Advertisement

ಆ್ಯಗ್ನೆಸ್‌ ಕಾಲೇಜುಬಳಿ ಬಸ್‌ ನಿಲ್ದಾಣಕಾಮಗಾರಿಗೆ ಜಿಲ್ಲಾಡಳಿತ ಬ್ರೇಕ್

11:13 AM Jul 13, 2018 | |

ಮಹಾನಗರ: ನಗರದ ಬೆಂದೂರ್‌ನಲ್ಲಿರುವ ಸೈಂಟ್‌ ಆ್ಯಗ್ನೆಸ್‌ ಕಾಲೇಜು ಬಳಿ ಸುಮಾರು ಒಂದು ವರ್ಷಗಳ ಹಿಂದೆ ರಸ್ತೆ ವಿಸ್ತರಣೆಗೆ ತೆರವುಗೊಳಿಸಿದ್ದ ಬಸ್‌ ತಂಗುದಾಣವನ್ನು ಪುನರ್‌ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಕೆಲವು ದಿನಗಳ ಹಿಂದೆಯಷ್ಟೇ ಮುಂದಾಗಿತ್ತು. ಆದರೆ, ಕೆಲವರು ಬಸ್‌ ತಂಗುದಾಣ ನಿರ್ಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಾಮಗಾರಿ ಮುಂದುವರಿಸುವುದಕ್ಕೆ ತಾತ್ಕಾಲಿಕವಾಗಿ ಬ್ರೇಕ್‌ ಹಾಕಿದೆ.

Advertisement

ಬೆಂದೂರ್‌ನ ಈ ರಸ್ತೆಯಲ್ಲಿ ಹಾಗೂ ಸುತ್ತಮುತ್ತ ಹಲವು ಶಿಕ್ಷಣ ಸಂಸ್ಥೆಗಳಿರುವುದರಿಂದ ದಿನನಿತ್ಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ನಿಲ್ದಾಣವನ್ನೇ ಅವಲಂಬಿಸಿಕೊಂಡಿದ್ದರು. ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಖಾಸಗಿ ಸಿಟಿ ಬಸ್‌ಗಳು ಬಂದು ಹೋಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅಲ್ಲಿ ಬಸ್‌ ತಂಗುದಾಣ ಮರು ನಿರ್ಮಾಣ ಮಾಡುವ ಅಗತ್ಯವಿದೆ. ಹೀಗಾಗಿ, ಸುತ್ತ-ಮುತ್ತಲಿನ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ ತಂಗುದಾಣ ನಿರ್ಮಿಸುವುದರ ಔಚಿತ್ಯದ ಕುರಿತಂತೆ ‘ಸುದಿನ’ ಕೂಡ ಕೆಲವು ದಿನಗಳ ಹಿಂದೆ ವಿಸ್ತೃತ ವರದಿ ಮಾಡಿತ್ತು. 

ಸುದಿನ ವರದಿಯಿಂದ ಎಚ್ಚೆತ್ತ ಪಾಲಿಕೆ ಆ್ಯಗ್ನೆಸ್‌ ಕಾಲೇಜಿನ ಗೇಟ್‌ ಬಳಿ ಬಸ್‌ ನಿಲ್ದಾಣ ಮರು ನಿರ್ಮಾಣ ಮಾಡಲು ಮುಂದಾಗಿತ್ತು. ಸ್ಥಳದಲ್ಲಿ ಪಾಯ ತೆಗೆದು ಅರ್ಧ ದಿನದ ಕೆಲಸ ಕೂಡ ನೆಡೆಸಿತ್ತು. ಅಷ್ಟರೊಳಗೆ ಅಲ್ಲಿ ಬಸ್‌ ತಂಗುದಾಣ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಆ್ಯಗ್ನೆಸ್‌ ಕಾಲೇಜಿನ ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಸದ್ಯ ಅಲ್ಲಿ ಬಸ್‌ ತಂಗುದಾಣ ಕಾಮಗಾರಿ ನಡೆಸುವುದು ಬೇಡ ಎಂಬ ಸೂಚನೆ ನೀಡಿದ್ದಾರೆ.

ಬಸ್‌ ನಿಲ್ದಾಣಕ್ಕೆ ವಿರೋಧವಿಲ್ಲ
ಈ ಬಗ್ಗೆ ಆ್ಯಗ್ನೆಸ್‌ ಕಾಲೇಜಿನ ಪ್ರಾಂಶುಪಾಲ ಡಾ| ಸಿ| ಎಂ. ಜೆಸ್ವೀನಾ ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ಬಸ್‌ ನಿಲ್ದಾಣ ನಿರ್ಮಿಸಲು ನಮ್ಮ ವಿರೋಧವಿಲ್ಲ. ಆದರೆ ಕಾಲೇಜಿನ ಗೇಟ್‌ನಿಂದ ಸ್ವಲ್ಪ ದೂರ ನಿರ್ಮಿಸಬೇಕು ಎನ್ನುವುದು ನಮ್ಮ ಕೋರಿಕೆ. ಕಾಲೇಜಿನಲ್ಲಿ ಸುಮಾರು 6,500 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಸ್ವಂತ ವಾಹನಗಳಲ್ಲಿಯೇ ಕಾಲೇಜಿಗೆ ಕರೆದುಕೊಂಡು ಬರುತ್ತಾರೆ. ಕಾಲೇಜಿನ ಆವರಣದ ಒಳಗೆ ವಾಹನ ಪಾರ್ಕಿಂಗ್‌ಗೆ ಹೆಚ್ಚಿನ ಸ್ಥಳಾವಕಾಶವಿಲ್ಲ. ಇದೇ ಕಾರಣಕ್ಕೆ ನೂರಾರು ವಾಹನಗಳು ಕಾಲೇಜಿನ ಗೇಟ್‌ ಬಳಿ ಬರುತ್ತವೆ. ಒಂದುವೇಳೆ, ಬಸ್‌ ನಿಲ್ದಾಣ ಕೂಡ ಇಲ್ಲೇ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಕಾಲೇಜಿನ ಗೇಟ್‌ ಮುಂಭಾಗದಲ್ಲಿ ಬಸ್‌ ನಿಲ್ದಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಗೇಟ್‌ ನಿಂದ ಸ್ವಲ್ಪ ದೂರದಲ್ಲಿ ನಿರ್ಮಿಸಲು ನಮ್ಮ ವಿರೋಧವಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ
ಆ್ಯಗ್ನೆಸ್‌ ಕಾಲೇಜು ಬಳಿ ಬಸ್‌ ನಿಲ್ದಾಣ ನಿರ್ಮಿಸುವ ಜಾಗದ ವಿಷಯದಲ್ಲಿ ಕೆಲವರು ತಕರಾರು ಎತ್ತಿದ್ದಾರೆ. ಆದ್ದರಿಂದ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದ್ದೇನೆ. ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಆ ಬಳಿಕ ಕಾಮಗಾರಿ ಮುಂದುವರಿಸಲು ಆದೇಶಿಸುತ್ತೇನೆ. 
– ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next