಸಹಾಯವಾಣಿ ತೆರೆಯಲಾಗಿದೆ. ಕೆ.ಆರ್‌. ಆಸ್ಪತ್ರೆಯಲ್ಲಿ 5 ಬೆಡ್‌,

ಇಡಿ ಆಸ್ಪತ್ರೆಯಲ್ಲಿ 10 ಬೆಡ್‌, ಜೆಎಸ್‌ಎಸ್‌, ಅಪೋಲೋ, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಐಸೋಲೇಷನ್‌ ವಾರ್ಡ್‌ಗಳನ್ನು ತೆರೆಯಲಾಗಿದೆ. ಇವುಗಳನ್ನು ಸಾರ್ವಜನಿಕರಿಂದ ಪ್ರತ್ಯೇಕವಾಗಿ ಇರುವಂತೆ ನೋಡಿಕೊಳ್ಳಲಾಗಿದೆ. ಇದಲ್ಲದೆ ನೂತನವಾಗಿ ಉದ್ಘಾಟನೆಗೊಂಡಿರುವ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ 50 ಬೆಡ್‌ ಮೀಸಲಿಡಲಾಗಿದ್ದು, ಇದನ್ನು ನಿರ್ಬಂಧಿತ ಪ್ರದೇಶವಾಗಿದೆ. ಇಲ್ಲಿ ಕೊರೊನಾ ಸೋಂಕು ಉಳ್ಳವರನ್ನು ಮಾತ್ರ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ತಂಡ ರಚನೆ: ಯಾವುದೇ ಇಲಾಖೆಯ ಅಧಿಕಾರಿಗಳು ಇದು ನಮಗೆ ಸಂಬಂಧಿಸಿಲ್ಲ ಎಂದು ಸುಮ್ಮನೆ ಕೂರುವಂತಿಲ್ಲ. ಕೂಡಲೇ ಪ್ರತಿಯೊಬ್ಬರೂ ಸ್ಪಂದಿಸಬೇಕು. ಈ ಸಂಬಂಧ ಅಗತ್ಯ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಸಹಾಯಕರು ಮತ್ತು ಆ್ಯಂಬುಲೆನ್ಸ್‌ ಚಾಲಕರಿಗೆ ತರಬೇತಿ ನೀಡಲಾಗಿದೆ. ಕೊರೊನಾ ಕುರಿತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಿಗಾವಹಿಸಲು ಮತ್ತು ಗೊಂದಲ ಉಂಟುಮಾಡುವ ಸುದ್ದಿ ಪ್ರಕಟವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳ ತಂಡ ಸಿದ್ಧವಿದೆ ಎಂದರು.

Advertisement

ಮಾಸ್ಕ್ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಮಾಪನ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ತಿಳಿಸಿದರು. ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾದಿಂದ ಬಳಲುವ ವ್ಯಕ್ತಿಗಳಿಂದ ದೂರವಿರಬೇಕು. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ್ದರಿಂದ ರೋಗದ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಒಬ್ಬರಿಂದ ಒಬ್ಬರಿಗೆ ಬಹುಬೇಗನೆ ಹರಡುವುದರಿಂದ ಸೋಂಕಿತರು ಸೀನಿದಾಗ, ಕೆಮ್ಮಿದಾಗ ದೂರವಿರಬೇಕು. ಅವರೊಂದಿಗೆ ನಿಕಟ ಸಂಪರ್ಕ ಇರಬಾರದು, ಹಸ್ತಲಾಘವ ಮತ್ತು ಮುಟ್ಟಬಾರದು. ಸಾಮಾನ್ಯವಾಗಿ ನೋಟುಗಳು ಹಲವರು ಮುಟ್ಟುತ್ತಾರೆ. ಒಬ್ಬರಿಂದ ಒಬ್ಬರಿಗೆ ಅದು ವರ್ಗಾವಣೆ ಆಗುವುದರಿಂದ ಅದನ್ನು ಹೆಚ್ಚಾಗಿ ಬಳಸುವವರು ಆಗಾಗ್ಗೆ ಕೈ ತೊಳೆಯಬೇಕು. ಅನಗತ್ಯವಾಗಿ, ಮೂಗು, ಬಾಯಿ, ಕಣ್ಣು, ಮುಖ ಮುಟ್ಟಿಕೊಳ್ಳಬಾರದು ಎಂದು ಸಲಹೆ ನೀಡಿದರು.

