Advertisement

ವರ್ಗಾವಣೆಯ ಸಹವಾಸವೇ ಬೇಡ

12:34 PM Dec 12, 2018 | Team Udayavani |

ಬೆಂಗಳೂರು: ದಶಕಗಳಿಂದ ಅಂತರ ನಿಗಮಗಳ ವರ್ಗಾವಣೆಗಾಗಿ ಹೋರಾಟ ಮಾಡಿದವರೇ ಈಗ “ಅದರ ಸಹವಾಸವೇ ಬೇಡ’ ಎಂದು ವರ್ಗಾವಣೆ ರದ್ಧತಿ ಬಯಸಿ ಅರ್ಜಿ ಸಲ್ಲಿಸುತ್ತಿದ್ದಾರೆ! ಹೀಗೆ ಅಂತರ ನಿಗಮಗಳ ವರ್ಗಾವಣೆ ರದ್ಧತಿ ಕೋರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಗೆ 300ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅವುಗಳು ಈಗ ಸರ್ಕಾರದ ಪರಿಶೀಲನೆಯಲ್ಲಿವೆ.

Advertisement

ಈ ಪೈಕಿ ಶೇ. 50ರಷ್ಟು ಅರ್ಜಿಗಳು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಿಂದ ಬಂದಿದ್ದರೆ, ಉಳಿದವು ಇತರ ಮೂರೂ ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ತಾವು ಈ ಮೊದಲು ಸಲ್ಲಿಸಿದ್ದ ವರ್ಗಾವಣೆ ರದ್ದುಗೊಳಿಸಿ, ಯಥಾಸ್ಥಿತಿಯಲ್ಲಿ ಮುಂದುವರಿಸಲು ಮನವಿ ಮಾಡಿದ್ದಾರೆ. 

ರದ್ಧತಿಗೆ ಮನವಿ: ಬಹುತೇಕರಿಗೆ ತಾವು ಬಯಸಿದ ಕಡೆ ವರ್ಗಾವಣೆ ಭಾಗ್ಯ ಸಿಗದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇವರೆಲ್ಲಾ ಈಗಾಗಲೇ ಒಂದೆಡೆ ನೆಲೆ ನಿಂತವರು. ಮಕ್ಕಳ ವಿದ್ಯಾಭ್ಯಾಸ ಕೂಡ ಚೆನ್ನಾಗಿ ನಡೆದಿದೆ. ಹಾಗೊಂದು ವೇಳೆ, ಸ್ವಂತ ಊರಿನ ಆಸುಪಾಸು ದೊರೆತರೆ ಹೋಗೋಣ ಎಂದು ಲೆಕ್ಕಾಚಾರ ಹಾಕಿದವರು. ಆದರೆ, ಕೇಳಿದ್ದೇ ಒಂದು ಕಡೆಯಾದರೆ, ಕೊಟ್ಟಿದ್ದು ಮತ್ತೂಂದೆಡೆ.

ಉದಾಹರಣೆಗೆ ಬೆಂಗಳೂರಿನಲ್ಲಿ ನೆಲೆಸಿದವರಿಗೆ, ಕೋಲಾರ ಬಯಸಿರುತ್ತಾರೆ. ಚಿಕ್ಕಬಳ್ಳಾಪುರವಾದರೂ ಕೊಟ್ಟರೆ ಆ ನೌಕರನಿಗೆ ಅನುಕೂಲ ಆಗಬಹುದು. ಅದುಬಿಟ್ಟು, ಮಂಗಳೂರಿಗೆ ಕೊಟ್ಟರೆ ಏನಾಗಬಹುದು? ಹಾಗಾಗಿ, ವರ್ಗಾವಣೆ ರದ್ಧತಿಗೆ ಮನವಿಗಳು ಬಂದಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಮಾಹಿತಿ ನೀಡಿದರು.

ನಾಲ್ಕಾರು ತಿಂಗಳು ಕಳೆದರೂ ಬಿಡುಗಡೆ ಆದೇಶ ಸಿಗುತ್ತಿಲ್ಲ. ಇದಕ್ಕಾಗಿ ಅಲೆದಾಟ, ಅದನ್ನು ನಂಬಿ ಕೆಲವರು ಮನೆ ಬದಲು ಮಾಡಿ ನಂತರ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿ, ಬೇಸತ್ತು ಕೆಲವರು ರದ್ಧತಿ ಬಯಸಿ ಅರ್ಜಿ ಸಲ್ಲಿಸಿರುವ ಸಾಧ್ಯತೆಗಳೂ ಇವೆ.  ಕಳೆದ ವರ್ಷವರ್ಗಾವಣೆ ಬಯಸಿ ನಾಲ್ಕೂ ನಿಗಮಗಳಿಂದ ಒಟ್ಟಾರೆ 18,978 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 14,604 ಊರ್ಜಿತಗೊಂಡಿದ್ದು, ವರ್ಗಾವಣೆ ಭಾಗ್ಯ ಸಿಕ್ಕಿದ್ದು 3,718 ಜನರಿಗೆ. 

