Advertisement

ಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ವಚ್ಛತಾ ಅಭಿಯಾನ

10:55 AM May 26, 2019 | Naveen |

ಬೆಳ್ತಂಗಡಿ: ಧರ್ಮಸ್ಥಳ ಸ್ನಾನಘಟ್ಟದ ನೇತ್ರಾವತಿ ನದಿಯ ಸ್ವಚ್ಛತಾ ಕಾರ್ಯವನ್ನು ಶುಕ್ರವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌ ಮಾರ್ಗದರ್ಶನದಲ್ಲಿ ನೂರಾರು ಕಾರ್ಯಕರ್ತರು ನೆರವೇರಿಸಿದರು. ಶ್ರದ್ಧಾ ಅಮಿತ್‌, ಮಾನ್ಯಾ ಸ್ವಚ್ಛತಾ ಸೇವೆಯಲ್ಲಿ ಪಾಲ್ಗೊಂಡರು.

Advertisement

ನೇತ್ರಾವತಿ ನದಿ ಮತ್ತು ಸ್ನಾನ ಘಟ್ಟದಲ್ಲಿ ಬೆಳಗ್ಗೆ ಗಂಟೆ 6ರಿಂದ 9ರ ವರೆಗೆ ದೇವಸ್ಥಾನದ ನೌಕರರು, ವಾಹನ ಚಾಲಕರು-ಮಾಲಕರು, ಗ್ರಾಮಾಭಿವೃದ್ಧಿ ನೌಕರರು, ಮಹಿಳಾ ಸಂಘಟನೆಗಳು, ಊರವರು, ಗ್ರಾ.ಪಂ., ಕೆ.ಎಸ್‌.ಆರ್‌.ಟಿ.ಸಿ. ಹಾಗೂ ವಿವಿಧ ಸಂಘಟನೆಗಳ ಸುಮಾರು 500ಕ್ಕೂ ಹೆಚ್ಚಿನ ಜನರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಪ್ರವಾಸಿಗರು ನದಿಗೆ ಎಸೆದ ಬಟ್ಟೆ, ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ 6 ಲಾರಿ, 3 ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸಲಾಯಿತು. ಸ್ವಚ್ಛತೆಯಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ಮಂದಿಗೆ ದೇವಸ್ಥಾನ ವತಿಯಿಂದ ತಿಂಡಿ ಹಾಗೂ ಗಂಜಿ ಚಟ್ನಿ ವಿತರಿಸಲಾಯಿತು.

ಸ್ವಚ್ಛತಾ ಭಾವನೆ ಮೂಡಲಿ’
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾಧ್ಯಮದವರೊಂದಿಗೆ ಮಾತನಾಡಿ, ಸ್ವಚ್ಛತೆ ಬಹಳ ಅಗತ್ಯವಿತ್ತು. ಜನರಿಗೆ ಪ್ರಜ್ಞಾವಂತಿಕೆ ಕೊಡುವುದೇ ಬಹಳ ಮುಖ್ಯ. ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆ ಪರಿಣಾಮಕಾರಿಯಾಗಿ ದೇಶದಲ್ಲಿ ಶೇ. 50 ಯಶಸ್ವಿಯಾಗಿದೆ. ಪ್ರತಿ ಮನೆಯಲ್ಲೂ ಈ ಭಾವನೆ ಮೂಡಬೇಕು. ಹೊರ ರಾಜ್ಯದಿಂದ ಕ್ಷೇತ್ರಕ್ಕೆ ಬರುವವರಿಗೆ ಸ್ವಚ್ಛತೆ ಪ್ರಜ್ಞೆ ಕಡಿಮೆ ಇದೆ. ಈಗಾಗಲೇ ಬದಲಾವಣೆಯಾಗಿದ್ದು, ಸತತ ಪ್ರಯತ್ನದಿಂದ ಜನಜೀವನದಲ್ಲಿ ಇನ್ನಷ್ಟು ಬದಲಾವಣೆಯಾಗಬೇಕಿದೆ ಎಂದರು. ಊರವರು ಮತ್ತು ಧರ್ಮಸ್ಥಳ ಕ್ಷೇತ್ರದ ಮಂದಿ ನೇತ್ರಾವತಿ ಶುದ್ಧೀಕರಣದಲ್ಲಿ ಪಾಲ್ಗೊಂಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next