Advertisement

ಮನೆ ಬಾಗಿಲಿಗೇ ‘ದೂರ’ಶಿಕ್ಷಣ

03:56 PM Apr 25, 2019 | Team Udayavani |

ಹಾರೂಗೇರಿ: ಉನ್ನತ ಶಿಕ್ಷಣದ ಹಸಿವುಳ್ಳವರು ಕೆಲವು ಕಾರಣಗಳಿಂದ ಅದನ್ನು ಪಡೆಯುವುದು ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಅವರ ಮನೆ ಬಾಗಿಲಿಗೆ ಶಿಕ್ಷಣ ತೆಗೆದುಕೊಂಡು ಹೋಗಿ ಅವರ ಹಂಬಲವನ್ನು ಪೂರೈಸುವುದೇ ದೂರ ಶಿಕ್ಷಣದ ಆಶಯವಾಗಿದೆ ಎಂದು ಖ್ಯಾತ ಕಾದಂಬರಿಕಾರ ಡಾ| ಬಾಳಾಸಾಹೇಬ ಲೋಕಾಪುರ ಹೇಳಿದರು.

Advertisement

ಇಲ್ಲಿನ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗ ಬುಧವಾರ ಆಯೋಜಿಸಿದ್ದ ಹತ್ತು ದಿನಗಳ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯ ರೂಪಿಸಿದ ದೂರ ಶಿಕ್ಷಣ ಗುಣಮಟ್ಟದಿಂದ ನಾಡವರ ಮೆಚ್ಚುಗೆಗಳಿಸಿದ್ದು, ಸಾವಿರಾರು ಶಿಕ್ಷಣಾಕಾಂಕ್ಷಿಗಳ ಅಗತ್ಯ ಪೂರೈಸುವಲ್ಲಿ ಯಶಸ್ವಿಯಾಗಿದೆ. ದೂರ ಶಿಕ್ಷಣದ ಮೂಲಕ ಸ್ನಾತಕೋತ್ತರ ಪದವಿ ಪಡೆದ ನೂರಾರು ಜನರು ಇಂದು ಪ್ರಾಧ್ಯಾಪಕರಾಗಿ ನಾಡಿನ ತುಂಬ ಸೇವೆ ಸಲ್ಲಿಸುತ್ತಿದ್ದಾರೆ. ಉನ್ನತ ಶಿಕ್ಷಣದ ಇಂಥ ಸದಾವಕಾಶವನ್ನು ಈ ಭಾಗದ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಸಾಮಾಜಿಕ ಕಳಕಳಿ ಸ್ತುತ್ಯಾರ್ಹವಾದುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ವಿ.ಎಚ್. ಪವಾರ ಮಾತನಾಡಿ, ಬಿ.ಆರ್‌. ದರೂರ ಸಾಹೇಬರು ಈ ಭಾಗವನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು ತಮ್ಮ ಬದುಕನ್ನೇ ಮೀಸಲಿಟ್ಟರು. ಅವರ ಸಂಕಲ್ಪದ ಫಲವೇ ನಮ್ಮ ಈ ಶಿಕ್ಷಣ ಸಂಸ್ಥೆ. ಈಗ ಎಲ್ಕೆಜಿಯಿಂದ ಡಾಕ್ಟರೇಟ್ವರೆಗೆ ಶಿಕ್ಷಣ ನೀಡುವ ಸಾಮರ್ಥ್ಯ ಪಡೆದಿದ್ದು, ಈ ಭಾಗದ ಜನರ ಸೌಭಾಗ್ಯವೆಂದು ಹೇಳಿದರು.

ಡಾ| ಪಿ.ಬಿ. ಕಲಚಿಮ್ಮಡ್‌, ಡಾ| ಈರಣ್ಣ ಕೊಕಟನೂರ, ಪ್ರೊ| ರಾಜು ಕಾಂಬಳೆ, ಶಂಕರ ಘಟನಟ್ಟಿ, ಪ್ರೊ| ಜಿ.ಆರ್‌. ಗುಡೋಡಗಿ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು. ಡಾ| ವಿ.ಎಸ್‌. ಮಾಳಿ ಸ್ವಾಗತಿಸಿದರು. ಪ್ರೊ| ತ್ರಿಶಲಾ ಮಂಗಾಜೆ ನಿರೂಪಿಸಿದರು. ಪ್ರೊ| ಎಚ್.ಎಸ್‌. ಬಿಸ್ವಾಗರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next