Advertisement

ವಲಸಿಗರಿಗೆ ಪಡಿತರ ವಿತರಣೆ

10:31 AM May 23, 2020 | Suhan S |

ಬೆಳಗಾವಿ: ಕೋವಿಡ್‌-19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆತ್ಮನಿರ್ಭರ್‌ ಭಾರತ್‌ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಮತ್ತು ಸಾರ್ವಜನಿಕ ವಿತರಣಾ ಪದ್ಧತಿ ಮೂಲಕ ಪಡಿತರ ಚೀಟಿ ಇಲ್ಲದೇ ಇರುವ ವಲಸಿಗರಿಗೆ ಮೇ ಮತ್ತು ಜೂನ್‌ ತಿಂಗಳಲ್ಲಿ ಪ್ರತಿ ವ್ಯಕ್ತಿಗೆ ಉಚಿತವಾಗಿ 5 ಕೆಜಿ. ಅಕ್ಕಿ ಹಾಗೂ ಕೇಂದ್ರ ಸರ್ಕಾರದ ಹಂಚಿಕೆ ಅನುಸಾರ ಕಡಲೆಕಾಳು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ವಲಸಿಗರಿಗೆ ಷರತ್ತುಗಳನ್ವಯ ಮೇ ಮತ್ತು ಜೂನ್‌ ತಿಂಗಳಲ್ಲಿ ಆಹಾರ ಧಾನ್ಯ ವಿತರಿಸಲಾಗುವುದು. ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಹಾಗೂ ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ಜೀವನ ನಿರ್ವಹಣೆಗೆ ಹೋಗುವವರನ್ನು ವಲಸಿಗರೆಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿನ ವಲಸಿಗ ಫಲಾನುಭವಿಯು ಯಾವುದೇ ರಾಜ್ಯದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಫಲಾನುಭವಿ ಯಾಗಿರಬಾರದು. ಆಹಾರ ಧಾನ್ಯ ಪಡೆಯಬಯಸುವ ಫಲಾನುಭವಿ ತನ್ನ ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಬೇಕು ಎಂದು ತಿಳಿಸಿದ್ದಾರೆ.

ನ್ಯಾಯಬೆಲೆ ಅಂಗಡಿಯವರು ತಂತ್ರಾಂಶದನ್ವಯ ಪರಿಶೀಲಿಸಿ ವಲಸಿಗ ಫಲಾನಭವಿಯು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ದೇಶದ ಯಾವದೇ ಭಾಗದಲ್ಲಿಯೂ ಪಡಿತರ ಚೀಟಿ ಹೊಂದಿಲ್ಲವೆಂದು ಖಾತ್ರಿಪಡಿಸಿಕೊಂಡ ಬಳಿಕ ಪಡಿತರ ವಿತರಣೆ ಮಾಡಲಾಗುತ್ತದೆ. ವಲಸಿಗ ಫಲಾನುಭವಿಯ ಮೊಬೆ„ಲ್‌ ಸಂಖ್ಯೆಗೆ ತಂತ್ರಾಂಶದ ಮೂಲಕ ಆಧಾರ್‌ ಸಂಖ್ಯೆ ಆಧಾರಿತ ಒಟಿಪಿ ಕಳುಹಿಸಲಾಗುವುದು. ಒಟಿಪಿ ಸಂಖ್ಯೆಯನ್ನು ಆಧರಿಸಿ ಪಡಿತರ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲೆಯ ವಲಸಿಗ ಫಲಾನುಭವಿಯು ಸ್ವಂತ ಮನೆ ಹೊಂದಿರಬಾರದು ಹಾಗೂ ಆದಾಯ ತೆರಿಗೆ ಪಾವತಿಸುವವರು ಆಗಿರಬಾರದು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಲಸಿಗರಿಗೆ ಒದಗಿಸುವ ಸೌಲಭ್ಯವನ್ನು ತಪ್ಪು ಮಾಹಿತಿ ನೀಡಿ, ಆಹಾರಧಾನ್ಯ ಪಡೆದುಕೊಂಡಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆ-2005ರನ್ವಯ ದಂಡ ಅಥವಾ ದಂಡದ ಜೊತೆಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next