Advertisement

ಒತ್ತಡ ನಿವಾರಿಸಿದ ಧವನ್‌: ಅಯ್ಯರ್‌ ಪ್ರಶಂಸೆ

09:14 AM Apr 22, 2019 | Team Udayavani |

ಹೊಸದಿಲ್ಲಿ: ಶಿಖರ್‌ ಧವನ್‌ ಒದಗಿಸಿದ ಉತ್ತಮ ಆರಂಭದಿಂದಾಗಿ ಅನಂತರದ ಆಟಗಾರರ ಮೇಲಿನ ಒತ್ತಡ ಕಡಿಮೆಯಾಯಿತು ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದರು. ಶನಿವಾರ ರಾತ್ರಿ ಕೋಟ್ಲಾದಲ್ಲಿ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದ ಬಳಿಕ ಅವರು ಪ್ರತಿಕ್ರಿಯಿಸುತ್ತಿದ್ದರು.

Advertisement

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 7 ವಿಕೆಟಿಗೆ 163 ರನ್‌ ಗಳಿಸಿದರೆ, ಡೆಲ್ಲಿ 19.4 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್‌ ಬಾರಿಸಿ 10 ಪಂದ್ಯಗಳಲ್ಲಿ 6ನೇ ಜಯ ಸಾಧಿಸಿತು. ಇನ್ನೊಂದೆಡೆ ಪಂಜಾಬ್‌ 10 ಪಂದ್ಯಗಳಲ್ಲಿ 5ನೇ ಸೋಲನುಭವಿಸಿತು.

“ಶಿಖರ್‌ ಧವನ್‌ ಉತ್ತಮ ಆರಂಭ ಒದಗಿಸಿದ್ದರಿಂದ ಉಳಿದವರ ಕೆಲಸ ಸುಲಭವಾಯಿತು. ಅವರು ಭರ್ಜರಿ ಓಪನಿಂಗ್‌ ನೀಡಿದರು. ಪವರ್‌ ಪ್ಲೇ ವೇಳೆ 50 ರನ್‌ ಬಂದರೆ ಅದು ಅತ್ಯುತ್ತಮ ಆರಂಭ. ನಾವು ಈ ಅವಧಿಯಲ್ಲಿ 60 ರನ್‌ ಹೊಡೆದೆವು’ ಎಂದು ಅಯ್ಯರ್‌ ಹೇಳಿದರು.

14ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದ ಶಿಖರ್‌ ಧವನ್‌ 41 ಎಸೆತಗಳಿಂದ 56 ರನ್‌ ಬಾರಿಸಿದರು (7 ಬೌಂಡರಿ, 1 ಸಿಕ್ಸರ್‌). ಪೃಥ್ವಿ ಶಾ (13) ಬೇಗ ಔಟಾದರೂ ಧವನ್‌-ಅಯ್ಯರ್‌ ಸೇರಿಕೊಂಡು 92 ರನ್‌ ಜತೆಯಾಟ ನಿಭಾಯಿಸುವಲ್ಲಿ ಯಶಸ್ವಿಯಾದರು. ಧವನ್‌ ನಿರ್ಗಮನದ ಬಳಿಕ ಸಂಪೂರ್ಣ ಬ್ಯಾಟಿಂಗ್‌ ಜವಾಬ್ದಾರಿ ಹೊತ್ತುಕೊಂಡ ಅಯ್ಯರ್‌ 49 ಎಸೆತಗಳಿಂದ 58 ರನ್‌ ಬಾರಿಸಿ ಅಜೇಯರಾಗಿ ಉಳಿದರು (5 ಬೌಂಡರಿ, 1 ಸಿಕ್ಸರ್‌). ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿದು ಬಂತು.

