Advertisement

ಓಲಂಪಿಕ್‌ಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ವಿತರಣೆ

05:57 PM Jul 14, 2021 | Team Udayavani |

ಬೆಂಗಳೂರು: ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಓಲಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಮೂವರು ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಘೋಷಣೆ ಮಾಡಲಾಗಿದ್ದ, ತಲಾ ಹತ್ತು ಲಕ್ಷ ರೂ. ಪ್ರೋತ್ಸಾಹಧನವನ್ನು ಇಂದು ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪನವರು ವಿತರಿಸಿದರು.

Advertisement

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಒಲಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಶ್ರೀಹರಿ ನಟರಾಜ್ ಅವರಿಗೆ ಪ್ರೋತ್ಸಾಹ ಧನ ಚೆಕ್ ವಿತರಿಸಿದರು. ಹಾಗೂ ಅಧಿತಿ ಅಶೋಕ್, ಪೌವಾದ್ ಮಿರ್ಜಾ ಇವರುಗಳಿಗೆ ಅವರ ಪರವಾಗಿ ಅವರ ಪಾಲಕರಿಗೆ ತಲಾ ಹತ್ತು ಲಕ್ಷ ರೂ. ನ ಚೆಕ್ ಅನ್ನು ಸಿಎಂ ಯಡಿಯೂರಪ್ಪ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ. ನಾರಾಯಣಗೌಡ ಅವರು ಹಸ್ತಾತಂತರಿಸಿ, ಶುಭಕೋರಿದರು.

ಟೋಕಿಯೊ ಓಲಂಪಿಕ್ ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದವರಿಗೆ ರೂ. 5 ಕೋಟಿ, ಬೆಳ್ಳಿಗೆ -3 ಹಾಗೂ ಕಂಚಿನ ಪದಕ ಗೆದ್ದವರಿಗೆ ರೂ. 2 ಕೋಟಿ ನೀಡಿ ಪುರಸ್ಕರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

ಈಜು ಸ್ಪರ್ಧೆ ವಿಭಾಗದಲ್ಲಿ ಇದೇ ಮೊದಲಬಾರಿಗೆ ಓಲಂಪಿಕ್ ನಲ್ಲಿ ಭಾರತ ತಂಡ ಭಾಗವಹಿಸುತ್ತಿದೆ. ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಅವರಲ್ಲಿ  ಓರ್ವ ಕ್ರೀಡಾಪಟು ಕರ್ನಾಟಕದವರು ಎನ್ನುವುದು ನಮಗೆ ಹೆಮ್ಮೆ ವಿಚಾರ. ಓಲಂಪಿಕ್ ಗೆ ಆಯ್ಕೆಯಾಗಿರುವ ಮೂವರೂ ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ‌. ನಾರಾಯಣಗೌಡ ಹೇಳಿದರು.

ಆದಿತಿ ಅಶೋಕ್ ಗಾಲ್ಫ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. 2016ರಲ್ಲಿ ರಿಯೋ ಓಲಂಪಿಕ್‌ನಲ್ಲಿ ಪಾಲ್ಗೊಂಡಿದ್ದರು. 2016 ರಲ್ಲಿ ಹೀರೋ ವುಮನ್ ಇಂಡಿಯನ್ ಓಪನ್ ಚಾಂಪಿಯನ್ ಆಗಿದ್ದಾರೆ. 2017 ರಲ್ಲಿ ಪಾತಿಮಾ ಬಿಂಟ್ ಮುಬಾರಕ್ ಲೇಡಿಲ್ ಒಪನ್ ಚಾಂಪಿಯನ್ ಆಗಿದ್ದಾರೆ. ಅಲ್ಲದೆ 2012 ರಲ್ಲಿ ಆಲ್ ಇಂಡಿಯಾ ಜೂನಿಯರ್ ಚಾಂಪಿಯನ್ ಶಿಪ್ ಹಾಗೂ 2014 ರಲ್ಲಿ ಆಲ್ ಇಂಡಿಯಾ ಲೇಡಿಸ್ ಅಂಡ್ ಗರ್ಲ್ ಚಾಂಪಿಯನ್ ಶಿಪ್ ಆಗಿ ಸಾಧನೆ ಮಾಡಿದ್ದಾರೆ. ಈಗ ಅಧಿತಿ ಅಶೋಕ್ ಭಾರತ ಕೀರ್ತಿ ಪತಾಕೆಯನ್ನು ಹಾರಿಸಲು ಟೋಕಿಯೋ ಓಲಂಪಿಕ್‌ಗೆ ತೆರಳುತ್ತಿದ್ದಾರೆ.

