Advertisement

ISRO ಅಧ್ಯಕ್ಷರಿಗೆ ಧಾರವಾಡ ಕೃಷಿ ವಿವಿ ಗೌರವ ಡಾಕ್ಟರೇಟ್

09:19 PM Jun 26, 2024 | Team Udayavani |

ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ 37ನೇ ಘಟಿಕೋತ್ಸವವು ಗುರುವಾರ ಜರುಗಲಿದ್ದು, ಈ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಕೃವಿವಿ ನಿರ್ಧರಿಸಿದೆ.

Advertisement

ಈ ಹಿನ್ನಲೆಯಲ್ಲಿ ಡಾ.ಸೋಮನಾಥ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ನೆರವೇರಲಿದ್ದು, ರೈತರ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ಬೆಳಿಗ್ಗೆ 11:00 ಗಂಟೆಗೆ ನಡೆಯುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಾಧಿಪತಿಯಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಹಿಸಲಿದ್ದಾರೆ. ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಡಾ.ಸಂಜಯ ಕುಮಾರ ಘಟಿಕೋತ್ಸವ ಭಾಷಣ ಮಾಡಲಿದ್ದು, ರಾಜ್ಯದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಕುಲಪತಿ ಡಾ.ಪಿ.ಎಲ್. ಪಾಟೀಲ ಇವರು ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳ ಕುರಿತು ವರದಿಯನ್ನು ಮಂಡಿಸುವರು. ವಿಶ್ವವಿದ್ಯಾಲಯದ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು ಭಾಗವಹಿಸಲಿದ್ದಾರೆ.

ಪ್ರಸ್ತುತ ಈ 37ನೇ ಘಟಿಕೋತ್ಸವದಲ್ಲಿ 69 ಪಿಎಚ್.ಡಿ. 237 ಸ್ನಾತಕೋತ್ತರ ಹಾಗೂ 627 ಸ್ನಾತಕ ಪದವಿಗಳನ್ನೊಳಗೊಂಡಂತೆ ಒಟ್ಟು 933 ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು. ಇದರಲ್ಲಿ 745 ಅಭ್ಯರ್ಥಿಗಳು ಹಾಜರಾತಿಯಲ್ಲಿಯೂ ಹಾಗೂ 188 ಅಭ್ಯರ್ಥಿಗಳು ಗೈರು ಹಾಜರಾತಿಯಲ್ಲಿ ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ. ಇದಲ್ಲದೇ 46 ಕೃಷಿ ವಿಶ್ವವಿದ್ಯಾಲಯ ಚಿನ್ನದ ಪದಕಗಳು, 10 ಇತರೆ ಚಿನ್ನದ ಪದಕಗಳು ಹಾಗೂ 09 ನಗದು ಬಹುಮಾನಗಳನ್ನು ಪ್ರತಿಭಾನ್ವಿತ ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು ಕೃಷಿ ವಿವಿಯ ಪ್ರಕಟಣೆ ತಿಳಿಸಿದೆ.

ಧಾರವಾಡದ ಕೃಷಿ ಮಹಾವಿದ್ಯಾಲಯದ ಸ್ನಾತಕ ಪದವಿಯಲ್ಲಿ ಬಿಎಸ್‌ಸಿ ಕೃಷಿಯಲ್ಲಿ ಒಟ್ಟು ಮೂರು ಚಿನ್ನದ ಪದಕ ಬಾಚಿಗೊಳ್ಳುವ ಮೂಲಕ ಶ್ರೀಯಾ ಎಸ್. ಕರಿ ಕೃವಿವಿಯ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ. ಕೃಷಿ ವಿಶ್ವವಿದ್ಯಾಲಯ ಚಿನ್ನದ ಪದಕ, ಕೃಷಿ ಸ್ನಾತಕ ಪದವಿ ಕಾರ್ಯಕ್ರಮದಲ್ಲಿ ಹೆಚ್ಚಿನ ಒಜಿಪಿಎ (9.209/10) ತೆಗೆದುಕೊಂಡಿದ್ದಕ್ಕಾಗಿ ಸೀತಾರಾಂ ಜಿಂದಾಲ್ ಪ್ರತಿಷ್ಠಾನದ ಚಿನ್ನದ ಪದಕ ಮತ್ತು ಡಾ.ಜೆ. ವಿ. ಗೌಡ, ಮೊದಲನೇ ಕುಲಪತಿಗಳು, ಕೃವಿವಿ ಧಾರವಾಡ ಅಭಿನಂದನಾ ಸಮಿತಿ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ. ಉಳಿದಂತೆ ನೀಲವ್ವಾ ಬೆಟಗೇರಿ, ಅಭಿಜಿತ್, ಐರಮ್ ಕೌಸರ್ ಸನದಿ, ಭಾಗ್ಯಲಕ್ಷ್ಮಿ ಎಸ್.ಎನ್. ಸೇರಿದಂತೆ ಹಲವರಿಗೆ ಚಿನ್ನದ ಪದಕ ಪ್ರದಾನ ನೆರವೇರಲಿದೆ. ಇನ್ನು ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಓಜಿಪಿಎ ಪಡೆದ ದರ್ಶನ ಸಿ, ಮಧುಮತಿ, ಸಿದ್ದಮ್ಮಾ, ಭಾಗ್ಯಲಕ್ಷೀ ಹಾಗೂ ಪಿಎಚ್‌ಡಿ ಪದವಿಯಲ್ಲಿ ಉದಯನ್ ಎನ್, ಸೌಂದರ್ಯಾ ಎಸ್. ಆರ್, ಸಹನಾ ಎಮ್., ಸಲೀಂಅಲಿ ಕನ್ನಿಹಳ್ಳಿ, ವೈಷ್ಣವಿ ಪಿ, ಪೂಜಾರಾಣಿ ಮಾಲಗಿತ್ತಿ, ಗಂಗಾದಾಸರಿ ಶ್ರಾವಣಲಕ್ಷ್ಮಿ, ನವ್ಯಶ್ರೀ ಆರ್., ಅಭಿಷೇಕ ಕೆ. ಗೌಡಾ, ಜ್ಯೋತಿ ವೀರಯ್ಯಾ ಹೊಸಮಠ, ಅಜಿತ ಸಿ. ಆರ್., ಮಾಮಿದಿ ಹೇಮಲತಾ, ಹರಿಚಂದನಾ ಪೊನ್ನಪಳ್ಳಿ, ಬೊಜ್ಜಗಣಿ ಝಾನ್ಸಿ ಸೇರಿದಂತೆ ಹಲವರಿಗೆ ಚಿನ್ನದ ಪದಕ ಪ್ರದಾನ ನೆರವೇರಲಿದೆ.

ಇದನ್ನೂ ಓದಿ: Road Mishap: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಇಬ್ಬರ ಸ್ಥಿತಿ ಗಂಭೀರ!

Advertisement
Advertisement

Udayavani is now on Telegram. Click here to join our channel and stay updated with the latest news.

Next