Advertisement

ಅನುಕಂಪ, ಕೊಡುಗೆ, ಋಣ ತೀರಿಸುವ ಭಾವನಾತ್ಮಕ ಮತದಾನ ಬೇಡ

07:00 AM Apr 15, 2018 | |

ಪ್ರತಿನಿಧಿಗಳನ್ನು ಚುನಾಯಿಸುವ ಪ್ರತಿಯೋರ್ವ ಮತದಾರನ ಕರ್ತವ್ಯ ಕೂಡಾ ಕಡಿಮೆ ಮಹತ್ವದಲ್ಲ, ಅಲ್ಲಿ ಯಾರ ಹಂಗಿಗೂ ಆಸ್ಪದ ಇರಬಾರದು, ಯಾವ ಮುಲಾಜಿಗೂ ಒಳಗಾಗಬಾರದು. ಹಂಸ-ಕ್ಷೀರ ನ್ಯಾಯದಂತೆ ವಿಶಾಲ ಜನಹಿತ ಪಕ್ಷಪಾತಿಯಾಗಿರಬೇಕು. ವಯಸ್ಸಾದ ನಂತರವೂ ರಾಜಕೀಯದಲ್ಲಿರಬೇಕೆನ್ನುವ ಲಾಲಸೆ ಏಕೆ ಎನ್ನುವ ಪ್ರಶ್ನಿಸುವ ಎದೆಗಾರಿಕೆ ಮತದಾರರಲ್ಲಿರಲಿ. ಜನ ಹಿತದ ಕೆಲಸ ಮಾಡದೇ ಕಣ್ಣೀರಿಟ್ಟು ಮೂರ್ಖರಾಗಿಸುವ ತಂತ್ರಕ್ಕೆ ಬಲಿ ಬೀಳುವವರು ನಾವಲ್ಲ ಎಂದು ತೋರಿಸುವ ಸಾಹಸ ಮಾಡಬೇಕಾಗಿದೆ. 

Advertisement

ಇತ್ತೀಚೆಗೆ ಮುಖಂಡರೋರ್ವರ ನಿಧನಾ ನಂತರ ಅವರ ಉತ್ತರಾಧಿಕಾರಿ ಯಾರಾಗಬೇಕೆಂದು ಸಾರ್ವಜನಿಕವಾಗಿ ಬಿಸಿ ಬಿಸಿ ಚರ್ಚೆ ನಡೆಯಿತು. ಅವರ ಸಮರ್ಥಕರಲ್ಲಿ ಕೆಲವರು ಅವರ ಪತ್ನಿಯೇ ಅವರ ಸ್ಥಾನಕ್ಕೆ ಬರಬೇಕೆಂದು ಅಪೇಕ್ಷಿಸಿದರೆ ಇನ್ನು ಕೆಲವು ಸಮರ್ಥಕರು ಅವರ ಪುತ್ರನ ಪರ ಬ್ಯಾಟಿಂಗ್‌ ಮಾಡಿದರು. ಒಂದು ಜನಾಂದೋಲನದ ಮೂಲಕ ಜನತೆಯ ನೋವುಗಳಿಗೆ ದನಿಯಾಗಿ ಗುರುತಿಸಿಕೊಂಡು ಜನನಾಯಕನಾಗಿ ಹೊರಹೊಮ್ಮಿದ ವ್ಯಕ್ತಿಯ ಸ್ಥಾನಕ್ಕೆ ಆತನ ನಂತರ ಆತನ ಜತೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದ ಇನ್ನೋರ್ವ ನಾಯಕನ ಬದಲು ಗತಿಸಿದ ನಾಯಕನ ಕುಟುಂಬದಿಂದಲೇ ಬರಬೇಕೆಂದು ಹಠ ಹಿಡಿಯುವ ಪೃವೃತ್ತಿ ಏಕೆ? ರಾಜ-ಮಹಾರಾಜರ ಆಳ್ವಿಕೆಯ ಕಾಲ ಮುಗಿದು ಏಳು ದಶಕಗಳೇ ಸಂದಿವೆ. ಅನುವಂಶಿಕ ನೇತೃತ್ವದ ದಾಸ್ಯತ್ವ ನಮ್ಮಿಂದ ಜಪ್ಪಯ್ಯ ಎಂದರೂ ದೂರ ಹೋಗದೆ ಉಳಿದಿದೆ. ಯಾರಾದರೋರ್ವ ಜನಪ್ರತಿನಿಧಿ ಮರಣಿಸಿದರೆ ಏಕೆ ಆತನ ಕುಟುಂಬಸ್ಥರೇ ಆ ಸ್ಥಾನಕ್ಕೆ ನಮ್ಮ ಮೊದಲ ಪ್ರಾಶಸ್ತ್ಯದ ಜನ ಪ್ರತಿನಿಧಿಗಳು? ಮಂತ್ರಿಗಳು ತಾವು ಯಾವುದೇ ಪೂರ್ವಗ್ರಹವಿಲ್ಲದೇ, ರಾಗ-ದ್ವೇಷ ಭಾವನೆಗೊಳಗಾಗದೇ ಸಂವಿಧಾನ ಮತ್ತು ಕಾನೂನಿನ ಅನುಸಾರ ಅಧಿಕಾರದ ಕರ್ತವ್ಯ ನಿರ್ವಹಣೆ ಮಾಡುವುದಾಗಿ ತಮ್ಮ ಪ್ರತಿಜ್ಞಾ ವಿಧಿಯಲ್ಲಿ ಪ್ರಮಾಣ ಮಾಡುತ್ತಾರೆ. ಇಂತಹ ಪ್ರತಿನಿಧಿಗಳನ್ನು ಚುನಾಯಿಸುವ ಜವಾಬ್ದಾರಿಯುತ ಮತದಾರರ ಭಾವನೆಗಳೊಂದಿಗೆ ಏಕೆ ಚೆಲ್ಲಾಟವಾಡಲಾಗುತ್ತದೆ? 

