Advertisement

ರಾಫ್ಟಿಂಗ್ ನಲ್ಲಿ ಶಿಸ್ತು ತರುವುದು ಮುಖ್ಯ

01:35 PM May 04, 2022 | Team Udayavani |

ಕಾರವಾರ: ಜಲ ಸಾಹಸ ಕ್ರೀಡೆಗಳನ್ನು ಜೊಯಿಡಾ ದಾಂಡೇಲಿ ಭಾಗದಲ್ಲಿ ಬ್ಯಾನ್‌ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸ್ಪಷ್ಟಪಡಿಸಿದರು.

Advertisement

ಏ.14 ರಂದು ರಾಫ್ಟ್‌ ಒಂದರಲ್ಲಿ ಹೆಚ್ಚಿನ ಪ್ರವಾಸಿಗರನ್ನು ಹಾಗೂ ಮಕ್ಕಳನ್ನು ಕುಳ್ಳಿರಿಸಿ ರಾಫ್ಟ್‌ ಮಾಡಿ, ಅವಘಡವಾದ ವಿಡಿಯೋ ವೈರಲ್‌ ಆದ ಕಾರಣ, ಆ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಯಿತು. ಎಸ್ಪಿ ಸುಮನ್‌, ಎಸಿ ಸೇರಿದಂತೆ ನಾನು ಸಹ ಸ್ಥಳಕ್ಕೆ ಭೇಟಿ ಮಾಡಿದ್ದೆವು. ರಾಫ್ಟಿಂಗ್ ನಲ್ಲಿ ಶಿಸ್ತು ತರುವುದಷ್ಟೇ ನಮ್ಮ ಉದ್ದೇಶವಾಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾ ಭವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂಚಾಯಿತಿಯಿಂದ ಟ್ರೇಡ್‌ ಪರವಾನಿಗೆ ಪಡೆಯುವುದು ಕಡ್ಡಾಯ.

