Advertisement

ಕೊಳ್ಳೆ ಹೊಡೆದ್ಮೇಲೆ ಕೋಟೆ ಬಾಗ್ಲಾಕಿದ್ರು!

04:18 PM Apr 16, 2018 | |

ಧಾರವಾಡ: ಕೋಟೆಯನ್ನು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಗಾದೆ ಮಾತು ಸದ್ಯಕ್ಕೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿನ ಚುನಾವಣಾ ಅಕ್ರಮ ಚಟುವಟಿಕೆಗಳಿಗೆ ಅನ್ವಯವಾಗುವಂತಿದೆ.

Advertisement

ಹೌದು, ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿಸುವುದನ್ನು ತಪ್ಪಿಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮುಂಚೆಯೇ ಕಿಲಾಡಿ ರಾಜಕಾರಣಿಗಳು ತಮ್ಮ ಮತಬ್ಯಾಂಕ್‌ನ್ನು ಭದ್ರ ಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ಮಾಡಿ ಮುಗಿಸಿದಂತೆ ಭಾಸವಾಗುತ್ತಿದೆ.

ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರಭಾವಿ ಅಭ್ಯರ್ಥಿಯೊಬ್ಬರು ಸೀರೆ ಹಂಚಿಕೆ ಮಾಡಿದ್ದರೆ, ತಮಗೆ ಟಿಕೇಟ್‌ ಸಿಕ್ಕುವುದು ನಿಶ್ಚಿತ ಎನ್ನುವ ಆಧಾರದ ಮೇಲೆಯೇ ಇನ್ನೊಬ್ಬ ಅಭ್ಯರ್ಥಿ ಗ್ರಾಮದ ಮುಖಂಡರಿಗೆ ಮತ್ತು ಪಕ್ಷಗಳ ಮುಖಂಡರಿಗೆ ಚಿನ್ನ ಬೆಳ್ಳಿ ಆಭರಣಗಳನ್ನು ಮುಟ್ಟಿಸಿದ್ದಾರೆ.

ಖಾಸಗಿ ಕಾರ್ಯಕ್ರಮಗಳಿಗೆ ಆಮಂತ್ರಣ ನೀಡಿ ಅದನ್ನೇ ತಮ್ಮ ಮತ ಬ್ಯಾಂಕ್‌ ಆಗಿ ಪರಿವರ್ತಿಸಿಕೊಂಡವರು ಒಬ್ಬರಾದರೆ, ತಮ್ಮ ಒಡೆತನದ ಭೂದಾನಕ್ಕೆ ಪರ್ಯಾಯವಾಗಿ ಬರುವ ಹಣವನ್ನೇ ಆಯಾ ಗ್ರಾಮಗಳ ಚುನಾವಣೆಯಲ್ಲಿ ಮತ ಕೊಳ್ಳಲು ಬಳಸಿಕೊಳ್ಳುವ ಹುಕುಂ ನೀಡಿದ್ದಾರೆ.

ಸ್ತ್ರೀ ಶಕ್ತಿ ಸಂಘಟನೆಗಳು ಬುಕ್‌: ಎಲ್ಲಾ ಕ್ಷೇತ್ರಗಳಲ್ಲೂ ಇದೀಗ ಶೇ.50 ರಷ್ಟು ಮತದಾರರು ಮಹಿಳೆಯರೇ ಇದ್ದು, ಇಲ್ಲಿ ಅತ್ಯಂತ ವಿಶ್ವಾಸಾರ್ಹ ಮತ ಗಳಿಕೆ ಸಾಧ್ಯ ಎನ್ನುವುದು ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗೂ ತಿಳಿದ ಸತ್ಯ. ಹೀಗಾಗಿ ಎಲ್ಲಾ ರಾಜಕಾರಣಿಗಳು ತಮ್ಮ ಪತ್ನಿಯರ ಮೂಲಕ ಸ್ತ್ರೀಶಕ್ತಿ ಗುಂಪುಗಳ ಮತದಾರರನ್ನು ಸೆಳೆಯುತ್ತಿದ್ದು, ಪ್ರಚಾರದ ಜೊತೆಗೆ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಹಣ ಪೂರೈಸುತ್ತಿದ್ದಾರೆ. ಪ್ರತಿ ಗ್ರಾಮಗಳಲ್ಲೂ ಕನಿಷ್ಠ 25ರಷ್ಟು ಸ್ತ್ರೀಶಕ್ತಿ ಸಂಘಗಳು ತುಂಬಾ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದು ಅವುಗಳನ್ನು ಇದೀಗ ಮತ ಬ್ಯಾಂಕ್‌ ಆಗಿ
ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 4500 ಕ್ಕೂ ಅಧಿಕ ಸ್ತ್ರೀಶಕ್ತಿ ಸಂಘಟನೆಗಳು ಅಸ್ತಿತ್ವದಲ್ಲಿದ್ದು, ಪ್ರತಿ ಸಂಘದಲ್ಲೂ ಕನಿಷ್ಠ 25 ಜನ ಮಹಿಳೆಯರು ಮತ್ತು ಅದಕ್ಕಿಂತಲೂ ಹೆಚ್ಚು ಸದಸ್ಯರು ಇದ್ದು ಹಣಕಾಸು ಚಟುವಟಿಕೆಯಲ್ಲಿ ತೊಡಗಿದ್ದಾರೆ.

