Advertisement

ಕಾರ್ಖಾನೆ ಅಂತರ್ಜಲಕ್ಕೆ ಧಕ್ಕೆ ಮಾಡದಿರಲಿ

11:41 AM Nov 30, 2018 | |

ಬೀದರ: ಜನತೆಗೆ ಮತ್ತು ನೌಕರರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಖಾನೆಗಳನ್ನು ನಡೆಸಬೇಕು. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗಲು ಕಾರ್ಖಾನೆಗಳು ಪೂರಕವಾಗಿರಬೇಕು ಎನ್ನುವ ಆಲೋಚನೆ ಸರ್ಕಾರಕ್ಕಿದೆ ಎಂದು ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಹೇಳಿದರು.

Advertisement

ಕೋಳಾರ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಸಾಯಿ ಅಡ್ವೆಂಟ್‌ ಸಭಾಂಗಣದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಐಎಡಿಬಿ ಹಾಗೂ ಕೈಗಾರಿಕೆಗಳ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು, ಅಂತರ್ಜಲಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಖಾನೆಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಪರಿಸರ ವಿಮೋಚನಾ ಪತ್ರ ಇಲ್ಲದ ಕಾರಣ ಮುಚ್ಚಲ್ಪಟ್ಟ ಕೋಳಾರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿರುವ 9 ಕಾರ್ಖಾನೆಗಳ ಪೈಕಿ ಎರಡು ಕಾರ್ಖಾನೆಗಳು ಪುನರಾಂಭಗೊಂಡಿವೆ. ಇನ್ನೂ ಏಳು ಕಾರ್ಖಾನೆಗಳು ಆರಂಭವಾಗಬೇಕಿದೆ. ಇನ್ನುಳಿದ ಕಾರ್ಖಾನೆಗಳು ಸಹ ಪರಿಸರ ವಿಮೋಚನಾ ಪತ್ರ ಸಲ್ಲಿಸುವುದು ಬಾಕಿ ಇದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಮುಚ್ಚಲ್ಪಟ್ಟ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಪರಿಸರ ಕಾಯ್ದೆಯನ್ವಯ ಇಐಎ ಅಧ್ಯಯನ ವರದಿಯನ್ನು ಎರಡು ತಿಂಗಳೊಳಗೆ ಸಂಬಂಧಿ ಸಿದ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದು ಕೆಮಿಕಲ್‌ ಆ್ಯಂಡ್‌ ಫಾರ್ಮಾಟಿಕಲ್‌ ಇಂಡಸ್ಟ್ರಿಯಲ್‌ ಅಸೋಸಿಯನ್‌ ಅಧ್ಯಕ್ಷ ದೇವೇಂದ್ರಪ್ಪ ಸಭೆಗೆ ತಿಳಿಸಿದರು.

ಕೆಐಎಡಿಬಿಯಿಂದ ಒಟ್ಟು ಎರಡು ಹಂತದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದೇವೆ. ಎರಡನೇ ಹಂತದಲ್ಲಿ 600 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು ಕೈಗಾರಿಕೆಗಳ ಸ್ಥಾಪನೆಗೆ ಅವಶ್ಯವಿರುವ ರಸ್ತೆ ಮತ್ತು ವಿದ್ಯುತ್‌ ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ನೀರು ಪೂರೈಕೆ ಸೌಕರ್ಯ ಕಲ್ಪಿಸುವ ಪ್ರಯತ್ನ ಕೂಡ ಮಾಡಲಾಗುತ್ತಿದೆ. ಈ ವ್ಯವಸ್ಥೆಯ ಬಳಿಕ ಇಲ್ಲಿನ ಜಮೀನಿಗೆ ಬೇಡಿಕೆ ಬರಲಿದೆ ಎಂದು ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಶಿವಶಂಕರ ಅವರು ಸಭೆಗೆ ಮಾಹಿತಿ ನೀಡಿದರು.

Advertisement

ಬಳಿಕ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಕಾರಂಜಾ ಮುಳುಗಡೆ ಸಂತ್ರಸ್ತರೊಂದಿಗೆ ಸಭೆ ನಡೆಸಿದರು. ಕಾರಂಜಾ ಮುಳುಗಡೆ ಸಂತ್ರಸ್ತ 28 ಹಳ್ಳಿಗಳ ಜನತೆಗೆ ನ್ಯಾಯ ಒದಗಿಸಬೇಕು. ನಾವು ಭೂಮಿ ಮಾರಿ ಬೀದಿಗೆ ಬಂದಿದ್ದೇವೆ. 40 ವರ್ಷ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಭೂಮಿ ಕಳೆದುಕೊಂಡ ನಮಗೆ ವೈಜ್ಞಾನಿಕ ಬೆಲೆ ಬೇಕು ಎಂದು ಸಭೆಗೆ ಕೋರಿದರು. ಈ ಬಗ್ಗೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ನಡೆದಿದ್ದು, ಅಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ ಎಂದು ಜಿಲ್ಲಾ ಧಿಕಾರಿಗಳು ಮಾಹಿತಿ ನೀಡಿದರು. ತಮ್ಮ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರಿಂದ ಈ ವಿಷಯವನ್ನು ಅವರ ವಿವೇಚನೆಗೆ ಬಿಡುತ್ತೇವೆ ಎಂದು ಅಧ್ಯಕ್ಷರು ಪ್ರತಿಕ್ರಿಯಿಸಿದರು.

