Advertisement

ದ್ರಾವಿಡ ಸನ್‌ರೈಸ್‌ : ಹತ್ತು ವರ್ಷಗಳ ಬಳಿಕ ಗೆದ್ದ ಡಿಎಂಕೆ

12:18 AM May 03, 2021 | Team Udayavani |

ಚೆನ್ನೈ: ಬರೋಬ್ಬರಿ ಹತ್ತು ವರ್ಷಗಳ ಕಾಲ ತಮಿಳುನಾಡಿನ ವಿಪಕ್ಷ ಸ್ಥಾನದಲ್ಲಿದ್ದ ಡಿಎಂಕೆ ಮೈತ್ರಿಕೂಟ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಜಯ ಸಾಧಿಸಿದೆ. ಒಟ್ಟು 234 ಸ್ಥಾನಗಳ ಪೈಕಿ ಡಿಎಂಕೆ ಮೈತ್ರಿಕೂಟ ಒಟ್ಟು 155 ಸ್ಥಾನಗಳಲ್ಲಿ ಜಯ ಸಾಧಿಸಿದೆ.

Advertisement

ಡಿಎಂಕೆಯೊಂದೇ 131 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಡಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಕೂಡ 15 ಕ್ಷೇತ್ರಗಳಲ್ಲಿ  ಗೆದ್ದಿದೆ.  ಮೈತ್ರಿಕೂಟದ ಜತೆ ಇರುವ ಸಿಪಿಎಂ, ಸಿಪಿಐ  ತಲಾ 2 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಜಯದಿಂದಾಗಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಮೊದಲ ಬಾರಿಗೆ ಮುಖ್ಯಮಂತ್ರಿ ಯಾಗಲಿದ್ದಾರೆ. ಆಡಳಿತಾ ರೂಢ‌ ಎಐಎಡಿಎಂಕೆ ಮೈತ್ರಿಕೂಟ ಒಟ್ಟು 74 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಅಧಿಕಾರ ಕಳೆದು ಕೊಂಡಿದೆ. ಬಿಜೆಪಿ ನಾಲ್ಕು ಕ್ಷೇತ್ರ ಗಳಲ್ಲಿ ಗೆದ್ದಿದೆ.

ಮೈತ್ರಿಕೂಟಕ್ಕೆ ಭಾರೀ ಬಹುಮತ ನೀಡಿದ ತಮಿಳುನಾಡು ಜನರಿಗೆ ಸ್ಟಾಲಿನ್‌ ಕೃತಜ್ಞತೆ ವ್ಯಕ್ತಪಡಿಸಿ ದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ವಾಗ್ಧಾನವನ್ನು ಅವರು ಮಾಡಿದ್ದಾರೆ. ರಾಜ್ಯದ ಹಿತಾಸಕ್ತಿ ಡಿಎಂಕೆಯಿಂದ ಮಾತ್ರ ಕಾಪಾಡಲು ಸಾಧ್ಯವೆಂದು ಜನರು ನಂಬಿರುವುದು ಇದ ರಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ. ಆಡಳಿತಾರೂಡ ಎಐಎಡಿಎಂಕೆಗೆ 2016ರ ಚುನಾವಣೆಗೆ ಹೋಲಿಕೆ ಮಾಡಿದರೆ 67 ಸ್ಥಾನಗಳ ನಷ್ಟ ಉಂಟಾಗಿದೆ. ಡಿಎಂಕೆ ಮೈತ್ರಿ ಕೂಟಕ್ಕೆ 57 ಸ್ಥಾನಗಳಲ್ಲಿ ಗೆಲುವು ಬಂದಿದೆ.

ಪ್ರಮುಖರ ಜಯ: ಬೋದಿನಾಯಕನೂರ್‌ ಕ್ಷೇತ್ರದಿಂದ ಡಿಎಂಸಿ ಒ.ಪನ್ನೀರ್‌ಸೆಲ್ವಂ ಡಿಎಂಕೆ ಅಭ್ಯರ್ಥಿ ತಂಗ ತಮಿಳ್‌ಸೆಲ್ವನ್‌ ವಿರುದ್ಧ ಜಯಸಾಧಿಸಿದ್ದಾರೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಎಡಪ್ಪಾಡಿ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಜಯಗಳಿಸಿದ್ದಾರೆ. ಅವರು ಡಿಎಂಕೆಯ ಟಿ.ಸಂಪತ್‌ ಕುಮಾರ್‌ ವಿರುದ್ಧ ಗೆಲುವು ಪಡೆದಿದ್ದಾರೆ.