ಎಚ್ಚರಿಸುವ ಕೆಚ್ಚಿರಲಿ
ತಾನೂ ರೈತನಾಗಿ ಮೈಕೈ ಕೆಸರು ಮಾಡಿಕೊಂಡು ಹೊಲದಲ್ಲಿ ದುಡಿದವ ಎಂದೋ, ಬಡತನದಲ್ಲಿ ಕಷ್ಟಪಟ್ಟು ಜನಸೇವೆ ಮಾಡಿ ಮೇಲೆ ಬಂದ ತನ್ನ ಕುರಿತು ಏನೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ ಎಂದೋ ಕಣ್ಣೀರು ಸುರಿಸಿ ಅನುಕಂಪ ಗಿಟ್ಟಿಸುವ, ತನ್ನ ಅಧಿಕಾರಾವಧಿಯಲ್ಲಿ ಎಷ್ಟೆಲ್ಲಾ ಕೆಲಸವಾಗಿದೆ ಈಗ ಅದರ ಋಣ ತೀರಿಸುವ ಕಾಲ ಬಂದಿದೆ ಎಂದೋ, ಇದು ನನ್ನ ಕೊನೆಯ ಚುನಾವಣೆ ಎಂದೋ, ಚುನಾವಣೆಯಲ್ಲಿ ವಿಜಯ ಕೊಡುವ ಮೂಲಕ ತನಗೆ ಗಿಫ್ಟ್ ನೀಡಿ ಎನ್ನುವ ಭಾವನಾತ್ಮಕ ರಾಜಕಾರಣಕ್ಕೆ ಮತದಾರರು ಸುಲಭ ತುತ್ತಾಗುತ್ತಿದ್ದಾರೆ. ದಯೆ, ಅನುಕಂಪ, ಮಾನವೀಯತೆ ನಿಶ್ಚಿತವಾಗಿಯೂ ನಮ್ಮಲ್ಲಿರಬೇಕಾದ ಸದ್ಗುಣಗಳು ಎನ್ನುವುದರಲ್ಲಿ ಯಾವ ಸಂದೇಹವಿಲ್ಲ. ಆದರೆ ದೀನದಲಿತರ, ಕ್ಷೇತ್ರದ ಉತ್ಥಾನಕ್ಕಾಗಿ ದುಡಿಯಬೇಕಾದ ರಾಜಕಾರಣಿಗಳು ನಮ್ಮ ಜನಸಾಮಾನ್ಯರನ್ನು ಮೂರ್ಖರಾಗಿಸುವ ಭಾವನಾತ್ಮಕ ಕಾರ್ಡ್‌ ಬಳಸುವುದು ಖೇದಕರ. ಈ ಕುರಿತು ಮತದಾರರು ಎಚ್ಚೆತ್ತುಕೊಳ್ಳಬೇಕಾಗಿದೆ. ಯುದ್ಧಭೂಮಿಯಲ್ಲಿ ತನ್ನವರ ಹೆಣ ಬಿದ್ದಿದ್ದರೂ ತನ್ನೆಲ್ಲಾ ಭಾವನೆಗಳನ್ನು ಅದುಮಿ ಅವುಗಳ ಮೇಲೆ ಹೆಜ್ಜೆಯಿರಿಸಿ, ಮುನ್ನುಗ್ಗಿ ಶತ್ರುಗಳೊಂದಿಗೆ ಕಾದಾಡುವ ಸೈನಿಕರಂತೆ ಕಠೊರ ಹೃದಯಿಗಳಾಗಿ ತಮ್ಮ ಭಾವನೆಗಳನ್ನು ನಿಯಂತ್ರಿಸಿ ಮತದಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಬೇಕಾಗಿದೆ.

