ಕಲಬುರಗಿ: ಬ್ಯಾಂಕ್ಗಳ ಮೂಲಕ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರ್ಕಾರದ ಯೋಜನೆಗಳನ್ನು ಶೇ.100 ಗುರಿ ಸಾಧಿಸಲು ಶ್ರಮಿಸಬೇಕೆಂದು ಸಂಸದ ಡಾ| ಉಮೇಶ ಜಾಧವ್ ಬ್ಯಾಂಕರ್ಗಳಿಗೆ ಸೂಚಿಸಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಬ್ಯಾಂಕರ್ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸೂಕ್ಷ್ಮ, ಸಣ್ಣ ಹಾಗೂ ಮಾಧ್ಯಮ ಕೈಗಾರಿಕೆಗಳ ಸಂಬಂಧಿಸಿದ ಸಾಲ ಸೇರಿದಂತೆ ಇನ್ನಿತರ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನಿಗದಿತ ಗುರಿ ಮುಟ್ಟಬೇಕೆಂದು ಎಂದು ಹೇಳಿದರು.
ಬ್ಯಾಂಕ್ಗೆ ಬರುವ ಗ್ರಾಹಕರೊಂದಿಗೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಹಾಗೆಯೇ ಸಾಲ ಮತ್ತಿತರ ಅರ್ಜಿ ಸಲ್ಲಿಸಿದವರನ್ನು ವಿನಾಕಾರಣ ಅಲೆದಾಡಿಸಬಾರದು. ಅರ್ಜಿದಾರರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನದೊಳಗಾಗಿ ಸಾಲ ನೀಡಬೇಕು. ಮುದ್ರಾ ಯೋಜನೆ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ ಗರಿಷ್ಠ ಮಟ್ಟದಲ್ಲಿ ಸಾಲ ವಿತರಿಸಬೇಕೆಂದು ತಿಳಿಸಿದರು. ಬ್ಯಾಂಕ್ಗಳು ಶೈಕ್ಷಣಿಕ ಸಾಲಕ್ಕೆ ಮೊದಲು ಆದ್ಯತೆ ನೀಡುವುದರ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಬ್ಯಾಂಕ್ನ ಯಾವುದಾದರೂ ಸ್ಕೀಂಗಳ ಮೂಲಕ ಪುನಃ ಸುಸ್ತಿದಾರರ ನೆರವಿಗೆ ಬರಬೇಕೆಂದು ಅವರು ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಸಂಬಂಧ ಯಾವುದೇ ಬ್ಯಾಂಕಿಗಾಗಲಿ ಅಥವಾ ಯಾವುದೇ ಇಲಾಖೆಗಾಗಲಿ ಸಮಸ್ಯೆ ಇದ್ದರೆ ತಿಳಿಸಿದಲ್ಲಿ ಪರಿಹರಿಸಲು ಪ್ರಯತ್ನಿಸುವುದಾಗಿ ಎಂದು ಸಂಸದರು ವಾಗ್ಧಾನ ಮಾಡಿದರು. ಜಿಪಂ ಸಿಇಒ ಡಾ| ರಾಜಾ ಪಿ. ಮಾತನಾಡಿ, ಸರ್ಕಾರದ ಯೋಜನೆಗಳ ಸಂಬಂಧ ಬರುವ ಅರ್ಜಿಗಳ ಇತ್ಯರ್ಥ ಕಾರಣ ಇಲ್ಲದೆ ವಿಳಂಬ ಮಾಡಬಾರದು. ಒಂದು ವೇಳೆ ಅರ್ಜಿ ವಿಲೇವಾರಿ ತಡವಾದಲ್ಲಿ ಸೂಕ್ತ ಕಾರಣ ನೀಡಬೇಕೆಂದು ತಾಕೀತು ಮಾಡಿದರು. ಜಿಲ್ಲಾ ಲೀಡ್ ಬ್ಯಾಂಕ್ನ ಮ್ಯಾನೇಜರ್ ಇಂತಿಸಾರ್ ಹುಸೇನ್, ನಬಾರ್ಡ್ ಬ್ಯಾಂಕ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ ಭಟ್ ಇದ್ದರು.