Advertisement
ಕರಗ ಮಹೋತ್ಸವದಲ್ಲಿ ಮೇಳೈಸಿದ ಸಾಂಸ್ಕೃತಿಕ ಕಲರವ. ಭಕ್ತರನ್ನು ತಲೆದೂಗುವಂತೆ ಮಾಡಿತು ಹೂವಿನ ಕರಗ, ಭಕ್ತಿಭಾವದಿಂದ ವಾರದ ಕಾಲ ಆಚರಿಸಿದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವಕ್ಕೆ ವೈಭವದ ತೆರೆ.
Related Articles
Advertisement
ನಗರದ ಕಂದವಾರರಪೇಟೆ, ಎಂಜಿ ರಸ್ತೆ, ಬಿಬಿ ರಸ್ತೆ, ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆಗಳಲ್ಲಿ ಕರಗ ಸಂಚರಿಸಿ ನೆರೆದಿದ್ದ ಸಾರ್ವಜನಿಕರಲ್ಲಿ ಸಂಚಲನ ಉಂಟು ಮಾಡಿದರು. ಶನಿವಾರ ರಾತ್ರಿ ರಾತ್ರಿ 10:30ಕ್ಕೆ ಸರಿಯಾಗಿ ಹೊತ್ತ ಹೂವಿನ ಕಗರವನ್ನು ನಗರದ ಆಯ್ದ ಪ್ರದೇಶಗಳಲ್ಲಿ ಸಂಚರಿಸಿ ಮರಳಿ ಗಂಗಮಾಂಭ ದೇವಾಲಯಕ್ಕೆ ಬರುವಷ್ಟರಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯಾಗಿತ್ತು.
ಕರಗ ವೀಕ್ಷಣೆಗಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಮೊದಲೇ ನಗರದ ರಸ್ತೆಗಳು ಕಿಷ್ಕಿಂಧೆಯಾಗಿ ಕಿರಿದಾಗಿದ್ದ ಕಾರಣ ಕರಗ ವೀಕ್ಷಣೆಗೆ ಯುವಕರು, ಸಾರ್ವಜನಿಕರು ತಮ್ಮ ಬಡಾವಣೆಗಳಲ್ಲಿ ಅಕ್ಕಪಕ್ಕದ ಮನೆಗಳ ಮೇಲೆ ಹತ್ತಿ ಕರಗ ವೀಕ್ಷಿಸಿದರು.
ನಗರಕ್ಕೆಲ್ಲಾ ವಿದ್ಯುತ್ ದೀಪಾಲಂಕಾರ: ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲಾ ಪ್ರಮುಖ ರಸ್ತೆಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಹೂವಿನ ಕರಗ ಸಾಗಿ ಬಂದ ಮಾರ್ಗಗಳಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ರಸ್ತೆಗಳು ಝಘಮಗಿಸಿದ ದೃಶ್ಯಗಳು ಗಮನ ಸೆಳೆದವು.
ನಗರದ ಬಿಬಿ ರಸ್ತೆ, ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆ, ಎಂಜಿ ರಸ್ತೆ, ಅಂಬೇಡ್ಕರ್ ಭವನದ ರಸ್ತೆ ಹಾಗೂ ವಾಪಸಂದ್ರದ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಜಾಲಾರಿ ಗಂಗಮಾಂಭ ದೇವಾಲಯಕ್ಕೂ ಆಕರ್ಷಕವಾದ ಹೂವಿನ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಕರಗಕ್ಕೆ ಪೊಲೀಸರ ಹದ್ದಿನ ಕಣ್ಣು: ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುವ ಕರಗ ವೀಕ್ಷಣೆಗೆ ನಗರದ ಜನತೆ ಹಾದಿಯಾಗಿ ಜಿಲ್ಲೆಯ ವಿವಿಧ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರಿಂದ ಅಹಿತಕರ ಘಟನೆಗಳು ನಡೆಯದಂತೆ ಎಸ್ಪಿ ಕೆ.ಸಂತೋಷ ಬಾಬು ಮಾರ್ಗದರ್ಶನದಲ್ಲಿ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್, ವೃತ್ತ ನಿರೀಕ್ಷಕ ಸುದರ್ಶನ್ ನೇತೃತ್ವದಲ್ಲಿ ನೂರಾರು ಪೊಲೀಸರನ್ನು ಆಯಕಟ್ಟಿನ ಸ್ಥಳಗಳಲ್ಲಿ ಬಂದೋಬಸ್ತ್ಗಾಗಿ ನಿಯೋಜಿಸಲಾಗಿತ್ತು.