ಜನರಿಂದ, ಜನರಿಗಾಗಿ, ಜನರದೇ ಆದ ಸರ್ಕಾರದ ಪ್ರತಿನಿಧಿಗಳನ್ನು ಚುನಾಯಿಸುವ ಪ್ರತಿಯೋರ್ವ ಮತದಾರನ ಕರ್ತವ್ಯ ಕೂಡಾ ಕಡಿಮೆ ಮಹತ್ವದಲ್ಲ, ಅತ್ಯಂತ ಜವಾಬ್ದಾರಿಯುತವಾದದ್ದು. ಅಲ್ಲಿ ಯಾರ ಹಂಗಿಗೂ ಆಸ್ಪದ ಇರಬಾರದು, ಯಾವ ಮುಲಾಜಿಗೂ ಒಳಗಾಗಬಾರದು. ಹಂಸ-ಕ್ಷೀರ ನ್ಯಾಯದಂತೆ ವಿಶಾಲ ಜನಹಿತ ಪಕ್ಷಪಾತಿಯಾಗಿರಬೇಕು. ವಯಸ್ಸಾದ ನಂತರವೂ ರಾಜಕೀಯದಲ್ಲಿರಬೇಕೆನ್ನುವ ಲಾಲಸೆ ಏಕೆ ಎನ್ನುವ ಪ್ರಶ್ನಿಸುವ ಎದೆಗಾರಿಕೆ ಮತದಾರರಲ್ಲಿರಲಿ. ಜನ ಹಿತದ ಕೆಲಸ ಮಾಡದೇ ಕಣ್ಣೀರಿಟ್ಟು ಮೂರ್ಖರಾಗಿಸುವ ತಂತ್ರಕ್ಕೆ ಬಲಿ ಬೀಳುವವರು ನಾವಲ್ಲ ಎಂದು ತೋರಿಸುವ ಸಾಹಸ ಮಾಡಬೇಕಾಗಿದೆ. ರಾಜಕಾರಣದಲ್ಲಿ ಋಣ, ಗಿಫ್ಟ್ ಶಬ್ದಗಳ ಬಳಕೆ ತರವಲ್ಲ, ಜನಸೇವೆ ಮಾಡಲೆಂದು ಬಂದವರು ಇಂತಹ ಶಬ್ದ ಬಳಕೆ ಮಾಡುವುದು ಸಲ್ಲದು, ಅದು ನಿಮ್ಮ ಕರ್ತವ್ಯ ಎಂದು ಎಚ್ಚರಿಸುವ ಕೆಚ್ಚು ಸಾಮಾನ್ಯ ಮತದಾರರಲ್ಲಿ ಮೂಡಿದಾಗಲೇ ನಮ್ಮ ಪ್ರಜಾಸತ್ತೆಯ ಬೇರುಗಳು ಭದ್ರವಾಗುತ್ತವೆೆ.

ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಹಿತವನ್ನು ರಕ್ಷಿಸುವ ಸಂಕಲ್ಪವಿಟ್ಟುಕೊಂಡು ಹುಟ್ಟಿದ ಪಕ್ಷಗಳು, ದ್ರಾವಿಡ ಚಳವಳಿಯ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷಗಳು, ರೈತ ಹಿತ ಕಾಯುವ ಪಕ್ಷಗಳು ನೇತೃತ್ವಕ್ಕಾಗಿ ಒಂದು ಕುಟುಂಬವನ್ನು ನೆಚ್ಚಿಕೊಳ್ಳುವುದು ಇನ್ನು ಸಹಿಸಲಾಗದು ಎನ್ನುವಷ್ಟು ಅತಿಯಾಗಿದೆ. ಅನುಕಂಪ, ಅನುವಂಶೀಯತೆ ಆಧಾರದ ಮೇಲೆ ಓಟು ನೀಡಲು ಜನಪ್ರತಿನಿಧಿತ್ವ ಸರಕಾರಿ ಹು¨ªೆಯೇ? ರಾಜಕಾರಣಿಗಳ ಮೊಸಳೆ ಕಣ್ಣೀರಿಗೆ ಅನುಕಂಪ ತೋರಿಸುವುದೆಂದರೆ ನಮ್ಮ ಪ್ರಜಾಪ್ರಭುತ್ವವನ್ನು ಅಣಕಿಸಿದಂತೆಯೇ ಸರಿ. ವೋಟಿನ ಗಿಫ್ಟ್, ಕೊನೆಯ ಅವಕಾಶ ಎಂದು ಹಲ್ಲು ಗಿಂಜುವ “ಟಯರ್ಡ್‌’ ಅಭ್ಯರ್ಥಿಗಳಿಗೆ ಅನುಕಂಪದ ಬದಲು “ರಿಟಾಯರ್ಡ್‌’ ಆಗಿ ಎಂದು ಕಟು ಸಂದೇಶ ನೀಡಲು ಇದು ಸಕಾಲ. 

Advertisement

ನ್ಯಾಯಾಧೀಶರಂತೆ ನಿರ್ಣಯ ಕೈಗೊಳ್ಳೋಣ
ಏಷ್ಯಾದ ಕೆಲವು ರಾಷ್ಟ್ರಗಳಲ್ಲಿ ಮತ್ತು ಆಫ್ರಿಕಾದ ದೇಶಗಳಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ ನಡೆಯುತ್ತಿರುವ ಸರ್ವಾಧಿಕಾರಿಗಳ ಅಟ್ಟಹಾಸ ನಮ್ಮಲ್ಲಿ ಬಾರದಿರಬೇಕೆನ್ನುವ ಹಂಬಲ ನಮ್ಮದಾಗಬೇಕಾದರೆ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಜನಮತದಂತಹ ಪದ್ಧತಿಗಳ ಮೂಲಕ ನೇರ ಪ್ರಜಾಪ್ರಭುತ್ವದ ಸರ್ವೋತ್ತಮ ವ್ಯವಸ್ಥೆಯಿರುವ ಸ್ವಿಝರ್‌ಲ್ಯಾಂಡ್‌ನ‌ಲ್ಲಿ ಕಳೆದ ವರ್ಷವಷ್ಟೇ ಸರಕಾರದ ವತಿಯಿಂದ ಎಲ್ಲಾ ನಾಗರಿಕರಿಗೂ ಪೆನ್ಶನ್‌ ವ್ಯವಸ್ಥೆ ಇರಬೇಕೇ ಎಂಬ ಜನಮತ ಮಾಡಿದಾಗ ಭಾಗಿಯಾದ 4/5 ನಾಗರಿಕರು ಸಾಮೂಹಿಕ ಪೆನ್ಶನ್‌ ಯೋಜನೆಗೆ ವಿರುದ್ಧವಾಗಿ ಮತದಾನ ಮಾಡಿದರು. ಜನರನ್ನು ಸೋಮಾರಿಯಾಗಿಸುವ ವ್ಯವಸ್ಥೆಗೆ ಧಿಕ್ಕಾರ ಎಂದು ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸಿದರು.ಇದು ನಮಗೆ ಮಾದರಿಯಾಗಬೇಕು. ಧರ್ಮ, ಜಾತಿಗಳ ಆಧಾರದಲ್ಲಿ ಜನರನ್ನು ಒಡೆದಾಳುವ, ಸಾಂಸ್ಕೃತಿಕ ಹಿರಿಮೆಯನ್ನು ಹಾಳು ಮಾಡುವ, ಮತದಾರರನ್ನು ಮೂರ್ಖರಾಗಿಸುವ ಯೋಜನೆಗಳ ಮೂಲಕ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ರಾಜಕಾರಣಿಗಳ ಕುರಿತು ಜಾಗರೂಕರಾಗಬೇಕಾಗಿದೆ.

