Advertisement

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

04:46 PM Apr 25, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಶ್ರೀರಾಮ ಹಾಗೂ ಕೃಷ್ಣರ ಜೀವನ ನಮಗೆ ಇಂದಿಗೂ ಆದರ್ಶವಾಗಿದೆ, ಪ್ರಭಾವವೂ ಬೀರಿದೆ ಎಂದು ಶಿಕ್ಷಣ ತಜ್ಞ, ವಾಗ್ಮಿ ಡಾ| ಗುರುರಾಜ ಕರ್ಜಗಿ ಹೇಳಿದರು.

Advertisement

ನಗರದ ವಿದ್ಯಾವರ್ಧಕ ಸಂಘದಲ್ಲಿ ಸ್ನೇಹ ಪ್ರತಿಷ್ಠಾನ ಆಯೋಜಿಸಿದ್ದ ವಸಂತ ವ್ಯಾಖ್ಯಾನ ಮಾಲೆ ಉಪನ್ಯಾಸ ಸರಣಿಯಲ್ಲಿ “ಭಗವಾನ್‌ ಶ್ರೀ ಕೃಷ್ಣ’ನ ಕುರಿತು ಅವರು ಉಪನ್ಯಾಸ ನೀಡಿದರು. ಕೃಷ್ಣನ ಚಾರಿತ್ರ್ಯದ ಕುರಿತು ಅತಿರೇಕ ಹಾಗೂ ಅವಹೇಳನವೂ ಇರುವುದು ಖೇದಕರ. ಆದರೆ ಹೋಲಿಕೆ ಇಲ್ಲದ ವ್ಯಕ್ತಿತ್ವ ಕೃಷ್ಣನದ್ದು. ಅವನು ಎಲ್ಲ ದ್ವಂದ್ವಗಳನ್ನು ಮೀರಿದವನು.

ಗೋಪಿಕೆಯರೊಂದಿಗೆ ರಾಸಲೀಲೆಯೂ ಆಡಬಲ್ಲ, 18 ಅಕ್ಷೋಹಿಣಿ ಸೈನ್ಯದ ನಡುವೆ ನಿಂತು ಯುದ್ಧಕ್ಕೂ ಪ್ರೇರೇಪಿಸಬಲ್ಲ. ಭಗವಾನ್‌ ಶ್ರೀಕೃಷ್ಣನಂತಹ ಕ್ಲಿಷ್ಟವಾದ ಪಾತ್ರ ಜಗತ್ತಿನ ಯಾವುದೇ ಧಾರ್ಮಿಕ, ಆಧ್ಯಾತ್ಮಿಕ ಗ್ರಂಥದಲ್ಲಿ ಕಾಣಲಾಗದು. ಅಂತಹ ಶ್ರೇಷ್ಠ ಪಾತ್ರವನ್ನು ವೇದವ್ಯಾಸರು ವರ್ಣಿಸಿದ್ದಾರೆ ಎಂದರು.

ಕೃಷ್ಣ ಪೂತನಿ ಹಾಗೂ ಶಕಟಾಸುರನನ್ನು ಸಂಹರಿಸಿದ್ದು, ಗೋವರ್ಧನ ಗಿರಿ ಎತ್ತಿದ್ದು, ಕಾಳಿಂಗ ಮರ್ಧಿಸಿದ್ದು, ಮಣ್ಣು ತಿಂದು ಯಶೋಧೆಗೆ ಬಾಯಿಯಲ್ಲಿ ಬ್ರಹ್ಮಾಂಡ ತೋರಿಸಿದ್ದು, ಸ್ತ್ರೀಯರ ವಸ್ತ್ರಾಪಹರಣ ಮೇಲ್ನೋಟಕ್ಕೆ ಕೃಷ್ಣನ ಪವಾಡ, ಅಮಾನುಷ ಘಟನೆಗಳಾಗಿ ಕಂಡರೂ ಅವುಗಳ ಹಿಂದೆ ಜ್ಞಾನ ಹಾಗೂ ಅರಿವಿನ ಸನ್ಮಾರ್ಗವಿದೆ ಎಂದರು. ಈ ಸಂದರ್ಭದಲ್ಲಿ ಸ್ನೇಹ ಪ್ರತಿಷ್ಠಾನದ ಅಧ್ಯಕ್ಷ ಹರ್ಷ ಡಂಬಳ, ಡಾ| ಪ್ರಮೋದ ಗಾಯಿ, ಎಚ್‌.ವಿ. ಕಾಖಂಡಕಿ, ಜಿ.ಸಿ. ತಲ್ಲೂರ ಇದ್ದರು.

