Advertisement

2 ತಿಂಗಳಲ್ಲಿ ನೀರು ಪೂರೈಸದಿದ್ದರೆ ಶಿಸ್ತುಕ್ರಮ

11:44 AM Dec 01, 2018 | Team Udayavani |

ಬೀದರ: ತಾಲೂಕಿನ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವಿಫಲಗೊಂಡಿದ್ದು, ಮುಂದಿನ ಎರಡು ತಿಂಗಳೊಳಗೆ ನಿಗದಿತ ಎಲ್ಲ ಗ್ರಾಮಗಳಿಗೆ ನೀರು ಪೂರೈಸುವ ಕೆಲಸ ಆಗಬೇಕು ವಿಧಾನಸಭೆ ಅರ್ಜಿಗಳ ಸಮಿತಿ ಅಧ್ಯಕ್ಷ ಎಂ.ಕೃಷ್ಣರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿ ಸದಸ್ಯರ ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಮತ್ತೆ ಸಮಿತಿ ಇಲ್ಲಿಗೆ ಬಂದು ಯೋಜನಾ ವ್ಯಾಪ್ತಿಯ 56 ಹಳ್ಳಿಗಳ ಪೈಕಿ ಕೆಲ ಹಳ್ಳಿಗಳಲ್ಲಿ ಸಂಚರಿಸಿ ಪರಿಶೀಲಿಸುವುದಾಗಿ ಹೇಳಿದರು. 

ಎರಡು ತಿಂಗಳ ನಂತರ ಸಮಿತಿ ಸದಸ್ಯರು ಬಂದ ಸಂದರ್ಭದಲ್ಲಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂದು ಹಳ್ಳಿಯ ಜನ ಹೇಳುವುದು ಕಂಡು ಬಂದರೆ ಆ ಕೂಡಲೇ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಇಲಾಖೆಯ ಸಹಾಯಕ ಇಂಜಿನಿಯರ್‌ಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಈ ಸಭೆಗೆ ಮುಖ್ಯ ಇಂಜಿನಿಯರು ಹಾಗೂ ಅಧೀಕ್ಷಕ ಎಂಜಿನಿಯರು ಏಕೆ ಬಂದಿಲ್ಲ ಎಂದು ಸಮಿತಿಯ ಸದಸ್ಯರು ಪ್ರಶ್ನಿಸಿದರು. ಸದನ ಸಮಿತಿಯ ಸಭೆಯಲ್ಲಿ ಕಡ್ಡಾಯ ಹಿರಿಯ ಅಧಿಕಾರಿಗಳು ಇರುವಂತೆ ನೋಡಿಕೊಳ್ಳಿರಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ವಿಶಾಲ ಅವರಿಗೆ ಸೂಚಿಸಿದರು.

ಗ್ರಾಪಂ ವೈಫಲ್ಯ: ಔರಾದ್‌(ಎಸ್‌) ಮತ್ತು ಭೈರನಳ್ಳಿ, ಚಟ್ನಳ್ಳಿ ಮತ್ತು ಇತರೆ ಮೂರು ಜನವಸತಿ, ಮಲ್ಕಾಪುರ ಮತ್ತು ಸುಲ್ತಾನಪುರ, ಕಮಠಾಣ ಮತ್ತು ಇತರೆ 17 ಜನವಸತಿಗಳ ಬಹುಗ್ರಾಮ ನೀರು ಸರಬರಾಜು ಯೋಜನೆ ಹಾಗೂ ಅಮಲಾಪುರ ಸೇರಿದಂತೆ ಒಟ್ಟು 5 ಯೋಜನೆಗಳಡಿ 27 ಜನವಸತಿಗಳಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ವಿಶ್ವಬ್ಯಾಂಕ್‌ ನೆರವಿನ ಜಲನಿರ್ಮಲ ಯೋಜನೆಯಡಿ 2011ರಲ್ಲಿ ಆರಂಭಿಸಲಾಗಿತ್ತು.  ಯೋಜನೆ ಅನುಷ್ಠಾನ ಕಾರ್ಯವನ್ನು 2014ರಲ್ಲಿ ಪೂರ್ಣಗೊಳಿಸಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿತ್ತು. ಗ್ರಾಪಂಗಳಿಂದ ಸೂಕ್ತ ನಿರ್ವಹಣೆ ಇಲ್ಲವಾದ್ದರಿಂದ ಕೆಲವೆಡೆ ಯೋಜನೆ ವಿಫಲವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಶಿವಾನಂದ ಸಭೆಗೆ ಮಾಹಿತಿ ನೀಡಿದರು.