3 ಸೋಲುಗಳ ಬಳಿಕ ಜಯ
“ತವರಿನಲ್ಲಿ ಅನುಭವಿಸಿದ ಸತತ 3 ಸೋಲಿನ ಬಳಿಕ ನಾವು ಗೆಲುವಿನ ಸಂಭ್ರಮ ಆಚರಿಸುತ್ತಿದ್ದೇವೆ. ನಾನಿಂದು ಹೆಚ್ಚಿನ ಜವಾಬ್ದಾರಿ ವಹಿಸಿದೆ. ಕೊನೆಯ ವರೆಗೂ ಕ್ರೀಸಿನಲ್ಲಿ ಉಳಿದದ್ದು ಸಮಾಧಾನ ತಂದಿದೆ. ಉಳಿದ ಪಂದ್ಯಗಳಲ್ಲೂ ಇದೇ ಬ್ಯಾಟಿಂಗ್‌ ಫಾರ್ಮ್ ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ’ ಎಂದು ಶ್ರೇಯಸ್‌ ಅಯ್ಯರ್‌ ಹೇಳಿದರು.

Advertisement

ಕೋಟ್ಲಾ ಪಿಚ್‌ ತಮ್ಮ ತಂಡದ ಆಟಗಾರರ ಶೈಲಿಗೆ ಹೇಳಿಸಿದಂತಿಲ್ಲ ಎಂದೂ ಅಯ್ಯರ್‌ ಅಭಿಪ್ರಾಯಪಟ್ಟರು. “ಇದು ತೀರಾ ನಿಧಾನ ಗತಿಯ ಪಿಚ್‌. ಇಲ್ಲಿ ಬಿರುಸಿನ ಆಟಕ್ಕಿಳಿಯಬೇಕಾದರೆ ಬಹಳ ವೇಳೆ ಹಿಡಿಯುತ್ತದೆ. ವಿಕೆಟ್‌ ಉಳಿಸಿಕೊಂಡ ಬಳಿಕವಷ್ಟೇ ದೊಡ್ಡ ಹೊಡೆತ ಬಾರಿಸಲು ಸಾಧ್ಯ’ ಎಂದರು.

ಸಂದೀಪ್‌ ಸಾಹಸಕ್ಕೆ ಪ್ರಶಂಸೆ
ನೇಪಾಲದ ಲೆಗ್‌ಸ್ಪಿನ್ನರ್‌ ಸಂದೀಪ್‌ ಲಮಿಚಾನೆ ಬೌಲಿಂಗ್‌ ಸಾಹಸವನ್ನೂ ಅಯ್ಯರ್‌ ಕೊಂಡಾಡಿದರು. “ಸಂದೀಪ್‌ ತುಂಬು ಆತ್ಮವಿಶ್ವಾಸದ ಬೌಲರ್‌. ರನ್‌ ಸೋರಿಹೋದಾಗ ಅವರು ಬಲಿಷ್ಠರಾಗಿ ತಿರುಗಿ ಬೀಳುತ್ತಾರೆ. ನಿರ್ಭೀತ ಸ್ವಭಾವದ ಸಂದೀಪ್‌, ಅಮಿತ್‌ ಮಿಶ್ರಾರ ಅನುಭವದ ಲಾಭವನ್ನೂ ಪಡೆಯುತ್ತಿದ್ದಾರೆ’ ಎಂದರು.

ರನ್‌ ಕೊರತೆ ಕಾಡಿತು: ಅಶ್ವಿ‌ನ್‌
ಮಂಜಿನ ಕಾರಣದಿಂದ ತಂಡದ ಮೊತ್ತದಲ್ಲಿ ಕೊರತೆ ಕಾಡಿತು ಎಂದ ಪಂಜಾಬ್‌ ಕಪ್ತಾನ ಆರ್‌. ಅಶ್ವಿ‌ನ್‌, “ಗೇಲ್‌ ಅವರ ಬಿರುಸಿನ ಆಟದ ಹೊರತಾಗಿಯೂ ತಂಡದ ಸ್ಕೋರ್‌ ಕಡಿಮೆಯಾಯಿತು. ಮಿಡ್ಲ್ ಆರ್ಡರ್‌ನಲ್ಲಿ ಕ್ಷಿಪ್ರ ವಿಕೆಟ್‌ ಪತನ ಸಂಭವಿಸಿತು. ಮುಜೀಬ್‌ ಗಾಯಾಳದದ್ದೂ ಹಿನ್ನಡೆ ಯಾಗಿ ಪರಿಣಮಿಸಿತು. ಶ್ರೇಯಸ್‌ ಜವಾಬ್ದಾರಿಯುತ ಆಟವಾಡಿದರು’ ಎಂದರು.

