Advertisement

ಅಂಗವಿಕಲರು ಸ್ವಾವಲಂಬಿಗಳಾಗಲಿ: ನ್ಯಾ|ವಸ್ತ್ರಮಠ

12:05 PM Jul 06, 2017 | |

ಚಿತ್ರದುರ್ಗ: ಅಂಗವಿಕಲರು ಎನ್ನುವ ಕೊರಗು ಬೇಡ. ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನು ಧೈರ್ಯವಾಗಿ 
ಎದುರಿಸಿ ಸಮಾಜದ ಮುಖ್ಯವಾಹಿನಿಗೆ ಬರುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ
ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಕರೆ ನೀಡಿದರು. 

Advertisement

ಇಲ್ಲಿನ ಲೋಕಾಯುಕ್ತ ಕಚೇರಿ ಆವರಣದಲ್ಲಿರುವ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ್‌, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಮೊಬಿಲಿಟಿ ಇಂಡಿಯಾ ಬೆಂಗಳೂರು, ಬಸವೇಶ್ವರ ವಿದ್ಯಾಸಂಸ್ಥೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ವಿಕಲಚೇತನರಿಗೆ ಸಾಧನ ಸಲಕರಣೆ ಗುರುತಿಸುವ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಅಂಗವಿಕಲರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಹಾಗಂತ ಸುಮ್ಮನೆ ಕೂರಬೇಡಿ. ಸ್ವಾವಲಂಬಿಗಳಾಗಿ ದುಡಿದು ನಮ್ಮಲ್ಲೂ ಸಾಮರ್ಥ್ಯವಿದೆ ಎಂಬುದನ್ನು ಸಮಾಜಕ್ಕೆ ತೋರಿಸಿ. ಎರಡು ಕಣ್ಣಿಲ್ಲದ ಬಸವರಾಜ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗಣಿತ ಹೇಳಿಕೊಡುತ್ತಾರೆ. ಎರಡು ಕಾಲಿಲ್ಲದ ವ್ಯಕ್ತಿಯೋರ್ವ ಕೈಗಳ ಸಹಾಯದಿಂದ ಬೆಟ್ಟ ಹತ್ತಿರುವುದುಂಟು. ಎಲ್ಲದ್ದಕ್ಕೂ ಛಲ, ಮಾಡುವ ಮನಸ್ಸಿರಬೇಕು ಎಂದರು.

ಮಕ್ಕಳು ಹುಟ್ಟುವಾಗಲೇ ಬುದ್ದಿಮಾಂದ್ಯರು ಇಲ್ಲವೇ ಅಂಗವಿಕಲರಾಗಿದ್ದರೆ ನಿರ್ಲಕ್ಷ ಮಾಡದೆ ಬೆಂಗಳೂರಿನ ನಿಮ್ಹಾನ್ಸ್‌, ಶಿವಮೊಗ್ಗ, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ತೋರಿಸಿ. ಅವರ ಸಲಹೆಯಂತೆ ಬೇರೆ ಕಡೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದರು. ಪ್ರತಿಯೊಬ್ಬರೂ ಹದ್ದುಗಳ ರೀತಿಯಲ್ಲಿ ಬಾಳಬೇಕು. ಹದ್ದು ಮೋಡವನ್ನು ಮೀರಿ ಹಾರಾಡುತ್ತದೆ. ನಿಮ್ಮ ಜೀವನ ಹದ್ದಿನಂತಾಗಬೇಕು ಎಂದು ಆಶಿಸಿದರು. ಕಣ್ಣಿಲ್ಲದವರಿಗೂ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದ ನಂತರ ಸರ್ಕಾರಿ ಇಲಾಖೆಯಲ್ಲಿ ಅಂಧರಿಗೂ ಕೆಲಸ
ಸಿಗುತ್ತಿದೆ. ಮರಣದ ನಂತರ ಎಲ್ಲರೂ ಕಣ್ಣುಗಳನ್ನು ದಾನ ಮಾಡುವುದರಿಂದ ಅಂಧತ್ವ ನಿವಾರಣೆಯಾಗಲು
ಸಹಕಾರಿಯಾಗುತ್ತದೆ ಎಂದರು.

ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮಾತನಾಡಿ, ಜಿಲ್ಲಾದ್ಯಂತ ಅಂಗವಿಕಲರಿಗೆ ಸಾಧನ
ಸಲಕರಣೆಗಳನ್ನು ಒದಗಿಸಲು ಎಲ್ಲ ತಾಲೂಕುಗಳಲ್ಲಿ ಅಸೆಸ್‌ಮೆಂಟ್‌ ನಡೆದಿದೆ. ಮೊಳಕಾಲ್ಮೂರು ತಾಲೂಕಿನಲ್ಲಿ 
ಈ ಕೆಲಸ ಆಗಬೇಕಿದೆ. ಯಾರಿಗೆ ಯಾವ ಸಾಧನ ಬೇಕು ಎಂಬುದನ್ನು ಪತ್ತೆ ಮಾಡಿ ಮುಂದಿನ ದಿನಗಳಲ್ಲಿ ಪೂರೈಕೆ
ಮಾಡಲಾಗುವುದು ಎಂದು ತಿಳಿಸಿದರು. ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್‌.ಆರ್‌. ದಿಂಡಲಕೊಪ್ಪ ಮಾತನಾಡಿ, ಅಂಗವೈಕಲ್ಯಕ್ಕೆ ಕಾರಣ ಏನು ಎಂಬುದನ್ನು ಮೊದಲು ಹುಡುಕಬೇಕಿದೆ. ಕೆಲವೊಮ್ಮೆ ಹುಟ್ಟಿನಿಂದ ಬಂದರೆ ಇನ್ನು ಕೆಲವರು ಅನುವಂಶೀಯವಾಗಿ ಅಂಗವಿಕಲರಾಗುವುದುಂಟು. ರಕ್ತ ಸಂಬಂಧಗಳಲ್ಲಿ ಹೆಚ್ಚು 
ವಿವಾಹಗಳಾಗುವುದರಿಂದಲೂ ಅಂಗವಿಕಲರಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಎಲ್ಲವನ್ನು ಯೋಚಿಸಿ ನಿರ್ಧಾರ
ತೆಗೆದುಕೊಳ್ಳಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್‌.ಬಿ. ವಿಶ್ವನಾಥ, ಬೆಂಗಳೂರಿನ ಮೊಬಿಲಿಟಿ ಇಂಡಿಯಾದ ರಿಯಾಜ್‌, ವಿವೇಕ್‌, ಜಿಲ್ಲಾಸ್ಪತ್ರೆಯ ಡಾ| ಸುರೇಶ್‌, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ. ಶಂಕರಪ್ಪ 
ಭಾಗವಹಿಸಿದ್ದರು. ಶ್ರುತಿ ಪ್ರಾರ್ಥಿಸಿದರು, ಮಂಜುನಾಥ್‌ ನಾಡರ್‌ ಸ್ವಾಗತಿಸಿದರು, ಸಿದ್ದಪ್ಪ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next