Advertisement

ಚಕ್ಕರ್‌ ತಡೆಗೆ ಡಿಜಿಟಲ್‌ ಹಾಜರಿ!

10:21 AM Nov 05, 2019 | Suhan S |

ಹುಬ್ಬಳ್ಳಿ: ಶಾಲೆ-ಕಾಲೇಜುಗಳಿಗೆ ಚಕ್ಕರ್‌ ಹಾಕಿ ಕ್ಲಾಸ್‌ಗಳಿಗೆ ಬಂಕ್‌ ಹೊಡೆದು ಹೊರ ಸುತ್ತುವ ವಿದ್ಯಾರ್ಥಿಗಳ ಮನಸ್ಥಿತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಂಜುಮನ್‌ ಇಸ್ಲಾಂ ಸಂಸ್ಥೆ ತಂತ್ರಜ್ಞಾನದ ಮೊರೆ ಹೋಗಿದೆ. ಸಂಸ್ಥೆ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಡಿಜಿಟಲ್‌ ಹಾಜರಾತಿ ಅಳವಡಿಸಿದೆ. ಪಾಲಕರು ತಮ್ಮ ಮಕ್ಕಳ ನಿತ್ಯದ ಹಾಜರಾತಿ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಮೊಬೈಲ್‌ ಎಸ್‌ಎಂಸ್‌ ಮೂಲಕ ಕುಳಿತಲ್ಲೇ ಪಡೆಯಬಹುದಾಗಿದೆ.

Advertisement

ಸಾವಿರಾರು ವಿದ್ಯಾರ್ಥಿಗಳು ಇರುವ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಮೇಲೆ ನಿಗಾ ವಹಿಸುವುದು ಕಷ್ಟ ಸಾಧ್ಯ. ಇದರಿಂದ ವಿದ್ಯಾರ್ಥಿಗಳು ಕಾಲೇಜಿಗೆ, ತರಗತಿಗಳಿಗೆಗೈರಾಗುವುದು, ವಿವಿಧ ಚಟುವಟಿಕೆಗಳಿಂದ ದೂರ ಉಳಿಯುವ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ಅಶಿಸ್ತಿಗೆ ಕಡಿವಾಣ ಹಾಕುವಕಾರಣಕ್ಕೆ ಅಂಜುಮನ್‌ ಇಸ್ಲಾಂ ಸಂಸ್ಥೆಯ ಎಲ್ಲಾ ಕಾಲೇಜುಗಳಿಗೆ ಡಿಜಿಟಲ್‌ ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದೆ.

ಕಾಲೇಜು ಆವರಣ ಪ್ರವೇಶ ಮಾಡುವುದರಿಂದ ಹಿಡಿದು, ಪ್ರತಿಯೊಂದು ವಿಷಯಗಳ ತರಗತಿಯ ಹಾಜರಾತಿ ಡಿಜಿಟಲ್‌ವುಯವಾಗಿದೆ. ಸಂಸ್ಥೆ ವ್ಯಾಪ್ತಿಯ ಪಿಯುಸಿ, ಪದವಿ ಸೇರಿದಂತೆ ಸುಮಾರು 3000 ವಿದ್ಯಾರ್ಥಿಗಳನ್ನು ಈ ವ್ಯವಸ್ಥೆ ವ್ಯಾಪ್ತಿಗೆ ತರಲಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿದಂತೆ ಒಟ್ಟು 5000 ವಿದ್ಯಾರ್ಥಿಗಳು ಡಿಜಿಟಲ್‌ ಹಾಜರಾತಿ ವ್ಯವಸ್ಥೆಗೆ ಬರಲಿದ್ದಾರೆ. ಈ ವ್ಯವಸ್ಥೆಗೆವಾರ್ಷಿಕವಾಗಿ ಓರ್ವ ವಿದ್ಯಾರ್ಥಿಗೆ 160 ರೂ. ಖರ್ಚಾಗಲಿದೆ. ಈ ವ್ಯವಸ್ಥೆ ಪಡೆಯಲು ಪಾಲಕರಿಗೆ ಸ್ಮಾರ್ಟ್‌ಫೋನ್‌ ಬೇಕಾಗಿಲ್ಲ.