ಗೆಲುವು ಅತ್ಯಗತ್ಯವಾಗಿತ್ತು: ಧವನ್‌
ಈ ಗೆಲುವು ಡೆಲ್ಲಿ ಪಾಲಿಗೆ ಅತ್ಯಗತ್ಯವಾಗಿತ್ತು ಎಂಬುದು ಆರಂಭಕಾರ ಶಿಖರ್‌ ಧವನ್‌ ಪ್ರತಿಕ್ರಿಯೆ. “ನಾಕೌಟ್‌ ಹಂತಕ್ಕೆ ಏರಬೇಕಾದರೆ ನಮಗೆ ಈ ಗೆಲುವು ಅತ್ಯಗತ್ಯ ವಾಗಿತ್ತು. ಆದರೆ ಇದಕ್ಕಿಂತ ಚೆನ್ನಾಗಿ ಪಂದ್ಯವನ್ನು ಮುಗಿಸುವತ್ತ ಗಮನ ಹರಿಸಬೇಕಿದೆ. ಮೊದಲ 6 ಓವರ್‌ಗಳ ಲಾಭವೆತ್ತಿದ ಬಳಿಕ ನನ್ನ ಕಾರ್ಯತಂತ್ರವನ್ನು ಬದಲಿಸಿಕೊಂಡೆ. ಇದು ಯಶಸ್ವಿಯಾಯಿತು. ತಂಡಕ್ಕೂ ಲಾಭವಾಯಿತು’ ಎಂದು ಧವನ್‌ ಹೇಳಿದರು.