Advertisement

ಗುತ್ತಿಗೆದಾರರೇ ಬ್ಯಾಂಕ್‌: ಮತಬೇಟೆಗಾಗಿ ರಾಜಕಾರಣಿಗಳು ಹಣ ಹಂಚುವುದಕ್ಕೆ ಇದೀಗ ಅನೇಕ ಅಡ್ಡ ದಾರಿಗಳನ್ನು ಹಿಡಿದಿದ್ದಾರೆ. ನೇರವಾಗಿ ಹಣ ಸಾಗಿಸುವುದಕ್ಕೆ ಇರುವ ತೊಂದರೆಗಳನ್ನು ತಿಳಿದ ರಾಜಕಾರಣಿಗಳು, ತಮ್ಮ ಆಪ್ತರಾಗಿದ್ದುಕೊಂಡು ಪಕ್ಷದ ಕಾರ್ಯಕರ್ತರೂ ಆಗಿರುವ ಗುತ್ತಿಗೆದಾರರನ್ನು ಆಯಾ ಹೋಬಳಿ,ಗ್ರಾಮ ಮಟ್ಟದಲ್ಲಿ ಹಣ ಪೂರೈಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ತಮ್ಮ ಖಾತೆಗಳಲ್ಲಿನ ಹಣವನ್ನು ಗುತ್ತಿಗೆದಾರರು ಮೊದಲು ಚುನಾವಣೆಯಲ್ಲಿ ಹಂಚಿಕೆ ಮಾಡಿ ಮತ ಕೀಳಬೇಕು. ನಂತರ ಅವರಿಗೆ ಅಭ್ಯರ್ಥಿಗಳಿಂದ ಹಣ ಸಂದಾಯವಾಗುತ್ತದೆ.

ಫಿಕ್ಸ್‌ ಆಗಿವೆ ದಾಬಾಗಳು: ನೂರಾರು ಸಂಖ್ಯೆಯಲ್ಲಿ ಪಕ್ಷಗಳ ಕಾರ್ಯಕರ್ತರು ಸೇರಿ ಊಟ ಮಾಡುವ ಪದ್ಧತಿಯನ್ನು ಚುನಾವಣಾ ಆಯೋಗ ಕಠಿಣ ಕ್ರಮಗಳ ಮೂಲಕ ತಡೆ ಹಿಡಿದಿದೆ. ಅದಕ್ಕಾಗಿ ಇದೀಗ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ರ್ಯಾಲಿ, ಕ್ಯಾಂಪೇನ್‌ ಮತ್ತು ಅಭ್ಯರ್ಥಿಗಳ ಪರ ಪ್ರಚಾರ ಮಾಡುವವರಿಗೆ ಮತ್ತು ಮತದಾರರಿಗೆ ನೇರವಾಗಿ ಹೊಟೇಲ್‌ಗ‌ಳು, ದಾಬಾಗಳು ಮತ್ತು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೂಲಕವೇ ಆಹಾರ ಪೂರೈಸುತ್ತಿವೆ.

ಪಕ್ಷದ ಮುಖಂಡರ ಉದ್ರಿ ಖಾತೆ ಕೂಡ ಅವಳಿ ನಗರದ ಹೊರವಲಯದ ದಾಬಾಗಳಲ್ಲಿ ತೆರೆಯಲಾಗಿದ್ದು,ಅಭ್ಯರ್ಥಿಗಳು ಒಂದೇ ಸಮಯಕ್ಕೆ ಹಣ ಪೂರೈಸುತ್ತಿದ್ದಾರೆ.

