Advertisement

ಸ್ವಯಂವರಕ್ಕೊಂದು ಗಾಂಭೀರ್ಯ ಬೇಡವೇ?

03:43 PM Mar 28, 2018 | |

ನನ್ನ ಧೀಶಕ್ತಿಯ ಮೂಲ ಪ್ರೇರಕರು ನನ್ನ ಅಪ್ಪ. ಈ ವಿಷಯದಲ್ಲಿ ನಾನು ಅಪ್ಪನಿಗೆ ಸದಾ ಋಣಿ. ನನ್ನೊಳಗನ್ನು ಅರ್ಥಮಾಡಿಕೊಳ್ಳಲು, ಬದುಕನ್ನು ಎದುರಿಸಲು ಇದೇ ನನಗೆ ಬೆಳಕಾದದ್ದು. ಇಲ್ಲದೇ ಹೋಗಿದ್ದರೆ, ರಾವಣನಂಥ ದುರುಳ ನನ್ನನ್ನು ಮುಗಿಸಿಬಿಡುತ್ತಿದ್ದ. ನನ್ನಪ್ಪನ ಸಾಧನೆ- ಸಿದ್ಧಿ ಅಸಾಧಾರಣದ್ದು, ಯಾರನ್ನೂ ಪ್ರಭಾವಿಸುವಂಥದ್ದು. ನಮ್ಮ ವಂಶದ ಮೂಲಪುರುಷ ನಿಮಿರಾಜರಿಂದ ಪ್ರಾರಂಭಿಸಿ ಈ ಜನಕರಾಜರಷ್ಟು ಎತ್ತರಕ್ಕೇರಿದವರು ಯಾರೂ ಇಲ್ಲವೆಂದು ನಮ್ಮ ಪುರೋಹಿತ ಶತಾನಂದರು ಹೇಳುತ್ತಿದ್ದರು.

Advertisement

ಪ್ರತಿಭೆ, ತಪಸ್ಸು, ಅಧ್ಯಯನ, ಪರಾಕ್ರಮಶಕ್ತಿಗಳು ಅವರನ್ನು ರಾಜರ್ಷಿ ಪಟ್ಟಕ್ಕೇರಿಸಿದ್ದವು. ಅವರನ್ನು ಭವಚ್ಛೇದಕರ (ಸಂಸಾರವನ್ನು ಗೆದ್ದವರು) ಎಂದು ಗುರುತಿಸಲಾಗಿತ್ತು. ಮೌನದಿಂದಲೇ ರಾಜ್ಯಾಡಳಿತವನ್ನು ಸಮರ್ಥವಾಗಿ ನಡೆಸುತ್ತಿದ್ದ ಅವರು ಲೋಕಕ್ಕೆ ದೊಡ್ಡ ಅಚ್ಚರಿ. ಇಡೀ ಜೀವನದಲ್ಲಿ ಅವರಿಗೆ (ಸ್ವಂತಕ್ಕೆ) ಎಂದೂ ಹಣದ ಅವಶ್ಯಕತೆ ಕಂಡಿದ್ದಿಲ್ಲವಂತೆ. ಸುಖಕ್ಕೆ ಸಂಪತ್ತೇ ಮೂಲ ಎಂದು ಲೋಕ ತಿಳಿದಿದ್ದರೆ ಅವರು ಮಾತ್ರ, ಸರಳತೆ, ಅಧ್ಯಾತ್ಮ, ಆತ್ಮಸಂತೋಷ ಮಾತ್ರ ಸುಖವೆಂದು ತಿಳಿದಿದ್ದರು.

ಹಾಗೆಂದು ಅವರೇನು ವಿರಾಗಿಯಲ್ಲ. ಸಂಸಾರಿಯಾಗಿದ್ದೂ ಸನ್ಯಾಸಿ, ಸನ್ಯಾಸಿಯಾಗಿದ್ದೂ ಸಂಸಾರಿ! ಅವರ ಆಸ್ಥಾನದಲ್ಲಿ ಗುರು- ಹಿರಿಯರೊಂದಿಗೆ, ಬ್ರಹ್ಮಜಾnನಿಗಳೊಂದಿಗೆ ನಡೆಯುತ್ತಿದ್ದ ಚರ್ಚೆ- ವಿಚಾರ ಕೇಳಲು ನನಗೆ ಎಲ್ಲಿಲ್ಲದ ಕುತೂಹಲ, ಆಸಕ್ತಿ. ನಾನು ನೇರವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಎಲ್ಲರ ಎದುರಿಗೆ ಹೋಗಲು ನನಗೆ ಧೈರ್ಯವೇ ಇರುತ್ತಿರಲಿಲ್ಲ. “ಮಣ್ಣಿನಲ್ಲಿ ಹುಟ್ಟಿದ ಚಿನ್ನದ ಕುಡಿ ಈ ನನ್ನ ಮಗಳು’ ಎಂದು ಹೆಮ್ಮೆಯಿಂದ ನನ್ನನ್ನು ಬಣ್ಣಿಸುತ್ತಿದ್ದರು. ಅಂಥ ಅಪ್ಪನನ್ನ ಭಾಗ್ಯ.