Advertisement

ಖ್ಯಾತ ಈಜುಪಟು ಶ್ರೀಹರಿ ನಟರಾಜ್ 2016 ರಲ್ಲಿ ಸೌತ್ ಏಷಿಯನ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. 2017 ರಲ್ಲಿ ಉಜೇಕಿಸ್ಥಾನ್ ನದಲ್ಲಿ ನಡೆದ 9ನೇ ಏಷಿಯನ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 2018 ರಲ್ಲಿ ಜಕಾರ್ತದಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದಾರೆ. 2016 ರಲ್ಲಿ ರಾಂಚಿಯಲ್ಲಿ ಆಯೋಜಿಸಿದ್ದ 70ನೇ ಸೀನಿಯರ್ ಚಾಂಪಿಯನ್ ಷಿಪ್ ನಲ್ಲಿ ಕಂಚು, 2017 ರಲ್ಲಿ ಇಂದೋರ್‌ನಲ್ಲಿ ನಡೆದ 71 ನೇ ಸೀನಿಯರ್ ನ್ಯಾಷನಲ್ ಚಾಂಪಿಯನ್ ಷಿಪ್‌ನಲ್ಲಿ ಚಿನ್ನ, ಹಾಗೂ 2018 ರಲ್ಲಿ ಕೇರಳದಲ್ಲಿ ನಡೆದ 72ನೇ ಸೀನಿಯರ್ ನ್ಯಾಷನಲ್ ಚಾಂಪಿಯನ್ ಷಿಪ್‌ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಪ್ರಸ್ತುತ ಟೋಕಿಯೋ ಓಲಂಪಿಕ್‌ಗೆ ಶ್ರೀಹರಿ ನಟರಾಜ್ ಆಯ್ಕೆಯಾಗಿದ್ದಾರೆ.

ಈಕ್ವೆಸ್ಟಿಯನ್ ಪಟು ಫೌವಾದ್ ಮಿರ್ಜಾ 2018ರಲ್ಲಿ ನಡೆದ 18ನೇ ಏಷಿಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದಿದ್ದು, ಈಗ ಟೋಕಿಯೋ ಓಲಂಪಿಕ್‌ಗೆ ಅರ್ಹತೆ ಪಡೆದಿದ್ದಾರೆ.

ಈಜುಪಟು ಶ್ರೀಹರಿ ನಟರಾಜ್ ಹಾಗೂ ತರಬೇತುದಾರರು ಹಾಗೂ ಪಾಲಕರನ್ನು ಮುಖ್ಯಮಂತ್ರಿಗಳು ಗೌರವಿಸಿದರು. ಇದೇ ವೇಳೆ  ಭಾರತ ತಂಡದ ಜೆರ್ಸಿಯನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ಬಳಿಕ ಓಲಂಪಿಕ್ ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಸೆಲ್ಫಿ ಪ್ರೇಮ್ ನಲ್ಲಿ ನಿಂತು ಸಿಎಂ ಹಾಗೂ ಸಚಿವರು ಚಿಯರಪ್ ಮಾಡಿದರು‌.

ಕರ್ನಾಟಕ ಓಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜ್, ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕ್ರೀಡಾ ಇಲಾಖೆ ಆಯುಕ್ತ ಡಾ. ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next