Advertisement

ಸಿದ್ಧವಾಗಿದೆ ಸುಸಜ್ಜಿತ ‘ಜಿಲ್ಲಾ ಮಟ್ಟದ ಅಂಬೇಡ್ಕರ್‌ ಭವನ’

12:25 AM Jul 21, 2019 | Sriram |

ವಿಶೇಷ ವರದಿ-ಮಹಾನಗರ: ಕರಾವಳಿಯ ಬಹು ದಿನಗಳ ಕನಸು ಹಾಗೂ ಬೇಡಿಕೆಯಾಗಿದ್ದ ‘ಜಿಲ್ಲಾ ಮಟ್ಟದ ಅಂಬೇಡ್ಕರ್‌ ಭವನ’ ಆಕರ್ಷಕ ರೀತಿಯಲ್ಲಿ ಸಿದ್ಧಗೊಂಡಿದ್ದು, ವಿವಿಧ ಕಾರ್ಯ-ಕಲಾಪಗಳಿಗೆ ಈ ಭವನ ವೇದಿಕೆ ಒದಗಿಸಲಿದೆ.

Advertisement

ಉರ್ವಸ್ಟೋರ್‌ನ ಅಂಗಡಿಗುಡ್ಡೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಆಕರ್ಷಕ ಅಂಬೇಡ್ಕರ್‌ ಭವನ ಸಿದ್ಧವಾಗಿದ್ದು, ಕೊನೆಯ ಹಂತದ ಕಾಮಗಾರಿ ಸದ್ಯ ನಡೆಯುತ್ತಿದೆ.

17.85 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್‌ ಭವನದ ಕಾಮಗಾರಿಯ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು 14 ಕೋ.ರೂ. ಸರಕಾರದಿಂದ ಮಂಜೂರಾಗಿದೆ. ಸದ್ಯ, ಭವನದ ಸಭಾಂಗಣದ ಲೈಟಿಂಗ್‌, ಸೌಂಡ್‌ ಸಿಸ್ಟಮ್‌, ಸಿ.ಸಿ. ಕೆಮರಾ ಅಳವಡಿಕೆ ಸಹಿತ ಕಾಮಗಾರಿ ಪೂರ್ಣವಾಗಲು ಇನ್ನೂ ಸುಮಾರು 3.50 ಕೋಟಿ ರೂ. ಅನುದಾನದ ಅಗತ್ಯವಿದೆ.

ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಸವಿನೆನಪಿಗಾಗಿ ನಗರದ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಅಂಬೇಡ್ಕರ್‌ ಭವನಕ್ಕೆ ವಿವಿಧ ದಲಿತ ಸಂಘಟನೆಗಳು ಒತ್ತಾಯಿಸುತ್ತಾ ಬಂದಿದ್ದವು. ಪರಿಣಾಮವಾಗಿ ಹಿಂದಿನ ಜಿಲ್ಲಾಧಿಕಾರಿ ಸುಬೋಧ್‌ ಯಾದವ್‌ ಅವರು ದೇರೆಬೈಲ್ ವಾರ್ಡ್‌ನಲ್ಲಿ 1.61 ಎಕ್ರೆ ಜಾಗವನ್ನು ಅಂಬೇಡ್ಕರ್‌ ಭವನಕ್ಕೆ ಕಾದಿರಿಸಿದ್ದರು.

ಆದರೆ ಇದಕ್ಕೆ ವಿರೋಧ ವ್ಯಕ್ತವಾದಾಗ ಮತ್ತೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದು ಕೊನೆಗೂ ಉವಸ್ಟೋರ್‌ನ ಅಂಗಡಿಗುಡ್ಡೆಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 2012-13ರಲ್ಲಿ ಮಂಜೂರಾದ ದ.ಕ. ಜಿಲ್ಲಾ ಮಟ್ಟದ ಅಂಬೇಡ್ಕರ್‌ ಭವನಕ್ಕೆ ನಾಲ್ಕು ವರ್ಷಗಳ ಬಳಿಕ 2017ರ ಜನವರಿಯಲ್ಲಿ ಶಂಕು ಸ್ಥಾಪನೆ ನಡೆಸಲಾಗಿತ್ತು.

