Advertisement

ಪ್ರಯತ್ನವಾದಿಗಳಾಗಿ ಯಶಸ್ಸು ಸಾಧಿಸಿ

04:56 PM Jul 28, 2018 | Team Udayavani |

ಹಾವೇರಿ: ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಗೆ ಬರಬೇಕು. ಬದುಕಿನಲ್ಲಿ ಪ್ರಯತ್ನವಾದಿಗಳಾಗಬೇಕು. ನಿಶ್ಚಿತ ಗುರಿ ಸಾಧಿಸಲು ತಮ್ಮ ಸಾಮರ್ಥ್ಯ ಹಾಗೂ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ಗಾಂಧಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಿಕಾ ಹಂತದಲ್ಲೇ ಇಂಗ್ಲಿಷ್‌ ಭಾಷಾ ಸಂವಹನ, ಸಂದರ್ಶನ ಎದುರಿಸುವ ಸಾಮರ್ಥ್ಯ, ವಿವಿಧ ವೃತ್ತಿಪರ ಕೌಶಲ್ಯ ತರಬೇತಿ ಪಡೆದರೆ ಸುಲಭವಾಗಿ ಉದ್ಯೋಗಾವಕಾಶ ಪಡೆಯಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

Advertisement

ಇಂದಿನ ದಿನಮಾನಗಳಲ್ಲಿ ಉದ್ಯೋಗ ಪಡೆಯಲು ಇಂಗ್ಲಿಷ್‌ ಭಾಷೆಯ ಸಂವಹನ ಕಲೆ ಅತ್ಯವಶ್ಯವಾಗಿದೆ. ಇದರೊಂದಿಗೆ ವಿವಿಧ ವೃತ್ತಿ ಕೌಶಲ್ಯ ತರಬೇತಿ ಹೊಂದಿದವರಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ. ಆದರೆ, ಗ್ರಾಮೀಣ ಪ್ರದೇಶದ ಬಹುಪಾಲು ವಿದ್ಯಾರ್ಥಿಗಳು ಉತ್ತಮ ಪದವಿ, ಹೆಚ್ಚಿನ ಅಂಕ ಹೊಂದಿದ್ದರೂ ಇಂಗ್ಲಿಷ್‌ ಭಾಷಾ ಬಳಕೆ, ಸಂದರ್ಶನ ಎದುರಿಸುವ ಕಲೆ ಗೊತ್ತಿಲ್ಲದೆ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದರು.

ಕಾನ್ವೆಂಟ್‌ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸುಲಭವಾಗಿ ಇಂಗ್ಲಿಷ್‌ ವ್ಯವಹಾರಿಕ ಭಾಷೆಯಾಗಿ ಬಳಸುತ್ತಾರೆ. ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆ ಎಂದರೆ ಕಾದ ಕಬ್ಬಿಣದ ಸಲಾಕೆಯಂತೆ ಭಾವಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ವಿಫಲರಾಗುತ್ತಾರೆ. ಉತ್ತಮ ವಿದ್ಯಾರ್ಹತೆ ಹೊಂದಿದ್ದರೂ ಉದ್ಯೋಗವಿಲ್ಲದೆ ನಿರಾಶರಾಗುವಂತಾಗುವುದು. ಹೀಗಾಗಿ ಇಂಗ್ಲಿಷ್‌ ಅಭಷೆಯನ್ನೂ ಶ್ರದ್ಧೆಯಿಂದ ಕಲಿತರೆ ಭವಿಷ್ಯಕ್ಕೆ ಒಳಿತು ಎಂದರು.

ನಿರಾಶಾದಾಯಕ ಮನಸ್ಥಿತಿ ತೊಡೆದುಹಾಕಿ ಸಂವಹನ ಸಾಮರ್ಥ್ಯ, ಸಂದರ್ಶನ ಎದುರಿಸುವ ಕುರಿತು ಸೂಕ್ತ ಮಾರ್ಗದರ್ಶನ, ಉದ್ಯೋಗ ಅವಕಾಶಗಳ ಮಾಹಿತಿ ಹಾಗೂ ವಿವಿಧ ವೃತ್ತಿಪರ ತರಬೇತಿಯ ಮೂಲಕ ಕೌಶಲ್ಯವನ್ನು ವೃದ್ಧಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಾದ್ಯಂತ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರವನ್ನು ಆರಂಭಿಸಿ ಆ ಮೂಲಕ ಉಚಿತವಾಗಿ ತರಬೇತಿಯನ್ನು ನೀಡುತ್ತಿದ್ದಾರೆ. ಇದರು ಸದುಪಯೋಗವಾಗಲಿ ಎಂದರು.

ಹಾವೇರಿ ನಗರದಲ್ಲಿ ತೆರೆಯಲಾಗಿರುವ ಕೌಶಲ್ಯ ಕೇಂದ್ರದಲ್ಲಿ ಉದ್ಯೋಗ ಮಾರ್ಗದರ್ಶನ ಹಾಗೂ ತರಬೇತಿ ಉಚಿತವಾಗಿ ನೀಡಲಾಗುತ್ತಿದೆ. ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಹಂತದಲ್ಲೇ ಕೌಶಲ್ಯ ಕೇಂದ್ರದ ಸಂಪರ್ಕ ಸಾಧಿಸಿ ವಿವಿಧ ವೃತ್ತಿಪರ ತರಬೇತಿಯನ್ನು ಉಚಿತವಾಗಿ ಪಡೆಯಬೇಕು. ಸಂದರ್ಶನ ಎದುರಿಸುವ ಮಾರ್ಗದರ್ಶನ ಪಡೆಯಬೇಕು. ಕ್ಯಾಂಪಸ್‌ಗಳಲ್ಲಿ ನಡೆಯುವ ಉದ್ಯೋಗ ಸಂದರ್ಶನದಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ| ಬಿ.ಟಿ.ಲಮಾಣಿ ವಹಿಸಿದ್ದರು. ಪ್ಲೆಸ್‌ ಮೆಂಟ್‌ ಅಧಿಕಾರಿ ಡಿ.ಟಿ. ಪಾಟೀಲ, ಉದ್ಯೋಗ ವಿನಿಮಯ ಇಲಾಖಾ ಅಧಿಕಾರಿ ರುದ್ರೇಶಗೌಡ, ನಾಗರಾಜ ಬಸೇಗಣ್ಣಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ನಾಗರಾಜ ಕೊರವರ ಇತರರಿದ್ದರು.

Advertisement

340 ಅಭ್ಯರ್ಥಿಗಳ ಆಯ್ಕೆ
ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 26 ಕಂಪನಿಗಳು ಭಾಗವಹಿಸಿದ್ದವು. 866 ಉದ್ಯಾಗಾರ್ಥಿಗಳು ಸಂದರ್ಶನ ಎದುರಿಸಿದರು. ಇದರಲ್ಲಿ 126 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಮಾಡಿಕೊಳ್ಳಲಾಯಿತು. 340 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆಮಾಡಿ ನೇಮಕಾತಿ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next