Advertisement

ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿದವರನ್ನು ಸಂಪುಟದಿಂದ ವಜಾ ಮಾಡಿ : ರೇಣುಕಾಚಾರ್ಯ

02:37 PM Jun 01, 2021 | Team Udayavani |

ದಾವಣಗೆರೆ: ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡಿರುವಂತಹ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಮತ್ತು ಮೆಗಾಸಿಟಿ ಯೋಜನೆಯಲ್ಲಿ ನಡೆದಿದೆನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪುನರುಚ್ಚರಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ೬೫ ಜನ ಶಾಸಕರು ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ಮೆಗಾಸಿಟಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತ ದಾಖಲೆಗಳು ತಮ್ಮಲ್ಲಿ ಇವೆ. ಕೊರೊನಾ ಮುಗಿದ ನಂತರ ಸಭೆ ನಡೆಸಿ, ನಾವು ಏನು ಎಂಬುದನ್ನ ತೋರಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದ ಅವರು ಸಚಿವ ಸಿ.ಪಿ. ಯೋಗೇಶ್ವರ್ ಅವರ ಹೆಸರು ಪ್ರಸ್ತಾಪಿಸದೆ ಹರಿಹಾಯ್ದರು.

೨೦೦೯ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸಚಿವರಾದ ನಂತರ ಲೂಟಿ ಮಾಡಿದ್ದಾರೆ. ಸರ್ಕಾರದ ಕೊನೆ ಅವಧಿಯಲ್ಲಿ ಮತ್ತೆ ಕಾಂಗ್ರೆಸ್ ಸೇರಿದರು. ಮತ್ತೆ ಬಿಜೆಪಿಗೆ ಬಂದಿದ್ದಾರೆ. ಸಂಘಟನೆಗೆ ಏನೂ ಕೊಡುಗೆ ನೀಡಿಲ್ಲ. ಅವರಿಗೆ ಮಂತ್ರಿ ಮಾಡಿದ್ದೇ ದೊಡ್ಡ ಅಪರಾಧ. ಸಚಿವರಾಗುವುದು ಜನರ ಸೇವೆ ಮಾಡಲಿಕ್ಕೆ. ಸಂಪನ್ಮೂಲ ಕ್ರೂಢೀಕರಣ ಮಾಡುವುದಕ್ಕೆ ಅಲ್ಲ. ರಾಮನಗರ ಜಿಲ್ಲಾ ಉಸ್ತುವಾರಿ, ಇಂಧನ, ಜಲಸಂಪನ್ಮೂಲ ಖಾತೆ ಯಾಕೆ ಕೊಡಬೇಕು. ರಾಮನಗರ ಉಸ್ತುವಾರಿ ಬಿಟ್ಟುಕೊಡುವುದಾಗಿ ಉಪ ಮುಖ್ಯಮಂತ್ರಿ ಡಾ| ಅಶ್ವತನಾರಾಯಣ ಹೇಳಿಲ್ಲ, ಅದು ಸುಳ್ಳು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ಮುಜುಗರ ತರುವಂತೆ ಹೇಳಿಕೆ ನೀಡಿರುವವರು ಐರನ್ ಲೆಗ್ ಇದ್ದಂತೆ. ಸ್ವಾರ್ಥಿ, ನಾಲಾಯಕ್ ಎಂದು ಮೂದಲಿಸಿದ ಅವರು. ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುವಂತಹವರು ಬಿಜೆಪಿಗೆ ಏನೂ ಕೊಡುಗೆ ನೀಡಿಲ್ಲ. ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಭೇಟಿ ಮಾಡಿಲ್ಲ. ಮನೆಯ ಗೇಟ್ ಮುಟ್ಟಿ, ನಾಯಕರನ್ನ ಭೇಟಿ ಮಾಡಿರುವುದಾಗಿ ಬರೀ ಗಾಸಿಪ್ ಮಾಡುತ್ತಾರೆ ಎಂದು ಹರಿಹಾಯ್ದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೆಡಿಮೇಡ್ ಫುಡ್ ಅಲ್ಲ. ಅವರು ಆಲದಮರ. ಅದರ ನೆರಳಲ್ಲಿ ಬೆಳೆದವರು ನಾವುಗಳು ಯಡಿಯೂರಪ್ಪ ಅವರ ಬೆನ್ನಿಗೆ ಚಾಕು ಹಾಕಲು ಮುಂದುವರೆದರೆ ಅವರನ್ನು(ಯಡಿಯೂರಪ್ಪ) ಬಿಟ್ಟು ಕೊಡುತ್ತೇವಾ ಎಂದರು.

Advertisement

ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಲಾಕ್‌ಡೌನ್ ಮುಂದುವರೆಸಲಾಗುತ್ತಿದೆ ಎಂಬ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಯತ್ನಾಳ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಬಹಳ ಹಗರುರವಾಗಿ ಮಾತನಾಡುತ್ತಾರೆ. ಯಡಿಯೂರಪ್ಪ ಅವರು ಮಕ್ಕಳ ಮೂಲಕ ರಾಜಕೀಯ ಮಾಡುವಂತಹವರಲ್ಲ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಲಾಕ್‌ಡೌನ್ ಮುಂದುವರೆಸಲಾಗುತ್ತಿದೆ ಎಂಬ ಹೇಳಿಕೆ ಮಾನಸಿಕ ಅಸ್ವಸ್ಥತೆಯ ಪ್ರತೀಕ ಎಂದರು.

ಬಿ.ವೈ. ವಿಜಯೇಂದ್ರ ದೆಹಲಿಗೆ ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದರ ಮಾಹಿತಿ ಇಲ್ಲ ಎಂದ ಅವರು ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಮುಂದುವರೆಯುವುದು ಮತ್ತು ಮುಂದಿನ ವಿಧಾನ ಸಭಾ ಚುನಾವಣೆಯನ್ನ ಅವರ ನಾಯಕತ್ವದಲ್ಲೇ ನಡೆಸುವುದು ಅಷ್ಟೇ ಸತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next