Advertisement

ಆಕರ್ಷಕ ರಾಜ್ಯಮಟ್ಟದ ವಸ್ತು ಪ್ರದರ್ಶನ

01:35 AM Dec 04, 2018 | Team Udayavani |

ಬೆಳ್ತಂಗಡಿ: ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ ಈ ಬಾರಿ 41ನೇ ವರ್ಷದ ರಾಜ್ಯಮಟ್ಟದ ವಸ್ತು ಪ್ರದರ್ಶನವು ಜನಾಕರ್ಷಣೆಯ ಕೇಂದ್ರವಾಗಿದ್ದು, ಒಟ್ಟು 300ಕ್ಕೂ ಅಧಿಕ ಮಳಿಗೆಗಳಲ್ಲಿ 196 ಸದ ಸ್ಯರು ತಮ್ಮ ಸ್ಟಾಲ್‌ಗ‌ಳನ್ನು ಹಾಕಿದ್ದಾರೆ. ಎಸ್‌ಡಿಎಂ ಪ್ರೌಢಶಾಲೆಯ ಆವರಣದಲ್ಲಿ 32 ಸಾವಿರ ಚದರ ಅಡಿಯಲ್ಲಿ ಈ ವಸ್ತು ಪ್ರದರ್ಶನ ವಿಸ್ತರಿಸಿಕೊಂಡಿದೆ. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಈಗಾಗಲೇ ಪ್ರದರ್ಶನವನ್ನು ಉದ್ಘಾಟಿಸಿದ್ದು, ಡಿ. 7ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯುವವರೆಗೆ ಮಳಿಗೆಗಳು ತೆರೆದಿರುತ್ತವೆ.

Advertisement

ಸರಕಾರಿ ಇಲಾಖೆಗಳ ಮಳಿಗೆ
ಪ್ರದರ್ಶನದಲ್ಲಿ ರುಡ್‌ಸೆಟ್‌ ಬಜಾರ್‌, ಗ್ರಾಮಾಭಿವೃದ್ಧಿ ಯೋಜನೆ, ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಧರ್ಮೋತ್ಥಾನ ಟ್ರಸ್ಟ್‌, ರತ್ನಮಾನಸ, ಮಂಜುವಾಣಿ, ಎಸ್‌ಡಿಎಂ ಐಟಿಐ ವೇಣೂರು, ಪ್ರಕೃತಿ ಚಿಕಿತ್ಸೆ, ಎಸ್‌ಡಿಎಂ ಪಾಲಿಟೆಕ್ನಿಕ್‌, ಸಿರಿ ಉತ್ಪನ್ನಗಳ ಮಳಿಗೆಯ ಜತೆಗೆ ಅನೇಕ ಸರಕಾರಿ ಇಲಾಖೆಗಳ ಮಳಿಗೆಗಳಿವೆ.

ಕೃಷಿ ಉತ್ಪನ್ನ
ಜತೆಗೆ ಬ್ಯಾಂಕುಗಳು, ಧಾರ್ಮಿಕ ಮಳಿಗೆಗಳು, ಎಲ್‌ಐಸಿ, ಅಂಚೆ ಇಲಾಖೆ, ಬಿಎಸ್‌ಎನ್‌ಎಲ್‌, ಪುಸ್ತಕ ಮಳಿಗೆಗಳು, ನಂದಿನಿ ಉತ್ಪನ್ನಗಳು, ವಾಹನ ಶೋರೂಮ್‌ ಮಳಿಗೆ, ಕೃಷಿ ಯಂತ್ರೋಪಕರಣ, ನರ್ಸರಿ ಉಪಕರಣಗಳು, ಟರ್ಪಾಲು, ಹೊಲಿಗೆ ಯಂತ್ರ, ಕರಕುಶಲ ವಸ್ತುಗಳು, ಸುರಕ್ಷಾ ಮಣ್ಣಿನ ಇಟ್ಟಿಗೆ, ಮರದ ವಸ್ತುಗಳು, ನಾಟಿ ಔಷಧಿ, ತರಕಾರಿ ಬೀಜಗಳು, ಗೋಬರ್‌ ಗ್ಯಾಸ್‌, ಕೆಂಪುಕಲ್ಲಿನ ಇಟ್ಟಿಗೆ, ವಸ್ತ್ರಮಳಿಗೆಗಳು, ತಿಂಡಿ ತಿನಿಸುಗಳು, ಸಾವಯವ ಕೃಷಿ ಉತ್ಪನ್ನಗಳು ಹೀಗೆ ಅನೇಕ ಮಳಿಗೆಗಳಿವೆ.

