Advertisement

ಹುಲಿ ಯೋಜನೆಗೆ ಬೆಟ್ಟ ಸೇರಿಸಬೇಡಿ

07:29 AM Feb 23, 2019 | |

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರಬೆಟ್ಟ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಅರಣ್ಯ ಎಂದು ಘೋಷಿಸಬಾರದೆಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಗಿರಿಜನರ ಅಭಿವೃದ್ಧಿ ಸಂಘದಿಂದ ನಗರದಲ್ಲಿ ಪ್ರತಿಭಟಿಸಲಾಯಿತು.

Advertisement

ನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟಿಸಿದರು. ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ, ಬುಡಕಟ್ಟು ನೃತ್ಯ ಪ್ರದರ್ಶಿಸಿದರು.

3,500 ಕುಟುಂಬ: ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಮುಖಂಡ ಡಾ. ಸಿ. ಮಾದೇಗೌಡ ಮಾತನಾಡಿ, ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಗೆ ಬೈಲೂರು, ಪಿ.ಜಿ.ಪಾಳ್ಯ, ಲೊಕ್ಕನಹಳ್ಳಿ, ದಿನ್ನಹಳ್ಳಿ, ಶಾಗ್ಯ, ಮೀಣ್ಯಂ, ಪೊನ್ನಾಚಿ, ಮಾರ್ಟಳ್ಳಿ ಗ್ರಾಮಗಳು ಒಳಪಡಲಿವೆ. ಈ ಎಲ್ಲಾ ಗ್ರಾಮಗಳಲ್ಲಿ 3,500 ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿನ ಜನತೆಗೆ ಶತಮಾನಗಳಿಂದಲೂ ಗೆಡ್ಡೆಗೆಣಸು, ಸೊಪ್ಪು, ಸೆದೆ ಸಂಗ್ರಹ ಮಾಡಿ, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಅರಣ್ಯವಾಗಿ ಘೋಷಣೆ ಮಾಡಲು ರಾಷ್ಟ್ರೀಯ ಹುಲಿ ಯೋಜನಾ ಪ್ರಾಧಿಕಾರಕ್ಕೆ ವರದಿ ಕಳುಹಿಸಿದೆ. ಇದು ಸರಿಯಲ್ಲ ಎಂದು ದೂರಿದರು. ಪರಿಸರವಾದಿಗಳೆಂದು ಹೇಳಿಕೊಂಡು ಕೆಲವರು ಲಾಭದ ಉದ್ದೇಶದಿಂದ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳು ಜಾಸ್ತಿಯಿವೆ ಎಂದು ಸುಳ್ಳು ವರದಿ ನೀಡಿ, ಅರಣ್ಯವಾಸಿಗಳಿಗೆ ತೊಂದರೆಯುಂಟು ಮಾಡುತ್ತಿದ್ದಾರೆ ಎಂದರು.

ಸಭೆ ಕರೆಯಿರಿ: ಪ್ರಾಧಿಕಾರಕ್ಕೆ ವರದಿ ಕಳುಹಿಸಿಕೊಡುವ ಮೊದಲು ರಾಜ್ಯ ಸರ್ಕಾರವು ಅರಣ್ಯದಂಚಿನಲ್ಲಿರುವ ಗ್ರಾಮ ಅರಣ್ಯಸಮಿತಿ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಗ್ರಾಮ ಅರಣ್ಯಸಮಿತಿ ಜತೆ ಚರ್ಚಿಸದೇ ಮಹದೇಶ್ವರ ಬೆಟ್ಟವನ್ನು ಹುಲಿ ಯೋಜನೆಗೆ ಸೇರಿಸಲು ಹೊರಟಿರುವುದರಿಂದ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂದರು.

Advertisement

2006 ರ ಅರಣ್ಯಹಕ್ಕು ಕಾಯಿದೆಯಡಿ ಸೋಲಿಗರ 533 ಕುಟುಂಬಗಳಿಗೆ 1143 ಎಕರೆ ಭೂಮಿಯನ್ನು ಒಡೆತನಕ್ಕೆ ಲಭ್ಯವಿದೆ.  25 ಅರಣ್ಯ ಹಕ್ಕು ಸಮಿತಿಗಳು ಸಮುದಾಯ ಅರಣ್ಯ ಹಕ್ಕುಪತ್ರ ಪಡೆದಿವೆ. ಈಗಾಗಲೇ ಅರಣ್ಯ ಸಂರಕ್ಷಣೆ, ನಿರ್ವಹಣೆ, ಕಿರುಅರಣ್ಯ ಉತ್ಪನ್ನ ಸಂಗ್ರಹ ಮಾಡುವ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.  

ಇಂಥ ಪರಿಸ್ಥಿತಿಯಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದರೆ ನಮ್ಮ ಕಿರು ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಅವಕಾಶ ಇರುವುದಿಲ್ಲ. ನಮ್ಮನ್ನು ಈಗಿರುವ ಜಾಗದಿಂದ ಸ್ಥಳಾಂತರಿಸುವ ಕೆಲಸವೂ ನಡೆಯಲಿದೆ. ಆದ್ದರಿಂದ ಮದದೇಶ್ವರಬೆಟ್ಟ ವನ್ಯಧಾಮವನ್ನು ಹುಲಿ ಯೋಜನೆಗೆ ಸೇರಿಸಬಾರದು ಎಂದು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲಾ ಪ್ರತಿಭಟನಾನಿರತರು ಬಾಯಿ, ತಲೆಗೆ ಹಸಿರು ಬಣ್ಣದ ಪಟ್ಟಿ ಕಟ್ಟಿಕೊಂಡಿದ್ದರು. ಗಿರಿಜನರ ತಂಡವೊಂದು ತಲೆಗೆ ಹಸಿರು ಎಲೆಯ ಕಿರೀಟ, ಮೈಗೆ ವಿಭೂತಿ ಬಳಿದುಕೊಂಡು ನಗಾರಿ, ತಮಟೆ ನೃತ್ಯ ಮಾಡಿ  ಗಮನ ಸೆಳೆಯಿತು. ಪ್ರತಿಭಟನೆಯಲ್ಲಿ ಬುಡಕಟ್ಟು ಸಂಘದ ಮುಖಂಡರಾದ ಸಿ.ಮಾದಪ್ಪ, ಮುತ್ತಯ್ಯ, ರಾಜೇಗೌಡ, ಕೋಣೂರೇಗೌಡ, ಎಂ.ಜಡೇಸ್ವಾಮಿ, ಮಹದೇವ, ವಿಠಲ. ದೊಡ್ಡಯ್ಯ, ರಂಗೂಗೌಡ, ಸೋಮಶೇಖರ್‌, ವಿಜಯಕುಮಾರ್‌, ಕುನ್ನಮರಿಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next