ನೋವೆಲ್‌ ಕೊರೋನಾ ವೈರಸ್‌ (ಕೋವಿಡ್‌- 19)ನ ಗುಣಲಕ್ಷಣಗಳು ಕಂಡು ಬಂದರೆ ಕೂಡಲೇ ಅಂತವರು ಚಿಕಿತ್ಸೆಗೆ ಒಳಗಾಗಬೇಕು ಮತ್ತು ಯಾರೊಂದಿಗೂ ಸಂಪರ್ಕ ಇಟ್ಟುಕೊಳ್ಳಬಾರದು. ಅವರು ಮುಚ್ಚಿಟ್ಟುಕೊಳ್ಳಲು ಮುಂದಾದರೆ ಸಾರ್ವಜನಿಕರೆಲ್ಲರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರ ಸಹಕಾರ ಮುಖ್ಯ. ಸರ್ಕಾರದ ನಿರ್ದೇಶನದಂತೆ ಯಾವುದಾದರೂ ಪ್ರದೇಶದಲ್ಲಿ ಕೊರೊನಾ ಸೋಂಕಿತರು ಕಂಡುಬಂದರೆ ಕೂಡಲೇ ಆ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಸಾರ್ವಜನಿಕರ ಓಡಾಟ ತಪ್ಪಿಸಬೇಕು. ಆದರೆ ಅಂತಹ ಪರಿಸ್ಥಿತಿ ಸದ್ಯಕ್ಕೆ ಇಲ್ಲ ಎಂದರು.

ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಅರಮನೆಯನ್ನು ಸದ್ಯಕ್ಕೆ ಬಂದ್‌ ಮಾಡಿಲ್ಲ. ಅಂತಹ ಪ್ರಸಂಗ ಇನ್ನೂ ಎದುರಾಗಿಲ್ಲ. ಈ ಸಂಬಂಧ ಏನೇ ಮಾಹಿತಿಗಳಿದ್ದರೂ ನಾವು ಅಧಿಕೃತವಾಗಿ ತಿಳಿಸುತ್ತೇವೆ. ರೋಗಿಗಳಿಗೆ ಕೊರೊನಾ ಕುರಿತು ಪಾಸಿಟಿವ್‌ ವರದಿ ಬಂದರೆ ಮಾತ್ರ ಅದನ್ನು ಹೆಚ್ಚಿನ ಪರೀಕ್ಷೆಗೆ ಪೂನಾಕ್ಕೆ ಕಳುಹಿಸುತ್ತೇವೆ. ಪ್ರಸ್ತುತ ಮಡಿಕೇರಿಯಿಂದ ಎರಡು ಮಾದರಿಯು ಪರೀಕ್ಷೆಗಾಗಿ ಬಂದಿದ್ದು, ಇನ್ನೂ ವರದಿ ಬಂದಿಲ್ಲ ಎಂದರು.

ಹಕ್ಕಿ ಜ್ವರ ಭೀತಿ ಇಲ್ಲ: ಹಕ್ಕಿ ಜ್ವರ ಭೀತಿಯು ಕೇರಳದಲ್ಲಿ ಕಾಣಿಸಿಕೊಂಡಿದೆ. ಮೈಸೂರಿನಲ್ಲಿ ಆ ಭಯವಿಲ್ಲ. ಕೋಜಿಕೊಡೈನ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವಮಾನೆ, ಜಿಪಂ ಸಿಇಒ ಕೆ. ಜ್ಯೋತಿ, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಎಚ್‌ಒ ಡಾ.ಆರ್‌. ವೆಂಕಟೇಶ್‌ ಇದ್ದರು.

ನಿರ್ಲಕ್ಷಿಸಿದರೆ ಬಲವಂತವಾಗಿ ಚಿಕಿತ್ಸೆ: ಕೆಮ್ಮು, ಶೀತ, ಜ್ವರ, ಉಸಿರಾಟದ ತೊಂದರೆ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಈ ಸೂಚನೆಯನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಒಂದು ವೇಳೆ ಶಂಕಿತರು ಚಿಕಿತ್ಸೆಗೆ ಬಾರದೆ ನಿರ್ಲಕ್ಷ್ಯವಹಿಸಿರುವುದು ಕಂಡುಬಂದಲ್ಲಿ ಬಲವಂತವಾಗಿ ಅಗತ್ಯ ಸಿಬ್ಬಂದಿಯೊಡನೆ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಎಚ್ಚರಿಕೆ ನೀಡಿದರು.