ಪ್ರಾತ್ಯಕ್ಷಿಕೆ
ಗ್ರಾಮಾಭಿವೃದ್ಧಿ ಯೋಜನೆಯ ವಿಶೇಷ ಮಳಿಗೆಯಲ್ಲಿ ಮಡಿಕೆ, ಮರದ ವಸ್ತುಗಳ ತಯಾರಿ ಪ್ರಾತ್ಯಕ್ಷಿಕೆ, ಸಾವಯವ ಕೃಷಿ, ಗುಡಿ ಕೈಗಾರಿಕೆ, ಕಾನೂರಾಯಣ ಚಲನಚಿತ್ರ ಪ್ರದರ್ಶನ ಹೀಗೆ ಕ್ಷೇತ್ರದ ವತಿಯಿಂದ ನಡೆಯುವ ಸೇವಾ ಕಾರ್ಯಗಳ ಕುರಿತು ಅಲ್ಲಿ ಮಾಹಿತಿ ನೀಡಲಾಗುತ್ತಿದೆ. ಜತೆಗೆ ವಸ್ತು ಪ್ರದರ್ಶನದ ಒಂದು ಬದಿಯ ವೇದಿಕೆಯಲ್ಲಿ ಸಂಗೀತ, ನೃತ್ಯ, ಯಕ್ಷಗಾನ ಹೀಗೆ ಅನೇಕ ಮನ ರಂಜನಾ ಕಾರ್ಯಕ್ರಮಗಳು ಕೂಡ ನಡೆಯುತ್ತಿರುತ್ತವೆ. ಕಳೆದ 2 ತಿಂಗಳಿನಿಂದ ಇಲ್ಲಿನ ಮಳಿಗೆಗಳಿಗೆ ಬುಕ್ಕಿಂಗ್‌ ಆರಂಭ ಗೊಂಡಿದ್ದು, ಈಗಲೂ ಅನೇಕ ಮಂದಿ ಕರೆ ಮಾಡಿ ಮಳಿಗೆ ಸಿಗಬಹುದೇ ಎಂದು ವಿಚಾರಿಸುತ್ತಿದ್ದಾರೆ ಎಂದು ವ್ಯವಸ್ಥಾಪಕ ಎಂ.ಕೃಷ್ಣ ಶೆಟ್ಟಿ ರತ್ನಮಾನಸ ಹೇಳುತ್ತಾರೆ.

ಜನರ ಭದ್ರತೆಯ ದೃಷ್ಟಿಯಿಂದ ಸಿಸಿ ಕೆಮರಾ, ಸೂಕ್ತ ಭದ್ರತಾ ಸಿಬಂದಿ, ಪಾರ್ಕಿಂಗ್‌ ವ್ಯವಸ್ಥೆ, ಸ್ವತ್ಛತೆಗೆ ವಿಶೇಷ ವ್ಯವಸ್ಥೆಗಳು ಅಲ್ಲಿವೆ. ಆರಂಭದ ದಿನಗಳಲ್ಲಿ ಆಗಮಿಸುವವರ ಸಂಖ್ಯೆ ಕಡಿಮೆ ಇದ್ದರೂ, ಡಿ. 5, 6ಕ್ಕೆ ಕಾಲಿಡುವುದಕ್ಕೆ ಜಾಗವಿಲ್ಲದಷ್ಟು ಜನ ಸೇರುತ್ತಾರೆ ಎಂದು ವ್ಯವಸ್ಥಾಪಕರು ಹೇಳುತ್ತಾರೆ

Advertisement

ಉದ್ಯಮ ಆರಂಭ
ಜೀವನದಲ್ಲಿ ಉದ್ಯಮ ಆರಂಭಿಸುವವರು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಪಡೆಯುವುದಕ್ಕಾಗಿ ಇಲ್ಲಿಗೆ ಮಳಿಗೆಯನ್ನು ಹಾಕಿ ಬಳಿಕ ಅವರು ತಮ್ಮ ಉದ್ಯಮ ಆರಂಭಿಸುತ್ತಾರೆ. ಇನ್ನು ಕೆಲವರು ಇಲ್ಲಿ ಮಾತ್ರ ಮಳಿಗೆ ತೆರೆಯುವವರು ಇರುತ್ತಾರೆ. ಉಳಿದವರು ಎಲ್ಲಾ ಕಡೆಯಂತೆ ಇಲ್ಲೂ ಮಳಿಗೆಗಳನ್ನು ಹಾಕುತ್ತಾರೆ. ಹೀಗೆ ಬೇರೆ ಬೇರೆ ರೀತಿಯ ವರ್ತಕರು ಪ್ರದರ್ಶನ ಮಳಿಗೆಗೆ ಆಗಮಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next