ತರಗತಿಯಲ್ಲೂ ಮೊಬೈಲ್‌  ಆ್ಯಪ್‌ ಬಳಸಿ ಹಾಜರಾತಿ : ತರಗತಿಗಳಲ್ಲೂ ಕೂಡ ಪ್ರತಿಯೊಂದು ವಿಷಯದ ಬೋಧಕರು ಡಿಜಿಟಲ್‌ ಹಾಜರಾತಿ ತೆಗೆದುಕೊಳ್ಳುತ್ತಾರೆ. ಪ್ರತಿಯೊಬ್ಬ ಉಪನ್ಯಾಸಕರಿಗೆ ಮೊಬೈಲ್‌ ಆ್ಯಪ್‌ ನೀಡಲಾಗಿದ್ದು, ಅದರಲ್ಲೇ ವಿದ್ಯಾರ್ಥಿಗಳ ಹಾಜರಿ ತೆಗೆದುಕೊಳ್ಳುತ್ತಾರೆ. ತರಗತಿಗಳಿಗೆ ಬಾರದ ವಿದ್ಯಾರ್ಥಿಗಳನ್ನು ಗೈರು ಎಂದು ನಮೂದಿಸುತ್ತಿದ್ದಂತೆ ಪಾಲಕರಿಗೆ ಎಸ್‌ ಎಂಎಸ್‌ ರವಾನೆಯಾಗುತ್ತದೆ. ಕೂಡಲೇ ಪಾಲಕರು ಕಾಲೇಜಿಗೆ ಕರೆ ಮಾಡಿ ತಮ್ಮ ಮಕ್ಕಳು ತರಗತಿಗೆ ಆಗಮಿಸದ ಕುರಿತು ಖಾತ್ರಿ ಪಡಿಸಿಕೊಳ್ಳಬಹುದು. ಮೂರು ದಿನಗಳ ಕಾಲ ಗೈರಾದರೆ ಕಾಲೇಜಿನಿಂದಲೇ ಪಾಲಕರಿಗೆ ಕರೆ ಮಾಡಿ ಕಾಲೇಜಿಗೆ ಕರೆಯಿಸಿಕೊಂಡು ಕಾರಣ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

 ಹಾಜರಾತಿ ಅಷ್ಟೇ ಅಲ್ಲ, ಶೈಕ್ಷಣಿಕ ವಿವರವೂ ಲಭ್ಯ: ಡಿಜಿಟಲ್‌ ವ್ಯವಸ್ಥೆಯನ್ನು ಕೇವಲ ಹಾಜರಾತಿಗೆ ಸೀಮಿತಗೊಳಿಸಿಲ್ಲ. ಬೋಧನಾ ಶುಲ್ಕ, ಪರೀಕ್ಷಾ ವೇಳಾಪಟ್ಟಿ, ರಜೆ ದಿನಗಳು, ವಿಶೇಷ ಕಾರ್ಯಕ್ರಮಗಳ ಮಾಹಿತಿ, ಪಾಲಕರ ಸಭೆ, ಕಿರು ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳ ವಿಷಯವಾರು ಫಲಿತಾಂಶ ಕೂಡ ಮೊಬೈಲ್‌ ಸಂದೇಶದ ಮೂಲಕ ಪಾಲಕರಿಗೆ ತಿಳಿಯಲಿದೆ. ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ವಿವರಗಳು ಎಸ್‌ಎಂಎಸ್‌ ಮೂಲಕ ಅರಿಯಬಹುದಾಗಿದೆ. ಹೀಗಾಗಿ ತಮ್ಮ ಚಟುವಟಿಕೆಗಳು ತಮ್ಮ ಪಾಲಕರಿಗೆ ಗೊತ್ತಾಗಲಿದೆ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳಲ್ಲಿ ಒಂದಿಷ್ಟು ಭಯ ಹಾಗೂ ಶಿಸ್ತು ಮೂಡಲು ಕಾರಣವಾಗಿದೆ.