ಮತದಾರರು ಮತ ನೀಡುವ ಮೊದಲು ಯಾವುದೇ ರಾಗ,ದ್ವೇಷಕ್ಕೊಳಗಾಗದೇ, ಸಮಷ್ಟಿ ಹಿತ ಚಿಂತನೆಯ ಸಮತೋಲಿತ ನಿರ್ಧಾರ ಕೈಗೊಳ್ಳುವಂತಾಗಲಿ. ನ್ಯಾಯಪೀಠದಲ್ಲಿ ಕುಳಿತ ನ್ಯಾಯಾಧೀಶರಂತೆ ಸಮಚಿತ್ತ, ಸಮತೂಕದ, ಮೌಲ್ಯಯುತ ನಿರ್ಣಯ ಕೈಗೊಳ್ಳಲಿ. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ಮೌಲ್ಯ. (Eternal vigilence is the price of democracy). ಋಣ ತೀರಿಸಬೇಕಾಗಿರುವುದು ಇಂದಿನ ನಮ್ಮ ರಾಜಕಾರಣಿಗಳದಲ್ಲ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಗೊಟ್ಟು ಹುತಾತ್ಮರಾದ ಸ್ವಾತಂತ್ಯ ಯೋಧರಿಗೆ, ತಮ್ಮ ಆಸ್ತಿ, ಐಶ್ವರ್ಯವನ್ನು ತ್ಯಾಗ ಮಾಡಿ ಪರಕೀಯರ ದಾಸ್ಯದ ವಿರುದ್ದ ಹೋರಾಡಿದ ಸಮರವೀರರಿಗೆ ಋಣಿಯಾಗಿರೋಣ. ದೇಶದ ಮೇಲೆ ಅಕಾರಣ ಆಪಾತ್ಕಾಲೀನ ಸ್ಥಿತಿ ಘೋಷಿಸಿ ನಾಗರಿಕ ಅಧಿಕಾರಗಳನ್ನು ಮೊಟಕುಗಳಿಸಿದ ಸರಕಾರದ ವಿರುದ್ಧ ಸೆಟೆದು ನಿಂತ ಸ್ವಾಭಿಮಾನಿ ಹಿರಿಯರನ್ನು ಸ್ಮರಿಸೋಣ, ಅವರಿಗೆ ಋಣಿಯಾಗಿರೋಣ. ಕೊಡುಗೆ ಕೊಡುವುದಾದರೆ ಯಾವುದೇ ಆಮಿಷಕ್ಕೆ ಒಳಗಾಗದೇ ನಮ್ಮ ಪ್ರಜಾತಂತ್ರವನ್ನು ರಕ್ಷಿಸಿ, ಹೆಮ್ಮೆ ಪಡುವ ಸ್ಥಿತಿಯಲ್ಲಿ ಸುಧೃಢಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡೋಣ. ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆ (Free and fair Election) ನಡೆಯುವಂತೆ ನೋಡಿಕೊಳ್ಳುವುದು ಕೇವಲ ಚುನಾವಣೆ ಆಯೋಗದ ಜವಾಬ್ದಾರಿ ಅಲ್ಲ, ಅದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ. ಬನ್ನಿ ಮತದಾನದಿಂದ ದೂರ ಉಳಿಯುವುದು ಬೇಡ. ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಮತದಾನ ಮಾಡೋಣ.

ಬೈಂದೂರು ಚಂದ್ರಶೇಖರ ನಾವಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next