ರಾಫ್ಟಿಂಗ್ ಸೇರಿದಂತೆ ಜಲ ಸಾಹಸ ಕ್ರೀಡೆ ನಡೆಸುವವರು 9 ರಿಂದ 10 ಉದ್ಯಮಿಗಳ ಮಾತ್ರ ಇದ್ದು, ಅವರು ತಮ್ಮ ಸಮಸ್ಯೆಗಳನ್ನು ಲಿಖೀತವಾಗಿ ಅಥವಾ ಮೌಖೀಕವಾಗಿ ನನಗೆ ನೀಡಿಲ್ಲ. ನಾವು ಕರೆದ ಸಭೆಯಲ್ಲಿ ಸಹ ಆಕ್ಷೇಪ ಎತ್ತಿಲ್ಲ. ಈಗಲೂ ಸಮಯವಿದೆ. ಜೊಯಿಡಾದ ಅವೆಡಾ ಪಂಚಾಯಿತಿಯಲ್ಲಿ ಮೇ 4 ಮತ್ತು 5 ರಂದು ಎಲ್ಲಾ ಪರವಾನಿಗೆಗಳನ್ನು ಏಕ ಗಾವಾಕ್ಷಿಯಲ್ಲಿ ನೀಡಲು ಅವಕಾಶ ಕಲ್ಪಿಸುತ್ತೇವೆ. ಜಲ ಸಾಹಸ ಚಟುವಟಿಕೆ ನಡೆಸುವವರು ಈಗಾಗಲೇ ಹೊಂದಿರುವ ದಾಖಲೆಗಳನ್ನು ಹಾಜರುಪಡಿಸಿ, ಪರವಾನಗಿ ನವೀಕರಿಸಿಕೊಂಡು ಜಲ ಸಾಹಸ ಕ್ರೀಡೆ ಮುಂದುವರಿಸಬಹುದು. ಪರವಾನಗಿ ಪಡೆಯದವರು ಹೊಸದಾಗಿ ಪರವಾನಗಿ ಪಡೆದುಕೊಳ್ಳಬಹುದು. ಒಳನಾಡು ಜಲಸಾರಿಗೆ ಇಲಾಖೆ ಅನುಮತಿ, ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅನುಮತಿಯನ್ನು ಒಂದೇ ದಿನ, ಒಂದೇ ಜಾಗದಲ್ಲಿ ನೀಡಲಾಗುವುದು. ಶಾರ್ಟ್‌ ರಾಫ್ಟಿಂಗ್ ಸಹ ಮಾಡಬಹುದು. ದೀರ್ಫ್‌ ರಾಫ್ಟಿಂಗ್ ಮಾಡುವವರು ಎಷ್ಟೇ ಬೋಟ್‌ ಇಟ್ಟುಕೊಂಡಿರಲಿ, ಅದಕ್ಕೆ ಸೆಕ್ಯುರಿಟಿ ಡೆಪಾಜಿಟ್‌ ಇಡಬೇಕಾಗುತ್ತದೆ. ಈ ಮಾದರಿ ಕೊಡಗಿನಲ್ಲಿದೆ. ಡೆಪಾಜಿಟ್‌ ಮೊತ್ತು ನಿಯಮ ಬದ್ಧವಾಗಿ ನಡೆಸಿದಲ್ಲಿ ಪ್ರತಿವರ್ಷ ಹಿಂತಿರುಗಿಸಲಾಗುವುದು. ಹಾಗೂ ಪ್ರತಿ ವರ್ಷ ಪರವಾನಗಿ ನವೀಕರಿಸಲಾಗುವುದು. ಬೋಟಿಂಗ್‌ ದರದ ವಿಷಯದಲ್ಲಿ ಹಾಗೂ ರಾಫ್ಟಿಂಗ್ ಡೆಪಾಜಿಟ್‌ ವಿಷಯದಲ್ಲಿ ಹಾಗೂ ಪ್ರವಾಸೋದ್ಯಮ ಸಮಿತಿ ವಿಷಯದಲ್ಲಿ ಉದ್ಯಮಿಗಳು ತಮ್ಮ ಅಭಿಪ್ರಾಯ ತಿಳಿಸಬಹುದು. ಚರ್ಚೆಗೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಶಿಸ್ತು ಹಾಗೂ ಪ್ರವಾಸಿಗರ ಹಿತ ಕಾಯುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ನಿಯಮಗಳನ್ನು ಒಮ್ಮಲೇ ಹೇರುವುದಿಲ್ಲ. 9 ಜನ ಉದ್ಯಮಿಗಳು ಜಿಲ್ಲಾಧಿಕಾರಿಗೆ ಲಿಖೀತ ಮನವಿ ಸಹ ನೀಡಲಿಲ್ಲ. ಸೇಫ್ಟಿ ಪ್ರವಾಸೋದ್ಯಮ ನಡೆಸಿ ಎಂದು ಪಂಚಾಯತ್‌ ಮೂಲಕ ನೋಟಿಸ್‌ ನೀಡಲಾಗಿತ್ತು. ಈಗ ಪಂಚಾಯತ್‌ ಮೂಲಕ ಪರವಾನಿಗೆ ನೀಡಲಾಗುತ್ತದೆ. ಬೋಟಿಂಗ್‌ ರಾಫ್ಟಿಂಗ್ ಮಾಡುತ್ತೇವೆ ಎಂದು ವಿವರಗಳನ್ನು ನೀಡಿದರೆ ಸಾಕು. ಹಾಗೂ ಒಳನಾಡು ಜಲಸಾರಿಗೆ ಇಲಾಖೆ ನೀಡಿದ ಅನುಮತಿ, ವೃತ್ತಿಪರ ಸಾರಂಗ ಪ್ರಮಾಣ ಪತ್ರ ಪಡೆಯಬೇಕು. ಈಗಾಗಲೇ ಪಡೆದವರು ಅದನ್ನು ಹಾಜರು ಪಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

ಪ್ರವಾಸೋದ್ಯಮಿಗಳಿಗೆ ತೊಂದರೆ ಕೊಡುವ ಯಾವುದೇ ಉದ್ದೇಶ ನಮಗಿಲ್ಲ. ಪ್ರವಾಸಿಗರು ಹಾಗೂ ಉದ್ಯಮಿಗಳು ಇಬ್ಬರಿಗೂ ಅನುಕೂಲವಾಗಬೇಕು ಎಂದು ಜಿಲ್ಲಾಧಿಕಾರಿಗಳು, ನಿಯಮಬದ್ಧವಾಗಿ ಉದ್ಯಮ ನಡೆಸಿ ಎಂದರು.

