Advertisement

25ರಿಂದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಧರಣಿ

06:33 PM Aug 09, 2022 | Team Udayavani |

ಸಿರಿಗೆರೆ: ಇಲ್ಲಿನ ಸಮುದಾಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ನೇಮಕ ಮಾಡುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅ ಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದನ್ನು ಖಂಡಿಸಿ ವೈದ್ಯರ ನೇಮಕಾತಿ ಆಗುವವರೆಗೆ ಆ. 25ರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲು ಸಿರಿಗೆರೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ನಿರ್ಧರಿಸಿದ್ದಾರೆ.

Advertisement

ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು ಠರಾವು ಮಾಡಲಾಯಿತು. ಸಿರಿಗೆರೆ ಜಿಲ್ಲೆಯಲ್ಲಿ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಇಲ್ಲಿನ ಶಾಲಾ-ಕಾಲೇಜುಗಳಲ್ಲಿ ಸುಮಾರು 3000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತರಳಬಾಳು ಜಗದ್ಗುರು ಬೃಹನ್ಮಠವು ನಡೆಸುತ್ತಿರುವ ವಿದ್ಯಾಥಿ ನಿಲಯಗಳಲ್ಲಿ ಸುಮಾರು 2000 ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದಾರೆ.

ಜೊತೆಗೆ ಸಿರಿಗೆರೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಸಿರಿಗೆರೆಯ ಸಮುದಾಯ ಆರೋಗ್ಯ ಕೇಂದ್ರವನ್ನೇ ನಂಬಿಕೊಂಡಿದ್ದಾರೆ. ಸಮುದಾಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಕ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇಂದಿಗೂ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ತಜ್ಞ ವೈದ್ಯರಿಲ್ಲ.

ಸುತ್ತಲಿನ ಓಬವ್ವನಾಗತಿಹಳ್ಳಿ, ದೊಡ್ಡಾಲಗಟ್ಟ, ಹಳೆರಂಗಾಪುರ, ಹೊಸರಂಗಾಪುರ, ಸೀಗೇಹಳ್ಳಿ, ಅಳಗವಾಡಿ, ಓಬಳಾಪುರ, ಜಮ್ಮೇನಹಳ್ಳಿ, ಸಿದ್ದಾಪುರ, ದೊಡ್ಡಿಗನಾಳ್‌, ಮೆದಿಕೇರಿಪುರ, ಚಿಕ್ಕೇನಹಳ್ಳಿ, ಕೋಣನೂರು ಗ್ರಾಮದ ಜನರು ಈ ಆಸ್ಪತ್ರೆಯನ್ನು ಆಶ್ರಯಿಸಿಕೊಂಡಿದ್ದಾರೆ. ರಾತ್ರಿ ವೇಳೆ ಅನಾರೋಗ್ಯ ಉಂಟಾದರೆ ಬೇರೆ ದಾರಿ ಇವರಿಗೆ ಕಾಣುತ್ತಿಲ್ಲ. ಇದನ್ನು ಕ್ಷೇತ್ರದ ಶಾಸಕರ ಬಳಿ ಹಲವಾರು ಬಾರಿ ಹೇಳಿಕೊಂಡಿದ್ದರೂ ಪರಿಹಾರ ದೊರೆತಿಲ್ಲ ಸಂಸದರೂ ಈ ಬಗ್ಗೆ ಗಮನ ಹರಿಸಿಲ್ಲ.

ಹಲವು ಬಾರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದೇ ಇರುವುದರಿಂದ ಧರಣಿ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು.

Advertisement

ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಎಂ.ಜಿ. ದೇವರಾಜ್‌, ಉಪಾಧ್ಯಕ್ಷೆ ಕೆ.ಬಿ. ಮಂಜುಳಾ, ಸದಸ್ಯರಾದ ಮುತ್ತುಗದೂರು ನಾಗರಾಜ್‌, ಎಂ.ಈ. ಶ್ರೀಧರ್‌, ಕೆ.ಬಿ. ಮೋಹನ್‌, ಶೋಭಾ, ದೇವಿಕಾ, ಬಸವರಾಜ್‌, ಕರಿಯಪ್ಪ, ಹಾಲಮ್ಮ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next