Advertisement

 ಶಿಕ್ಷಕರಿಗೂ ಇದೇ ಹಾಜರಾತಿ ವ್ಯವಸ್ಥೆ ಕಡ್ಡಾಯ! : ಡಿಜಿಟಲ್‌ ಹಾಜರಾತಿ ವ್ಯವಸ್ಥೆ ಶಿಕ್ಷಕರಿಗೂ ಕಡ್ಡಾಯಗೊಳಿಸಲಾಗಿದೆ. ಸಂಬಂಧಿಸಿದ ಕಾಲೇಜುಗಳ ಶಿಕ್ಷಕರ ಹಾಜರಾತಿ ಆಯಾ ಪ್ರಾಚಾರ್ಯರು ನಿರ್ವಹಿಸುತ್ತಾರೆ. ಶಿಕ್ಷಕರು ಕೂಡ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗುವಂತಾಗಿದೆ. ಈ ವ್ಯವಸ್ಥೆ ನಿರ್ವಹಣೆಗಾಗಿ ಪ್ರತಿಯೊಂದು ಕಾಲೇಜುಗಳಲ್ಲಿ ಪ್ರತ್ಯೇಕ ಕೇಂದ್ರಗಳನ್ನು ಮಾಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರವೇಶ ದ್ವಾರದಿಂದಲೇ ಆರಂಭ : ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಸಂಖ್ಯೆ ಹೊಂದಿದ ಚಿಪ್‌ ಆಧಾರಿತ ಐಡಿ ಕಾರ್ಡ್‌ ನೀಡಲಾಗಿದೆ. ಕಾಲೇಜು ಪ್ರವೇಶ ದ್ವಾರದಲ್ಲಿ ಈ ಕಾರ್ಡ್‌ನ್ನು ಗುರುತಿಸುವ ಸೆನ್ಸಾರ್‌ ಆಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿ ಕಾಲೇಜು ಪ್ರವೇಶಿಸುತ್ತಿದ್ದಂತೆಯೇ ಹಾಜರಾತಿ ಆರಂಭವಾಗುತ್ತದೆ. ಹೊರ ಹೋಗಬೇಕಾದರೂ ಇದೇ ಸೆನ್ಸಾರ್‌ ಬ್ಯಾರಿಕೇಡ್‌ ಮೂಲಕವೇ ಹೋಗಬೇಕು. ಹೀಗಾಗಿ ಒಳ ಮತ್ತು ಹೊರ ಹೋಗುವ ಪ್ರತಿ ಬಾರಿಯ ಸಂದೇಶಗಳು ಪಾಲಕರ ಮೊಬೈಲ್‌ಗೆ ರವಾನೆಯಾಗುತ್ತದೆ. ಹೀಗಾಗಿ ತಮ್ಮ ಮಕ್ಕಳು ಕಾಲೇಜಿನಲ್ಲಿ ಎಷ್ಟು ಸಮಯ ಇದ್ದರೂ ಎನ್ನುವುದು ಖಾತ್ರಿಯಾಗಲಿದೆ.

