Advertisement

ಭೂ ಮಂಜೂರಾತಿ ಸಂದರ್ಭದಲ್ಲಿ ದಲಿತರಿಗೆ ತಾರತಮ್ಯ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

08:57 PM Nov 06, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಫಾರಂ ನಂಬರ್‌ 50, 53ರ ಅನ್ವಯ ಭೂ ಮಂಜೂರಾತಿ ಸಂದರ್ಭದಲ್ಲಿ ದಲಿತರಿಗೆ ತಾರತಮ್ಯ ಮಾಡಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದ್ದು, ಈ ಬಗ್ಗೆ ಕೇಂದ್ರ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ನೀಡುವ ಸಾಲ ಸೌಲಭ್ಯ ಹಾಗೂ ಸಹಾಯಧನ ಅನುಷ್ಠಾನ ಸಂಬಂಧ ಎಲ್ಲ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಒಂದೇ ಗ್ರಾಮದ ಒಂದೇ ಸರ್ವೆ ನಂಬರ್‌ನಲ್ಲಿ ಸಾಮಾನ್ಯ ಹಾಗೂ ಹಿಂದುಳಿದ ವರ್ಗದವರು ಸಲ್ಲಿಸಿದ ಅರ್ಜಿ ಆಧರಿಸಿ ಭೂಮಂಜೂರು ಮಾಡಲಾಗಿದೆ. ಆದರೆ ದಲಿತರಿಗೆ ತಾರತಮ್ಯ ಮಾಡಲಾಗಿದೆ. ಮಂಜೂರು ದಾಖಲೆ, ಹಕ್ಕುಪತ್ರ ಪಡೆದ ದಲಿತರಿಗೆ ಜಮೀನಿನ ಹತ್ತಿರ ಹೋಗುವುದಕ್ಕೂ ಅವಕಾಶ ನೀಡಿಲ್ಲ. ಈ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಮೇಲ್ವರ್ಗದವರಿಗೆ ಅವಕಾಶ ನೀಡಿ, ದಲಿತರಿಗೆ ಅನ್ಯಾಯ ಮಾಡಲಾಗಿದೆ. ಇಂಥ 4000 ದಿಂದ 5000 ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಈ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚೆಯಾಗಬೇಕಿದ್ದು, ಕೇಂದ್ರ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ನೈತಿಕವಾಗಿ ಸರಿಯಲ್ಲ : ಉಚಿತ ಯೋಜನೆಗಳ ಘೋಷಣೆ ಮಾಡಿದ ಬಳಿಕ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕರ್ನಾಟಕದಲ್ಲೂ ಈಗ ಅದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿಶೇಷ ಯೋಜನೆ (ಎಸ್‌ಸಿಪಿ ಹಾಗೂ ಟಿಎಸ್‌ಪಿ ) ಅನ್ವಯ ಹಂಚಿಕೆಯಾಗಿದ್ದ ಸುಮಾರು 11 ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿದೆ. ಚುನಾವಣೆಗೆ ಮುನ್ನ ಈ ಬಗ್ಗೆ ಆಕ್ಷೇಪ ಎತ್ತಿದವರು ಈಗ ಅದೇ ತಪ್ಪನ್ನು ತಾವೇ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಈ ರೀತಿ ಬಳಕೆ ಮಾಡಿರುವುದು ಕಾನೂನು ಪ್ರಕಾರ ಸರಿ ಎನ್ನಿಸಿರಬಹುದು, ಆದರೆ ನೈತಿಕವಾಗಿ ಸರಿಯೇ ? ಎಂದು ಪ್ರಶ್ನಿಸಿದರು.

ಇಕ್ವಿಟಿ ಶೇರ್‌ ಕೊಡುತ್ತಿಲ್ಲ : ವಿಶ್ವಕರ್ಮ ಯೋಜನೆ ಅನುಷ್ಠಾನದಲ್ಲಿ ಆಂಧ್ರಪ್ರದೇಶದ ಬಳಿಕ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಇಂಥ ಯೋಜನೆಗಳ ಅನುಷ್ಠಾನಕ್ಕಾಗಿ ಇಕ್ವಿಟಿ ಷೇರುಗಳನ್ನು ಎಲ್ಲ ರಾಜ್ಯಗಳಿಗೆ ಈ ಹಿಂದೆ ಬಿಡುಗಡೆ ಮಾಡುತ್ತಿತ್ತು. ಆದರೆ ಹಲವು ರಾಜ್ಯಗಳು ಸಾಲಕ್ಕೆ ಗ್ಯಾರಂಟಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ಸಿಬಿಲ್‌ ಸ್ಕೋರ್‌ ವಿನಾಯಿತಿ ನೀಡಿ ಶೇ.4ರಿಂದ ಶೇ.5ರಷ್ಟು ಸಾಲ ಸೌಲಭ್ಯ ನೀಡುವಂತೆ ಸೂಚನೆ ನೀಡಲಾಗಿದೆ. ಆದರೆ ತಳ ಹಂತದಲ್ಲಿ ಬ್ಯಾಂಕರ್ಸ್‌ಗಳು ಇದಕ್ಕೆ ಬೆಂಬಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ನಡೆಸಲು ಸೂಚನೆ ನೀಡಲಾಗಿದೆ ಎಂದರು.

