Advertisement

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸಿದ್ಧವಾಗಿದ್ದ ಡಿಕೆಶಿ ಭಾಷಣ ಬಹಿರಂಗ !?

05:07 PM Aug 01, 2022 | Team Udayavani |

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಮಾಡಬೇಕಾಗಿದ್ದ ಭಾಷಣ ಬಹಿರಂಗವಾಗಿದೆ ಎಂದು ವಾಟ್ಸಾಪ್ ಫೋಟೋಗಳು ಹರಿದಾಡುತ್ತಿವೆ.

Advertisement

ಡಿ.ಕೆ ಶಿವಕುಮಾರ್ ಅವರು ಮಾಡಬೇಕಿದ್ದ ಭಾಷಣ ಬಯಲಾಗುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಮಾಧ್ಯಮ ವಿಭಾಗ ಎಚ್ಚೆತ್ತುಕೊಂಡಿದ್ದು, ವಾಟ್ಸಾಪ್ ಗ್ರೂಪ್ ನಲ್ಲಿ ಭಾಷಣ ಹಾಕಿರುವುದು ಅರಿವಿಗೆ ಬರುತ್ತಿದ್ದಂತೆ ಡಿಲೀಟ್ ಮಾಡಿದೆ.

ಭಾಷಣದಲ್ಲಿ ಪ್ರಸ್ತಾಪ ಆಗಿರುವ ಪ್ರಮುಖ ಅಂಶಗಳು ಹೀಗಿವೆ

ಜೀವನ ಸಂಧ್ಯಾ ಕಾಲದಲ್ಲಿ ನಿಂತು ಹಿಂದಿನ ಅನುಭವ, ಸಾಧನೆಗಳನ್ನು ಮೆಲುಕು ಹಾಕುವ ಕ್ಷಣ, ಇದುವರೆಗೂ ಸಿದ್ದರಾಮಯ್ಯ ಅವರು ಜನ್ಮ ದಿನ ಆಚರಣೆ ಮಾಡಿಕೊಂಡಿರಲಿಲ್ಲ. ಆದರೆ 75 ವಸಂತಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಆಚರಿಕೊಳ್ಳಲೇಬೇಕಾದ ವಿಶೇಷ ಸಂದರ್ಭ. ಈ ಸಮಯದಲ್ಲಿ ನಾವು ತ್ಯಾಗಕ್ಕೆ ಸಿದ್ಧವಾಗಿ ಪಕ್ಷ ಸಂಘಟಿಸಬೇಕು. ಅಂದರೆ, ಸಾಮಾನ್ಯವಾಗಿ ಎರಡು ರೀತಿ ಜನ ಇರುತ್ತಾರೆ, ಒಂದು ಕೆಲಸ ಮಾಡುವವರು, ಮತ್ತೊಂದು ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವವರು. ನೀವು ಮೊದಲ ಗುಂಪಿಗೆ ಸೇರಿ. ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಏನು ಕೆಲಸ ಮಾಡಬೇಕೋ ಅದನ್ನು ಮಾಡೋಣ. ನಾವು ಯಾವ ಸ್ಥಾನಮಾನಕ್ಕೆ ಅರ್ಹರೋ ಅದನ್ನು ಪಕ್ಷ ನೀಡುತ್ತದೆ.

ರಾಜೀವ್ ಗಾಂಧಿ ಅವರು ಕೂಡ ನಾಯಕರನ್ನು ಬೆಳೆಸುವ ವಿಚಾರವಾಗಿ ಹೇಳಿರುವ ಮಾತನ್ನು ನೆನಪಿಸಿಕೊಳ್ಳಬೇಕು.Good Leader One Who Creates Leaders Not a Followers ಉತ್ತಮ ನಾಯಕನಾದವನು ಹೆಚ್ಚು ನಾಯಕರನ್ನು ಸೃಷ್ಟಿ ಮಾಡುತ್ತಾನೆ ಹೊರತು, ಹಿಂಬಾಲಕರನ್ನಲ್ಲ.

Advertisement

ಈ ನಮ್ಮ ಹಿರಿಯರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು.ಸಿದ್ದರಾಮಯ್ಯ ಅವರ ಹೋರಾಟದ ಹಾದಿ ಹಾಗೂ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕುವ ವೇದಿಕೆ ಇದಾಗಿದೆ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಶಕ್ತಿ. ಅಧಿಕಾರದ ಲಕ್ಷ್ಮಿ ಕಾಂಗ್ರೆಸ್ ಮನೆ ಬಾಗಿಲಿಗೆ ಬಂದು ನಿಂತಿದ್ದಾಳೆ. ಆಕೆಯನ್ನು ಒಳಗೆ ಬರ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರೋಣ. ಹಿಂದೆ ನನ್ನನ್ನು ಮಂತ್ರಿ ಮಾಡಿದ್ದು ಕಾಂಗ್ರೆಸ್, ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್, ಈಗ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿರುವುದು ಕಾಂಗ್ರೆಸ್, ಬಿ.ಕೆ ಹರಿಪ್ರಸಾದ್ ಅವರನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿರುವುದು ಕಾಂಗ್ರೆಸ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿರುವುದು ಕಾಂಗ್ರೆಸ್, ಎಂ ಬಿ ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಕಾಂಗ್ರೆಸ್, ಹೀಗೆ ಎಲ್ಲರನ್ನು ಬೆಳೆಸಿದ್ದು ಕಾಂಗ್ರೆಸ್.

ನಮ್ಮನ್ನು ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ನಾವೆಲ್ಲರೂ ಋಣ ತೀರಿಸಬೇಕಿದೆ. ಎಲ್ಲಾ ನಾಯಕರು ತಮ್ಮ, ತಮ್ಮ ಸಮುದಾಯಗಳನ್ನು ಸಂಘಟಿಸಿ ಪಕ್ಷಕ್ಕೆ ನೆರವಾಗಬೇಕು. ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಎಲ್ಲ ಧರ್ಮ, ಜಾತಿ, ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದಕ್ಕೆ ನಾನು ಹೇಳುವುದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಧರ್ಮದವರು, ಎಲ್ಲ ಜಾತಿಯವರು, ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ.

Advertisement

Udayavani is now on Telegram. Click here to join our channel and stay updated with the latest news.

Next