Advertisement

ಚಕಾರ ಎತ್ತದ ಅಧಿಕಾರಿಗಳು; ಚಿಂತೆಗೀಡಾದ ನೌಕರರು: ಈ ಮಧ್ಯೆ ಬಯಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನೌಕರರು ಅನಾಥರಾಗಿದ್ದಾರೆ. ಸಾರಿಗೆ ನೌಕರರ ಅಂತರ ನಿಗಮಗಳ ವರ್ಗಾವಣೆಗೆ ಕೌನ್ಸೆಲಿಂಗ್‌ ನಡೆದು ಸರಿಯಾಗಿ ಒಂದು ವರ್ಷ (2017ರ ಡಿ.) ಕಳೆದಿದೆ. ಸ್ಥಳ ನಿಯೋಜನೆ ಮಾಡಲಾಗಿದೆ.

ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಬಿಎಂಟಿಸಿ ನೌಕರರ ನೇಮಕಾತಿ ಪ್ರಕ್ರಿಯೆ ಮುಗಿದ ತಕ್ಷಣ ಬಿಡುಗಡೆ ಪತ್ರ ನೀಡುವುದಾಗಿ ನಿಗಮವು ಅವರೆಲ್ಲರಿಗೂ ಭರವಸೆ ನೀಡಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡು ಬಿಎಂಟಿಸಿಯಿಂದ ಸಾವಿರಕ್ಕೂ ಅಧಿಕ ನೌಕರರು ಕೆಎಸ್‌ಆರ್‌ಟಿಸಿಗೂ ಬಂದಾಗಿದೆ. ಆದಾಗ್ಯೂ ಈವರೆಗೆ ವರ್ಗಾವಣೆ ಬಗ್ಗೆ ಚಕಾರ ಎತ್ತದಿರುವುದು ಕೆಎಸ್‌ಆರ್‌ಟಿಸಿ ನೌಕರರನ್ನು ಚಿಂತೆಗೀಡುಮಾಡಿದೆ. 

ಇದ್ಯಾವ ನ್ಯಾಯ: ಬಿಎಂಟಿಸಿಯಿಂದ ತಾಂತ್ರಿಕ ಸಿಬ್ಬಂದಿ ಬರುವವರೆಗೆ ಅಥವಾ ತಾಂತ್ರಿಕ ಸಿಬ್ಬಂದಿ ನೇಮಕಾತಿ ಮಾಡಿಕೊಂಡ ನಂತರ ಬಿಡುಗಡೆಗೊಳಿಸುವುದಾಗಿ ಈ ಹಿಂದೆ ಕೆಎಸ್‌ಆರ್‌ಟಿಸಿ ಮುಖ್ಯ ಯಾಂತ್ರಿಕ ಅಭಿಯಂತರರು ಲಿಖೀತವಾಗಿ ಭರವಸೆ ನೀಡಿದ್ದಾರೆ. ಇವೆರಡೂ ಪ್ರಕ್ರಿಯೆ ಈಗ ಪೂರ್ಣಗೊಂಡಿವೆ.

ಈ ಹಿನ್ನೆಲೆಯಲ್ಲಿ ವರ್ಗಾವಣೆ ಆದೇಶದಂತೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ ನೌಕರರಿಗೆ ಮೇಲಧಿಕಾರಿಗಳು “ಯೂ-ಟರ್ನ್’ ಹೊಡೆಯುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ನೇಮಕಾತಿ ಪ್ರಕ್ರಿಯೆವರೆಗೂ ಕಾಯುವುದು ಅನಿವಾರ್ಯ ಎನ್ನುತ್ತಿದ್ದಾರೆ. ಇದ್ಯಾವ ನ್ಯಾಯ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ನೌಕರರು ಆರೋಪಿಸುತ್ತಾರೆ. 