Advertisement

ಸಭೆ ನಡೆಸದಂತೆ ನೋಟಿಸ್‌ : ಗರಂ ಆದ ಸಚಿವ
ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳ ಜತೆಗೆ ಪ್ರಗತಿ ಪರಿಶೀಲನೆ ಸಭೆ ನಡೆಸುವುದಕ್ಕೆ ಅವಕಾಶ ಇಲ್ಲವೆಂದು ನೋಟಿಸ್‌ ನೀಡುವ ಮೂಲಕ ರಾಜ್ಯ ಸರ್ಕಾರ ಸಭೆ ನಡೆಸುವುದಕ್ಕೆ ಅಡ್ಡಿಪಡಿಸಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನನಗೆ ನೋಟಿಸ್‌ ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲಾ ಮಟ್ಟದ ಸಭೆ ನಡೆಸಿ ಆದರೆ ರಾಜ್ಯಮಟ್ಟದ ಸಭೆ ನಡೆಸುವುದು ಬೇಡ ಎಂದರೆ ಏನರ್ಥ ? ಈ ಬಗ್ಗೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಇದು ಹಕ್ಕುಚ್ಯುತಿಯಾಗುತ್ತದೆ ಎಂದು ಹೇಳಿದ್ದೇನೆ ಎಂದರು.

ಮೂಲಗಳ ಪ್ರಕಾರ ಈ ಘಟನೆಯಾದ ಬಳಿಕ ಖುದ್ದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕುಮಾರಕೃಪಾ ಅತಿಥಿಗೃಹಕ್ಕೆ ಖುದ್ದು ಭೇಟಿ ನೀಡಿ ಸಭೆ ನಡೆಸಲು ಎಲ್ಲ ಅವಕಾಶ ನೀಡುತ್ತೇವೆಂದು ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಪಂಚರಾಜ್ಯ ಚುನಾವಣೆ ಬಳಿಕ ವಿಪಕ್ಷ ನೇಮಕ
ಪಂಚರಾಜ್ಯ ಚುನಾವಣೆ ಬಳಿಕ ವಿಪಕ್ಷ ನಾಯಕರನ್ನು ನೇಮಿಸಲಾಗುವುದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ. ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ನಾವು ಎಡವಿದ್ದೇವೆ. ಇದರಿಂದ ಹಿನ್ನಡೆಯಾಗುತ್ತಿರುವುದು ನಿಜ. ಪಂಚರಾಜ್ಯ ಚುನಾವಣೆ ಬಳಿಕ ನೇಮಕವಾಗುತ್ತದೆ. ರಾಜ್ಯದ ಹಿತದೃಷಿಯಿಂದ ಜೆಡಿಎಸ್‌ ಜತೆಗೆ ಮೈತ್ರಿ ಅಗತ್ಯ ಇದೆ ಎಂದು ರಾಷ್ಟ್ರೀಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಮೋದಿ, ಅಮಿತ್‌ ಶಾ ನಿರ್ಧಾರದಂತೆ ಕೆಲಸ ಮಾಡುವುದು ನಮ್ಮ ಸಂಸ್ಕಾರ ಹಾಗೂ ಧರ್ಮ ಎಂದು ಅಭಿಪ್ರಾಯಪಟ್ಟರು.

ದಲಿತ ಸಿಎಂ ಕೂಗಿಗೆ ಪ್ರತಿಕ್ರಿಯಿಸಿ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವುದು ನಿಲ್ಲಬೇಕು. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ದಲಿತರ ಜನಸಂಖ್ಯೆ ಶೇ.18ರಿಂದ ಶೇ.25ಕ್ಕೆ ಏರಿಕೆಯಾದರೂ ಸಿಎಂ ಪಟ್ಟ ಸಿಕ್ಕಿಲ್ಲ. ದಲಿತರು ಹಾಗೂ ಹಿಂದುಳಿದ ವರ್ಗದವರು ಬಿ ಫಾರ್ಮ್ಗಾಗಿ ಇನ್ನೂ ಮನೆ ಬಾಗಿಲು ಕಾಯಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next