ಸಮಿತಿಯ ಸುರೇಶಗೌಡ, ಮಹೇಶ ಈರನಗೌಡ, ಲಾಲಾಜಿ ಮೆಂಡನ್‌, ಎಂ.ಪಿ.ಅಪ್ಪಚ್ಚು, ಬಿ.ಎಸ್‌.ಬಸವರಾಜ, ಸೌಮ್ಯ ರೆಡ್ಡಿ ಸೇರಿದಂತೆ ಇನ್ನಿತರ ಸದಸ್ಯರನ್ನೊಳಗೊಂಡ ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿಯ ಸದಸ್ಯರು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ರಾಸಾಯನಿಕ ಕಂಪನಿಯಲ್ಲೇ ಅಧಿಕಾರಿಗಳ ಸಭೆ!
ಬೀದರ:
ಕೋಳಾರ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು ನಿಯಮ ಮೀರಿ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವ ಸಂಬಂಧ ಅರ್ಜಿಗಳ ಪರಿಶೀಲನೆಗೆ ಗುರುವಾರ ಬಂದ ಕರ್ನಾಟಕ ವಿಧಾನ ಸಭೆ ಅರ್ಜಿಗಳ ಸಮಿತಿ ಸದಸ್ಯರು ಅದೇ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಂಪನಿಯೊಂದರಲ್ಲಿ ಅಧಿಕಾರಿಗಳ ಸಭೆ ಹಾಗೂ ಪತ್ರಿಕಾಗೋಷ್ಠಿ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ. ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು ನಿಯಮಗಳನ್ನು ಮೀರಿ ಸುತ್ತಲಿನ ಪ್ರದೇಶದಲ್ಲಿ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವ ಕುರಿತು ವಿಧಾನ ಸಭೆ ಅರ್ಜಿಗಳ ಸಮಿತಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದಿರುವ ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ನೇತೃತ್ವದ ಸದಸ್ಯರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಾಗ ತೀವ್ರ ಮುಜುಗುರಕ್ಕೆ ಒಳಗಾದ ಪ್ರಸಂಗ ನಡೆಯಿತು.

