ಪಣಂಬೂರು: ಬಜಪೆ ಕೆಂಜಾರು ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಸ್ಮರಣಾರ್ಥ ಕೂಳೂರು – ತಣ್ಣೀರುಬಾವಿ ರಸ್ತೆ ಪಕ್ಕ ನಿರ್ಮಿಸಿರುವ ಉದ್ಯಾನವನದಲ್ಲಿ ಮಂಗಳವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಸ್ಮಾರಕಕ್ಕೆ ಹೂಗುತ್ಛ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ 2010ರಲ್ಲಿ ನಡೆದ ದುರ್ಘಟನೆಯ ಮಾಹಿತಿ ನೀಡಿದರು.
ಮಂಗಳೂರು ಸಹಾಯಕ ಆಯುಕ್ತ ಮಹೇಶ್ ಕರ್ಜಗಿ, ಗೃಹರಕ್ಷಕ ದಳದ ಅಧೀಕ್ಷಕ ಮುರಳಿಮೋಹನ ಚೂಂತಾರು, ಡಿಸಿಪಿ ಉಮಾಪ್ರಶಾಂತ್, ಪಾಲಿಕೆ ಆಯುಕ್ತ ಮಹಮ್ಮದ್ ನಜೀರ್, ಎನ್ಎಂಪಿಟಿ ಅಧ್ಯಕ್ಷ ಸುರೇಶ್ ಪಿ. ಶಿರ್ವಾಡ್ಕರ್, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಭಾರ ನಿರ್ದೇಶಕ ಅಬ್ರಹಾಂ ಕೊಶಿ, ಏರ್ ಇಂಡಿಯಾ ಭದ್ರತಾ ವಿಭಾಗದ ಅಧಿಕಾರಿ ಮೀರಾ ಕುಸೂರ್, ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಪರಿಹಾರ ಹೋರಾಟ ಸಮಿತಿ ಅಧ್ಯಕ್ಷ ಮಹಮ್ಮದ್ ಬ್ಯಾರಿ ಎಡಪದವು ಉಪಸ್ಥಿತರಿದ್ದರು.
ದುರಂತಕ್ಕೆ ಎಂಟು ವರ್ಷ
2010 ಮೇ 22ರ ಮುಂಜಾನೆ ಮಂಗಳೂರು ನಿಲ್ದಾಣದಲ್ಲಿ ಇಳಿಯಲು ಸಜ್ಜಾಗಿದ್ದ ವಿಮಾನ ಪೈಲಟ್ಗಳ ತಪ್ಪು ನಡೆಯಿಂದ ರನ್ ವೇಯಿಂದ ಜಾರಿ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಮಾತ್ರ ಬದುಕುಳಿದಿದ್ದರು. ವಿಮಾನದಲ್ಲಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು.