Advertisement

Dharmasthala ದೀಪೋತ್ಸವಕ್ಕೆ ಕ್ಷಣಗಣನೆ; 2 ಲಕ್ಷ ಭಕ್ತರ ಸಮಾಗಮದ ಕಾತರ

12:04 AM Dec 07, 2023 | Team Udayavani |

ಬೆಳ್ತಂಗಡಿ: ನಾಡಿನ ಚತುರ್ದಾನ ಶ್ರೇಷ್ಠ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

Advertisement

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಡಿ. ಹಷೇìಂದ್ರ ಕುಮಾರ್‌ ನೇತೃತ್ವದಲ್ಲಿ ಡಿ. 8ರಿಂದ 12ರ ವರೆಗೆ ನಡೆಯಲಿರುವ ಲಕ್ಷದೀಪೋತ್ಸವದ ಮೆರುಗಿನ ತಯಾರಿ ಪೂರ್ಣಗೊಂಡಿದ್ದು, ಭಕ್ತರ ಸ್ವಾಗತಕ್ಕೆ ಅಣಿಯಾಗಿದೆ.

ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನ, ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನ ನೆರವೇರಲಿದೆ. ಇದರೊಂದಿಗೆ 44ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನ ನೆರವೇರಲಿದೆ.

ದೇವರಿಗೆ ಸ್ವರ್ಣ ಪಲ್ಲಕಿ,ಬೆಳ್ಳಿ ರಥೋತ್ಸವ ವಿಶೇಷ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ, ಶಿವರಾತ್ರಿ ಹಾಗೂ ಕಾಲಾವಧಿ ವಿಷು ಜಾತ್ರೆಯ ಮೂರು ಸಂದರ್ಭಗಳಲ್ಲಿ ಮಾತ್ರ ದೇವರು ವಿಹಾರಕ್ಕೆ ತೆರಳಿ ಭಕ್ತರಿಗೆ ಗರ್ಭಗುಡಿಯಿಂದ ಹೊರಗೆ ದರ್ಶನಕ್ಕೆ ಸಿಗುವಂತಹದು. ಹಾಗಾಗಿ ಡಿ. 8ರಿಂದ 12ರ ವರೆಗೆ ಶ್ರೀ ದೇವರ ಉತ್ಸವಗಳು ಸ್ವರ್ಣ ಪಲ್ಲಕ್ಕಿ ಮತ್ತು ಬೆಳ್ಳಿ ರಥಗಳ ಮೂಲಕ ನಡೆಯಲಿದೆ.

ನಗರಾಲಂಕಾರಕ್ಕೆ ಕಾಂತಾರ ಮೆರುಗು
ಈ ಬಾರಿ ಕ್ಷೇತ್ರಕ್ಕೆ ವಿಶೇಷ ನಗರಾಲಂಕಾರದ ಸೊಬಗು ಇರಲಿದೆ. ಅದರಲ್ಲೂ ರಾಷ್ಟ್ರಾದ್ಯಂತ ಸದ್ದು ಮಾಡಿರುವ ಕರಾವಳಿಯ “ಕಾಂತಾರ’ ಸಿನೆಮಾದಲ್ಲಿ ಬಳಸಿದ ಅಣಿಯ ಸ್ವರೂಪದ ವಿಶೇಷ ವರ್ಣಾಲಂಕಾರ ನೇತ್ರಾವತಿ ಸ್ನಾನಘಟ್ಟ ದಿಂದ ದೇವಸ್ಥಾನದ ವರೆಗೆ ಕಾಣಬಹುದಾಗಿದೆ. ಅದಲ್ಲದೆ ಪಾರಂಪರಿಕ ಶೈಲಿಯಲ್ಲಿ ಪಥಾಕೆ, ನಿಶಾನೆ, ಕೊಡಪಾನ ಸೇರಿದಂತೆ ನಗರಾಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

Advertisement

44ನೇ ರಾಜ್ಯಮಟ್ಟದ ವಸ್ತುಪ್ರದರ್ಶನ
ಲಕ್ಷದೀಪೋತ್ಸವದಲ್ಲಿ ಪ್ರಮುಖ ಆಕರ್ಷಣೆ 44ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನ ಮಳಿಗೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರೌಢ ಶಾಲೆಯ 60,300 ಚದರಡಿ ವಿಸ್ತೀರ್ಣದಲ್ಲಿ 335 ಸ್ಟಾಲ್‌ಗೆ ಅವಕಾಶ ಮಾಡಿಕೊಡಲಾಗಿದೆ. ಈ ಪೈಕಿ 171 ಬಗೆಯ ಸ್ಟಾಲ್‌ಗ‌ಳಿರಲಿವೆ. 8 ಸರಕಾರಿ ಮಳಿಗೆ, 5 ಬ್ಯಾಂಕ್‌, 2 ಧಾರ್ಮಿಕ ಮಳಿಗೆ, ಗ್ರಾಮೀಣಾಭಿವೃದ್ಧಿ, ರುಡ್‌ಸೆಟ್‌, ಸಿರಿ ಉತ್ಪನ್ನ, ವಾಹನ ಪ್ರದರ್ಶನ, ಸಾವಯವ ಕೃಷಿ ಉತ್ಪನ್ನ, ಕರಕುಶಲ ವಸ್ತು, ಯಂತ್ರ ಪರಿಕರ, ಗೃಹೋಪಯೋಗಿ ವಸ್ತುಗಳ ಮಳಿಗೆ ಸಹಿತ ತಿಂಡಿ ತಿನಿಸು ಸೇರಿದಂತೆ ನಾನಾ ಬಗೆಯ ವಸ್ತುಪ್ರದರ್ಶನ ಮಳಿಗೆ ಸಜ್ಜಾಗಿದೆ.

ರಥಬೀದಿ ಆಕರ್ಷಣೆ
ಭಕ್ತರಿಗೆ ಮನೋರಂಜನೆಗಾಗಿ ಒಂದೆಡೆ ಮಳಿಗೆಗಳಾದರೆ ರಥಬೀದಿಯಲ್ಲಿ ಈ ಬಾರಿ 6 ವಾರ್ಡ್‌ಗಳಂತೆ ಸುಮಾರು 1500 ಸಂತೆ ಅಂಗಡಿಗಳು ಇರಲಿವೆ. 2 ಲಕ್ಷಕ್ಕೂ ಅಧಿಕಮಂದಿ ಸೇರುವ ನಿರೀಕ್ಷೆಯಿದೆ. ಈಗಾಗಲೆ ರಾಜ್ಯಾದ್ಯಂತ ಎಲ್ಲೆಡೆ ಸರಕಾರಿ ಹೆಚ್ಚುವರಿ ಬಸ್‌ ಸೇವೆ, ಭಕ್ತರಿಗೆ ಊಟದ ವ್ಯವಸ್ಥೆ, ಆರೋಗ್ಯ ಸೇವೆ ಸಹಿತ ಸ್ವತ್ಛತೆಗೆ ವಿಶೇಷ ಆಧ್ಯತೆ ನೀಡಲಾಗಿದೆ.

ಗುರುಕಿರಣ್‌ ನೈಟ್‌
ಡಿ. 10ರಂದು ಅಮೃತವರ್ಷಿಣಿ ಸಭಾಭವನ ದಲ್ಲಿ ಲಲಿತಕಲಾ ಗೋಷ್ಠಿಯಲ್ಲಿ ರಾತ್ರಿ 7ರಿಂದ 10.30ರವರೆಗೆ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್‌ ಅವರಿಂದ ಗಾನ ನೃತ್ಯ ವೈವಿಧ್ಯ- ಗುರುಕಿರಣ್‌ ನೈಟ್‌ ಸಂಭ್ರಮ ನಡೆಯಲಿದೆ.

ಡಿ.11 ಸರ್ವಧರ್ಮ 91ನೇ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು. ಡಿ.12 ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ| ಎಸ್‌. ಸೋಮನಾಥ್‌ ಉದ್ಘಾಟಿಸುವರು.

ಧರ್ಮಸ್ಥಳದಲ್ಲಿ ಅನೇಕ ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ದೇವರಿಗೆ ವಿಶೇಷ. ಜನರಿಗೆ ಮಾಹಿತಿ ತಂತ್ರಜ್ಞಾನದ ಜತೆಗೆ ಮನೋರಂಜನೆ ನೀಡುವ ಉದ್ದೇಶದಿಂದ ವಸ್ತು ಪ್ರದರ್ಶನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವರ್ಷ ನಗರಾಲಂಕಾರಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಐದು ದಿನಗಳ ಈ ವಿಶೇಷ ಕಾರ್ಯಕ್ರಮಕ್ಕೆ ನಾಡಿನ ಎಲ್ಲರನ್ನೂ ಕ್ಷೇತ್ರದಿಂದ ಆಹ್ವಾನಿಸುತ್ತಿದ್ದೇವೆ.
– ಡಾ| ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next