ರಾಸಾಯನಿಕ ಕಾರ್ಖಾನೆಗಳ ಅವ್ಯವಸ್ಥೆ ಸೇರಿದಂತೆ ಇತರೆ ಚಟುವಟಿಕೆಗಳ ಪರಿಶೀಲನೆಗೆ ಬಂದ ಸಮಿತಿ ಸದಸ್ಯರು ಯಾವ ಕಾರಣಕ್ಕೆ ಖಾಸಗಿ ಕಾರ್ಖಾನೆಯಲ್ಲಿ ಅಧಿಕಾರಿಗಳ ಸಭೆ ಹಾಗೂ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ? ಸರ್ಕಾರಿ ಕಚೇರಿಗಳಲ್ಲಿ ಯಾಕೆ ನಡೆಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ಚಡಪಡಿಸಿದ ಸದಸ್ಯರು, ಇದು ರಾಸಾಯನಿಕ ಕಾರ್ಖಾನೆ ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡ ಘಟನೆ ನಡೆಯಿತು. ಯಾವುದೇ ಕಾರ್ಖಾನೆ ನಿಯಮ ಮೀರಿ ಕೆಲಸ ಮಾಡಿದರೂ ಕೂಡ ಯಾವುದೇ ಮುಲಾಜು ಇಲ್ಲದೆ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ವಿನಂತಿಸಿದರು.
ಸದ್ಯ ಕೊಳ್ಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿ 21 ರಾಸಾಯನಿಕ, ಔಷಧ ಕಾರ್ಖಾನೆಗಳ ಪೈಕಿ 7 ಔಷಧ ಕಂಪನಿಗಳು ಪರಿಸರ ವಿಮೋಚನಾ ಪತ್ರ ಹಾಗೂ ಮಂಡಳಿಯಿಂದ ಜಲ ಮತ್ತು ವಾಯು ಕಾಯ್ದೆಗಳಡಿ ಸಮ್ಮತಿ ಪತ್ರ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 5 ಕಾರ್ಖಾನೆಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. 9 ಕಾರ್ಖಾನೆಗಳಿಗೆ ಪರಿಸರ ವಿಮೋಚನಾ ಪತ್ರ ಇಲ್ಲದೇ ಇರುವುದರಿಂದ ಮಂಡಳಿಯು ನೀಡಿರುವ ಸಮ್ಮತಿ ಪತ್ರಗಳನ್ನು ಹಿಂಪಡೆದು, ಕಾನೂನಿನ್ವಯ ಮುಚ್ಚುವ ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೀದರ್‌ ತಾಲೂಕಿನ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಹಿನ್ನಡೆ ಉಂಟಾಗಿದೆ. ಕಾರಂಜಾ ನೀರಾವರಿ ಯೋಜನೆಯಲ್ಲಿ ಭೂಮಿ ಹಾಗೂ ಮನೆ ಕಳೆದುಕೊಂಡ ರೈತರಿಗೆ ಪರಿಹಾರ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಪರಿಶೀಲಿಸುವುದು ಹಾಗೂ ಕೈಗಾರಿಕಾ ಕಾರ್ಖಾನೆಗಳ ಸ್ಥಿತಿಗತಿ ಪರಿಶೀಲನೆ ಸಮಿತಿ ಸದಸ್ಯರ ಮುಖ್ಯ ಉದ್ದೇಶವಾಗಿದೆ. ನ.30ರಂದು ಕೂಡ ಸಮಿತಿ ಸದಸ್ಯರು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರಂಜಾ ಸಂತ್ರಸ್ತರು ಕೂಡ ವಿಧಾನ ಸಭೆ ಅರ್ಜಿಗಳ ಸಮಿತಿ ಅಧ್ಯಕ್ಷರನ್ನು ಭೇಟಿಮಾಡಿ, ಸೂಕ್ತ ಪರಿಹಾರ ನೀಡುವಂತೆ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಮಿತಿ ಸದಸ್ಯರು ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು 2014ರಲ್ಲಿ ಅಂದಿನ ಸರ್ಕಾರ ನಿರ್ಧರಿಸಿತು. ಆದರೆ, ಇದೀಗ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಳೆದ ತಿಂಗಳು ಇಲ್ಲಿನ ಸಂತ್ರಸ್ತರ ಜೊತೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಪರಿಹಾರ ನೀಡುವ ನಿಟ್ಟಿನಲ್ಲಿ ಭರವಸೆ ನೀಡಿದ್ದು, ಈ ಕುರಿತು ಪುನರ್‌
ಪರಿಶೀಲಿಸುವಂತೆ ಸೂಚಿಸಿದ್ದಾರೆ. ಹಾಗಾಗಿ, ಸಂತ್ರಸ್ತರ ಜೊತೆ ಕೂಡ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಇನ್ನೊಂದು ಬಾರಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಶಿಫಾರಸ್ಸು ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ತಿಳಿಸಿದರು. 

ವರದಿ ಸಲ್ಲಿಕೆ: ಬೀದರ್‌ ಜಿಲ್ಲೆ ಕೆಂಪು ಲ್ಯಾಟರೈಟ್‌ ಮಣ್ಣು ಹೊಂದಿದ್ದು, ಈ ಪ್ರದೇಶದಲ್ಲಿ ರಾಸಾಯನಿಕ ಕಾರ್ಖಾನೆಗಳನ್ನು ನಡೆಸಲು ಸೂಕ್ತ ಸೂಕ್ತವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಮಿತಿ ಅಧ್ಯಕ್ಷರು, ಜಿಲ್ಲೆಯಲ್ಲಿನ ಮಣ್ಣಿನ ಗುಣಧರ್ಮ ಕುರಿತು ಈಗಾಗಲೇ
ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಕೂಡ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯರಿಗಿಲ್ಲ ಉದ್ಯೋಗ ಬೀದರ ನಗರ ಹೊರವಲಯ ಹಾಗೂ ಹುಮನಾಬಾದ ತಾಲೂಕಿನಲ್ಲಿ ಹೆಚ್ಚು ಕೈಗಾರಿಕಾ ಕಾರ್ಖಾನೆಗಳು ಇವೆ. ಆದರೆ, ಉದ್ಯೋಗದಲ್ಲಿ ಮಾತ್ರ ನೆರೆಯ ರಾಜ್ಯದ ನೌಕರರೇ ಹೆಚ್ಚಿದ್ದಾರೆ, ಏಕೆ? ಎಂಬ ಪತ್ರಕರ್ತರ ಪ್ರಶ್ನೆಗೆ, ಕರ್ನಾಟಕ ವಿಧಾನ ಸಭೆ ಅರ್ಜಿಗಳ ಸಮಿತಿ ಸದಸ್ಯರು ಉತ್ತರಿಸಿ, ಸ್ಥಳೀಯ ನಿವಾಸಿಗಳಿಗೆ ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ
ನೀಡಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ವಿವಿಧೆಡೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಹೋರಾಟಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿಲ್ಲಿ ಜಿಲ್ಲಾಧಿಕಾರಿಗಳು ಕ್ರಮ
ಕೈಗೊಳ್ಳಲಿದ್ದಾರೆ ಎಂದು ಉತ್ತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next