Advertisement

ಅಂಗವಿಕಲರಿಗೆ ಅವಕಾಶ ಅಗತ್ಯ: ಡಾ|ಆಳ್ವ

10:21 AM May 28, 2018 | Team Udayavani |

ಮಹಾನಗರ: ಅಂಗವಿಕಲರ ಬಗ್ಗೆ ಅನುಕಂಪ ಬೇಡ. ಅವರಿಗೆ ಪ್ರೋತ್ಸಾಹ, ಅವಕಾಶಗಳನ್ನು ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕಾರ್ಯ ಸಮಾಜ, ಸರಕಾರದಿಂದ ಆಗಬೇಕು ಎಂದು ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್‌ ಆಳ್ವ ಹೇಳಿದರು.

Advertisement

ನಗರದ ಪುರಭವನದಲ್ಲಿ ರವಿವಾರ ಜರಗಿದ ದ.ಕ. ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘದ 26ನೇ ವರ್ಷದ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸರಕಾರದಿಂದ ಅಂಗವಿಕಲರಿಗೆ ಇರುವ ಸವಲತ್ತುಗಳು ಸಮರ್ಪಕವಾಗಿ ವಿತರಣೆಯಾಗುವುದು ಅವಶ್ಯ. ಪ್ರಸ್ತುತ ನೀಡುವ ಮಾಸಾಶನವನ್ನು ದುಪ್ಪಟ್ಟುಗೊಳಿಸಬೇಕು ಎಂದು ತಿಳಿಸಿದರು.

ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಕೆ.ಸಿ. ನಾೖಕ್‌ ಉದ್ಘಾಟಿಸಿ, 26 ವರ್ಷಗಳಿಂದ ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದ ಎಲ್ಲ ಪದಾಧಿಕಾರಿಗಳನ್ನು, ಸದಸ್ಯರನ್ನು ಅಭಿನಂದಿಸುತ್ತಿದ್ದೇನೆ ಎಂದರು. ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಅಂಗವಿಕಲರ ಸಂಘವು ಅಂಗವಿಕಲರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಸ್ವಾಭಿಮಾನಿ ಬದುಕು ರೂಪಿಸಿಕೊಳ್ಳಲು ಶ್ರಮಿಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇವಾಭಾರತಿ ಮ್ಯಾನೇಜಿಂಗ್‌ ಟ್ರಸ್ಟಿ ವಿನೋದ್‌ ಶೆಣೈ, ಸಹಕಾರಿ ಯೂನಿಯನ್‌ ಅಧ್ಯಕ್ಷ ಹರೀಶ್‌ ಆಚಾರ್‌, ಉದ್ಯಮಿ ಶ್ರೀಕರ ಪ್ರಭು, ಸಕ್ಷಮದ ಜಯರಾಂ ಬೊಳ್ಳಾಜೆ, ಅನಂತಾಡಿ ಗ್ರಾ.ಪಂ. ಅಧ್ಯಕ್ಷ ಸನತ್‌ ಕುಮಾರ್‌ ರೈ ಅವರು ಅತಿಥಿಗಳಾಗಿದ್ದರು. ಸಂಘದ ಅಧ್ಯಕ್ಷ ಮುರಳೀಧರ ನಾೖಕ್‌ ಸ್ವಾಗತಿಸಿ, ಪ್ರಸ್ತಾವನೆಗೈದರು.

ಸಮ್ಮಾನ
ಬಹುತೇಕ ಅಂಧತ್ವವಿದ್ದರೂ ಅದನ್ನು ಮೀರಿ ನಿಂತು ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾದ ಕಾಟಿಪಳ್ಳದ ತ್ರಿವಳಿ ಸಾಧಕರಾದ ಜೀವನ್‌, ಜಯೇಶ್‌ ಹಾಗೂ ಜಿತೇಶ್‌ ಅವರನ್ನು ಸಮ್ಮಾನಿಸಲಾಯಿತು. 40 ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ಹಾಗೂ 20 ಮಂದಿಗೆ ವೈದ್ಯಕೀಯ ನೆರವು ನೀಡಲಾಯಿತು.

