Advertisement

ಶಬರಿಮಲೆ ದೇಗುಲ ಮತ್ತು ಲಿಂಗ ಸಮಾನತೆಯ ಚರ್ಚೆ

08:03 AM Oct 18, 2018 | |

ಕೆಲವೊಂದು ಧಾರ್ಮಿಕ ಕಟ್ಟುಪಾಡುಗಳನ್ನು ಆಚರಿಸಬೇಕಾದುದು ಭಕ್ತರ ಕರ್ತವ್ಯವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯೂ ಅದನ್ನು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿರುತ್ತವೆ. ಶಕ್ತಿ ಕ್ಷೇತ್ರಗಳ ಪಾವಿತ್ರ್ಯ, ಧಾರ್ಮಿಕ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಮನವರಿಕೆ ಮಾಡಿಕೊಡಬೇಕಾದುದರ ಆವಶ್ಯಕತೆ ಇಂದಿನದು. ಅವುಗಳನ್ನು ಕಾನೂನಿನ ಚೌಕಟ್ಟಿಗೆ ತಂದಾಗ ಭಕ್ತರ ವಲಯದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. 

Advertisement

ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಸ್ತ್ರೀಯರ ಪ್ರವೇಶವನ್ನು ಮಾನ್ಯ ಸುಪ್ರೀಂ ಕೋರ್ಟ್‌ ಸಿಂಧುಗೊಳಿ ಸಿದ ವಿಷಯ ಕೆಲವು ವಾರಗಳಿಂದ ದೇಶಾದ್ಯಂತ ಭಾರೀ ಬಿರುಗಾಳಿ ಎಬ್ಬಿಸಿದೆ. ಆ ತೀರ್ಪು ಬಂದ ಬಳಿಕ ದೇಶದಲ್ಲಿ ಪರ-ವಿರೋಧ ವಾದಗಳು, ವಿವಾದಗಳು ಕಾಣಿಸಿಕೊಳ್ಳುತ್ತಿವೆ. ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ತಮ್ಮ ಕರ್ತವ್ಯದ ಅವ ಧಿಯ ಕೊನೆಯಲ್ಲಿ ನೀಡಿದ ಮೂರು ತೀರ್ಪುಗಳು ಭಾರತದಲ್ಲಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದವು. 

ಅದರ ಮುಂದಿನ ಭಾಗವೇ ಇಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಶಬರಿಮಲೆಗೆ ಸ್ತ್ರೀಯರ ಪ್ರವೇಶದ ಕುರಿತು ಉದ್ಭವಿಸಿರುವ ಧಾರ್ಮಿಕ ಭಾವನೆಗಳ ಸೋಲು-ಗೆಲುವಿನ ಚರ್ಚೆ. ಕೆಲವರು ಈ ತೀರ್ಪಿನ ಪರವಾಗಿ ವಾದಿಸುತ್ತಿದ್ದರೆ, ಹಲವರು ಧಾರ್ಮಿಕ ಆಚರಣೆಯನ್ನು ಕಾಯುವ ಕಾರಣಕ್ಕೆ ಸ್ತ್ರೀಯರ ಪ್ರವೇಶವನ್ನು ವಿರೋಧಿಸುತ್ತಿದ್ದಾರೆ.

