Advertisement

ವಿದ್ಯಾರ್ಥಿಗಳಿಂದ ಸಿದ್ಧವಾಯ್ತು ಅಡಕೆ ಗಿಡಕ್ಕೆ ಕ್ರಿಮಿನಾಶಕ ಸಿಂಪಡಣೆ ಯಂತ್ರ

11:50 AM Jun 09, 2019 | Team Udayavani |

ಧಾರವಾಡ: ಅಡಕೆ ಗಿಡಕ್ಕೆ ಕ್ರಿಮಿನಾಶಕ ಸಿಂಪಡಿಸಲು ಸರಳ ಹಾಗೂ ಸುಲಭವಾಗಿ ಬಳಕೆ ಮಾಡುವ ಯಂತ್ರವೊಂದನ್ನು ಎಸ್‌ಡಿಎಂ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.

Advertisement

ಕಾಲೇಜಿನ ಪ್ರೊಜೆಕ್ಟ್ಗಾಗಿ ನಿರ್ಮಿಸಿದ್ದ ಯಂತ್ರ ಈಗ ಅಡಕೆ ಬೆಳೆಗಾರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೆಚ್ಚುಗೆ ಪಡೆದಿದೆ. ಅದರಲ್ಲೂ ಕಾಲೇಜಿನ ಎಲ್ಲ ವಿಭಾಗದಲ್ಲಿ ನಿರ್ಮಿಸಿದ್ದ ಪ್ರೊಜೆಕ್ಟ್ಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನವನ್ನೂ ಈ ಯಂತ್ರ ಪಡೆದುಕೊಂಡಿದೆ.

ಪ್ರೊ| ಅಭಿಲಾಸ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ವರುಣಕುಮಾರ ಶೆಟ್ಟಿ, ಕಿರಣಕುಮಾರ ನರಬೋಲೆ, ಅರುಣಕುಮಾರ ಸಾಲಿಮಠ ಈ ಯಂತ್ರ ನಿರ್ಮಿಸಿದ್ದಾರೆ. 15ರಿಂದ 20 ಸಾವಿರ ರೂ. ವೆಚ್ಚದಲ್ಲಿ ಯಂತ್ರ ನಿರ್ಮಿಸಿದ್ದು, ಬಳಕೆಗಾಗಿ ನಿರ್ಮಾಣಕ್ಕೆ ಮುಂದಾದರೆ ನಿರ್ಮಾಣ ವೆಚ್ಚ ಇನ್ನೂ ಕಡಿಮೆ ಆಗಲಿದೆ. ವರುಣಕುಮಾರ ಶೆಟ್ಟಿ ಅವರದ್ದೇ ಅಡಕೆ ತೋಟವಿದ್ದು, ಅಡಕೆ ಮರಕ್ಕೆ ಔಷಧಿ ಸಿಂಪಡಿಸಲು ಆಗುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡಿದ್ದಾರೆ. ಔಷಧಿ ಸಿಂಪಡಿಸುವಾಗ ಮರದಿಂದ ಕೆಳಗಡೆ ಬೀಳುವ ಅಪಾಯ ಜಾಸ್ತಿ. ಹೀಗಾಗಿ ಕೆಳಗಡೆ ನಿಂತುಕೊಂಡು ಈ ಯಂತ್ರದ ಮೂಲಕ ಸರಳವಾಗಿ ಔಷಧಿ ಸಿಂಪಡಿಸಬಹುದಾಗಿದ್ದು, 10 ನಿಮಿಷದಲ್ಲಿ 1 ಗಿಡಕ್ಕೆ ಔಷಧಿ ಸಿಂಪಡಿಸುವ ಕ್ಷಮತೆ ಇದಕ್ಕಿದೆ. 2 ಲೀಟರ್‌ ಟ್ಯಾಂಕ್‌ ಹೊಂದಿದ್ದು, ಅರ್ಧ ಟ್ಯಾಂಕ್‌ನಲ್ಲಿ ಒಂದು ಗಿಡಕ್ಕೆ ಔಷಧಿ ಸಿಂಪಡಿಸಬಹುದಾಗಿದ್ದು, ಕ್ಷಮತೆ ಹೆಚ್ಚಿಸಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ತಯಾರಿಸುವ ಈ ಯಂತ್ರ ಎಲ್ಲ ವಿಭಾಗದ ಪ್ರಾಜೆಕ್ಟ್ಗಳಲ್ಲಿ ಪೈಕಿ ಪ್ರಥಮ ಸ್ಥಾನ ಪಡೆದಿದೆ. ಔಷಧಿ ಸಿಂಪಡಿಸುವ ಕಾರ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ಪ್ರಯತ್ನ ಇದಾಗಿದೆ. ಈ ಯಂತ್ರವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಳಕೆಗೆ ಯೋಗ್ಯವಾಗಿದೆ.
ಅನಿಲಕುಮಾರ ಚೌಡಣ್ಣವರ,
ಮುಖ್ಯಸ್ಥರು, ಮೆಕ್ಯಾನಿಕಲ್ ವಿಭಾಗ

ಅಡಕೆ ಬೆಳೆಗಾರರಿಗೆ ಈ ಯಂತ್ರದಿಂದ ಅನುಕೂಲ ಆಗಲಿದ್ದು, ಬ್ಯಾಟರಿ ಮೂಲಕ ಕಾರ್ಯನಿರ್ವಹಿಸಲಿದೆ. ಬರೀ ಔಷಧಿ ಸಿಂಪಡಣೆಗಾಗಿ ಮಾತ್ರ ಈ ಯಂತ್ರ ರೂಪಿಸಲಾಗಿದ್ದು, ಅಡಕೆ ಮರಕ್ಕೆ ಔಷಧಿ ಸಿಂಪಡಣೆ ಕಾರ್ಯವನ್ನು ಮತ್ತಷ್ಟು ಸರಳವಾಗುವಂತೆ ಮಾಡಲಿದೆ.
ವರುಣಕುಮಾರ ಶೆಟ್ಟಿ, ವಿದ್ಯಾರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next