ಸಿಗದ ಬಿಡುಗಡೆ ಆದೇಶ: ಹತ್ತು ವರ್ಷಕ್ಕೂ ಅಧಿಕ ಕಾಲ ಒಂದೇ ಕಡೆ ಸೇವೆ ಸಲ್ಲಿಸಿದವರಿಗೆ ಸೇವಾ ಜೇಷ್ಠತೆ ಆಧರಿಸಿ ಅಂತರ ನಿಗಮಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದಕ್ಕೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಿಂದ ಅತ್ಯಧಿಕ ಅರ್ಜಿಗಳು ಬಂದವು.

ಪ್ರತಿಯಾಗಿ ವಾಯವ್ಯ ಮತ್ತು ಈಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ ವರ್ಗಾವಣೆ ಬಯಸಿದವರ ಸಂಖ್ಯೆ ಅತ್ಯಲ್ಪ. ಇದೇ ಕಾರಣಕ್ಕೆ ನೌಕರರಿಗೆ ಬಿಡುಗಡೆ ಆದೇಶ ನೀಡಿಲ್ಲ. ಈ ಮಧ್ಯೆ ಬಿಎಂಟಿಸಿಯಿಂದ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಕೆಎಸ್‌ಆರ್‌ಟಿಸಿಯಲ್ಲಿ 2016ರಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ.

ವಿಡಿಯೋ ರೆಕಾರ್ಡಿಂಗ್‌: ಅಂತರ ನಿಗಮಗಳ ವರ್ಗಾವಣೆ ನಮ್ಮ ಪಾಲಿಗೆ ನೀರಿನಲ್ಲಿನ ಚಂದ್ರನ ಬಿಂಬ. ಎದುರಿಗೆ ಕಾಣುತ್ತದೆ. ಆದರೆ, ಹಿಡಿಯಲು ಹೋದರೆ ಕೈಗೆ ಸಿಗುವುದಿಲ್ಲ. ಒಂದಿಲ್ಲೊಂದು ನೆಪ ಹೇಳುತ್ತಿದ್ದಾರೆ. ವರ್ಷದ ಹಿಂದೆ ವರ್ಗಾವಣೆ ಆದೇಶ ಪ್ರತಿ ಕೊಟ್ಟಿದ್ದಾರೆ. ಬಿಎಂಟಿಸಿ ನೌಕರರ ವರ್ಗಾವಣೆ ಆಗುತ್ತಿದ್ದಂತೆ ನಿಮಗೂ (ಕೆಎಸ್‌ಆರ್‌ಟಿಸಿ ನೌಕರರಿಗೆ) ಬಿಡುಗಡೆ ಪ್ರತಿ ಕೈಸೇರಲಿದೆ ಎಂದು ಹೇಳಿರುವ ಬಗ್ಗೆ ವಿಡಿಯೊ ರೆಕಾರ್ಡಿಂಗ್‌ ಕೂಡ ಇದೆ.

ಇದನ್ನು ನಂಬಿ ಕುಟುಂಬಗಳನ್ನು ಆಯಾ ಊರುಗಳಿಗೆ ಶಿಫ್ಟ್ ಮಾಡಿದ್ದೇವೆ. ಈಗ ಕೇಳಿದರೆ, ಮನಬಂದಂತೆ ಉತ್ತರಿಸುತ್ತಾರೆ. ಅತ್ತ ಅಭದ್ರತೆಯಲ್ಲಿ ಕುಟುಂಬಗಳಿವೆ. ಇತ್ತ ನಾವು ಅತಂತ್ರರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಧೋರಣೆಯು ಕೆಲ ನೌಕರರಲ್ಲಿ ಮಾನಸಿಕ ಖನ್ನತೆಗೆ ಕಾರಣವಾಗುತ್ತಿದೆ ಎಂದು ಚಿಕ್ಕಮಗಳೂರು ಡಿಪೋದ ತಾಂತ್ರಿಕ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ಅಂತರ ನಿಗಮಗಳ ವರ್ಗಾವಣೆ ಬೇಡ ಎಂದೂ 300 ಅರ್ಜಿಗಳು ಬಂದಿವೆ. ಈ ಅರ್ಜಿಗಳು ಕೂಡ ಈಗ ಸರ್ಕಾರದ ಪರಿಶೀಲನೆ ಹಂತದಲ್ಲಿವೆ. ಆ ಪ್ರಕ್ರಿಯೆಯು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿ ಆದಷ್ಟು ಬೇಗ ವರ್ಗಾವಣೆ ಬಯಸಿದ ನೌಕರರನ್ನು ಬಿಡುಗಡೆಗೊಳಿಸಲಾಗುವುದು. 
-ಶಿವಯೋಗಿ ಕಳಸದ, ಕೆಎಸ್‌ಆರ್‌ಟಿಸಿ ಎಂಡಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next