Advertisement

1ರಿಂದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ: ಒಆರ್‌ಎಸ್‌-ಜಿಂಕ್‌ ಮಾತ್ರೆ ವಿತರಣೆ

05:34 PM Jul 29, 2022 | Team Udayavani |

ಧಾರವಾಡ: ಜಿಲ್ಲೆಯ ಐದು ವರ್ಷದೊಳಗಿನ 2,13,000 ಮಕ್ಕಳಿಗೆ ಆ.1ರಿಂದ 15ರವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ವಾರವನ್ನು ಆಚರಿ ಸಲಾಗುತ್ತಿದ್ದು, ಈ ಪಾಕ್ಷಿಕ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಡಿಸಿ ಗುರುದತ್ತ ಹೆಗಡೆ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಸಂದರ್ಭದಲ್ಲಿ ಐದು ವರ್ಷದೊಳಗಿನ ಪ್ರತಿ ಮಗುವಿನ ಮನೆಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಒಂದು ಪಾಕೆಟ್‌ ಒಆರ್‌ಎಸ್‌ ಮತ್ತು ಭೇಟಿ ನೀಡಿದ ಮನೆಯಲ್ಲಿ ಮಗುವಿಗೆ ಭೇದಿ ಆಗುತ್ತಿದ್ದರೆ ಒಂದು ಜಿಂಕ್‌ ಮಾತ್ರೆಯನ್ನು ನೀಡುತ್ತಾರೆ. ಮಗುವಿಗೆ ಅತಿಸಾರ ಭೇದಿ ಉಂಟಾದಾಗ ತಕ್ಷಣ ಆರೈಕೆಗಾಗಿ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತಿಳಿಸಿಕೊಡಲಿದ್ದಾರೆ ಎಂದರು.

ಜಿಲ್ಲಾ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಾಧಿಕಾರಿಗಳು, ತಾಲೂಕು ವೈದ್ಯಾ ಧಿಕಾರಿಗಳು, ಸ್ಥಾನಿಕ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಇಲಾಖಾ ಕಾರ್ಯಕ್ರಮಗಳ ಉದ್ದೇಶ ಈಡೇರುವಂತೆ ನಿಗಾವಹಿಸಿ ಆಸಕ್ತಿಯಿಂದ ಮಾಡಬೇಕು. ಜಿಲ್ಲೆಯಲ್ಲಿ ಶಿಶು ಮರಣ, ತಾಯಿ ಮರಣ ಕಡಿಮೆಯಾಗುವಂತೆ ಅಗತ್ಯ ಚಿಕಿತ್ಸೆಯನ್ನು ತಕ್ಷಣ ನೀಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕೋವಿಡ್‌ ಮುನ್ನೆಚ್ಚರಿಕಾ (ಬೂಸ್ಟರ್‌ ಡೋಸ್‌) ಲಸಿಕಾ ಕಾರ್ಯಕ್ರಮವನ್ನು ತೀವ್ರಗೊಳಿಸಬೇಕು. ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಅಗತ್ಯವಾಗಿದ್ದು, ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮತ್ತು ಲಸಿಕಾಕರಣದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದರು.

Advertisement

ಜಂತುಹುಳು ಮಾತ್ರೆ ಹಂಚಿಕೆ: ಜಿಪಂ ಸಿಇಒ ಡಾ| ಸುರೇಶ ಇಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಆ.10ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಆಚರಿಸಲಾಗುತ್ತದೆ. ಜಿಲ್ಲೆಯ 1ರಿಂದ 19 ವರ್ಷದೊಳಗಿನ 6,83,058 ಮಕ್ಕಳಿಗೆ ಜಂತುಹುಳು ನಿವಾರಣೆಗಾಗಿ ಅಲ್ಬೆಂಡಝೋಲ್‌ ಮಾತ್ರೆಯನ್ನು ನೀಡಲಾಗುತ್ತದೆ. ಆ.10ರಂದು ಎಲ್ಲ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿಯೂ ಮಕ್ಕಳಿಗೆ ಅಲ್ಬೆಂಡಝೋಲ್‌ ಮಾತ್ರೆಯನ್ನು ನೀಡಲಾಗುತ್ತದೆ. ಆ.17ರಂದು ಮತ್ತೂಂದು ಬಾರಿ ಶಾಲೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಆ.10ರಂದು ಜಂತುಹುಳು ನಿವಾರಣಾ ಮಾತ್ರೆ ಪಡೆಯದ ಮಕ್ಕಳಿಗೆ ಮಾತ್ರ ಅಲ್ಬೆಂಡಝೋಲ್‌ ಮಾತ್ರೆ ನೀಡುತ್ತಾರೆ ಎಂದು ತಿಳಿಸಿದರು.