ಗೆದ್ದ ಸ್ಟಾಲಿನ್‌ :

Advertisement

ಕೊಳತ್ತೂರ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಸತತ ಮೂರನೇ ಬಾರಿಗೆ ಗೆದ್ದಿ ದ್ದಾರೆ. ಎಐಎಡಿಎಂಕೆಯ ಅಧಿ ರಾಜಾರಾಮ್‌ ವಿರುದ್ಧ ಜಯ ಸಾಧಿಸಿದ್ದಾರೆ. 2011ರಲ್ಲಿ ಕೊಳತ್ತೂರ್‌ ಕ್ಷೇತ್ರ ಸೃಷ್ಟಿಸಿದ ಬಳಿಕ ಸ್ಟಾಲಿನ್‌ ಗೆಲ್ಲುತ್ತಾ ಬಂದಿದ್ದಾರೆ. ಇದಕ್ಕಿಂತ ಮೊದಲು 1984ರಿಂದ ಥೌಸೆಂಡ್‌ ಲೈಟ್ಸ್‌ ಕ್ಷೇತ್ರದಿಂದ 2006ರ ವರೆಗೆ 6 ಬಾರಿ ಸ್ಪರ್ಧಿಸಿ, 4 ಬಾರಿ ಗೆದ್ದಿದ್ದರು. ಈ ಜಯದಿಂದ ಒಟ್ಟು 7 ಬಾರಿ ಚುನಾ ವಣೆಯಲ್ಲಿ ಜಯ ಸಾಧಿಸಿದಂತಾಗಿದೆ.

ಸದ್ದು ಮಾಡದ ದಿನಕರನ್‌ :

ಟಿ.ಟಿ.ವಿ.ದಿನಕರನ್‌ ಕೋವಿಲ್‌ಪಟ್ಟಿ ಕ್ಷೇತ್ರದಿಂದ ಸೋಲು ಅನುಭವಿಸಿದ್ದಾರೆ. ಎಐಎಡಿಎಂಕೆಯ ಕಡಂಬೂರ್‌ ರಾಜು ವಿರುದ್ಧ ಅವರನ್ನು ಸೋಲಿಸಿದ್ದಾರೆ. ಜತೆಗೆ ಅವರ ಎಎಂಎಂಕೆ ಪಕ್ಷದ ಅಭ್ಯರ್ಥಿಗಳೂ ಇತರ ಕ್ಷೇತ್ರಗಳಲ್ಲಿ ಸೋತಿದ್ದಾರೆ.

ಬಿಜೆಪಿಗೆ ನಾಲ್ಕುಸ್ಥಾನ :

ಬಿಜೆಪಿ 4 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಮೊಡಕ್ಕುರುಚ್ಚಿಯಿಂದ ಬಿಜೆಪಿ ಅಭ್ಯರ್ಥಿ ಸರಸ್ವತಿ.ಸಿ, ಡಿಎಂಕೆಯ ಸುಬ್ಬಲಕ್ಷ್ಮೀ ಜಗದೀಶನ್‌ ವಿರುದ್ಧ ಜಯಸಾಧಿಸಿದ್ದಾರೆ. ನಾಗರಕೋಯಿಲ್‌ನಿಂದ ಎಂ.ಆರ್‌.ಗಾಂಧಿ ಡಿಎಂಕೆಯ ಸುರೇಶ್‌ ರಾಜನ್‌,   ತಿರುನಲ್ವೇಲಿಯಲ್ಲಿ ನಾಯನಾರ್‌ ನಾಗೇಂದ್ರನ್‌ ಡಿಎಂಕೆ ಅಭ್ಯರ್ಥಿ ಎ.ಎಲ್‌.ಎಸ್‌.ಲಕ್ಷ್ಮಣನ್‌ ವಿರುದ್ಧ ಗೆದ್ದಿದ್ದಾರೆ. ಅರವಿಕುರಚ್ಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ  ಡಿಎಂಕೆ ಅಭ್ಯರ್ಥಿ ಇಳಂಗೋ ಆರ್‌ ವಿರುದ್ಧ ಸೋಲನುಭವಿಸಿದ್ದಾರೆ.  ಥೌಸೆಂಡ್‌ ಲೈಟ್ಸ್‌ ಕ್ಷೇತ್ರದಲ್ಲಿ ಬಿಜೆಪಿಯ ಖುಷೂº ಸುಂದರ್‌ ಡಿಎಂಕೆಯ ಎನ್‌.ಎಝಿಲನ್‌ ವಿರುದ್ಧ  ಪರಾಜಯ ಹೊಂದಿದ್ದಾರೆ.

