Advertisement

ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ

11:09 PM Nov 27, 2019 | mahesh |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಜನಸ್ತೋಮದ ಮಧ್ಯೆ ಗೌರಿಮಾರುಕಟ್ಟೆ ಉತ್ಸವ ನಡೆಯಿತು. ಬುಧವಾರ ರಾತ್ರಿ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆಯೊಂದಿಗೆ ಉತ್ಸವ ಸಂಪನ್ನ ಗೊಂಡಿತು.

Advertisement

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆದ 6 ದಿನಗಳ ಭಕ್ತಿ ಭಾವದ ಉತ್ಸವಕ್ಕೆ ನಾಡಿನ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಬಣ್ಣ ಬಣ್ಣ ದೀಪಗಳು ಹಾಗೂ ಹೂಗಳಿಂದ ಅಲಂಕಾರಗೊಂಡಿದ್ದ ಬೆಳ್ಳಿ ರಥ, ಸ್ವರ್ಣ ಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೆರವಣಿಗೆ ಗೌರಿಮಾರುಕಟ್ಟೆ ಬಳಿ ಸಾಗಿತು.

ಮೊದಲ 4 ಉತ್ಸವಗಳು ಕ್ಷೇತ್ರದ
ವತಿಯಿಂದ ನಡೆದರೆ, ಗೌರಿಮಾರುಕಟ್ಟೆ ಉತ್ಸವವು ಸಹಸ್ರಾರು ಭಕ್ತರ ಸಮೂಹದಲ್ಲಿ ಕೈಗೊಂಡಿತು. ಪ್ರತಿ ಸುತ್ತಿನಲ್ಲೂ ಬಲಿ ಕಲ್ಲಿಗೆ ತೀರ್ಥ ಹಾಗೂ ಬಿಲ್ವಪತ್ರೆಯಿಂದ ಶುದ್ಧಿ ಮಾಡಲಾಯಿತು. ಉಡಿಕೆಯ ಸುತ್ತಿನ ಅನಂತರ ಕ್ಷೇತ್ರಪಾಲನಿಗೆ ಪೂಜೆ ಸಲ್ಲಿಸಿ ಡಾ| ಹೆಗ್ಗಡೆ ಅವರು ಹಾಗೂ ದೇವಾಲಯದ ಪ್ರತಿನಿಧಿಗಳು ಸ್ವಾಮಿಗೆ ಬಿಲ್ವಪತ್ರೆ ಅರ್ಪಿಸಿದರು. ಬಳಿಕ ಸ್ವಾಮಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ಪಲ್ಲಕ್ಕಿ ಉತ್ಸವ ಬಳಿಕ ಬೆಳ್ಳಿರಥದ ಮೇಲೆ ಕೂರಿಸಲಾಯಿತು.

ಡಾ| ಡಿ. ವೀರೇಂದ್ರ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಸೇರಿದಂತೆ ಹೆಗ್ಗಡೆ ಕುಟುಂಬಸ್ಥರು ಇದ್ದರು. ಅಪಾರ ಸಂಖ್ಯೆಯ ಭಕ್ತರಿಗೆ ಪ್ರಸಾದ ರೂಪವಾಗಿ ತಿಂಡಿ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು.

ಭಕ್ತರಿಂದ ಅನ್ನದಾಸೋಹ
ಭಕ್ತರೇ ಸೇವಾ ರೂಪದಲ್ಲಿ ಅನ್ನದಾನ ಮಾಡುವುದು ದೀಪೋತ್ಸವದ ಕೊನೆಯ ದಿನದ ವಿಶೇಷ. ಅನ್ನಪೂರ್ಣ ಛತ್ರದ ಹಿಂಬದಿಯಲ್ಲಿ 30 ಸ್ಟಾಲ್‌ಗ‌ಳಲ್ಲಿ ಅನ್ನ, ರಾಗಿ ಮುದ್ದೆ, ದೋಸೆ, ರೈಸ್‌ ಬಾತ್‌ ಸೇರಿದಂತೆ ವಿವಿಧ ಖಾದ್ಯಗಳನ್ನು ಭಕ್ತರಿಗೆ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next