ವಿವಿಧ ಕಾರಣಗಳಿಂದಾಗಿ ಮಕ್ಕಳಿಗೆ ಬರುವ ಗೊಬ್ಬರ ಕಾಯಿಲೆಯನ್ನು ನಿಯಂತ್ರಿಸಲು ಮಗುವಿಗೆ 9 ತಿಂಗಳು ಪೂರ್ಣವಾದಾಗ ಪ್ರಥಮ ಡೋಸ್‌ ಹಾಗೂ 16ರಿಂದ 24 ತಿಂಗಳೊಳಗಾಗಿ 2ನೇ ಡೋಸ್‌ ನೀಡಬೇಕು. ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ನೀಡುತ್ತಾರೆ. ಚುಚ್ಚುಮದ್ದು ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು ಪ್ರತಿ ಶಾಲೆಗೆ ಭೇಟಿ ನೀಡಿ 5ರಿಂದ 6 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಚುಚ್ಚುಮದ್ದು ಹಾಗೂ 10 ಮತ್ತು 16 ವರ್ಷದ ಮಕ್ಕಳಿಗೆ ಟಿಡಿ ಚುಚ್ಚುಮದ್ದನ್ನು ಹಾಕಲಾಗುತ್ತದೆ. ಈ ಕಾರ್ಯಕ್ರಮಗಳು ನಿರಂತರವಾಗಿದ್ದು, ಶಾಲಾ ಮುಖ್ಯಸ್ಥರು ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಪ್ರತಿ ಅರ್ಹ ಮಗುವಿಗೆ ಚುಚ್ಚುಮದ್ದು ದೊರೆಯುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಬಿ.ಸಿ. ಕರಿಗೌಡರ, ಆರ್‌ಸಿಎಚ್‌ಒ ಡಾ|ಎಸ್‌.ಎಂ ಹೊನಕೇರಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ| ಸುಜಾತಾ ಹಸವಿಮಠ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿ ಕಾರಿ ಡಾ| ಮಂಜುನಾಥ ಸೊಪ್ಪಿಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾ ಧಿಕಾರಿ ಡಾ|ಎಸ್‌.ಬಿ ಕಳಸೂರಮಠ, ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿ ಡಾ| ಶಶಿಕಲಾ ಎಂ. ನಿಂಬಣ್ಣವರ, ಜಿಲ್ಲಾಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಟಿ.ಎ. ಶೆಪೂರ, ಡಾ| ನಾಡಗೌಡ, ಡಿಐಸಿಯ ಡಾ| ಅಂಗಡಿ ಇನ್ನಿತರರಿದ್ದರು.

ಜಿಲ್ಲೆಯಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಲಸಿಕಾಕರಣ ಹೆಚ್ಚಿಸಬೇಕು. ಪ್ರತಿವಾರದ ಮೂರು ದಿನ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗ್ರಾಮ ಹಾಗೂ ವಾರ್ಡ್‌ ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ಸಂಸ್ಥೆ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ವಿಶೇಷ ಯೋಜನೆ ರೂಪಿಸಿಕೊಂಡು ಲಸಿಕಾಕರಣ ಯಶಸ್ವಿಗೊಳಿಸಬೇಕು. –ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ಶಾಲಾ ಮಕ್ಕಳಿಗೆ ಲಸಿಕಾಕರಣ ಯೋಜಿತ ರೀತಿಯಲ್ಲಿ ನಡೆಯಬೇಕು. ಲಸಿಕಾಕರಣದಿಂದ ಯಾವ ಒಂದು ಮಗುವೂ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಕಾರ್ಯದಲ್ಲಿ ಪಿಡಿಒಗಳು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗುವುದು. ಪ್ರತಿ ಗ್ರಾಪಂ ವ್ಯಾಪ್ತಿಯ ಪ್ರೌಢಶಾಲೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸಮೀಕ್ಷೆ ಮಾಡಿ ಲಸಿಕಾಕರಣಕ್ಕೆ ಆದ್ಯತೆ ನೀಡಲಾಗುವುದು. –ಡಾ| ಸುರೇಶ ಇಟ್ನಾಳ, ಜಿಪಂ ಸಿಇಒ

ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಕಾರ್ಯಕ್ರಮಗಳು, ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ಮಲೇರಿಯಾ, ಕುಷ್ಠರೋಗ, ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ, ದೂಮಪಾನ ಹಾಗೂ ತಂಬಾಕು ಉತ್ಪನ್ನಗಳ ನಿಷೇಧ ಕಾಯ್ದೆಯ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಪ್ರಗತಿ ಪರಿಶೀಲಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next