ಕಮಾಲ್‌  ಮಾಡದ ಕಮಲ್‌ :

ಮಕ್ಕಳ್‌ ನೀತಿ ಮಯ್ಯಂ ಪಕ್ಷ ಸ್ಥಾಪಿಸಿದ ಬಹುಭಾಷಾ ನಟ ಕಮಲ್‌ಹಾಸನ್‌  ಸೋತಿದ್ದಾರೆ. ಕೊಯಮ ತ್ತೂರು ದಕ್ಷಿಣ ಕ್ಷೇತ್ರದಿಂದ  ಅವರು ಬಿಜೆಪಿಯ ವನತಿ ಶ್ರೀನಿವಾಸ್‌ ವಿರುದ್ಧ 890 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಗಮನಾರ್ಹ ಅಂಶವೆಂದರೆ ಬಿಜೆಪಿ ಅಭ್ಯರ್ಥಿ 3ನೇ ಸ್ಥಾನದಲ್ಲಿ ಇದ್ದರು.

ಡಿಎಂಕೆಯಿಂದ ಗೆದ್ದ ಎಐಎಡಿಎಂಕೆ ಮುಖಂಡ :

ಎಐಎಡಿಎಂಕೆಯ ಮುಖಂಡರಾಗಿದ್ದುಕೊಂಡು ಅನಂತರ ಡಿಎಂಕೆ ಸೇರಿದ್ದ ಮಾಜಿ ಸಚಿವ ಎಸ್‌.ಮುತ್ತುಸ್ವಾಮಿ (72) ಅವರು ಗೆದ್ದಿದ್ದಾರೆ. ಅವರು ಡಿಎಂಕೆಯ ಕೆ.ವಿ.ರಾಮಲಿಂಗಂ ವಿರುದ್ಧ 22,089 ಮತಗಳ ಅಂತರದಿಂದ ಗೆದ್ದಿದ್ದಾರೆ. 2010ರಲ್ಲಿ ಅವರು ಡಿಎಂಕೆ ಸೇರ್ಪಡೆಯಾಗಿದ್ದರು. ಜಯಲಲಿತಾ ಮತ್ತು ಎಂ.ಜಿ.ರಾಮಚಂದ್ರನ್‌ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದರು.

ಕರುಣಾ, ಜಯ  ಇಲ್ಲದ ಚುನಾವಣೆ :

ಡ್ರಾವಿಡ ರಾಜ್ಯದ ರಾಜಕೀಯ ಕ್ಷೇತ್ರದ ಮೇರು ಪರ್ವತಗಳಂತೆ ಇದ್ದ ಕರುಣಾನಿಧಿ ಮತ್ತು ಜಯಲಲಿತಾ ನಿಧನಾ ಅನಂತರ ತಮಿಳುನಾಡು ಕಂಡ ಮೊದಲ ಚುನಾವಣೆ ಇದು. ಅಪ್ಪನ ಗರಡಿಯ ಲ್ಲಿಯೇ ಬೆಳೆದ ಎಂ.ಕೆ.ಸ್ಟಾಲಿನ್‌ ಮೈತ್ರಿ ರಾಜಕೀ ಯದ ಮೊದಲ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ವರ್ಚಸ್ವಿ ನಾಯಕರು ಇಲ್ಲದ್ದರಿಂದ ಆಡಳಿತ ಪಕ್ಷಕ್ಕೆ ಸೋಲಾಗಿದೆ.