ಹುಟ್ಟು ಹಬ್ಬಗಳಲ್ಲೂ ಊಟ: ರಾಷ್ಟ್ರೀಯ ಪಕ್ಷಗಳ ಕೆಲವು ಮುಖಂಡರು ತಮ್ಮ ಬೆಂಬಲಿಗರ ಮಕ್ಕಳ ಹುಟ್ಟಿದ ಹಬ್ಬ ಆಚರಿಸುವ ನೆಪದಲ್ಲಿ ಕಾರ್ಯಕರ್ತರಿಗೆ ಭೋರಿ ಭೋಜನದ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಈ ಸಂಬಂಧ ಚುನಾವಣಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದೇ ಇರುವುದು ಮಾತ್ರ ಪ್ರಜ್ಞಾವಂತ ಮತದಾರರಿಗೆ ಬೇಸರ ತರಿಸಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಮಾತ್ರ ಅಕ್ರಮ ಹಣ, ಸಾರಾಯಿ ಸಾಗಾಣಿಕೆ ತಪಾಸಣೆ ನಡೆಸುವ ಪೊಲೀಸರಿಗೆ ಕಿಲಾಡಿ ರಾಜಕಾರಣಿಗಳು ಚಳ್ಳೆಹಣ್ಣು ತಿನ್ನಿಸಿ ತಮ್ಮ ಮತ ಬ್ಯಾಂಕ್‌ಗೆ ಅಗತ್ಯವಾದ ಹಣ, ಹೆಂಡ, ಕಾಣಿಕೆಗಳನ್ನು ಪರೋಕ್ಷ ಮಾರ್ಗಗಳ ಮೂಲಕ ತಲುಪಿಸಿಯಾಗಿದೆ. ಇನ್ನೂ ಕೆಲವು ಕಡೆ ತಲುಪಿಸುತ್ತಲೂ ಇದ್ದಾರೆ. ಆದರೆ ಇದನ್ನು ತಡೆಯುವುದು ಹೇಗೆ ? ಎಂದು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ ಅಷ್ಟೇ.

ಬಸವ ಜಯಂತಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಜಾತ್ರೆಗಳು, ರಥೋತ್ಸವದ ಸುಗ್ಗಿಕಾಲ. ಇದನ್ನೇ ಚುನಾವಣೆ ಮತ ಸೆಳೆಯುವ ವೇದಿಕೆ ಮಾಡಿಕೊಂಡ ಅಭ್ಯರ್ಥಿಗಳು ಗ್ರಾಮಗಳ ಕುಲ ಬಾಂಧವರ ಮೂಲಕ ಜಾತ್ರೆ ಮತ್ತು ರಥೋತ್ಸವಕ್ಕೆ ಪರೋಕ್ಷವಾಗಿ ಕಾಣಿಕೆ ನೀಡಿ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳುತ್ತಿದ್ದಾರೆ. ಯುವಕ ಸಂಘಟನೆಗಳಿಗೆ ವಾಲಿಬಾಲ್‌, ಕ್ರಿಕೆಟ್‌ ಆಟದ ಸೆಟ್‌ ಸೇರಿದಂತೆ ಅನೇಕ ಆಮಿಷಗಳನ್ನು ಒಡ್ಡಿದರೆ, ಭಜನಾ ಸಂಘದವರಿಗೆ ಭಜನಾ ಉಪಕರಣ, ಡೊಳ್ಳು,ಜಾಂಜ್‌ ಉಪಕರಣಗಳನ್ನು ಕೊಳ್ಳಲು ಪರೋಕ್ಷವಾಗಿ ಗ್ರಾಮದ ಮುಖಂಡರ ಹೆಸರಿನಲ್ಲಿ ಹಣ ಸಂದಾಯವಾಗುತ್ತಿದೆ.

ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳು ನಡೆಯದಂತೆ ಕ್ರಮ ಕೈಗೊಂಡಿದ್ದೇವೆ. ಒಂದು ವೇಳೆ ಇಂತಹ ಪ್ರಕರಣಗಳು ನಡೆದಿದ್ದು ಕಂಡು ಬಂದರೆ ಜಿಲ್ಲಾ ಚುನಾವಣಾಧಿಕಾರಿಗಳ ಜೊತೆಗೆ ಚರ್ಚಿಸಿ ಸಂಬಂಧಪಟ್ಟ ಅಭ್ಯರ್ಥಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಜಿ. ಸಂಗೀತಾ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next