Advertisement

 ಧರ್ಮಸ್ಥಳ: ಸರ್ವಧರ್ಮ ಸಮ್ಮೇಳನ

03:23 PM Nov 18, 2017 | Team Udayavani |

ಬೆಳ್ತಂಗಡಿ: ಸತ್ಯ ಅಹಿಂಸೆ ಮೂಲಕ ಭಾರತಕ್ಕೆ ಸ್ವಾತಂತ್ರ್ಯ  ತಂದುಕೊಟ್ಟ ಗಾಂಧೀಜಿಯವರಿಗೆ ಪ್ರೇರಣೆ ಕೊಟ್ಟದ್ದು ಜೈನ ಧರ್ಮ. ಒಂದು ದೇಶದ ಧರ್ಮವಾಗಿದ್ದ ಜೈನ ಧರ್ಮ ಇಂದು ಅಲ್ಪಸಂಖ್ಯಾಕ ಧರ್ಮವಾಗಿದೆ. ತೀರ್ಥಂಕರರ ಅಸ್ತಿತ್ವ ಸೃಷ್ಟಿಯಲ್ಲಿ ಸಹಜವಾಗಿರುವ ವೈರತ್ವವನ್ನು ಹೋಗಲಾಡಿಸುತ್ತದೆ ಎಂದು ನಿವೃತ್ತ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು. ಅವರು ಧರ್ಮಸ್ಥಳದಲ್ಲಿ ಸವಧರ್ಮ ಸಮ್ಮೇಳನದಲ್ಲಿ ಜೈನ ಧರ್ಮದಲ್ಲಿ ಸಮನ್ವಯ ಎಂಬ ಕುರಿತು ಮಾತನಾಡಿದರು.

Advertisement

ಸಕಲ ಜೀವಿಗಳಿಗೆ ಹಿತವನ್ನು ಬಯಸುವ ಜೈನ ಧರ್ಮ ವಿಶ್ವ ಧರ್ಮವಾಗಿದೆ. ‘ಬದುಕು ಮತ್ತು ಬದುಕಲು ಬಿಡು’ ಎಂಬುದು ಶ್ರೇಷ್ಠ ತತ್ವವಾಗಿದೆ. ಸಾಮಾನ್ಯವಾಗಿ ಕೆಲವರು ಹೇಳುವಂತೆ ಜೈನ ಧರ್ಮವು ಹಿಂದೂ ಧರ್ಮ ಅಥವಾ ಬೌದ್ಧ ಧರ್ಮದ ಭಾಗ ಅಲ್ಲ. ಮಾಹಾವೀರ ಜೈನ ಧರ್ಮದ ಸ್ಥಾಪಕ ಅಲ್ಲ ಎಂದವರು ಸ್ಪಷ್ಟ ಪಡಿಸಿದರು. ಮಹಾವೀರ ತೀರ್ಥಂಕರರಿಗಿಂತ ಹಿಂದೆ ವೃಷಭ ತೀರ್ಥಂಕರ ಆದಿಯಾಗಿ 23 ಮಂದಿ ತೀರ್ಥಂಕರರು ಜೈನ ಧರ್ಮದ ಬೋಧನೆ ಮಾಡಿದ್ದಾರೆ ಎಂದರು.

ಜೈನ ಧರ್ಮದ ಉದಾತ್ತ ತತ್ವಗಳಾದ ಅಹಿಂಸೆ, ಅನೇಕಾಂತ ವಾದ ಮತ್ತು ಅಪರಿಗ್ರಹದಿಂದ ಇಂದಿನ ಎಲ್ಲ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಬಹುದು. ಪಂಚಾಣು ವ್ರತಗಳ ಪಾಲನೆಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಸಮ್ಯಕ್‌ ದರ್ಶನ, ಸಮ್ಯಕ್‌ ಜ್ಞಾನ ಮತ್ತು ಸಮ್ಯಕ್‌ ಚಾರಿತ್ರ್ಯದಿಂದ ಪ್ರತಿಯೊಬ್ಬರೂ ಮೋಕ್ಷ ಸಾಧನೆ ಮಾಡಿ ಜಿನ ಆಗಬಹುದು ಎಂದರು.

ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ ಎಂಬ ವಿಚಾರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ ಸಂಘಟನೆಯ ಕರಾವಳಿ ವಲಯ ಸಂಚಾಲಕ ಉಡುಪಿಯ ಅಕºರ್‌ ಅಲಿ, ಧರ್ಮ ಯಾವಾಗಲೂ ಒಡೆಯುವುದಿಲ್ಲ. ಒಡೆಯುವುದು ರಾಜಕೀಯವಾಗಿರಬಹುದು. ಒಂದು ಹೃದಯವನ್ನು ಇನ್ನೊಂದು ಹೃದಯದ ಜತೆ ಜೋಡಿಸಿ ಅವುಗಳನ್ನೆಲ್ಲ ದೇವರ ಜತೆ ಜೋಡಿಸುವುದೇ ಧರ್ಮ. ಒಡೆದು, ಬಡಿದು, ಕಡಿದು ನೆತ್ತರು ಹರಿಸುವುದು ಧರ್ಮವೇ ಅಲ್ಲ ಎಂದರು.

ಕ್ರೈಸ್ತಧರ್ಮದ ಕುರಿತಾಗಿ ಬೆಂಗಳೂರಿನ ಫಾ| ಅಂತೋನಿರಾಜ್‌ ಎ. ಮಾತನಾಡಿ ಇಂದು ಧರ್ಮದ ರೈಲು ಹಳಿ ತಪ್ಪಿದೆ . ಮಾನವೀಯತೆಯ ಅಂಶ ಕಡಿಮೆಯಾಗಿದೆ. ಮೂಢನಂಬಿಕೆ, ಆಚಾರ ವಿಚಾರ, ಕುರುಡು ಸಂಪ್ರದಾಯಗಳಲ್ಲಿ ಮಗ್ನರಾಗಿ ಮಾನವರನ್ನು ಕಡೆಗಣಿಸಲಾಗುತ್ತಿದೆ. ಜಾತಿ ಭಾಷೆ ಬಣ್ಣ ಸಂಸ್ಕೃತಿ ಮೊದಲಾದ ಕಟ್ಟುಪಾಡು ಗಳ ಮೂಲಕ ವಿಂಗಡಿಸಿ ತುಳಿಯಲಾಗುತ್ತಿದೆ. ಇಂತಹ ಕುರುಡು ಧರ್ಮದ ಪಾಲನೆ ನಿಲ್ಲಲಿ ಎಂದರು.

Advertisement

ಪ್ರೀತಿ ಮತ್ತು ಸೇವೆಯಿಂದ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಎಲ್ಲರೂ ಜಾತಿ, ಮತ ಭೇದ ಮರೆತು ಸಾಮರಸ್ಯದಿಂದ ನೆಮ್ಮದಿಯ ಜೀವನ ನಡೆಸೋಣ ಎಂದರು.

ವೆಲ್ಲೂರಿನ ಶ್ರೀ ನಾರಾಯಣೀ ಪೀಠಮ್‌ನ ಶ್ರೀ ಶಕ್ತಿ ಅಮ್ಮ ಅಧ್ಯಕ್ಷತೆ ವಹಿಸಿ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಡಾ|ಡಿ. ವೀರೇಂದ್ರ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಪ್ರೊ| ಎಸ್‌. ಪ್ರಭಾಕರ್‌ ಉಪಸ್ಥಿತರಿದ್ದರು.

ಧರ್ಮ ನಮ್ಮ ಹೃದಯದಲ್ಲಿದೆ
ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುವ ಸರ್ವಧರ್ಮ ಸಮ್ಮೇಳನ ದೇಶಕ್ಕೇ ಮಾದರಿ. ಹೃದಯಗಳನ್ನು ಜೋಡಿಸುವುದೇ ಧರ್ಮದ ಗುರಿಯಾಗಿದೆ. ಮಂದಿರ, ಮಸೀದಿ ಗಳಿಗೆ ಕಲ್ಲು ಹೊಡೆಯುವುದರಿಂದ ಧರ್ಮ ಉಳಿಯುವುದಿಲ್ಲ. ಧರ್ಮ ನಮ್ಮ ಹೃದಯದಲ್ಲಿದೆ. ಹೃದಯ ಶ್ರೀಮಂತಿಕೆಯಿಂದ ಮಾತ್ರ ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಭಾರತೀಯರು ಶಾಂತಿಪ್ರಿಯರಾಗಿದ್ದು ಎಲ್ಲರೂ ಪ್ರೀತಿ-ವಿಶ್ವಾಸದಿಂದ ಸಾಮರಸ್ಯದ ಜೀವನ ನಡೆಸಬೇಕು.
ಅಕ್ಬ್ ರ್‌ ಅಲಿ, ಜಮಾಅತೆ
  ಇಸ್ಲಾಮಿ ಹಿಂದ್‌ ಸಂಘಟನೆಯ ಕರಾವಳಿ ವಲಯ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next