ಅನಗತ್ಯವಾಗಿ ಮಾಸ್ಕ್ ಧರಿಸುವುದು ಬೇಡ: ಕೆಮ್ಮು ಮುಂತಾದ ಸಮಸ್ಯೆಗಳು ಇದ್ದರೆ ಮಾತ್ರ ಮಾಸ್ಕ್ ಧರಿಸಬಹುದು. ಉಳಿದಂತೆ ಅನಗತ್ಯವಾಗಿ ಮಾಸ್ಕ್ ಧರಿಸಿದರೂ ಬೇರೆ ಬೇರೆ ರೀತಿಯ ಸೋಂಕು ಹರಡುವ ಸಾಧ್ಯತೆ ಇದೆ. ಜೊತೆಗೆ ಮಾಸ್ಕ್ಗಳನ್ನು ಪ್ರತಿ 6 ಗಂಟೆಗೊಮ್ಮೆ ಬದಲಿಸಬೇಕು. ಹೊರ ರಾಜ್ಯ ಮತ್ತು ವಿದೇಶದಿಂದ ಬರುವವರು ತಪ್ಪದೆ ಮಾಹಿತಿ ನೀಡಬೇಕು ಮತ್ತು ಹಾಲಿ ವಾಸವಿರುವ ಸರಿಯಾದ ವಿಳಾಸ ನೀಡಬೇಕು.

ಸುಳ್ಳು ಮಾಹಿತಿ ನೀಡಿದರೂ ಕ್ರಮ ಜರುಗಿಸಬೇಕಾಗುತ್ತದೆ. ಮೈಸೂರು ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣದಲ್ಲಿ ನಿಗಾವಹಿಸಲಾಗಿದೆ. ಕೇರಳ ಗಡಿ ಬಾವಲಿ ಬಳಿ ಪ್ರತ್ಯೇಕ ತಂಡ ರಚಿಸಿದ್ದು, ಅಲ್ಲಿಯೂ ಪರಿಶೀಲಿಸಿ ಬಿಡಲಾಗುತ್ತಿದೆ. ಹಡಗಿನಲ್ಲಿ ಬರುವವರನ್ನೂ ಮಂಗಳೂರಿನಲ್ಲಿ ಪರಿಶೀಲಿಸಲಾಗುತ್ತಿದೆ. ಈ ಪೈಕಿ ಯಾರಾದರೂ ಮೈಸೂರಿಗೆ ಬರುವವರಿದ್ದರೆ, ಅಲ್ಲಿಂದ ನಮಗೆ ಮಾಹಿತಿ ಬರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಏನು ಮಾಡಬಾರದು: ಸಾಧ್ಯವಾದಷ್ಟು ಮಟ್ಟಿಗೆ ಜನ ಸಂದಣಿ ಸೇರುವ ಜಾತ್ರೆ, ಮದುವೆ, ಮಾಲ್‌ಗ‌ಳಿಂದ ದೂರ ಇರಬೇಕು. ಅಗತ್ಯವಿದ್ದರೆ ಮಾತ್ರ ಅಲ್ಲಿಗೆ ಹೋಗಬೇಕೆ ಹೊರತು ಅನಗತ್ಯವಾಗಿ ತೆರಳಬಾರದು. ಆಗಾಗ್ಗೆ ಕೈ ತೊಳೆದುಕೊಳ್ಳಬೇಕು, ಮುಖ, ಮೂಗು, ಕಣ್ಣು, ಬಾಯಿ ಮುಟ್ಟಬಾರದು. ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು.

ಶಂಕಿತ ರೋಗಿಯ ಮನೆಯಲ್ಲಿ ರೋಗಿಯನ್ನು ಪ್ರತ್ಯೇಕವಾಗಿ ಇರಸಬೇಕು. ಮಾಂಸ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಸುರಕ್ಷಿತವಲ್ಲದ ಕಾಡುಪ್ರಾಣಿ ಮತ್ತು ಸಾಕುಪ್ರಾಣಿಯನ್ನು ಮುಟ್ಟಬಾರದು. ವಿದೇಶಗಳಿಗೆ ತುರ್ತು ಪ್ರಯಾಣ ಕೈಬಿಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next