Advertisement

ರ‍್ಯಾಂಪ್ ಇಲ್ಲ
ನಗರದ ಪುರಭವನದಲ್ಲಿ ಅಂಗವಿಕಲರಿಗೆ ವೇದಿಕೆಗೆ ಹೋಗಲು  ರ‍್ಯಾಂಪ್  ಇಲ್ಲದಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪಗಳು ಕೇಳಿಬಂತು. ಪುರಭವನದಲ್ಲಿ  ರ‍್ಯಾಂಪ್ ನಿರ್ಮಿಸದಿರುವುದರಿಂದ ಅಂಗವಿಕಲರು ವೇದಿಕೆಗೆ ಹೋಗಲು ಪ್ರಯಾಸ
ಪಡಬೇಕಾಗಿದೆ ಎಂದು ಅತಿಥಿಯಾಗಿದ್ದ ಹರೀಶ್‌ ಆಚಾರ್‌ ತಿಳಿಸಿದರು.

ರ‍್ಯಾಂಪ್  ವ್ಯವಸ್ಥೆ ಮಾಡದಿರುವ ಬಗ್ಗೆ ಸಂಘದ ಅಧ್ಯಕ್ಷ ಮುರಲೀಧರ ನಾೖಕ್‌ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯದರ್ಶಿ ಟಿ. ಕೊರಗಪ್ಪ ಗೌಡ, ಕೋಶಾಧ್ಯಕ್ಷ ಪ್ರೊ| ಎಂ. ವಿಶ್ವನಾಥ್‌, ಸಂಚಾಲಕ ಹರೀಶ್‌ ಶೆಟ್ಟಿ, ಸಹಸಂಚಾಲಕ ಪ್ರವೀಣ್‌ ನಾಯಕ್‌, ನಾಗೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಮಾಸಾಶನ ಹೆಚಿಸಲು ಆಗ್ರಹ
ಬೇಡಿಕೆಯನ್ನು ಮಂಡಿಸಿದ ಸಂಘದ ಅಧ್ಯಕ್ಷ ಮುರಲೀಧರ ನಾೖಕ್‌, ಅಂಗವಿಕಲರಿಗೆ ಪ್ರಸ್ತುತ ನೀಡುವ 500 ರೂ. ಮಾಸಾಶನವನ್ನು 2,500 ರೂ. ಗೆ ಏರಿಸಬೇಕು, ಮಾಸಾಶನ ಪಡೆಯಲು ಇರುವ ಆದಾಯ ಮಿತಿ ರದ್ದುಪಡಿಸಬೇಕು, ಸೌಲಭ್ಯ ನೀಡುವಾಗ ತಾರತಮ್ಯ ಮಾಡಬಾರದು ಮತ್ತು ಶೇ.40 ಕ್ಕಿಂತ ಹೆಚ್ಚಿಗೆ ಅಂಗವಿಕಲತೆ ಇರುವ ಎಲ್ಲರಿಗೂ ಸಮಾನ ಸೌಲಭ್ಯ ನೀಡಬೇಕು, ಅಂಗವಿಕಲರಿಗೆ ತಾಲೂಕಿಗೊಂದರಂತೆ ಹಾಸ್ಟೆಲ್‌, ಗೃಹಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಮರು ಪ್ರಾರಂಭಿಸಬೇಕು ಸಹಿತ 12 ಬೇಡಿಕೆಗಳನ್ನು ಈಡೇರಿಸ ಬೇಕೆಂದು ದ.ಕ.,ಉಡುಪಿ ಜಿಲ್ಲಾ ಅಂಗವಿಕಲರ ಸಂಘದ ವತಿಯಿಂದ ಸರಕಾರವನ್ನು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next