Advertisement

ಕುಂದಾಪುರ: ಡಯಾಲಿಸಿಸ್‌ ನಿರ್ವಹಣೆ ಕಳಪೆ,  ರೋಗಿಗಳಿಂದ ಆರೋಪ

10:12 PM Dec 14, 2022 | Team Udayavani |

ಕುಂದಾಪುರ: ಕುಂದಾಪುರ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ಮತ್ತೆ ಡಯಾಲಿಸಿಸ್‌ ಕೇಂದ್ರದ ನಿರ್ವಹಣೆ ಕುರಿತು ಆರೋಪಗಳ ಸುರಿಮಳೆ ಕೇಳಿಬರುತ್ತಿದೆ. ರಾಜ್ಯ ಸರಕಾರ ಸಂಸ್ಥೆಯೊಂದಕ್ಕೆ ನಿರ್ವಹಣೆಗೆ ಕೊಟ್ಟಿದ್ದು ಸಾರ್ವಜನಿಕರು ಚಿಕಿತ್ಸೆ ಸರಿಯಾಗಿ ದೊರೆಯುತ್ತಿಲ್ಲ ಎಂದು ದೂರುತ್ತಿದ್ದಾರೆ,.

Advertisement

ಯಂತ್ರಗಳ ಒದಗಣೆ
ಹಳೆ ಯಂತ್ರಗಳು ದುರಸ್ತಿಯಾಗಿರಲಿಲ್ಲ. ಅವುಗಳನ್ನು ತಯಾರಿಸಿದ ಸಂಸ್ಥೆಯೂ ಯಾವುದೋ ಕಾರಣದಿಂದ ನಿರ್ವಹಣೆಗೆ ಒಪ್ಪಿರಲಿಲ್ಲ. ಹಳೆಯದು ನಾದುರಸ್ತಿ, ಹೊಸದು ನಾಸ್ತಿ ಎಂಬ ಸ್ಥಿತಿ ಬಂದಿತ್ತು. ಕೊನೆಗೆ ಶಾಸಕರ ಶಿಫಾರಸಿನ ಮೇರೆಗೆ ಪುರಸಭೆ ಡಯಾಲಿಸಿಸ್‌ ಯಂತ್ರವನ್ನು ನೀಡಿದ್ದು ರೋಗ್ಯ ರಕ್ಷಾ ಸಮಿತಿ ಮೂಲಕವೂ ಖರೀದಿಸಲಾಗಿತ್ತು. ಈ ಮೂಲಕ 5 ಯಂತ್ರಗಳು ಇದ್ದು ಅವುಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಿರ್ವಹಣೆ ಹೊಣೆ ಹೊಸ ಸಂಸ್ಥೆಗೆ
ಮೊದಲು ರಾಜ್ಯದ ವಿವಿಧೆಡೆ ಬಿಆರ್‌ಎಸ್‌ ಸಂಸ್ಥೆ ಡಯಾಲಿಸಿಸ್‌ ನಿರ್ವಹಣೆ ಮಾಡುತ್ತಿತ್ತು. ಅಲ್ಲೇನೋ ಸಮಸ್ಯೆಯಾದ ಬಳಿಕ ಅದನ್ನು ಬಿಟ್ಟು ಸಂಜೀವಿನಿ ಎಂಬ ಸಂಸ್ಥೆ ನಿರ್ವಹಿಸಲಿ ಎಂದು ಸರಕಾರ ಸೂಚಿಸಿದಂತೆ ಈಗ ನಿರ್ವಹಣೆ ಹೊಣೆ ಸಂಜೀವಿನಿ ಸಂಸ್ಥೆಯ ಹೆಗಲಲ್ಲಿದೆ. ಬಿಆರ್‌ಎಸ್‌ ಸಂಸ್ಥೆ ನಿರ್ವಹಣೆ ಕೈಬಿಟ್ಟು ಸಂಜೀವಿನಿ ಸಂಸ್ಥೆ ವಹಿಸಿಕೊಳ್ಳುವ ಮಧ್ಯದ ಅವಧಿಯಲ್ಲಿ ಇಲ್ಲಿ ಸರಕಾರಿ ಆಸ್ಪತ್ರೆ ವೈದ್ಯರು, ಸಿಬಂದಿಯೇ ನಿರ್ವಹಣೆ ನಡೆಸುತ್ತಿದ್ದರು.

ದೂರು
ಈಗಿನ ನಿರ್ವಹಣೆ ಸಂಸ್ಥೆಯ ಕಾರ್ಯನಿರ್ವಹಣೆ ಕುರಿತು ಜನರಿಂದ ಪುಂಖಾನುಪುಂಖವಾಗಿ ದೂರು ಕೇಳಿ ಬರುತ್ತಿದೆ. ಪುನಃ ಅದೇ ಕಳಪೆ ನಿರ್ವಹಣೆಗೆ ಬಂದು ತಲುಪಿದೆ. ಅಧಿ ಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ತುಂಬ ಕಳಪೆ ಗುಣಮಟ್ಟದ ವಸ್ತುಗಳ ಪೂರೈಕೆಯಾಗುತ್ತಿದೆ. ಅಗತ್ಯ ಪ್ರಮಾಣದಲ್ಲಿ ಇಂಜೆಕ್ಷನ್‌ಗಳ ಪೂರೈಕೆಯಾಗುತ್ತಿಲ್ಲ. ರೋಗಿಗಳ ಪ್ರಾಣಕ್ಕೆ ಸಂಚಕಾರದ ಅಪಾಯವಿದೆ.