ಶಬರಿ ಮಲೆ ಅಯ್ಯಪ್ಪ ಸನ್ನಿಧಾನ ವರ್ಷವೀಡೀ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ದಕ್ಷಿಣ ಭಾರತದಲ್ಲಿ ಅತ್ಯಂತ ಪವಿತ್ರ ಕ್ಷೇತ್ರ ಎಂದು ಕರೆಯಲಾಗುತ್ತದೆ. ಪಂಪಾನದಿ, ಕಾಡುಗಳನ್ನು ಬರೀ ಕಾಲಲ್ಲೇ ದಾಟಿ ಹರಿಹರ ಸುತನ ದರ್ಶನ ಪಡೆಯಬೇಕಾಗಿದೆ. ಗಂಡಸರು ಶಬರಿ ಮಲೆ ಪ್ರವೇಶಿಸಬೇಕಾದರೆ ವೃತವನ್ನು ಆಚರಿಸಬೇಕು ಎಂಬ ಧಾರ್ಮಿಕ ನಿಯಮ ನಮ್ಮಲ್ಲಿದೆ. ಹಾಗಂತ ಯಾವುದೇ ಸಂಘ ಸಂಸ್ಥೆ, ಸರಕಾರ, ಅಥವಾ ನ್ಯಾಯಾಂಗ ರೂಪಿಸಿದ ನಿಯಮ ಅಲ್ಲ ಅದು. ಭಕ್ತರು ಮತ್ತು ಮಂದಿರವು ಪರಂಪರಾಗತವಾಗಿ ರೂಢಿಸಿಕೊಂಡು ಬಂದ ಆಚರಣೆ, ಪದ್ಧತಿ. ದೇಶದ ಇತರ ದೇವಸ್ಥಾನ, ಮಸೀದಿ, ಚರ್ಚ್‌ ಅಥವ ಯಾವುದೇ ಧರ್ಮದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದಂತೆ, ಇಂದು ಯೋಚನೆ ಮಾಡಿ ನಾಳೆ ಹೊರಡಬಹುದಾದ ಕ್ಷೇತ್ರ ಶಬರಿಮಲೆ ಅಲ್ಲ. ಕುಟುಂಬ ಸದಸ್ಯರೆಲ್ಲರೂ ಒಟ್ಟು ಸೇರಿ ಹೋಗುವಂತಹ ಕ್ಷೇತ್ರವೂ ಅಲ್ಲ. ಶಬರಿಮಲೆ ಸನ್ನಿಧಾನ ನಂಬಿಕೆ, ಭಕ್ತಿಭಾವ, ವೃತಾಚರಣೆಗೆ ಒಲಿದ ಕ್ಷೇತ್ರ. ಬ್ರಹ್ಮಚರ್ಯವನ್ನು ಪಾಲಿಸಿಕೊಂಡು ಬಂದ ಅಯ್ಯಪ್ಪಸ್ವಾಮಿಯನ್ನು ಕಾಣಲು ಆ ಬ್ರಹ್ಮಚರ್ಯ ವೃತವನ್ನು ಪಾಲಿಸುವುದರ ಮೂಲಕ ಪದಿನೆಟ್ಟಾಂಪಡಿ (18 ಮೆಟ್ಟಿಲು) ಹತ್ತಬೇಕು. 40 ದಿನಗಳ ವೃತಾಚರ‌ಣೆಯನ್ನು ಕೈಗೊಳ್ಳಬೇಕು. ಮೊದಲ ಬಾರಿ ಮಾಲೆ ಧರಿಸಿ ಹೋಗುವ ಕನ್ನಿಸ್ವಾಮಿಯೂ ಈ ವೃತವನ್ನು ಆಚರಿಸಬೇಕು. 

ಸ್ತ್ರೀಯರಿಗೆ ನಿಷೇಧ‌ ಇಲ್ಲ
ಹತ್ತು ವರುಷದ ಒಳಗಿನ ಹಾಗೂ 50 ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಶಬರಿಮಲೆ ಇಂದೂ ತೆರೆದೇ ಇದೇ. ಸ್ತ್ರೀಯರಿಗೆ 40 ದಿನಗಳ ವೃತಾಚರಣೆ ಕೈಗೊಳ್ಳಲು ತಮ್ಮ ನೈಸರ್ಗಿಕವಾದ ಕಾರಣದಿಂದ ಆಗುವುದಿಲ್ಲ ಎಂಬ ಕಾರಣಕ್ಕಾಗಿ ಇಲ್ಲಿನತನಕ ಯಾವುದೇ ಸ್ತ್ರೀ ಶ್ರೀಸನ್ನಿಧಾನದ ಪ್ರವೇಶವನ್ನು ಮಾಡಿರಲಿಲ್ಲ. ಹಾಗಂತ ಅಕೆಗೆ ಪ್ರವೇಶವಿಲ್ಲ ಎಂದು ನಾವು ಭಾವಿಸುವಂತಿಲ್ಲ. ಅಕೆ 50 ವರ್ಷ ದಾಟಿದ ಬಳಿಕ ವೃತಾರಣೆ ಕೈಗೊಂಡು ಅಯ್ಯಪ್ಪ ಸ್ವಾಮಿಯನ್ನು ಭಕ್ತಿ ಭಾವದಿಂದ ಕಾಣಬಹುದಾಗಿದೆ. ಇದು ಈ ತನಕ ನಡೆದುಕೊಂಡು ಬಂದ ಪದ್ಧತಿ. ದೇಶದ ಇತರ ದೇವಸ್ಥಾನಗಳಂತೆ ಮುಕ್ತ ಪ್ರವೇಶವನ್ನು ಕೋರಿ ಅರ್ಜಿ ಸಲ್ಲಿಸಿದ ಪರಿಣಾಮ ಉದ್ಭವಿಸಿರುವ ಈ ಸಮಸ್ಯೆಗೆ ಧಾರ್ಮಿಕ ಚೌಕಟ್ಟನ್ನು ಪರಿಗಣಿಸಿ ಮರು ತೀರ್ಪು ನೀಡಬಹುದಾಗಿದೆ. ಆದರೆ ಮರುಪ ರಿಶೀಲನಾ ಅರ್ಜಿ ಸಲ್ಲಿಕೆಯಾಗದೇ ಇದನ್ನು ನಿರೀಕ್ಷಿಸುವಂತಿಲ್ಲ.