Advertisement

12 ಕೋಟಿ ರೂ. ವೆಚ್ಚದ ಭವನ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ಭರವಸೆಯನ್ನು ಅಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್. ಆಂಜನೇಯ ತಿಳಿಸಿದ್ದರು.

ಎರಡೂವರೆ ವರ್ಷಗಳ ಅಂತಿಮ ಹಂತಕ್ಕೆ
ಅಂತೂ ಸುಮಾರು ಎರಡೂವರೆ ವರ್ಷಗಳ ಬಳಿಕ ಇದೀಗ ಅಂದಾಜು 18 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಈಗ ಅಂತಿಮ ಹಂತಕ್ಕೆ ಬಂದಿದೆ. ಅಂಬೇಡ್ಕರ್‌ ಭವನಕ್ಕೆ ರಾಜ್ಯ ಸರಕಾರದಿಂದ 12 ಕೋಟಿ ರೂ., ಮಹಾನಗರ ಪಾಲಿಕೆಯಿಂದ 2.50 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ನಗರಾಭಿವೃದ್ದಿ ಕೋಶ ಮತ್ತು ದ.ಕ. ಜಿಲ್ಲಾ ಪಂಚಾಯತ್‌ನಿಂದ ಅನುದಾನ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಕೋರಿಕೆ ಸಲ್ಲಿಸಿತ್ತು. ಆದರೆ ಈ ಸಂಸ್ಥೆಗಳ ಅನುದಾನ ದೊರಕಿಲ್ಲ.

ಆಕರ್ಷಕ “ಅಂಬೇಡ್ಕರ್‌ ಭವನ’
ಅಂಬೇಡ್ಕರ್‌ ಭವನ ಆಕರ್ಷಕ ವಿನ್ಯಾಸದಿಂದ ಸದ್ಯ ಗಮನ ಸೆಳೆಯುತ್ತಿದೆ. ಸುಮಾರು 700 ಆಸನಗಳ ಸುಸಜ್ಜಿತ ಸಭಾ ಭವನ ನಿರ್ಮಾಣವಾಗಿದೆ. ಈ ಬೃಹತ್‌ ವೇದಿಕೆ ಸಭೆ, ಸಮಾರಂಭಗಳ ಜತೆಗೆ ರಂಗ ಚಟುವಟಿಕೆಗಳಿಗೆ ಅನುಕೂಲಕರವಾಗಿದೆ. ದ.ಕ. ಜಿಲ್ಲಾ ಪಂ. ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮತ್ತು ನಗರದ ಮಾರ್ಕೆಟ್‌ ರಸ್ತೆಯಲ್ಲಿರುವ ಮಂಗಳೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯು ಅಂಬೇಡ್ಕರ್‌ ಭವನಕ್ಕೆ ಸ್ಥಳಾಂತರವಾಗಲಿದೆ. ಸುಸಜ್ಜಿತ ಗ್ರಂಥಾಲಯ ಮತ್ತು ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಕೋಚಿಂಗ್‌ ಸೆಂಟರ್‌ ಕೂಡ ಭವನದಲ್ಲಿ ಆರಂಭಗೊಳ್ಳಲಿದೆ.

ಕಾಮಗಾರಿ ಅಂತಿಮ ಹಂತದಲ್ಲಿ

ಬಹು ನಿರೀಕ್ಷಿತ ದ.ಕ. ಜಿಲ್ಲಾ ಅಂಬೇಡ್ಕರ್‌ ಭವನದ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದೆ. ಒಟ್ಟು 17.85 ಕೋ.ರೂ. ವೆಚ್ಚದಲ್ಲಿ ಇದರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಸರಕಾರದಿಂದ ಬಹುತೇಕ ಹಣ ಬಂದಿದ್ದು, ಕೊನೆಯ ಹಂತದ 3.50 ಕೋ.ರೂ.ಬಾಕಿ ಇದೆ. ಆ ಅನುದಾನ ದೊರಕಿದ ಬಳಿಕ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು.
– ಡಾ| ಯೋಗೀಶ್‌,

ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದ.ಕ.
Advertisement

Udayavani is now on Telegram. Click here to join our channel and stay updated with the latest news.

Next