ಇಂಜೆಕ್ಷನ್‌ಗಳನ್ನು ಕೊಡಬೇಕಾದ ಕಂಪೆನಿ ಯಾವುದನ್ನು ಕೊಡದೆ ಸರಕಾರಕ್ಕೆ ವಂಚನೆ ಮಾಡುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

Advertisement

ಗಮನ ಅಗತ್ಯ
ಒಟ್ಟಿನಲ್ಲಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಆಸ್ಪತ್ರೆ ಆಡಳಿತ, ಸರಕಾರ, ನಿರ್ವಹಣೆ ಮಾಡುವ ಸಂಸ್ಥೆಯ ನಡುವಿನ ಸಮನ್ವಯದ ಕೊರತೆ, ನಿರ್ವಹಣೆಯಲ್ಲಿ ಲೋಪದಿಂದ ಡಯಾಲಿಸಿಸ್‌ ರೋಗಿಗಳಿಗೆ ಚಿಕಿತ್ಸೆಗೆ ಎರವಾಗುತ್ತಿದೆ. ಈ ಕುರಿತು ತತ್‌ಕ್ಷಣ ಗಮನ ಹರಿಸುವ ಅಗತ್ಯವಿದೆ. ಆಸ್ಪತ್ರೆಯ ಚಿಕಿತ್ಸೆಯನ್ನೇ ನಂಬಿ ಬರುವವರಿಗೆ ಇಲ್ಲಿನ ಒಳ ರಾಜಕೀಯದಿಂದಾಗಿ, ಬಡವರ ಚಿಕಿತ್ಸೆಯಲ್ಲೂ ಲಾಭ ಮಾಡಿಕೊಳ್ಳಲು ನೋಡುವವರಿಂದಾಗಿ “ಪ್ರಾಣಕಂಟಕ’ವಾಗಬಾರದು.

5 ಯಂತ್ರಗಳು
ಮೊದಲು 5 ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದವು. 38 ರೋಗಿಗಳು ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಮ್ಮೆ ಚಿಕಿತ್ಸೆ ಆರಂಭವಾದರೆ ಆಜೀವಪರ್ಯಂತ ವಾರದಲ್ಲಿ 2 ಬಾರಿ ಚಿಕಿತ್ಸೆ ಬೇಕಾಗುತ್ತದೆ. ಒಂದು ಬಾರಿಯ ಚಿಕಿತ್ಸೆಗೆ ಕನಿಷ್ಠ 3 ಗಂಟೆಯ ಅವಧಿ ಬೇಕಾಗುತ್ತದೆ. ಯಂತ್ರಗಳು ಕೈ ಕೊಟ್ಟಾಗ ರೋಗಿಗಳಿಗೆ ನಿಶ್ಚಿತ ಅವಧಿ ತಪ್ಪಿಸಿ ಬೇರೆ ಬೇರೆ ಅವಧಿಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. 5 ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದವುಗಳ ಪೈಕಿ ಏಕಾಏಕಿ 2 ಯಂತ್ರಗಳು ಹಾಳಾದವು. ಅದಾದ ಬಳಿಕವೂ 1 ಯಂತ್ರ ಹಾಳಾಯಿತು. ಈಗ ಎಲ್ಲವೂ ಸರಿಯಿದೆ ಎಂದು ಆಸ್ಪತ್ರೆ ಆಡಳಿತ ಸ್ಪಷ್ಟನೆ ನೀಡುತ್ತಿದೆ. ಆದರೆ ರೋಗಿಗಳ ಕಡೆಯವರು ದೂರು ಮಾತ್ರ ನಿಂತಿಲ್ಲ.

ತನಿಖೆ
ಆಸ್ಪತ್ರೆಯ ಫಿಸಿಶಿಯನ್‌ ಡಾ| ನಾಗೇಶ ಅವರ ಮೂಲಕ ಡಯಾಲಿಸಿಸ್‌ ಕುರಿತಾಗಿ ಕೇಳಿ ಬಂದ ಆರೋಪಗಳ ದೂರನ್ನು ತನಿಖೆ ಮಾಡಲಾಗಿದೆ. ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಳುಹಿಸಲಾಗಿದೆ. ಅಲ್ಲಿಂದ ಸರಕಾರಕ್ಕೆ ಕಳುಹಿಸಲಾಗುತ್ತಿದೆ. ಈ ಸಂಸ್ಥೆಯ ನಿರ್ವಹಣೆ ಕುರಿತು ರಾಜ್ಯಾದ್ಯಂತ ದೂರುಗಳಿವೆ ಎನ್ನಲಾಗಿದೆ. ಸಂಸ್ಥೆಯವರು ತಮ್ಮ ಮಾನದಂಡದಂತೆ ನಿರ್ದಿಷ್ಟ ಪ್ರಮಾಣದ ಹಿಮೋಗ್ಲೋಬಿನ್‌ ಇದ್ದವರಿಗಷ್ಟೇ ಇಂಜೆಕ್ಷನ್‌ ನೀಡುತ್ತಿದ್ದಾರೆ, ಇದನ್ನು ರೋಗಿಗಳ ಕಡೆಯವರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next