ಚಿಕ್ಕಬಳ್ಳಾಪುರ ಉಪ ವಿಭಾಗದ ಗೌರಿಬಿದನೂರು, ಬಾಗೇಪಲ್ಲಿ ತಾಲೂಕಿನ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಸಹ ಕರಗದ ಬಂದೋಬಸ್ತ್ಗೆ ಕರೆಸಿಕೊಳ್ಳಲಾಗಿತ್ತು.
ಮೇಳೈಸಿದ ಸಾಂಸ್ಕೃತಿಕ ಕರಲವ: ಕರಗ ಮಹೋತ್ಸವದ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದಲ್ಲಿ ಹಬ್ಬದ ಸಂಭ್ರಮ ಒಂದೆಡೆ, ಮತ್ತೂಂದೆಡೆ ಮೇಳೈಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಕರಗ ಮಹೋತ್ಸವಕ್ಕೆ ಮೆರಗು ತಂದು ಕೊಟ್ಟವು. ನಗರದ ವಿವಿಧೆಡೆಗಳಲ್ಲಿ ಆಯೋಜಿಸಿದ್ದ ವಾದ್ಯಗೋಷ್ಠಿ, ಪೌರಾಣಿಕ ನಾಟಕ, ಸಂಗೀತ ರಸ ಮಂಜರಿ ಮತ್ತಿತರ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿಯಿಡೀ ನಾಗರಿಕರು ನೋಡಿದರು. ಕರಗ ಸಾಗಿ ಬಂದ ಟೌನ್ಹಾಲ್ ಎದುರು, ಸರ್ಎಂ ರಸ್ತೆ, ಬಿಬಿ ರಸ್ತೆ, ಖಾಸಗಿ ಬಸ್ ನಿಲ್ದಾಣ ರಸ್ತೆ, ಗಂಗಮ್ಮ ಗುಡಿ ರಸ್ತೆಗಳಲ್ಲಿ ಯುವಕರ ಸಂಘಟನೆಗಳು ಜನತೆಗೆ ಸ್ವಯಂ ಪ್ರೇರಣೆಯಿಂದ ಅನ್ನಸಂರ್ತಪಣೆ ಜೊತೆಗೆ ಪಾನಕ, ಮಜ್ಜಿಗೆ, ಕೋಸಂಬರಿ, ಶರಬತ್ ನೀಡಿ ಭಕ್ತಿಭಾವ ಮೆರೆದರು.
ಒನಕೆ ಕರಗ ಆಕರ್ಷಣೆ, ಅಗ್ನಿಕುಂಡ ಪ್ರವೇಶ: ಹೂವಿನ ಕರಗ ಮಹೋತ್ಸವದಲ್ಲಿ ನೆರೆದಿದ್ದವರ ಸಹಸ್ರಾರು ಜನರ ಮೈಮನ ರೋಮಾಂಚನಗೊಳಿಸಿದ್ದು ಅಗ್ನಿಕುಂಡ ಪ್ರವೇಶ ಹಾಗೂ ಒನಕೆ ಕರಗ ಪ್ರದರ್ಶನ. ಶ್ರೀ ಜಾಲಾರಿ ಗಂಗಮ್ಮ ದೇವಾಲಯದ ಆವರಣದಲ್ಲಿ ಕರಗ ಮಹೋತ್ಸವದ ಪ್ರಯುಕ್ತ ಸಿದ್ದಪಡಿಸಲಾಗಿದ್ದ ಅಗ್ನಿ ಕುಂಡದಲ್ಲಿ ಕರಗ ಹೊತ್ತಿದ್ದ ಕೆ.ಧಮೇಂದ್ರ ಪ್ರವೇಶಿಸಿದರು. ಅವರನ್ನು ಹಿಂಬಾಲಿಸಿ ಕೆಲ ಭಕ್ತರು ಅಗ್ನಿಕುಂಡ ಪ್ರವೇಶಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಬಳಿಕ ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಭಾನುವಾರ ಸಂಜೆ 4 ವಸಂತೋತ್ಸವದ ಭಾಗವಾಗಿ ವಿವಿಧ ಭಂಗಿಗಳಲ್ಲಿ ನೃತ್ಯದ ಮೂಲಕ ಪ್ರದರ್ಶಿಸಿದ ಒನಕೆ ಕರಗ ಗಮನ ಸೆಳೆಯಿತು. ಕಳೆದ ಸೋಮವಾರದಿಂದ ನಡೆದುಕೊಂಡು ಬಂದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವ ಭಾನುವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.