ಅಶ್ವಿ‌ನ್‌ಗೆ 12 ಲಕ್ಷ ರೂ. ದಂಡ
ಶನಿವಾರ ಕೋಟ್ಲಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲರಾದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಆರ್‌. ಅಶ್ವಿ‌ನ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಪಂಜಾಬ್‌ ಮೊದಲ ಬಾರಿಗೆ ಓವರ್‌ ಗತಿ ಕಾಯ್ದುಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿತ್ತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಕಾಣಿಸಿಕೊಂಡ 4ನೇ ನಿದರ್ಶನ. ಇದೇ ಕಾರಣಕ್ಕಾಗಿ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮ, ರಾಜಸ್ಥಾನ್‌ ನಾಯಕ ಅಜಿಂಕ್ಯ ರಹಾನೆ ಮತ್ತು ಆರ್‌ಸಿಬಿಯ ವಿರಾಟ್‌ ಕೊಹ್ಲಿ ಅವರಿಗೂ ಇಷ್ಟೇ ಮೊತ್ತದ ದಂಡ ವಿಧಿಸಲಾಗಿತ್ತು.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಕಳೆದ 5 ಪಂದ್ಯಗಳಲ್ಲಿ ಮೊದಲ ಸಲ ಪಂಜಾಬ್‌ ವಿರುದ್ಧ ಡೆಲ್ಲಿ ಜಯ ಸಾಧಿಸಿತು. ಡೆಲ್ಲಿ ಕೊನೆಯ ಸಲ ಪಂಜಾಬ್‌ ವಿರುದ್ಧ ಜಯ ದಾಖಲಿಸಿದ್ದು 2017ರ ಕೋಟ್ಲಾ ಪಂದ್ಯದಲ್ಲಿ. ಅಂತರ 51 ರನ್‌.
* ಶಿಖರ್‌ ಧವನ್‌ ಐಪಿಎಲ್‌ ಚರಿತ್ರೆಯಲ್ಲಿ 500 ಬೌಂಡರಿ ಬಾರಿಸಿದ ಮೊದಲ ಕ್ರಿಕೆಟಿಗನೆನಿಸಿದರು (502). ಅವರು ಕಳೆದ ಪಂದ್ಯದಲ್ಲೇ ಗೌತಮ್‌ ಗಂಭೀರ್‌ ಅವರ ದಾಖಲೆ ಮುರಿದಿದ್ದರು (492 ಬೌಂಡರಿ).
* ಕ್ರಿಸ್‌ ಗೇಲ್‌ ಡೆಲ್ಲಿ ವಿರುದ್ಧ ಕೋಟ್ಲಾ ಅಂಗಳದಲ್ಲಿ 367 ರನ್‌ ಹೊಡೆದರು. ಈ ಸಾಧನೆಯಲ್ಲಿ ಅವರಿಗೆ 2ನೇ ಸ್ಥಾನ. ಕೊಹ್ಲಿ ಇಲ್ಲಿ ಆಡಿದ 8 ಇನ್ನಿಂಗ್ಸ್‌ಗಳಿಂದ 405 ರನ್‌ ಹೊಡೆದದ್ದು ದಾಖಲೆ (5 ಅರ್ಧ ಶತಕ).
* ಶಿಖರ್‌ ಧವನ್‌ ಐಪಿಎಲ್‌ನಲ್ಲಿ 35ನೇ, ಪಂಜಾಬ್‌ ವಿರುದ್ಧ 5ನೇ, ಈ ಋತುವಿನಲ್ಲಿ 3ನೇ ಅರ್ಧ ಶತಕ ಹೊಡೆದರು.
* ಶಿಖರ್‌ ಧವನ್‌ 10 ಐಪಿಎಲ್‌ ಋತುಗಳಲ್ಲಿ 300 ರನ್‌ ಬಾರಿಸಿದ 4ನೇ ಆಟಗಾರನೆನಿಸಿದರು. 2009 ಮತ್ತು 2010ರಲ್ಲಿ ಮಾತ್ರ ಅವರು ಈ ಸಾಧನೆ ದಾಖಲಿಸುವಲ್ಲಿ ವಿಫ‌ಲರಾಗಿದ್ದರು. ಉಳಿದ ಮೂವರೆಂದರೆ ಸುರೇಶ್‌ ರೈನಾ (ಮೊದಲ 11 ಐಪಿಎಲ್‌), ರೋಹಿತ್‌ ಶರ್ಮ (ಮೊದಲ 10 ಐಪಿಎಲ್‌) ಮತ್ತು ವಿರಾಟ್‌ ಕೊಹ್ಲಿ (ಮೊದಲೆರಡು ಐಪಿಎಲ್‌ ಹೊರತುಪಡಿಸಿ).
* ಶಿಖರ್‌ ಧವನ್‌ ಕೋಟ್ಲಾ ಅಂಗಳದಲ್ಲಿ 7ನೇ ಅರ್ಧ ಶತಕ ಹೊಡೆದು ವೀರೇಂದ್ರ ಸೆಹವಾಗ್‌ ದಾಖಲೆಯನ್ನು ಸರಿದೂಗಿಸಿದರು. ಸೆಹವಾಗ್‌ ಇದಕ್ಕೆ 19 ಇನ್ನಿಂಗ್ಸ್‌ ತೆಗೆದುಕೊಂಡರೆ, ಧವನ್‌ ಕೇವಲ 9 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದರು.
* ಶ್ರೇಯಸ್‌ ಅಯ್ಯರ್‌ ದಿಲ್ಲಿಯಲ್ಲಿ 6ನೇ ಅರ್ಧ ಶತಕ ಹೊಡೆದು ಜಂಟಿ 2ನೇ ಸ್ಥಾನಿಯಾದರು. ಗೌತಮ್‌ ಗಂಭೀರ್‌ ಮತ್ತು ದಿನೇಶ್‌ ಕಾರ್ತಿಕ್‌ ಕೂಡ 6 ಫಿಫ್ಟಿ ಹೊಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next