 ಕ್ಲಾಸ್‌ಗೆ ಬಂಕ್‌ ಹಾಕುವವರ ಪ್ರಮಾಣದಲ್ಲಿ ಭಾರೀ ಇಳಿಕೆ :  ಈ ವ್ಯವಸ್ಥೆ ಜಾರಿಯಾದ ನಂತರದಲ್ಲಿ ಹಾಜರಾತಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಾರ್ಡ್‌ಗಳನ್ನು ಸಹಪಾಠಿಗಳಿಗೆ ನೀಡಿ ದುರುಪಯೋಗ ಪಡಿಸಿಕೊಂಡರೂ ತರಗತಿಯ ಹಾಜರಾತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕಾಲೇಜಿಗೆ ಬಂದು ತರಗತಿಗಳಿಗೆ ಬಂಕ್‌ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಬಂಕ್‌ ಹೊಡೆದು ಬೀದಿ ಬೀದಿ ಸುತ್ತುತ್ತಿದ್ದ ವಿದ್ಯಾರ್ಥಿಗಳಿಗಂತೂ ಇದು ಯಾಕಾದರೂ ಬಂತು ಎಂದು ಗೊಣಗುವಂತಾಗಿದೆ. ಪಾಲಕರ ಭಯದಿಂದಲಾದರೂ ವಿದ್ಯಾರ್ಥಿಗಳು ಕ್ಲಾಸಿಗೆ ಬಂದು ನಾಲ್ಕು ಅಕ್ಷರ ಕಲಿಯುತ್ತಾರಲ್ಲ ಎನ್ನುವ ನಿರೀಕ್ಷೆ ಸಂಸ್ಥೆಗಿದೆ.

ಡಿಜಿಟಲ್‌ ಹಾಜರಾತಿ ವ್ಯವಸ್ಥೆ ಜಾರಿಯಾದ ನಂತರ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಶೇ.99 ಹಾಜರಾತಿಯಿದೆ. ಈವ್ಯವಸ್ಥೆ ಅಳವಡಿಸಿದ ಸಂಸ್ಥೆ ಎಂಬ ಹೆಗ್ಗಳಿಕೆ ನಮ್ಮ ಸಂಸ್ಥೆಗಿದೆ. ಪ್ರಾಯೋಗಿಕವಾಗಿ ಕಾಲೇಜು ಹಂತದಲ್ಲಿ ಯಶಸ್ವಿಯಾಗಿದೆ. ಇದನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೂ ವಿಸ್ತರಿಸಲು ಚಿಂತಿಸಲಾಗಿದ್ದು, ಶೀಘ್ರದಲ್ಲಿ ಜಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದು ಹಾಗೂ ಅವರ ಸುರಕ್ಷತೆ ಕಾಪಾಡುವುದು ಇದರ ಉದ್ದೇಶವಾಗಿದೆ. -ಮಹ್ಮದ್‌ ಯುಸೂಫ್‌ ಸವಣೂರ, ಅಧ್ಯಕ್ಷ, ಅಂಜುಮನ್‌ ಇಸ್ಲಾಂ ಸಂಸ್ಥೆ

 ನಮ್ಮ ಒಳ್ಳೆಯದಕ್ಕಾಗಿ ಡಿಜಿಟಲ್‌ ಹಾಜರಾತಿ ಜಾರಿಗೆ ತಂದಿದ್ದಾರೆ. ಇದು ಬಂದಾಗಿನಿಂದ ಹೊರಗಡೆ ತಿರುಗಾಡುವುದು ಕಡಿಮೆಯಾಗಿದೆ. ಹೊರಗಡೆ ಹೋದರೆ ನಮ್ಮ ತಂದೆಗೆ ಮೆಸೇಜ್‌ ಹೋಗುತ್ತದೆ ಎನ್ನುವ ಭಯವಿದೆ. ಹೀಗಾಗಿ ಒಮ್ಮೆ ಒಳ ಬಂದರೆ ಕಾಲೇಜು ಮುಗಿದ ನಂತರವೇ ಹೊರ ಹೋಗುತ್ತಿದ್ದೇವೆ. ಇದರಿಂದ ನಮ್ಮಲ್ಲಿ ಕಾಲೇಜಿನ ಶಿಸ್ತು ಮೂಡಲು ಕಾರಣವಾಗಿದೆ. – ಸಾನಿಯಾ ಶೇಖ್‌, ಕಾಲೇಜು ವಿದ್ಯಾರ್ಥಿನಿ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next