Advertisement

ಅಪರಾಧ ಪ್ರಕರಣ ಕಡಿವಾಣಕ್ಕೆ ನಿರ್ದೇಶನ

11:57 AM Jul 10, 2017 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ
ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ತಿಂಗಳಿನಿಂದ ಜಿಲ್ಲೆಯಲ್ಲಿ ಅದರಲ್ಲೂ ಮಹಾನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ತಮ್ಮ ಗಮನಕ್ಕೂ ಬಂದಿದೆ. ಇದು ತುಂಬಾ ಕಳವಳಕಾರಿ ಸಂಗತಿಯಾಗಿದೆ. ನಿರಂತರ ಕೊಲೆ ಸುಲಿಗೆ ಪ್ರಕರಣಗಳಿಂದ ಜನರು ಭೀತಿಗೆ ಒಳಗಾಗುತ್ತಿದ್ದಾರೆ. ಇದನ್ನು ಮನಗಂಡು ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಅಪರಾಧ ಪ್ರಕರಣ ಹತ್ತಿಕ್ಕಲು ಸೂಕ್ತ ಕ್ರಮಕ್ಕೆ ಮುಂದಾಗುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ದೂರು ಸಲ್ಲಿಸಲು ಠಾಣೆಗೆ ಹೋದರೆ ಪೊಲೀಸರು ದೂರು ಸ್ವೀಕರಿಸದೇ ಅಸಡ್ಡೆ ತೋರುವುದು ಸರಿಯಲ್ಲ. ದೂರು ಸ್ವೀಕರಿಸಲೇಬೇಕು. ಒಂದು ವೇಳೆ ದೂರು ಸ್ವೀಕರಿಸದಿದ್ದಲ್ಲಿ ತಮ್ಮ ಗಮನಕ್ಕೆ ತರಬೇಕು.ಯಾವುದೇ ಕಾರಣಕ್ಕೂ ಭಯಪಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಶೀಘ್ರದಲ್ಲಿಯೇ ಪೊಲೀಸ್‌ ಆಯುಕ್ತಾಲಯ: ಕಲಬುರಗಿ ಮಹಾನಗರದಲ್ಲಿ ಪೊಲೀಸ್‌ ಕಮಿಷ°ರ್‌ ಕಚೇರಿ ಪ್ರಾರಂಭ ಮಾಡುವ ಕುರಿತು ಬಜೆಟ್‌ನಲ್ಲಿ ಘೋಷಣೆಯಾಗಿದೆ. ಕಾರ್ಯ ಪ್ರಗತಿ ಹಂತದಲ್ಲಿದೆ. ಆದಷ್ಟು ಬೇಗನೇ ಪೊಲೀಸ್‌ ಕಮಿಷನರ್‌ ಕಚೇರಿ ಆರಂಭವಾಗಲಿದೆ. ಇದಾದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಮತ್ತಷ್ಟು ಬಲ ಬಂದಂತಾಗುತ್ತದೆ. ಪೊಲೀಸ್‌ ಇಲಾಖೆಯಲ್ಲಿ ರಾಜಕೀಯ
ಹಸ್ತಕ್ಷೇಪ ಹೆಚ್ಚಳವಾಗಿದ್ದಕ್ಕೆ ಅಪರಾಧ ಪ್ರಕರಣ ಹೆಚ್ಚಳವಾಗಲು ಕಾರಣ ಎನ್ನಲಾಗುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ 
ಸಚಿವರು, ತಾವಂತೂ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಿಲ್ಲ. ಆದರೆ ಬೇರೆ ಯಾರಾದರೂ ಮಾಡಿದ್ದರೆ ಅದಕ್ಕೆ
ಇಲಾಖೆ ಕಿವಿಗೊಡಬಾರದು ಎಂದರು.