ದಾಂಡೇಲಿ-ಜೊಯಿಡಾ ಭಾಗದಲ್ಲಿ ಜಲಕ್ರೀಡೆಗಳು ನಿಂತಿಲ್ಲ: ದಾಂಡೇಲಿ ಜೊಯಿಡಾ ಭಾಗದಲ್ಲಿ ಜಲ ಕ್ರೀಡೆಗಳು ನಿಂತಿಲ್ಲ. ಕಾಳಿ ನದಿಯಲ್ಲಿ ಒಂದು ಅವಘಡ ನಡೆಯಿತು. ಅದೃಷ್ಟವಾಶತ್‌ ಯಾರಿಗೂ ಏನೂ ಆಗಿಲ್ಲ. ಈ ಘಟನೆ ನಂತರ ಎಲ್ಲಾ ಉದ್ಯಮಿಗಳ ದಾಖಲೆ ಪರಿಶೀಲಿಸಿ ಎಂದಷ್ಟೇ ನಾನು ಹೇಳಿದ್ದೆ. ಉದ್ಯಮಿಗಳ ದಾಖಲೆ ತೋರಿಸಿ ಜಲ ಸಾಹಸ ಕ್ರೀಡೆಗಳನ್ನು ಮುಂದುವರಿಸಲಿ ಎಂಬ ಉದ್ದೇಶ ನನ್ನದಾಗಿತ್ತು. ಹೊಸ ನಿಯಮಗಳು, ಡೆಪಾಜಿಟ್‌ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದ್ದ ಕಾರಣ ಅದರ ವಿವರಗಳನ್ನು ಮಾಧ್ಯಮಗಳಿಗೆ ನೀಡಿರಲಿಲ್ಲ. ಆದರೆ ಉದ್ಯಮಿಗಳಿಗೆ ಈ ವಿಷಯ ತಿಳಿಸಲಾಗಿತ್ತು. ಇದಕ್ಕೆ ಉದ್ಯಮಿಗಳು ಪ್ರತಿಕ್ರಿಯೆ ನೀಡಲಿಲ್ಲ. ಚರ್ಚೆಗೂ ಬರಲಿಲ್ಲ. ಡಿಪಾಜಿಟ್‌ ಕಡಿಮೆ ಮಾಡಿ ಎಂದು ಮನವಿಯನ್ನೂ ಸಹ ಸಲ್ಲಿಸಲಿಲ್ಲ. ಹಾಗಾಗಿ ಈ ಸಂಗತಿಯಲ್ಲಿ ಕೆಲವರಿಗೆ ತಪ್ಪು ಗ್ರಹಿಕೆಯಾಗಿದೆ. ಕೋವಿಡ್‌ ಸಮಯದಲ್ಲಿ ಉದ್ಯಮ ಬಂದ್‌ ಆಗಿದ್ದು ನನಗೂ ಗೊತ್ತಿದೆ. ಈಗ ನಾವು ಇದ್ದಕ್ಕಿದ್ದಂತೆ ಹೊಸದಾಗಿ ಕಠಿಣ ನಿಯಮ ಹೇರುವ ವಿಚಾರವಿಲ್ಲ. ಆದರೆ ಉದ್ಯಮಿಗಳು ನಮ್ಮೊಡನೆ ಚರ್ಚಿಸಲಿ ಎಂದರು.

ಪರವಾನಿಗೆ ಇಲ್ಲದವರು ಪರವಾನಿಗೆ ಪತ್ರಗಳನ್ನು ಪಡೆದು, ಇದ್ದವರು ಅಧಿಕಾರಿಗಳಿಗೆ ದಾಖಲೆ ತೋರಿಸಿ ಉದ್ಯಮ ಪ್ರಾರಂಭಿಸಲಿ ಎಂದರು.

ಎಸ್ಪಿ ಸುಮನ್‌ ಪನ್ನೇಕರ್‌ ಮಾತನಾಡಿ 2013 ರಿಂದ 2022ರ ತನಕ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಸಂಬಂಧ 8 ಪ್ರಕರಣಗಳು ಘಟಸಿವೆ. ಒಂದು ಪ್ರಕರಣದಲ್ಲಿ ಮಾತ್ರ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಮೂರರಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ನಾಲ್ಕು ಪ್ರಕರಣಗಳು ಗಂಭೀರವಾದವುಗಳಲ್ಲ. ಒಂದು ಘಟನೆ ರಾಫ್ಟಿಂಗ್ ಗೆ ಪ್ರವಾಸಿಗರನ್ನು ಕರೆತರುವ ವಿಚಾರದಲ್ಲಿ ನಡೆದ ಮಧ್ಯವರ್ತಿಗಳ ಮಧ್ಯದ ಜಗಳ ಪ್ರಕರಣವಾಗಿದೆ ಎಂದರು. ಸಿಇಒ ಪ್ರಿಯಾಂಕಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next