ಬೆಳ್ತಂಗಡಿ: ಧರ್ಮದ ನಾನಾ ರೀತಿಯ ವ್ಯಾಖ್ಯಾನಗಳು ದೇವರ ಮೇಲಿನ ಭಕ್ತಿ ಎಂಬ ಏಕಸೂತ್ರದಲ್ಲಿ ಪೋಣಿಸಿದಾಗ ಅದರ ಸುಗಂಧ-ಸೌಂದರ್ಯ ಹೆಚ್ಚಾಗುತ್ತದೆ. ಹಲವು ವಿಧದಲ್ಲಿ ದೇವರನ್ನು ಪೂಜಿಸಿದರೂ ಎಲ್ಲದರ ಉದ್ದೇಶ ಮಾನವ ಕಲ್ಯಾಣ ಹಾಗೂ ಆತ್ಮೋದ್ಧಾರವಾಗಿರಬೇಕು. ಇದುವೇ ಎಲ್ಲ ಧರ್ಮದ ಸಾರ ಹಾಗೂ ವಿಶ್ವಶಾಂತಿಯ ಧರ್ಮ ಸಂದೇಶ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಈ ಬಾರಿಯ ಧರ್ಮಸ್ಥಳ ಲಕ್ಷದೀಪೋತ್ಸವದ ಸಂದೇಶ ಸಾರಿದರು.
ಡಿ. 8ರಿಂದ 13ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆರವೇರಿದ ಲಕ್ಷದೀಪೋತ್ಸವದ ಐದನೇ ದಿನ ಗೌರಿ ಮಾರುಕಟ್ಟೆ ಉತ್ಸವದೊಂದಿಗೆ ಲಕ್ಷಾಂತರ ಭಕ್ತ ಸಮೂಹ ಸೇರುವ ಮೂಲಕ ಈ ವರ್ಷದ ದೀಪೋತ್ಸವ ಸಮಾಪನಗೊಂಡಿತು.
ದೀಪೋತ್ಸವದ ಕೊನೆಯ ದಿನ ಗೌರಿ ಮಾರುಕಟ್ಟೆ ಉತ್ಸವ ನೆರವೇರಿತು. ದೇವರ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದ ಸ್ವರ್ಣಲೇಪಿತ ಪೀಠದಲ್ಲಿ ಇರಿಸಿ ದೇವಸ್ಥಾನದ ಬಳಿಯಿಂದ ಮುಖ್ಯ ಪ್ರವೇಶದ್ವಾರದ ಬಳಿ ಇರುವ ಗೌರಿಮಾರುಕಟ್ಟೆಗೆ ರಥೋತ್ಸವ ನಡೆಸಲಾಯಿತು. 1,500ಕ್ಕೂ ಮಿಕ್ಕಿ ಕಲಾವಿದರು ವಾಲಗ, ಚೆಂಡೆ, ಗೊಂಬೆಗಳ ಕುಣಿತ, ಜಗ್ಗಲಿಗೆ, ಬ್ಯಾಂಡ್ ಸೆಟ್, ವೀರಗಾಸೆ, ಡೊಳ್ಳು ಕುಣಿತ, ತಮಣೆ ವಾದ್ಯಗಳ ಸೇವೆ ಸಲ್ಲಿಸಿದರು.
ಗೌರಿ ಮಾರುಕಟ್ಟೆಯಲ್ಲಿ ಪೂಜೆಯ ಬಳಿಕ ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ದೇವರ ಮೂರ್ತಿಯನ್ನು ಒಳಗೆ ಕರೆದೊಯ್ಯುದರೊಂದಿಗೆ ಗೌರಿ ಮಾರುಕಟ್ಟೆ ಉತ್ಸವವು ಸಂಪನ್ನಗೊಂಡಿತು.
ಸಮವಸರಣ ಪೂಜೆ
ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಡಿ. 13ರಂದು ಸಂಜೆ 6.30ರಿಂದ ನಡೆಯಿತು.