Advertisement

ಕಾನೂನಲ್ಲ -ಕಟ್ಟುಪಾಡು
ಪ್ರತಿ ಆರಾಧನಾ ಕೇಂದ್ರಗಳಲ್ಲಿ ಅದರದ್ದೇ ಆದ ಶಕ್ತಿ-ಸಂಪ್ರದಾಯಗಳು ಪ್ರತಿಷ್ಠಾಪನೆಗೊಂಡಿರುತ್ತದೆ. ಅವುಗಳನ್ನು ಯಥಾಪ್ರಕಾರ ಮುಂದಿನ ತಲೆಮಾರಿಗೆ ದಾಟಿಸಬೇಕಾದರೆ, ಕೆಲವೊಂದು ಧಾರ್ಮಿಕ ಕಟ್ಟುಪಾಡುಗಳನ್ನು ಆಚರಿಸಬೇಕಾದುದು ಭಕ್ತರ ಕರ್ತವ್ಯವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯೂ ಅದನ್ನು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿರುತ್ತವೆ. ಶಕ್ತಿ ಕ್ಷೇತ್ರಗಳ ಪಾವಿತ್ರ್ಯತೆ, ಧಾರ್ಮಿಕ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಮನವರಿಕೆ ಮಾಡಿಕೊಡಬೇಕಾದದುದರ ಅವಶ್ಯಕತೆ ಇಂದಿನದು. ಅವುಗಳನ್ನು ಕಾನೂನಿನ ಚೌಕಟ್ಟಿಗೆ ತಂದಾಗ ಭಕ್ತರ ವಲಯದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ.

ಲಿಂಗ ಸಮಾನತೆಯೇ?
ತೀರ್ಪಿನ ಬಳಿಕ ಉದ್ಭವಿಸಿರುವ ಪರ-ವಿರೋಧ ಚರ್ಚೆಗಳು ಕುತೂಹಲವನ್ನು ಹುಟ್ಟುಹಾಕುತ್ತಿವೆ. ಮಹಿಳೆಯರು ಹಾಗೂ ಪುರುಷರು ಸಮಾನರು. ಯಾರಿಗೂ ವಂಚನೆ ಆಗಬಾರದು ಎಂಬ ದೃಷ್ಟಿಯಲ್ಲಿ ಸುಪ್ರೀಂ ಕೋರ್ಟು ಈ ಆದೇಶ ನೀಡಿದೆ ಎಂಬುದು ಕೆಲವರ ವಾದ. ಹೌದು ಒಪ್ಪಿಕೊಳ್ಳತಕ್ಕದ್ದು. ಆದರೆ ಧಾರ್ಮಿಕ ಕ್ಷೇತ್ರಗಳಿಗೆ ಲಿಂಗತ್ವ ಸಮಾನ ಧೋರಣೆಯನ್ನು ಅನ್ವಯಿಸುವ ಮೊದಲು ದೇಶದ ಇನ್ನೂ ಹಲವು ಕ್ಷೇತ್ರಗಳಲ್ಲಿ ಮಹಿಳೆ-ಪುರುಷರನ್ನು ಸರಿ ಸಮಾನವಾಗಿ ಪರಿಗಣಿಸಲಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡಬೇಕಿತ್ತು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶೇ. 50 ಮಹಿಳಾ ಮೀಸಲಾತಿ ಮಸೂದೆ ಇನ್ನೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿಲ್ಲ. ಹೀಗಿರುವಾಗ ದೇಗುಲಕ್ಕೆ ಮಹಿಳಾ ಪ್ರವೇಶವನ್ನು ಲಿಂಗ ಸಮಾನತೆಯ ದೃಷ್ಟಿಕೋನದಿಂದ ನೋಡಲಾಗದು. ಹಾಗಿದ್ದರೆ ಶಬರಿಮಲೆ ಕುರಿತಾದ ಆ ತೀರ್ಪನ್ನು ಬದಿಗಿಟ್ಟು ಯೋಚಿಸುವುದಾರೆ ಪ್ರತಿ ವ್ಯವಸ್ಥೆಯಲ್ಲೂ ಸಮಾನತೆಯನ್ನು  ಕಾಯ್ದುಕೊಳ್ಳುವಂತಾಗಬೇಕು.

ಭಾರತದ ಸಂಸ್ಕೃತಿ ನಂಬಿಕೆ ಮತ್ತು ದೇವರ ಭಯದ ಮೇಲೆ ನಿಂತಿದೆ. ಭಾರತೀಯ ನಾರಿಗೆ ಧರ್ಮದ ಆಚರಣೆಯನ್ನು ಹೇರಬೇಕಾಗಿಲ್ಲ ಅದು ಅಕೆಯಲ್ಲಿ ರಕ್ತಗತವಾಗಿದೆ.  ಯಾರೇ ಆಗಲಿ ಆಯಾ ಕ್ಷೇತ್ರಗಳ ಅಥವಾ ಸನ್ನಿಧಾನದ ಕಟ್ಟುಪಾಡುಗಳನ್ನು ಅನುಸರಿಸಿಕೊಂಡು ದೇವರ ದರ್ಶನ ಪಡೆಯಬೇಕೆ ಹೊರತು ನಮ್ಮ ಅನುಕೂಲತೆಗಳಿಗೆ ದೇವಸ್ಥಾನವನ್ನು ಬಳಸಿಕೊಳ್ಳುವುದು ಸಾಧುವಲ್ಲ.

ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next