ಉಪನ್ಯಾಸ-ಕೃತಿ ಬಿಡುಗಡೆ:
ಸ್ನೇಹ ಪ್ರಕಾಶನ, ವರಧನ್ವಂತರಿ ಫೌಂಡೇಶನ್‌ ಟ್ರಸ್ಟ್‌, ಅಖೀಲ ಭಾರತ ಮಾಧ್ವ ಮಹಾ ಮಂಡಳ ಆಯೋಜಿಸಿದ್ದ ವಸಂತ ವ್ಯಾಖ್ಯಾನ ಮಾಲೆ ಉಪನ್ಯಾಸ ಸರಣಿಯಲ್ಲಿ ಮಧ್ವಾಚಾರ್ಯರ ಕುರಿತು ಮಾತನಾಡಿದ ಡಾ| ಗುರುರಾಜ ಕರ್ಜಗಿ, ಜೀವ ಸೃಷ್ಟಿಯಾದರೆ ಅದಕ್ಕೊಬ್ಬ ಸೃಷ್ಟಿಕರ್ತ ಇರಲೇಬೇಕು. ನಾವು ಭಗವಂತನ ಹತ್ತಿರ ಹೋಗಬಹುದೇ ಹೊರತು ಭಗವಂತನಾಗಲು
ಸಾಧ್ಯವಿಲ್ಲ. ಇದೇ ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಸಿದ್ಧಾಂತ ಎಂದರು.

Advertisement

ಬಾಲ್ಯದಿಂದಲೇ ಮಧ್ವಾಚಾರ್ಯರು ಅನೇಕ ಪವಾಡಗಳಿಗೆ ಕಾರಣರಾದವರು. ಭೀಮಸೇನನ ಅವತಾರವಾಗಿದ್ದರಿಂದ ಶಾರೀರಿಕವಾಗಿಯೂ ಸದೃಢರಾಗಿದ್ದರು. ಬಾಲ್ಯದ ವಾಸುದೇವ ಗುರುಕುಲದ ವ್ಯಾಸಂಗದಲ್ಲೂ ಬಹಳ ಚುರುಕು. ಮುಂದೆ ಉಡುಪಿಯಲ್ಲಿ ಅಚ್ಯುತ ಪ್ರೇಶ್ಚ ಎಂಬ ಋಷಿಯ ಶಿಷ್ಯತ್ವ ಪಡೆದರು. ನಂತರ ಸನ್ಯಾಸ ಸ್ವೀಕರಿಸಿ ಪೂರ್ಣಪ್ರಜ್ಞ ತೀರ್ಥರು ಎಂಬ ಹೆಸರು ಪಡೆದಾಗ ಅವರಿಗೆ ಕೇವಲ 10 ವರ್ಷ ವಯಸ್ಸು. ಮರುವರ್ಷವೇ ವೇದಾಂತ ಪೀಠದ ಅಧಿಪತಿಗಳಾಗಿ ಆನಂದ ತೀರ್ಥರು ಎಂಬ ಹೆಸರು ಪಡೆದು, ಮಧ್ವಾಚಾರ್ಯರೆಂದೇ ಲೋಕವಿಖ್ಯಾತರಾದರು. ತತ್ವಜ್ಞಾನ ಹಾಗೂ ತಂತ್ರಶಾಸ್ತ್ರ ಎರಡನ್ನು ಅರ್ಥೈಸಿ ಕೊಂಡವರು ಪರಿಪೂರ್ಣ ಗುರುವಾಗಬಲ್ಲರು.

ಅಂತಹ ಗುರು ಮಧ್ವಾಚಾರ್ಯರಾಗಿದ್ದರು ಎಂದರು. ಆಲೂರು ವೆಂಕಟರಾವ್‌ ಅವರು ರಚಿಸಿದ “ಹ್ಯಾಂಡಬುಕ್‌ ಆಫ್‌ ಮಧ್ವ ಫಿಲಾಸಫಿ’ ಕೃತಿ ಬಿಡುಗಡೆಗೊಳಿಸಲಾಯಿತು. ಸ್ನೇಹ ಪ್ರಕಾಶನದ ಅಧ್ಯಕ್ಷ ಹರ್ಷ ಡಂಬಳ, ವರಧನ್ವಂತರಿ ಫೌಂಡೇಶನ್‌
ಅಧ್ಯಕ್ಷ ಡಾ| ಪ್ರಮೋದ ಗಾಯಿ, ದೀಪಕ ಆಲೂರು, ಎಚ್‌.ವಿ. ಕಾಖಂಡಕಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next