ಶೇ.80ರಷ್ಟು ಬಾಕಿ ವಿತರಣೆ: ಬೆಂಬಲ ಬೆಲೆಗೆ ತೊಗರಿ ಮಾರಾಟ ಮಾಡಿದ ರೈತರಿಗೆ ಈಗಾಗಲೇ ಶೇ. 80ರಷ್ಟು ರೈತರಿಗೆ ಹಣ ಪಾವತಿಸಲಾಗಿದೆ. ಇನ್ನೂ 20ರಷ್ಟು ರೈತರಿಗೆ ಬಾಕಿ ನೀಡಬೇಕಾಗಿದೆ. ಅದನ್ನು ಸಹ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು. 

Advertisement

ಕಾನೂನು ಅಭಿಪ್ರಾಯ: ಸೇಡಂ ತಾಲೂಕಿನ ಹಂಗನಳ್ಳಿ, ನೃಪತುಂಗ ಗ್ರಾಮಗಳ ರೈತರ ಭೂ ಪರಿಹಾರ ಹೆಚ್ಚಳ ನೀಡುವ ಕುರಿತಾದ ಹೋರಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಈಗಾಗಲೇ ಎರಡು ಸಲ ಸಭೆ ನಡೆಸಲಾಗಿದೆ. ಸಿಮೆಂಟ್‌ ಕಾರ್ಖಾನೆಯವರು ಹೆಚ್ಚಳದ ಪರಿಹಾರ ನೀಡಬೇಕಿದೆ. ಸರ್ಕಾರ ಮಧ್ಯೆ ಪ್ರವೇಶಿಸುವ ನಿಟ್ಟಿನಲ್ಲಿ ಕಾನೂನು ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು. 

ಸಂಪುಟದಲ್ಲಿ ನಿರ್ಣಯ: ಸೇಡಂ ತಾಲೂಕಿನಲ್ಲಿ ಸಿಮೆಂಟ್‌ ಕಾರ್ಖಾನೆಗೆ ಭೂಮಿ ನೀಡುವ ಸಲುವಾಗಿ ಸರ್ಕಾರಿ ಭೂಮಿ ಎನ್‌ಎ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂಮಿ ನೀಡುವ ಬಗ್ಗೆ ಈ ಹಿಂದೆಯೇ ಸಚಿವ
ಸಂಪುಟದಲ್ಲಿ ನಿರ್ಣಯ ಆಗಿದೆ. ಉದ್ಯೋಗಾವಕಾಶ ದೊರಕಬೇಕು ಎಂಬ ನಿಟ್ಟಿನಲ್ಲಿ ಭೂಮಿ ನೀಡಲು ಮುಂದಾಗಿದೆ
ಎಂದು ಸ್ಪಷ್ಟಪಡಿಸಿದರು. ಮದರ್‌ ತೆರೇಸಾ ಶಾಲೆ ಹತ್ತಿರದ ರೇಲ್ವೆ ಮೇಲ್ಸೇತುವೆ ನಿರ್ಮಾಣ ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ 23 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಟ್ರಾಮಾ ಸೆಂಟರ್‌ ಸಹ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿನ ಪ್ರತ್ಯೇಕ ವಾರ್ಡ್‌ ಸ್ಥಾಪನೆಗೂ ಹೆಜ್ಜೆ ಇಡಲಾಗುತ್ತಿದೆ. ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಲಬುರಗಿಯಲ್ಲೂ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ:
ಕಲಬುರಗಿಯಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಇದಾದಲ್ಲಿ ಈ ಭಾಗದ ಜನರಿಗೆ
ಉತ್ಕೃಷ್ಟ ವೈದ್ಯಕೀಯ ಸೇವೆ ಸಿಗಲಿದೆ. ಜಿಲ್ಲಾಸ್ಪತ್ರೆಯಲ್ಲಿ 60 ಹಾಸಿಗೆ ಇರುವ ಎನ್‌ಐಸಿಯು ಘಟಕವನ್ನು 1.60 ಕೋಟಿ
ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಗೆ 
ಹೊಂದಿಕೊಂಡಿರುವುದರಿಂದ ವೈದ್ಯಕೀಯ ಸೇವೆ ಮತ್ತಷ್ಟು ಬಲಗೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next