Advertisement

ಯಾಕೆ ಕ್ರಮ ಕೈಗೊಂಡಿಲ್ಲ: ನಿರ್ವಹಣೆಯನ್ನು ಸರಿಯಾಗಿ ಮಾಡದವರ ವಿರುದ್ಧ ಕ್ರಮ ಜರುಗಿಸಿದ್ದೀರಾ? ಪೈಪ್‌ಲೈನ್‌ಗಳು ಹಾನಿಗೊಳಗಾಗದಂತೆ ಕ್ರಮ ವಹಿಸದಿರಲು ಕಾರಣವೇನು? ಇದಕ್ಕೆ ಕಾರಣರಾದವರು ಯಾರು? ಯೋಜನೆ ಪೂರ್ಣಗೊಂಡ ಮೇಲೆಯೂ ಜನತೆಗೆ ನೀರು ಸಿಗುತ್ತಿಲ್ಲ ಎಂದರೆ ಹೇಗೆ? ಈ ಯೋಜನೆಗಳ ಸಮರ್ಪಕ ಜಾರಿಗೆ ವಿಫಲರಾಗಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸದಿರಲು ಕಾರಣವೇನು? ಇವರಿಂದ ಆಗಿರುವ ನಷ್ಟವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಲಾಗಿದೆಯೇ? ಎಂದು ಸಮಿತಿಯ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂಗಳಿಂದ ನಿರ್ವಹಣೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎಂಬುದು ಗೊತ್ತಾದ ಬಳಿಕ ಕೆಲವು ಗ್ರಾಪಂಗಳಿಂದ ವಾಪಾಸ್‌ ಪಡೆದು ನಾವೇ ನಿರ್ವಹಣೆ ಕಾರ್ಯ ಕೈಗೆತ್ತಿಕೊಂಡಿದ್ದೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಪರ್ಯಾಯ ವ್ಯವಸ್ಥೆ ಮಾಡಿ: ಬಹುಗ್ರಾಮ ಯೋಜನೆಯ ಜಲಮೂಲವಾಗಿ ಕಾರಂಜಾ ನದಿ ನೀರಿನ ಬಳಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಬೀದರ, ಭಾಲ್ಕಿ, ಹುಮನಾಬಾದ್‌ ಪಟ್ಟಣಕ್ಕೆ ಕಾರಂಜಾ ನೀರನ್ನೇ ಬಳಸಲಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಆದ್ದರಿಂದ ಬೇರೆ ವ್ಯವಸ್ಥೆ ಮಾಡಿದರೆ ಸೂಕ್ತ ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಸಭೆಗೆ ತಿಳಿಸಿದರು.

ಆಯುಕ್ತರಿಗೆ ಸೂಚನೆ: ಪೈಪ್‌ಲೈನ್‌, ನೀರು ಶುದ್ದೀಕರಣ ಘಟಕ ಸ್ಥಾವರದ ನಿರ್ವಹಣೆಗೆ ಸರ್ಕಾರವು ಪ್ರತಿವರ್ಷ 22 ಲಕ್ಷ ರೂ. ನೀಡುತ್ತಿದ್ದು, ಈ ಹಣ ಸದ್ಬಳಕೆಯಾಗುವಂತೆ ನೋಡಿಕೊಳ್ಳಿ ಎಂದು ಸಮಿತಿಯ ಅಧ್ಯಕ್ಷರು, ಇಲಾಖೆಯ ಆಯುಕ್ತರಿಗೆ ಸೂಚಿಸಿದರು. ಪೈಪ್‌ಲೈನ್‌ ದುರಸ್ತಿ ಸೇರಿದಂತೆ ಈ ಯೋಜನೆಯ ಕಾರ್ಯ ನಿರ್ವಹಣೆ ಹೊಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸದೇ ಇಲಾಖೆಗೆ ವಹಿಸಬೇಕು ಎಂದು ಆಯುಕ್ತರು ತಿಳಿಸಿದರು. 

ಸಿಇಒಗೆ ಸೂಚನೆ: ಯೋಜನಾ ವ್ಯಾಪ್ತಿಯ ಹಳ್ಳಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವ ಸ್ಥಿತಿ ಇದೆ ಎಂಬುದರ ಬಗ್ಗೆ ಪಟ್ಟಿ ಮಾಡಿ ಅಧಿಕಾರಿಗಳೊಂದಿಗೆ ತಾವು ಪರಿಶೀಲನೆ ಮಾಡಬೇಕು ಎಂದು ಸಮಿತಿ ಅಧ್ಯಕ್ಷರು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಸೂಚಿಸಿದರು.

ನೀರು ಶುದ್ದೀಕರಣ ಘಟಕ ಸ್ಥಾವರದ ರಸ್ತೆಯನ್ನು ಸರಿಪಡಿಸಿ. ಅದಕ್ಕೆ ರಕ್ಷಣಾ ಗೋಡೆ ಮತ್ತು ಗೇಟ್‌ಅನ್ನು ಕೂಡಲೇ ಅಳವಡಿಸಿ. ಯೋಜನಾ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿರಿ ಎಂದು ಸಮಿತಿಯ ಸದಸ್ಯರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ರಾಚಪ್ಪ ಪಾಟೀಲ ಅವರಿಗೆ ನಿರ್ದೇಶನ ನೀಡಿದರು. 

ಸಮಿತಿ ಸದಸ್ಯರಾದ ಬಿ.ಎ.ಬಸವರಾಜ, ಸೌಮ್ಯ ರೆಡ್ಡಿ, ಮಹೇಶ ಕಮಠಳ್ಳಿ, ಸುರೇಶ ಗೌಡ, ಎಂ.ಪಿ.ಅಪ್ಪಚ್ಚು, ಲಾಲಾಜಿ ಮೆಂಡನ್‌ ಹಾಗೂ ಸಮಿತಿಯ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಕಾಳೆ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಜಿಲ್ಲೆಯ ವಿವಿಧ ತಾಲೂಕುಗಳ ಸಹಾಯಕ ಅಭಿಯಂತರರು, ಶಾಖಾಧಿಕಾರಿಗಳು ಇದ್ದರು.

ಮಾಹಿತಿ ಸಲ್ಲಿಸಲು ಸೂಚನೆ
ಬಹುಗ್ರಾಮ ಯೋಜನೆಯಲ್ಲಿ 56 ಹಳ್ಳಿಗಳಲ್ಲಿ 82 ಒವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, 57 ಒವರ್‌ಹೆಡ್‌ ಟ್ಯಾಂಕ್‌ಗಳು ಉಪಯೋಗದಲ್ಲಿವೆ. 22 ಟ್ಯಾಂಕ್‌ ಗಳು ಬಳಕೆಯಲ್ಲಿಲ್ಲ. ಯೋಜನಾ ವ್ಯಾಪ್ತಿಯ ಪ್ರತಿಯೊಂದು ಮನೆಗೆ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗದಿದ್ದರೆ ಯೋಜನೆಯ ಉಪಯೋಗವೇನು. ಕಳಪೆ ಪೈಪ್‌ ಅಳವಡಿಸಿದರೆ ನೀರು ಸರಬರಾಜು ಹೇಗೆ ಸಾಧ್ಯವಾಗುತ್ತದೆ ಎಂದು ವಿಧಾನಸಭೆ ಅರ್ಜಿಗಳ ಸಮಿತಿ ಸದಸ್ಯರು ಅಧಿಕಾರಿಗಳಿಂದ ಪೂರ್ಣ ಮಾಹಿತಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಸೂಕ್ತ ನಿರ್ವಹಣೆಗೆ ಗ್ರಾಪಂಗಳಿಗೆ ಸೂಚಿಸಲಾಗಿದೆ. ಕಮಠಾಣ ಮತ್ತು ಇತರೆ ಕೆಲ ಜನವಸತಿಗಳಿಗೆ ಒಎಚ್‌ ಟಿ ಮೂಲಕ ನೀರು ಬಿಡುತ್ತಿದ್ದೇವೆ. ಜಲಮೂಲದಲ್ಲಿ ನೀರಿನ ಕೊರತೆ ಎದುರಾಗಿದ್ದರಿಂದ ಸಮರ್ಪಕವಾಗಿ ನೀರು ಪೂರೈಸಲು ಆಗುತ್ತಿಲ್ಲ. ಕಾರಣ ಕೊಳವೆ ಬಾವಿಗಳ ಮೂಲಕ ಈಗ ನೀರು ಕೊಡುತ್ತಿದ್ದೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಎಚ್ಚರಿಕೆ ವಹಿಸಿ: ಗುತ್ತಿಗೆದಾರರಿಗೆ ಲಾಭ ಮಾಡಲು ಈ ಯೋಜನೆ ರೂಪಿಸಿಲ್ಲ ಎಂದು ಸಮಿತಿಯ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾವು ಎರಡು ತಿಂಗಳ ಬಳಿಕ ಮತ್ತೆ ಇಲ್ಲಿಗೆ ಬಂದು ಪರಿಶೀಲಿಸುತ್ತೇವೆ. ಆಗಲೂ ಇದೆ ಸಮಸ್ಯೆ ಇದ್ದರೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಅಮಾನತು ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಮಿತಿ ಸದಸ್ಯರು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next