ಕ್ಲೀನ್‌ ಸ್ವೀಪ್‌ ಅಲ್ಲ  :

ಡಿಎಂಕೆ ಮೈತ್ರಿಕೂಟ ಜಯ ಸಾಧಿಸಿದೆ ಎನ್ನುವುದು ನಿಜವೇ. ಆದರೆ 10 ವರ್ಷ ಆಡಳಿತ ನಡೆಸಿದ ಎಐಎಡಿಎಂಕೆ ವಿರುದ್ಧ ಕ್ಲೀನ್‌ ಸ್ವೀಪ್‌ ಮಾಡಲಿದೆ ಎಂಬ ಭವಿಷ್ಯ ಸುಳ್ಳಾಗಿದೆ.. ಡಿಎಂಕೆಗೆ ಶೇ.37.2, ಎಐಎಡಿಎಂಕೆಗೆ ಶೇ.33.6, ಕಾಂಗ್ರೆಸ್‌ಗೆ ಶೇ.4.6, ಬಿಜೆಪಿಗೆ ಶೇ.2.79 ಮತಗಳು ಪ್ರಾಪ್ತವಾಗಿವೆ.

ಗೆದ್ದಿದ್ದು ಹೇಗೆ? :

  • ಆಡಳಿತ ವಿರೋಧಿ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಡಿಎಂಕೆ ಮೈತ್ರಿಕೂಟ ಯಶಸ್ವಿ.
  • ವರ್ಷದ ಅವಧಿಯಿಂದಲೇ ಚುನಾವಣೆಗಾಗಿ ಮುತುವರ್ಜಿಯಿಂದ ಸಿದ್ಧತೆ
  • ಕಾಂಗ್ರೆಸ್‌ ಸೇರಿದಂತೆ ಮಿತ್ರ ಪಕ್ಷಗಳಿಗೆ ಸ್ಥಾನ ಹಂಚಿಕೆಯಲ್ಲಿ ಭಿನ್ನಧ್ವನಿ ಏಳದಂತೆ ಜಾಗರೂಕತೆ.
  • ವಿಪಕ್ಷಗಳ ನಾಯಕರ ವಿರುದ್ಧ ತೀರಾ ಕೆಳಮಟ್ಟದ ಟೀಕೆ, ವೈಯಕ್ತಿಕ ದಾಳಿಯಿಂದ ದೂರ ಉಳಿದದ್ದು.
  • ಕರುಣಾನಿಧಿ ಅನುಪಸ್ಥಿತಿಯಲ್ಲಿ ಉತ್ತಮವಾಗಿ ಪ್ರಚಾರ ನೇತೃತ್ವ ವಹಿಸಿದ ಸ್ಟಾಲಿನ್‌

ಸೋತಿದ್ದು ಹೇಗೆ? :

  • ಪಕ್ಷದ ನಾಯಕಿ ಜಯಲಲಿತಾ ಅನುಪಸ್ಥಿತಿ ಪ್ರಧಾನ ಕಾರಣ. ಅವರ ಸ್ಥಾನ ತುಂಬಲು ಪಕ್ಷಕ್ಕೆ ಇತ್ತು ಕೊರತೆ
  • ಪಳನಿಸ್ವಾಮಿ, ಪನ್ನೀರ್‌ಸೆಲ್ವಂ ಸರಕಾರದ ಮುಖ್ಯಸ್ಥರಾಗಿದ್ದರೂ ವರ್ಚಸ್ವೀ ನಾಯಕರಲ್ಲ ಎಂಬ ಜನರ ಅಭಿಪ್ರಾಯ
  • ರಾಜ್ಯ ಸರಕಾರದ ಸಚಿವರ ವಿರುದ್ಧ ಅಪರಿಮಿತ ಭ್ರಷ್ಟಾಚಾರದ ಆರೋಪಗಳು.
  • 10 ವರ್ಷ ಕಾಲ ಆಡಳಿತದಲ್ಲಿ ಇದ್ದ ಕಾರಣದಿಂದ ಸಹಜವಾಗಿಯೇ ಆಡಳಿತ ವಿರೋಧಿ ಅಲೆ.
  • ಆಡಳಿತ ಪಕ್ಷದ ಶಾಸಕರಲ್ಲಿ ಯಾರನ್ನು ಅನುಸರಿಸಬೇಕು ಎಂಬ ಬಗ್ಗೆ ಗೊಂದಲ.
Advertisement

Udayavani is now on Telegram. Click here to join our channel and stay updated with the latest news.

Next