ಅಪ್ಪನ ಪ್ರಭಾವವೇ ಇರಬೇಕು. ಲೌಕಿಕ ಸಂಗತಿಗಳಲ್ಲಿ ನನ್ನದು ಅನಾಸಕ್ತಿ. ಆದರೂ ಬದುಕಿನ ಒಂದು ತಿರುವು ನನ್ನ ನಿಲುವನ್ನೇ ತಿರುಗಿಸಿಬಿಟ್ಟಿತು! ಅದೇ ನನ್ನ ಮದುವೆ. ಅಪ್ಪ ನನಗೆ  ಮದುವೆ ಮಾಡಲೇಬೇಕಿತ್ತು. ತಂದೆಯಾಗಿ ಅದು ಕರ್ತವ್ಯ. ಸ್ವಯಂವರ ಅಂತ ಒಂದು ಪದ್ಧತಿ. ಅದೇಕೋ ನನಗಿಷ್ಟವಿಲ್ಲದ್ದು. ಹೂಮಾಲೆ ಹಿಡಿದುಕೊಂಡು ಸಾಲಾಗಿ ಕುಳಿತ ಗಂಡುಗಳನ್ನು ನೋಡುತ್ತಾ ಹೋಗುವುದು. ಅವರ ಗುಣಗಾನ, ರಾಜಾಧಿರಾಜ ಕೊತ್ತಂಬರಿ ಬೀಜ, ಅಂಥವ, ಇಂಥವ ಮೆಂತ್ಯೆ ಕದ್ದವ ಎಂದು ವರ್ಣಿಸುವುದು.

ಆ ಎಲ್ಲ ರಾಜಕುಮಾರರು (ಕುಮಾರರು ಎಂದೇನಿಲ್ಲ, ಹದಿನಾರು ಮದುವೆಯಾದವನೂ ಬರುತ್ತಿದ್ದ) ಮಣ್ಣಿಗಾಗಿ, ಹೆಣ್ಣಿಗಾಗಿ, ಹೊನ್ನಿಗಾಗಿ ಜೊಲ್ಲು ಸುರಿಸುವುದನ್ನು ಕಂಡು ರೇಜಿಗೆ ಹುಟ್ಟುತ್ತಿತ್ತು. ಆದ್ದರಿಂದಲೇ ಹೆಣ್ಣು (ಪರ) ಹೊನ್ನು, ಮಣ್ಣನ್ನು ತೃಣವಾಗಿ ಕಾಣುತ್ತಿದ್ದ ನನ್ನ ರಾಜಾರಾಮ ನನಗಿಷ್ಟವಾಗುತ್ತಿದ್ದುದು). ಸ್ವಯಂವರಕ್ಕೆ ಬಂದವರೆಲ್ಲರೂ ಆಹಾ! ನಾನೆಷ್ಟು ಸುಂದರನಾಗಿದ್ದೇನಲ್ಲವೇ? ಈ ಸುಂದರಾಂಗಿ ನನ್ನಂಥ ಸುಂದರನನ್ನು ಬಿಟ್ಟು ಬೇರೆ ಯಾರನ್ನು ವರಿಸಲು ಸಾಧ್ಯ ಎಂದು ಗೋಣು ಎತ್ತಿ ಕನಸು ಕಾಣುತ್ತಾ ಕುಳಿತಿರುವುದು.

Advertisement

ಅವಳು ತಿರಸ್ಕಾರದಿಂದ ಈತನ ಮೂತಿ ನೋಡಿ ಮುಂದಕ್ಕೆ ಹೋದಕೂಡಲೇ ಈತ ಇಂಗು ತಿಂದ ಮಂಗನಾಗುವುದು. ಕೊನೆಗೆ, ಒಬ್ಬರನ್ನು ವರಿಸಿವುದು. ಉಳಿದವರೆಲ್ಲ ಗಲಾಟೆ ಎಬ್ಬಿಸುವುದು. ಹೆಣ್ಣಿಗಾಗಿ ಅನಗತ್ಯವಾದ ಯುದ್ಧವೇ ನಡೆದುಹೋಗುವುದು. ಥೂ… ಅಸಹ್ಯ… ಮದುವೆಗೊಂದು ಗಾಂಭೀರ್ಯ ಬೇಡವೇ? ನನಗೆ ಇಷ್ಟವಿಲ್ಲದಿದ್ದರೂ ನಮ್ಮಪ್ಪ ಪರಾಕ್ರಮಶುಲ್ಕವಾಗಿ ಅಂದರೆ, “ತಲತಲಾಂತರದಿಂದ ಬಂದಿದ್ದ ಶಿವಧನುಸ್ಸನ್ನು ಎತ್ತಿ ಬಾಣಸಂಧಾನ ಮಾಡಿದವರಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ’ ಎಂದು ಪ್ರತಿಜ್ಞೆ ಮಾಡಿಬಿಟ್ಟಿದ್ದರು.

