Advertisement

ರಾಜ್ಯದ ಪಾಲಿನ ಜಿಎಸ್‌ಟಿ ಹಣ ಬಿಡುಗಡೆಗೆ ದಿನೇಶ್‌ ಗುಂಡೂರಾವ್‌ ಆಗ್ರಹ

10:05 AM Dec 08, 2019 | Team Udayavani |

ಬೆಂಗಳೂರು: ಕೇಂದ್ರ ಸರಕಾರ ರಾಜ್ಯದ ಪಾಲಿನ ಜಿಎಸ್‌ಟಿ ಹಣ ಬಿಡುಗಡೆ ಮಾಡದಿದ್ದರೆ ಕೇಂದ್ರದ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳುಗಳಿಂದ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಜಿಎಸ್‌ಟಿ ಅನುದಾನ ಬಿಡುಗಡೆ ಆಗುತ್ತಿಲ್ಲ. ಈ ಬಗ್ಗೆ ಕೇಂದ್ರ ರಾಜ್ಯ ಸರಕಾರಕ್ಕೆ ಪತ್ರ ಬರೆದು ಜಿಎಸ್‌ಟಿ ಹಣ ನೀಡಲಾಗದು ಎಂದು ಹೇಳಿದ್ದು ಇದರಿಂದ ರಾಜ್ಯದ ಅಭಿವೃದ್ದಿ ಮೇಲೆ ಹೊಡೆತ ಬೀಳಲಿದೆ ಎಂದು ಹೇಳಿದರು.

ಯುಪಿಎ ಸರಕಾರ ಜಿಎಸ್‌ಟಿ ಜಾರಿಗೆ ತರಲು ಪ್ರಯತ್ನ ನಡೆಸಿತ್ತು. ಅದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಅನಂತರ ಬಿಜೆಪಿ ಸರಕಾರವೇ ಜಿಎಸ್‌ಟಿ ಜಾರಿಗೆ ತಂದಿದೆ. ಆಗಸ್ಟ್‌ ನಿಂದ ರಾಜ್ಯಕ್ಕೆ ಬರಬೇಕಾಗಿರುವ ಅನುದಾನ ಬಿಡುಗಡೆ ಮಾಡಿಲ್ಲ. 5,600 ಕೋ. ರೂ. ಕರ್ನಾಟಕದ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದೆ. ರಾಜ್ಯಕ್ಕೆ ಇಷ್ಟು ದೊಡ್ಡ ಪ್ರಮಾಣದ ಹಣ ಬಾಕಿ ಉಳಿಸಿಕೊಂಡರೆ ರಾಜ್ಯ ಸರಕಾರ ಹೇಗೆ ಆಡಳಿತ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.

ರಾಜ್ಯ ಪ್ರವಾಹ ಮತ್ತು ಬರಗಾಲದ ಸುಳಿಗೆ ಸಿಲುಕಿದೆ. ಇಂಥ ಪರಿಸ್ಥಿತಿಯಲ್ಲಿ ಹೇಗೆ ಸರಕಾರ ನಡೆಸುವುದು. ಕೇಂದ್ರ ಸರಕಾರ ನಮ್ಮ ಹಣವನ್ನೇ ನಮಗೆ ನೀಡುತ್ತಿಲ್ಲ ಎಂದರೆ ಏನರ್ಥ? ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಇದುವರೆಗೂ ಧ್ವನಿ ಎತ್ತುತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಅವರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next