“ಹೌದಪ್ಪಾ… ಯಾರೋ ಒಬ್ಬ ಅಯೋಗ್ಯ ರಾಕ್ಷಸಶಕ್ತಿಯವನು ಬಿಲ್ಲನ್ನೆತ್ತಿಬಿಟ್ಟ ಎನ್ನಿ, ಆಗ ನನ್ನ ಗತಿ?’. ಅಪ್ಪನಿಗೂ ಈ ಆತಂಕ ಇದ್ದೇ ಇತ್ತು. ದೇವರ ದಯೆ, ಪೂರ್ವಪುಣ್ಯ. ಸದ್ಯ ಹಾಗಾಗಲಿಲ್ಲ. ತನ್ನ ಕೈಹಿಡಿಯುವ ಗಂಡು ರೂಪವಂತನಾಗಿರಬೇಕೆಂದು ಹೆಣ್ಣು ಬಯಸುತ್ತಾಳಂತೆ. ತಂದೆಯಾದವನು ತನ್ನ ಅಳಿಯ ವಿದ್ವಾಂಸನಾಗಿರಬೇಕೆಂದು ಇಷ್ಟಪಡುತ್ತಾನಂತೆ. ತಾಯಿಯಾದವಳು ಅಳಿಯ ಶ್ರೀಮಂತನಾಗಿರಬೇಕು ಅಂತಂದುಕೊಳ್ಳುತ್ತಾರಂತೆ. ಬಂಧುಗಳು ಹುಡುಗ ಸತುRಲವಂತನಾಗಿರಬೇಕು ಅಂತ ಆಶಿಸುತ್ತಾರಂತೆ.

ಉಳಿದವರು, ಯಾರು ಯಾರನ್ನು ಮದುವೆಯಾದರೆ ಏನಂತೆ… ನಮಗೊಂದು ಒಳ್ಳೆಯ ಊಟ ಸಿಕ್ಕಿದರೆ ಸಾಕೆಂದುಕೊಳ್ಳುತ್ತಾರಂತೆ! ನನ್ನ ಕೈಹಿಡಿದ ರಾಮ ಈ ಎಲ್ಲರ ನಿರೀಕ್ಷೆಗಳಲ್ಲದೆ ಇನ್ನೂ ಎತ್ತರದಲ್ಲಿ ನಿಂತಿದ್ದ. ನನಗೆ ಮತ್ತಿನ್ನೇನು ಬೇಕು?  ನನ್ನ ಮದುವೆ ಅನಿರೀಕ್ಷಿತವೆಂಬಂತೆ ನಡೆಯಿತು. ಇದಕ್ಕಿಂತ ಅನಿರೀಕ್ಷಿತವೆಂದರೆ, ಒಂದೇ ಮಂಟಪದಲ್ಲಿ ನನ್ನದೂ ಸೇರಿ ನಾಲ್ಕು ಮದುವೆಗಳು ಒಂದೇ ಮುಹೂರ್ತದಲ್ಲಿ! ನನ್ನವರ ಮೂವರು ತಮ್ಮಂದಿರಾದ ಲಕ್ಷ್ಮಣ ಭರತ ಶತ್ರುಘ್ನರಿಗೂ ಊರ್ಮಿಳೆ (ಜನಕರಾಜರ ಸ್ವಂತ ಮಗಳು) ಮಾಂಡವಿ,

ಶ್ರುತಕೀರ್ತಿಯರೊಂದಿಗೆ (ನನ್ನಪ್ಪನ ತಮ್ಮನ ಮಕ್ಕಳು- ಸಾಂಕಾಶ್ಯ ನಗರದವರು) ಮದುವೆ ಜರುಗಿದ್ದು. ಆದರೆ, ಸೀತಾರಾಮ ಕಲ್ಯಾಣ  ಜನಮಾನಸದಲ್ಲಿ ದಾಖಲಾದಂತೆ ಉಳಿಯಿತು. ಆ ಮೂರು ಮದುವೆಗಳಿಗೆ ಇಂಥ ಭಾಗ್ಯ ಒದಗಲಿಲ್ಲ. ಒದಗಿದ್ದರೆ ನನಗಂತೂ ಬಹಳ ಸಂತಸವಾಗುತ್ತಿತ್ತು. ಒಂದೇ ಕುಟುಂಬದ ನಾಲ್ವರು ಹೆಣ್ಣುಮಕ್ಕಳು ಒಂದೇ ಕುಟುಂಬದ ನಾಲ್ವರನ್ನು ಮದುವೆಯಾಗಿದ್ದು ಇತಿಹಾಸದಲ್ಲಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಅಯೋಧ್ಯೆಗೆ ಅದು ದಾಖಲೆ. ನಾವು ನಾಲ್ವರು ಒಂದೇ ಮನೆಯವರು  ಸೊಸೆಯರಾಗಿ ಒಂದೇ ದಿನ ಒಂದೇ ಮನೆಯ ಹೊಸ್ತಿಲು ತುಳಿದೆವು.

* ಸಿ.ಎ. ಭಾಸ್ಕರ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next